Advertisement

ಡಿವೈಡರ್‌ ಮೇಲೇರಿದ ಸಿಟಿ ಬಸ್‌ ವಿದ್ಯುತ್‌ ಕಂಬಕ್ಕೆ ಢಿಕ್ಕಿ: ಹಲವರಿಗೆ ಗಾಯ

10:22 AM Aug 05, 2019 | Team Udayavani |

ಮಂಗಳೂರು: ನಗರದ ಲಾಲ್‌ಬಾಗ್‌ ಸಮೀಪದ ಪಬ್ಟಾಸ್‌ ಐಸ್‌ಕ್ರೀಸ್‌ ಮಳಿಗೆಯ ಎದುರು ರವಿವಾರ ಖಾಸಗಿ ಸಿಟಿ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್‌ ಮೇಲೆ ಹತ್ತಿ ಬೀದಿ ದೀಪದ ವಿದ್ಯುತ್‌ ಕಂಬಕ್ಕೆ ಢಿಕ್ಕಿ ಹೊಡೆದಿದೆ. ಘಟನೆಯಲ್ಲಿ ಮಗು ಸಹಿತ 8 ಮಂದಿ ಗಾಯಗೊಂಡಿದ್ದಾರೆ.

Advertisement

ಸಣ್ಣಪುಟ್ಟ ಗಾಯಗೊಂಡ ನಾಲ್ವರು ಆಸ್ಪತ್ರೆಯಲ್ಲಿ ಹೊರ ರೋಗಿಗಳಾಗಿ ಚಿಕಿತ್ಸೆ ಪಡೆದು ಬಿಡುಗಡೆ ಹೊಂದಿದ್ದಾರೆ. ಇನ್ನುಳಿದ ಗಾಯಾಳುಗಳ ಪೈಕಿ ಬಾಗಲಕೋಟೆ ಜಿಲ್ಲೆಯ ಜಮಖಂಡಿ ನಿವಾಸಿ ಕರಿಯಪ್ಪ ಭಂಗಿ (23), ಕೊಡಿಯಾಲ್‌ಬೈಲ್‌ ನಿವಾಸಿ ಕಿರಣ್‌ (28), ಶಂಕರ್‌ (28) ಹಾಗೂ ಅವರ ಪುತ್ರ ಶರತ್‌ (2) ಅವರು ಒಳರೋಗಿಗಳಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರು ಅಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ವಿವರ
ತಣ್ಣೀರುಬಾವಿಯಿಂದ ಕೂಳೂರು – ಉರ್ವಸ್ಟೋರ್‌ – ಪಿವಿಎಸ್‌ ಮಾರ್ಗವಾಗಿ ಸ್ಟೇಟ್‌ಬ್ಯಾಂಕ್‌ಗೆ ಸಂಚರಿಸುತ್ತಿದ್ದ ಖಾಸಗಿ ಸಿಟಿ ಬಸ್‌ ಮಧ್ಯಾಹ್ನ 1. 40ಕ್ಕೆ ರಸ್ತೆಯ ಡಿವೈಡರ್‌ ಮೇಲೆ ಹತ್ತಿ, ಬೀದಿ ದೀಪದ ವಿದ್ಯುತ್‌ ಕಂಬಕ್ಕೆ ಢಿಕ್ಕಿ ಹೊಡೆದಿದೆ. ಢಿಕ್ಕಿಯ ರಭಸಕ್ಕೆ ವಿದ್ಯುತ್‌ ಕಂಬವು ಮುರಿದು ಬಿದ್ದಿದೆ ಹಾಗೂ ಬಸ್ಸಿನ ಮುಂಭಾಗ ಸಂಪೂರ್ಣ ಜಖಂಗೊಂಡಿದೆ. ಬಸ್ಸಿನಲ್ಲಿ 25ಕ್ಕೂ ಅಧಿಕ ಪ್ರಯಾಣಿಕರಿದ್ದರು. ಡಿವೈಡರ್‌ಗೂ ಹಾನಿಯಾಗಿದೆ.

ಇನ್ನೊಂದು ವಾಹನವನ್ನು ಓವರ್‌ಟೇಕ್‌ ಮಾಡುವ ಭರದಲ್ಲಿ ಚಾಲಕನ ನಿಯಂತ್ರಣ ತಪ್ಪಿದ್ದು ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಘಟನೆ ನಡೆದ ಕೂಡಲೇ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಚಾಲಕನ ವಿರುದ್ಧ ಅತಿವೇಗ, ಮತ್ತು ನಿರ್ಲಕ್ಷ್ಯದ ಚಾಲನೆ ವಿರುದ್ಧ ಸಂಚಾರ ಪಶ್ಚಿಮ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next