Advertisement

ಕಾಂಗ್ರೆಸ್‌ ಪ್ರತಿನಿಧಿಸುವ ಏಕೈಕ ಸಂಸತ್‌ ಅಭ್ಯರ್ಥಿ ಡಿ.ಕೆ.ಸುರೇಶ್‌

12:24 AM May 24, 2019 | Team Udayavani |

ರಾಮನಗರ: ಬೆಂ.ಗ್ರಾ ಲೋಕಸಭಾ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿ ಡಿ.ಕೆ.ಸುರೇಶ್‌ 2,06,870 ಮತಗಳ ಭಾರೀ ಅಂತರದಿಂದ ಬಿಜೆಪಿ ಅಭ್ಯರ್ಥಿ ಅಶ್ವತ್ಥ‌ನಾರಾಯಣ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ್ದಾರೆ. ಈ ಬಾರಿಯ ಲೋಕಸಭೆಗೆ ರಾಜ್ಯದಿಂದ ಕಾಂಗ್ರೆಸ್‌ ಏಕೈಕ ಅಭ್ಯರ್ಥಿಯಾಗಿ ಪ್ರತಿನಿಧಿಸಲಿದ್ದಾರೆ.

Advertisement

2013ರ ಉಪಚುನಾವಣೆಯಲ್ಲಿ ಜೆಡಿಎಸ್‌ ಅಭ್ಯರ್ಥಿ ಅನಿತಾ ಕುಮಾರಸ್ವಾಮಿ ವಿರುದ್ಧ, 2014 ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಯ ಮುನಿರಾಜು ಗೌಡ ವಿರುದ್ಧ ಮತ್ತು ಇದೀಗ ಬಿಜೆಪಿಯ ಅಶ್ವತ್ಥನಾರಾಯಣ ವಿರುದ್ಧ ಡಿ.ಕೆ.ಸುರೇಶ್‌ ಜಯಭೇರಿ ಭಾರಿಸಿದ್ದಾರೆ. ಸತತ 3ನೇ ಬಾರಿಗೆ ಲೋಕಸಭೆಗೆ ಆಯ್ಕೆಯಾಗಿದ್ದಾರೆ.

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ಅಸ್ಥಿತ್ವಕ್ಕೆ ಬರುವ ಮುನ್ನ ಇದ್ದ ಕನಕಪುರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಎಂ.ವಿ.ಚಂದ್ರಶೇಖರ ಮೂರ್ತಿ ಅವರ ದಾಖಲೆಯನ್ನು ಡಿ.ಕೆ.ಸುರೇಶ್‌ ಮುರಿದಿದ್ದಾರೆ. ಪ್ರತಿ ಚುನಾವಣೆಯಲ್ಲೂ ಈ ಕ್ಷೇತ್ರದಲ್ಲಿ ಜೆಡಿಎಸ್‌, ಕಾಂಗ್ರೆಸ್‌ ಮತ್ತು ಬಿಜೆಪಿ ತ್ರಿಕೋನ ಸ್ಪರ್ಧೆ ಇರುತ್ತಿತ್ತು.

ಆದರೆ, ಈ ಬಾರಿ ಜೆಡಿಎಸ್‌ ಮತ್ತು ಕಾಂಗ್ರೆಸ್‌ ಮೈತ್ರಿ ಮಾಡಿಕೊಂಡ ಕಾರಣ ಮೈತ್ರಿ ಅಭ್ಯರ್ಥಿ ಡಿ.ಕೆ.ಸುರೇಶ್‌ ಮತ್ತು ಬಿಜೆಪಿ ಅಭ್ಯರ್ಥಿ ಅಶ್ವತ್ಥನಾರಾಯಣ ವಿರುದ್ಧ ನೇರ ಹಣಾಹಣಿ ಏರ್ಪಟ್ಟಿತ್ತು. ಡಿ.ಕೆ.ಸುರೇಶ್‌ 8,78,258 ಮತಗಳನ್ನು ಪಡೆದಿದ್ದಾರೆ. ಬಿಜೆಪಿಯ ಅಶ್ವತ್ಥನಾರಾಯಣ 6,71,388 ಮತಗಳನ್ನು ಪಡೆದುಕೊಂಡಿದ್ದಾರೆ.

2014ರ ಸಾರ್ವತ್ರಿಕ ಚುನಾವಣೆಯಲ್ಲಿ ಡಿ.ಕೆ.ಸುರೇಶ್‌ 6,52,723 ಮತಗಳನ್ನು ಪಡೆದುಕೊಂಡಿದ್ದರು. 2014ಕ್ಕೆ ಹೋಲಿಸಿದರೆ ಅವರು ಈ ಬಾರಿ 2 ಲಕ್ಷಕ್ಕೂ ಅಧಿಕ ಮತಗಳನ್ನು ಪಡೆದುಕೊಂಡಿದ್ದಾರೆ. ಡಿ.ಕೆ.ಸುರೇಶ್‌ ಹೆಚ್ಚುವರಿಯಾಗಿ ಪಡೆದುಕೊಂಡಿರುವ ಮತಗಳು ಜೆಡಿಎಸ್‌ ಪರಿಶ್ರಮ ಎಂದು ಸ್ಥಳೀಯ ಜೆಡಿಎಸ್‌ ಕಾರ್ಯಕರ್ತರು ಅಭಿಪ್ರಾಯಪಟ್ಟಿದ್ದಾರೆ.

Advertisement

2014ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಯ ಮುನಿರಾಜು ಗೌಡ, ಡಿ.ಕೆ.ಸುರೇಶ್‌ ವಿರುದ್ಧ ಸೋಲುಂಡಿದ್ದರು. ಆಗ ಡಿ.ಕೆ.ಸುರೇಶ್‌ 4,21,243 ಮತಗಳನ್ನು ಪಡೆದು ಕೊಂಡಿದ್ದರು. 2019ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಯ ಅಶ್ವತ್ಥನಾರಾಯಣ 6,71,388 ಮತಗಳನ್ನು ಪಡೆದುಕೊಂಡಿದ್ದಾರೆ. 2014ರ ಚುನಾವಣೆಗೆ ಹೋಲಿಸಿದರೆ ಬಿಜೆಪಿ ಮತಗಳಿಕೆಯ ಪ್ರಮಾಣವೂ ಹೆಚ್ಚಾಗಿದೆ. ರಾಮನಗರ ಜಿಲ್ಲೆಯ 4 ವಿಧಾನಸಭಾ ಕ್ಷೇತ್ರಗಳಲ್ಲಿ ಮೋದಿ ಅಲೆಗೆ ಸ್ಪಂದನೆ ಸಿಕ್ಕಿಲ್ಲ ಎಂದು ಮೈತ್ರಿ ಪಕ್ಷಗಳ ಕಾರ್ಯಕರ್ತರು ಹೇಳಿದ್ದಾರೆ.

ಜನರು ಇನ್ನಷ್ಟು ನಿರೀಕ್ಷೆ ಇರಿಸಿಕೊಂಡು ನಮ್ಮನ್ನು ಮತ್ತೆ ಗೆಲ್ಲಿಸಿಕೊಂಡಿದ್ದಾರೆ. ಜನಸಾಮಾನ್ಯರ ನಿರೀಕ್ಷೆಗಳನ್ನು ಈಡೇರಿ ಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ. ಕ್ಷೇತ್ರದಲ್ಲಿ ಮೈತ್ರಿ ಪಕ್ಷಗಳ ಕಾರ್ಯಕರ್ತರ ಶ್ರಮ ಸಾರ್ಥಕವಾಗಿದೆ.
-ಡಿ.ಕೆ.ಸುರೇಶ್‌, ಸಂಸದ

ಮತದಾರರ ತೀರ್ಪಿಗೆ ತಲೆಬಾಗುತ್ತೇನೆ. ಚುನಾವಣೆಗೆ ನಿಲ್ಲುವ ನಿರೀಕ್ಷೆಯೇ ಇಲ್ಲದೆ ಕೊನೆ ಗಳಿಗೆಯಲ್ಲಿ ಅಭ್ಯರ್ಥಿಯಾಗಿದ್ದೇನೆ. ಅಲ್ಪ ಸಮಯದಲ್ಲೇ ಮತದಾರರನ್ನು ತಲುಪುವ ಪ್ರಯತ್ನ ಮಾಡಿದ್ದೇನೆ. ಕ್ಷೇತ್ರದಲ್ಲಿ ಪಕ್ಷ ಸಂಘ ಟನೆ ಜೊತೆಗೆ ಸ್ಥಳೀಯ ಸಮಸ್ಯೆಗಳಿಗೆ ಸ್ಪಂದಿಸುತ್ತೇನೆ.
-ಅಶ್ವತ್ಥನಾರಾಯಣ, ಬಿಜೆಪಿ ಅಭ್ಯರ್ಥಿ

ಬೆಂ.ಗ್ರಾಮಾಂತರ (ಕಾಂಗ್ರೆಸ್‌)
-ವಿಜೇತರು ಡಿ.ಕೆ.ಸುರೇಶ್‌
-ಪಡೆದ ಮತ 8,78,258
-ಎದುರಾಳಿ ಅಶ್ವತ್ಥನಾರಾಯಣ (ಬಿಜೆಪಿ)
-ಪಡೆದ ಮತ 6,71,388
-ಗೆಲುವಿನ ಅಂತರ 2,06,870

ಗೆಲುವಿಗೆ 3 ಕಾರಣ
-ಜಿಲ್ಲೆಯ ವಿವಿಧೆಡೆ ಶುದ್ಧ ಕುಡಿಯುವ ನೀರಿನ ಘಟಕಗಳ ಸ್ಥಾಪನೆ
-ರಾಜ್ಯದಲ್ಲೇ ನರೇಗಾ ಯೋಜನೆಯನ್ನು ಸದ್ಬಳಕೆ ಮಾಡಿಕೊಂಡಿದ್ದು
-ನಿರಂತರ ಪ್ರವಾಸ, ಯೋಜನೆ ಗಳ ಅನುಷ್ಠಾನ, ಸಾಮಾನ್ಯರಿಗೆ ಸುಲಭವಾಗಿ ಸಿಗುತ್ತಿದ್ದದ್ದು.

ಸೋಲಿಗೆ 3 ಕಾರಣ
-ಬೆಂಗಳೂರು ನಗರ ಜಿಲ್ಲೆ ಹೊರತು ಪಡಿಸಿದರೆ ರಾಮನಗರಕ್ಕೆ ಹೊಸ ಮುಖ
-ರಾಮನಗರ ವಿಧಾನಸಭಾ ಉಪ ಚುನಾವಣೆಯಲ್ಲಿ ಸಮರ್ಥ ಬಿಜೆಪಿ ಅಭ್ಯರ್ಥಿ ಇಲ್ಲದಿರುವುದು.
-ಸಿ.ಪಿ.ಯೋಗೇಶ್ವರ್‌ ಮತ್ತು ಜಿಲ್ಲಾ ಬಿಜೆಪಿ ಘಟಕದೊಂದಿಗೆ ಬಾಂಧವ್ಯ ಹಳಿಸಿದ್ದು

Advertisement

Udayavani is now on Telegram. Click here to join our channel and stay updated with the latest news.

Next