Advertisement

ಜಿಲ್ಲಾ ಕಸಾಪ ಚುನಾವಣೆ: ಹಾಲಿ ಅಧ್ಯಕ್ಷ ಬಿ.ಎಸ್. ವಿನಯ್ ನಾಮಪತ್ರ ತಿರಸ್ಕೃತ

09:47 PM Apr 09, 2021 | Team Udayavani |

ಚಾಮರಾಜನಗರ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸ್ಥಾನದ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದ ಹಾಲಿ ಅಧ್ಯಕ್ಷ ಬಿ.ಎಸ್. ವಿನಯ್ ಅವರ ನಾಮಪತ್ರ ತಿರಸ್ಕೃತ ಗೊಂಡಿದೆ.

Advertisement

ವಿನಯ್ ಅವರು ಕನ್ನಡ ಸಾಹಿತ್ಯ ಪರಿಷತ್ತಿನ ತಮಿಳುನಾಡಿನ ಗಡಿನಾಡು ಘಟಕ ಹಾಗೂ ಚಾಮರಾಜನಗರ ಜಿಲ್ಲಾ ಕಸಾಪ ಘಟಕ ಎರಡೂ ಕಡೆ ಸದಸ್ಯತ್ವ ಹೊಂದಿರುವುದು ಪ್ರಜಾಪ್ರತಿನಿಧಿ ಕಾಯ್ದೆಯಲ್ಲಿನ ನಿಯಮಕ್ಕೆ ವಿರುದ್ಧವಾಗಿರುವುದರಿಂದ ಅವರ ನಾಮಪತ್ರವನ್ನು ತಿರಸ್ಕರಿಸಲಾಗಿದೆ ಎಂದು ಸಹಾಯಕ ಚುನಾವಣಾಧಿಕಾರಿ ತಿಳಿಸಿದ್ದಾರೆ.

ಇದಲ್ಲದೇ ಕಸಾಪ ತಮಿಳುನಾಡು ಗಡಿನಾಡು ಘಟಕದ ಅಧ್ಯಕ್ಷ ಸ್ಥಾನದ ಚುನಾವಣೆಗೆ ಸಲ್ಲಿಸಿದ್ದ ನಾಮಪತ್ರವನ್ನೂ ಇದೇ ಕಾರಣದ ಮೇಲೆ ತಿರಸ್ಕರಿಸಲಾಗಿದೆ.

ಚಾ.ನಗರ ಜಿಲ್ಲಾ ಕಸಾಪದಲ್ಲಿ ಹಾಲಿ ಅಧ್ಯಕ್ಷರಾಗಿದ್ದ ಬಿ.ಎಸ್. ವಿನಯ್ ಅವರು ಮರು ಆಯ್ಕೆ ಬಯಸಿ ನಾಮಪತ್ರ ಸಲ್ಲಿಸಿದ್ದರು. ಏ. 8ರಂದು ನಾಮಪತ್ರ ಪರಿಶೀಲನೆ ಇತ್ತು. ಈ ಸಂದರ್ಭದಲ್ಲಿ ಇನ್ನೋರ್ವ ಅಭ್ಯರ್ಥಿ ನಾಗೇಶ್‌ಸೋಸ್ಲೆ ಅವರು ತಕರಾರು ಅರ್ಜಿ ಸಲ್ಲಿಸಿದ್ದರು. ಕಸಾಪ ತಮಿಳುನಾಡಿನ ಗಡಿನಾಡು ಘಟಕ ಅಧ್ಯಕ್ಷ ಸ್ಥಾನದ ಚುನಾವಣೆಗೂ ವಿನಯ್ ಬೆಂಗಳೂರಿನಲ್ಲಿ ನಾಮಪತ್ರ ಸಲ್ಲಿಸಿದ್ದಾರೆ. ತಮಿಳುನಾಡು ಮತದಾರರ ಪಟ್ಟಿಯಲ್ಲಿ ಅವರ ಹೆಸರಿದೆ ಎಂದು ದೂರು ಸಲ್ಲಿಸಲಾಗಿತ್ತು. ಅವರಲ್ಲದೇ ಇನ್ನಿತರ ಅಭ್ಯರ್ಥಿಗಳಾದ ಸಿ.ಎಂ. ನರಸಿಂಹಮೂರ್ತಿ, ಸ್ನೇಹಾ, ರವಿಕುಮಾರ್, ಶೈಲಕುಮಾರ್ ಸಹ ತಕರಾರು ಅರ್ಜಿ ಸಲ್ಲಿಸಿ, ವಿನಯ್ ನಾಮಪತ್ರ ತಿರಸ್ಕರಿಸಿ ಕಾನೂನು ಕ್ರಮ ಕೈಗೊಳ್ಳಲು ಬೆಂಗಳೂರು ಮತ್ತು ಚಾಮರಾಜನಗರ ಚುನಾವಣಾಧಿಕಾರಿಯವರಿಗೆ ಕೋರಿದ್ದರು.

ಇದನ್ನೂ ಓದಿ :‘ಕೊರೊನಾ ಕರ್ಫ್ಯೂ’ ಅಪಹಾಸ್ಯ ಮಾಡಿದವರಿಗೆ ತಿರುಗೇಟು ನೀಡಿದ ಸಚಿವ ಕೆ.ಸುಧಾಕರ್

Advertisement

ಚಾ.ನಗರ ಜಿಲ್ಲಾ ಕಸಾಪ ಸದಸ್ಯರಾಗಿ ಬಿ.ಎಸ್. ವಿನಯ್ ಕೇರಾಫ್ ಮಹದೇವಸ್ವಾಮಿ, ಹೆಗ್ಗೊಠಾರ, ಚಾ.ನಗರ ತಾಲೂಕು ವಿಳಾಸದಲ್ಲಿ ಮತದಾರರ ಪಟ್ಟಿಯಲ್ಲಿದ್ದಾರೆ. ತಮಿಳುನಾಡಿನ ಗಡಿನಾಡು ಘಟಕದ ಮತದಾರರ ಪಟ್ಟಿಯಲ್ಲಿ ಬಿ.ಎಸ್. ವಿನಯ್, ನೀಲಗಿರಿ ಮೋಟಾರ್‌ಸ್, ತಾಳವಾಡಿ, ಈರೋಡು ಜಿಲ್ಲೆ ಎಂಬ ವಿಳಾಸ ನೀಡಿದ್ದಾರೆ. ಹೀಗೆ ಏಕಕಾಲದಲ್ಲಿ ಎರಡೂ ಕಡೆ ಸದಸ್ಯತ್ವ ಹೊಂದಿರುವುದರಿಂದ ಯಾವುದೇ ಅಧ್ಯಕ್ಷ ಸ್ಥಾನಕ್ಕೂ ಸ್ಪರ್ಧಿಸಲು ಅರ್ಹತೆ ಹೊಂದಿರುವುದಿಲ್ಲ ಎಂದು ಬೆಂಗಳೂರಿನ ಕೇಂದ್ರ ಚುನಾವಣಾಧಿಕಾರಿ, ಶುಕ್ರವಾರ ಮಧ್ಯಾಹ್ನ ಮೊದಲಿಗೆ ಗಡಿನಾಡು ಘಟಕದ ನಾಮಪತ್ರ ತಿರಸ್ಕರಿಸಿದರು. ಇದೇ ಮಾನದಂಡದ ಮೇಲೆ ಚಾ.ನಗರ ಜಿಲ್ಲಾ ಸಹಾಯಕ ಚುನಾವಣಾಧಿಕಾರಿ ಚಾ.ನಗರ ಜಿಲ್ಲಾ ಕಸಾಪ ಅಧ್ಯಕ್ಷ ಸ್ಥಾನದ ನಾಮಪತ್ರ ತಿರಸ್ಕರಿಸಿದರು.

ಬಿ.ಎಸ್. ವಿನಯ್ ಅವರು ಚಾಮರಾಜನಗರ ಜಿಲ್ಲಾ ಕಸಾಪ ಚುನಾವಣೆಯ ಪ್ರಬಲ ಅಭ್ಯರ್ಥಿಯಾಗಿದ್ದರು.
ಮಲೆಯೂರು ಗುರುಸ್ವಾಮಿ ನಾಮಪತ್ರ ವಾಪಸ್: ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ ಸಾಹಿತಿ ಪ್ರೊ. ಮಲೆಯೂರು ಗುರುಸ್ವಾಮಿಯವರು ಶುಕ್ರವಾರ ತಮ್ಮ ನಾಮಪತ್ರ ವಾಪಸ್ ಪಡೆದರು.

ಹೊಸಬರಿಗೆ ಅವಕಾಶ ನೀಡೋಣ ಎಂಬ ಕಾರಣಕ್ಕೆ ನಾಮಪತ್ರ ವಾಪಸ್ ಪಡೆಯಲು ಕಾರಣ. ಅವಿರೋಧ ಆಯ್ಕೆಯಾಗುತ್ತೀರಿ ಎಂಬ ಹಿರಿಯ ಸದಸ್ಯರ ಒತ್ತಾಯಕ್ಕೆ ಮಣಿದು ನಾಮಪತ್ರ ಸಲ್ಲಿಸಿದ್ದೆ. ಆದರೆ ಈಗ ಅಂಥ ಪರಿಸ್ಥಿತಿ ಕಾಣುತ್ತಿಲ್ಲ. ಎರಡು ಮೂರು ದಿನಗಳಿಂದ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ಬೇಸರವಾಗಿದೆ ಹಾಗಾಗಿ ಸ್ಪರ್ಧೆಯಿಂದ ಹಿಂದೆ ಸರಿದಿದ್ದೇನೆ ಎಂದು ಮ.ಗು. ಮಾಧ್ಯಮಗಳಿಗೆ ತಿಳಿಸಿದರು.

ನಾಮಪತ್ರ ವಾಪಸ್ ಪಡೆಯಲು ಏ. 12 ಕೊನೆಯ ದಿನಾಂಕವಾಗಿದೆ. ಪ್ರಸ್ತುತ ಸಿ.ಎಂ. ನರಸಿಂಹಮೂರ್ತಿ, ಶೈಲಕುಮಾರ್, ನಾಗೇಶಸೋಸ್ಲೆ, ನಿರಂಜನಕುಮಾರ್, ಸ್ನೇಹಲಕ್ಷ್ಮಿ, ಮಾದಾಪುರ ರವಿಕುಮಾರ್, ಶಿವಾಲಂಕಾರಯ್ಯ ಅವರ ನಾಮಪತ್ರಗಳು ಅಂಗೀಕೃತವಾಗಿವೆ. ಇವರಲ್ಲಿ ಕಣದಲ್ಲಿ ಯಾರ್ಯಾರು ಉಳಿಯಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ.
ಮೇ. 9ರಂದು ರಾಜ್ಯ ಹಾಗೂ ಜಿಲ್ಲಾ ಘಟಕಗಳಿಗೆ ಏಕಕಾಲಕ್ಕೆ ಚುನಾವಣೆ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next