Advertisement

ಜಿಲ್ಲೆಯಲ್ಲಿ 1,239 ರೌಡಿಶೀಟರ್ ಗಳು: ವಿಜಯಪುರ ಡಿಸಿ ಡಾ.ವಿ.ಬಿ.ದಾನಮ್ಮನವರ

10:37 PM Mar 29, 2023 | Vishnudas Patil |

ವಿಜಯಪುರ: ಕೇಂದ್ರ ಚುನಾವಣಾ ಆಯೋಗದಿಂದ ರಾಜ್ಯ ವಿಧಾನಸಭೆಗೆ ಸಾರ್ವತ್ರಿಕ ಚುನಾವಣಾ ಘೋಷಣೆಯಾಗಿದೆ. ವಿಜಯಪುರ ಜಿಲ್ಲೆಯ 8 ವಿಧಾನಸಭೆ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಚುನಾವಣೆಗೆ ಅಗತ್ಯ ಸಿದ್ಧತೆ, ಮುಕ್ತ-ನ್ಯಾಯ ಸಮ್ಮತ ಚುನಾವಣೆ ನಡೆಸಲು ಸನ್ನದ್ದವಾಗಿದೆ ಎಂದು ಜಿಲ್ಲಾಧಿಕಾರಿಯೂ ಆಗಿರುವ ಜಿಲ್ಲಾ ಚುನಾವಣಾ ಅಧಿಕಾರಿ ಡಾ.ವಿ.ಬಿ. ದಾನಮ್ಮನವರ ಹೇಳಿದರು.

Advertisement

ಬುಧವಾರ ಜಿಲ್ಲಾಧಿಕಾರಿ ಕಛೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಜಿಲ್ಲೆಯ ವಿಧಾನಸಭೆಗಳ ವಿವರ ನೀಡಿದ ಅವರು, 8 ವಿಧಾನಸಭೆ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಮಾ.29 ರ ವರೆಗೆ 18,78,303 ಲಕ್ಷ ಮತದಾರರಿದ್ದು, ಇದರಲ್ಲಿ 9,59,132 ಪುರುಷ, 9,18,953 ಮಹಿಳಾ ಹಾಗೂ 218 ಇತರೆ ಮತದಾರರು ಇದ್ದಾರೆ ಎಂದರು.

2023 ಜನೇವರಿ 5 ರಿಂದ ಮಾರ್ಚ 29 ರ ವರೆಗೆ 39,851 ಮತದಾರರು ಸೇರ್ಪಡೆಯಾಗಿದ್ದಾರೆ. ನಾಮಪತ್ರ ಸಲ್ಲಿಕೆಯ ಕೊನೆ ದಿನಕ್ಕೆ ಐದು ದಿನಗಳ ಮೊದಲು ಸಹ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೆ ಅರ್ಜಿ ಸಲ್ಲಿಸಬಹುದು ಎಂದರು.
2,77,748 ಮತದಾರರನ್ನು ಹೊಂದಿರುವ ವಿಜಯಪುರ ನಗರ ಕ್ಷೇತ್ರ ಜಿಲ್ಲೆಯಲ್ಲಿ ಅತಿಹೆಚ್ಚು ಮತದಾರರನ್ನು ಹೊಂದಿರುವ ಕ್ಷೇತ್ರವಾಗಿದ್ದು, 2,08,234 ಮತದಾರರು ಇರುವ ಬಸವನಬಾಗೇವಾಡಿ ಕ್ಷೇತ್ರ ಜಿಲ್ಲೆಯ 8 ಕ್ಷೇತ್ರಗಳಲ್ಲೇ ಕಡಿಮೆ ಮತದಾರರ ಕ್ಷೇತ್ರ ಎನಿಸಿದೆ.

ಜಿಲ್ಲೆಯಲ್ಲಿ ಈ ವರೆಗೆ 218 ಇತರೆ ಮತದಾರರಿದ್ದು, ವಿಜಯಪುರ ನಗರ ಕ್ಷೇತ್ರದಲ್ಲಿ ಅತಿ ಹೆಚ್ಚು 93 ಇತರೆ ಮತದಾರರು ಇದ್ದು, ಬಬಲೇಶ್ವರ ಕ್ಷೇತ್ರದಲ್ಲಿ ಅತಿ ಕಡಿಮೆ ಅಂದರೆ ಕೇವಲ 3 ಇತರೆ ಮತದಾರರಿದ್ದಾರೆ.
8 ಕ್ಷೇತ್ರಗಳ ವ್ಯಾಪ್ತಿಯಲ್ಲಿ 2072 ಮತಗಟ್ಟೆ ಸ್ಥಾಪಿಸಲಾಗಿದ್ದು, 296 ಮತಗೆಟ್ಟೆ ಹೊಂದಿರುವ ನಾಗಠಾಣಾ ಕ್ಷೇತ್ರ ಹೆಚ್ಚು ಮತಗಟ್ಟೆಗಳನ್ನು ಹೊಂದಿರುವ ಕ್ಷೇತ್ರ ಎನಿಸಿದೆ. 232 ಮತಗಟ್ಟೆಗಳನ್ನು ಹೊಂದಿರುವ ಬಸವನಬಾಗೇವಾಡಿ ಕ್ಷೇತ್ರ ಕಡಿಮೆ ಮತಗಟ್ಟೆಗಳನ್ನು ಹೊಂದಿರುವ ಕ್ಷೇತ್ರ ಎನಿಸಿದೆ ಎಂದು ವಿವರಿಸಿದರು.
ಹಿಂದಿನ ಚುನಾವಣೆಗಳ ಅನುಭವದ ಆಧಾರದಲ್ಲಿ 5 ವಿಧಾನಸಭೆ ಕ್ಷೇತ್ರಗಳ ವ್ಯಾಪ್ತಿಯಲ್ಲಿನ 1 ಸಾವಿರ ಮತಗಟೆಗಳಲ್ಲಿ ಕಡಿಮೆ ಮತದಾನವಾಗಿದೆ. ಪ್ರಜಾಪ್ರಭುತ್ವದ ಬಲವರ್ಧನೆಗಾಗಿ ಪ್ರಸ್ತುತ ನಡೆಯುವ ಚುನಾವಣೆಯಲ್ಲಿ ಮತದಾನ ಹೆಚ್ಚಳಕ್ಕೆ ಹೆಚ್ಚಿನ ಜಾಗೃತಿಗೆ ಆದ್ಯತೆ ನೀಡಲಾಗುತ್ತಿದೆ ಎಂದರು.
ಇದಲ್ಲದೇ ಮತದಾರರು ಯಾವುದೇ ಆಮಿಷಕ್ಕೆ ಒಳಗಾಗದೇ ಪ್ರಜಆಪೂರ್ವಕ ಮತದಾನ ಮಾಡುವ ಕುರಿತು ಜಾಗೃತಿ ಮೂಡಿಸಲಾಗಿದೆ. ಮತಗಟ್ಟೆ ಮಟ್ಟದ ಅಧಿಕಾರಿಗಳ ಮೂಲಕ ಪ್ರತಿ ಮತದಾರರ ಮನೆಗೆ ಮತಗಟ್ಟೆ ವಿವರದ ಚೀಟಿ ಹಂಚಿಕೆ ಮಾಡಲಾಗುತ್ತದೆ. ಇದರೆ ಹೊರತಾಗಿ ಮತಗಟ್ಟೆಗಳಲ್ಲಿ ಸಹಾಯವಾಣಿ ಕೂಡ ತೆರೆಯಲಾಗುತ್ತದೆ. ಮತದಾರರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಇರುವ ಕುರಿತು ಖಾತ್ರಿ ಮಾಡಿಕೊಳ್ಳವ ಜವಾಬ್ದಾರಿ ನಿಭಾಯಿಸಬೇಕು ಎಂದು ಮನವಿ ಮಾಡಿದರು.

ಈಗಾಗಲೇ ಜಿಲ್ಲೆಯ 8 ವಿಧಾನಸಭೆ ಕ್ಷೇತ್ರಗಳಿಗೆ ಚುನಾವಣಾ ಅಧಿಕಾರಿಗಳನ್ನು ನೇಮಿಸಿದ್ದು, ಇಂಡಿ ಕ್ಷೇತ್ರಕ್ಕೆ ಒಬ್ಬರು, ವಿಜಯಪುರ ನಗರ ಹಾಗೂ ಪರಿಶಿಷ್ಟ ಜಾತಿಗೆ ಮೀಸಲಾದ ನಾಗಠಾಣಾ ಕ್ಷೇತ್ರಕ್ಕೆ ಇಬ್ಬರು, ದೇವರಹಿಪ್ಪರಗಿ ಕ್ಷೇತ್ರಕ್ಕೆ ನಾಲ್ವರು ಸಹಾಯಕ ಚುನಾವಣಾಧಿಕಾರಿಗಳನ್ನು ನೇಮಿಸಲಾಗಿದೆ. ಈ ಕ್ಷೇತ್ರಗಳ ಹೊರತಾಗಿ ಮುದ್ದೇಬಿಹಾಳ, ಬಸವನಬಾಗೇವಾಡಿ ಹಾಗೂ ಸಿಂದಗಿ ಕ್ಷೇತ್ರಕ್ಕೆ ತಲಾ ಮೂವರು ಸಹಾಯಕ ಚುನಾವಣಾ ಅಧಿಕಾರಿಗಳನ್ನು ನೇಮಿಸಲಾಗಿದೆ ಎಂದು ವಿವರಿಸಿದರು.

Advertisement

ಮುಕ್ತ ಮತ್ತು ನ್ಯಾಯ ಸಮ್ಮತ ಚುನಾವಣೆ ನಡೆಸಲು ಜಿ.ಪಂ. ಸಿಇಒ ರಾಹುಲ್ ಶಿಂಧೆ ಅಧ್ಯಕ್ಷತೆಯಲ್ಲಿ ಮಾದರಿ ನೀತಿ ಸಂಹಿತೆ ನಿರ್ವಹಣಾ ಸಮಿತಿ ರಚಿಸಲಾಗಿದೆ. ಇವರ ಅಧ್ಯಕ್ಷತೆಯಲ್ಲಿ ಪ್ರತಿ ವಿಧಾನಸಭೇ ಕ್ಷೇತ್ರವಾರು ತಲಾ ಒಬ್ಬರಂತೆ ತಾಲೂಕ ಮಟ್ಟದ ಅಧಿಕಾರಿಗಳನ್ನು ಮಾದರಿ ನೀತಿ ಸಂಹಿತೆ ನಿರ್ವಹಣೆಗಾಗಿ ನೇಮಿಸಲಾಗಿದೆ ಎಂದು ವಿವರ ನೀಡಿದರು.

ತೋಟಗಾರಿಕೆ ಉಪ ನಿರ್ದೇಶಕ ಎಸ್.ಎಂ.ಬರಗಿಮಠ ಅವರನ್ನು ಜಿಲ್ಲಾ ನಿರ್ವಹಣಾ ಘಟಕದ ಜಿಲ್ಲಾ ನೋಡಲ್ ಅಧಿಕಾರಿಯನ್ನಾಗಿ ನೇಮಿಸಲಾಗಿದೆ. ಪ್ರತಿ ವಿಧಾನಸಭೆ ಕ್ಷೇತ್ರದಲ್ಲೂ 4 ತಲಾ ಒಬ್ಬರು ಅಧಿಕಾರಿಗಳನ್ನು ದೂದು ನಿರ್ವಹಣೆಗೆ ನಿಯೋಜಿಸಲಾಗಿದೆ ಎಂದರು.

8 ವಿಧಾನಸಭೆ ಕ್ಷೇತ್ರಗಳ ವ್ಯಾಪ್ತಿಯಲ್ಲಿ 167 ಸೆಕ್ಟರ್ ಅಧಿಕಾರಿಗಳು, 72 ಫ್ಲಾಯಿಂಗ್ ಸ್ಕ್ವಾಡ್, ಸ್ಟೆಟಿಕ್ ಸರ್ವಲನ್ಸ್ ತಂಡಕ್ಕೆ 87, ವಿಡಿಯೋ ಸರ್ವಲನ್ಸ್ ತಂಡಕ್ಕೆ 24, ವಿಡಿಯೋ ವೀವಿಂಗ್ ತಂಡಕ್ಕೆ 8 ಹಾಗೂ ಅಕೌಂಟಿಂಗ್ ತಂಡಕ್ಕೆ 8 ಅಧಿಕಾರಿಗಳನ್ನು ನೇಮಿಸಲಾಗಿದೆ ಎಂದು ವಿವರಿಸಿದರು.

ಜಿಲ್ಲೆಯ 8 ವಿಧಾನಸಭೆ ಕ್ಷೇತ್ರದಲ್ಲಿ ಚುನಾವಣೆ ಮತದಾನದ ಸಂದರ್ಭದಲ್ಲಿ 2072 ಮತಗಟ್ಟೆಗಳಲ್ಲಿ ಕರ್ತವ್ಯ ನಿರ್ವಹಣೆಗೆ ಮತಗಟ್ಟೆ ಅಧಿಕಾರಿ, ಮತಗಟ್ಟೆ ಸಹಾಯಕ ಅಧಿಕಾರಿ, ಪಿ.ಒ.1 ಹಾಗೂ 2 ಹಾಗೂ ಮೈಕ್ರೋ ವೀಕ್ಷಕರು ಸೇರಿದಂತೆ 10,360 ಸಿಬ್ಬಂದಿ ಬೇಕಿದೆ. ಆದರೆ ಜಿಲ್ಲೆಯಲ್ಲಿ 12,070 ಸಿಬ್ಬಂದಿ ಲಭ್ಯವಿದೆ ಎಂದರು.
ಚೆಕ್‍ಪೋಸ್ಟ್ : ವಿಜಯಪುರ ಜಿಲ್ಲೆಯ ಅಂತರ ಜಿಲ್ಲಾ ಮಾತ್ರವಲ್ಲ ಅಂತರಾಜ್ಯ ಗಡಿಯನ್ನೂ ಹೊಂದಿದೆ. ಹೀಗಾಗಿ ಜಿಲ್ಲೆಯ ಮಹಾರಾಷ್ಟ್ರ ಗಡಿಯಲ್ಲಿ ನಾಗಠಾಣಾ ಕ್ಷೇತ್ರದಲ್ಲಿ 6, ಬಬಲೇಶ್ವರ ಕ್ಷೇತ್ರದಲ್ಲಿ 4 ಹಾಗೂ ಇಂಡಿ ಕ್ಷೇತ್ರದಲ್ಲಿ 1 ಸೇರಿದಂತೆ 11 ಕಡೆಗಳಲ್ಲಿ ಅಂತರ ರಾಜ್ಯ ಚಕ್‍ಪೋಸ್ಟ್ ತೆರೆಯಲಾಗಿದೆ.

ಇದರ ಹೊರತಾಗಿ ಜಿಲ್ಲೆಯಲ್ಲಿ 16 ಕಡೆಗಳಲ್ಲಿ ಅಂತರ ಜಿಲ್ಲಾ ಚಕ್‍ಪೋಸ್ಟ್‍ಗಳನ್ನೂ ತೆರೆಯಲಾಗಿದೆ. ಮುದ್ದೇಬಿಹಾಳ ಕ್ಷೇತ್ರದಲ್ಲಿ 2, ದೇವರಹಿಪ್ಪರಗಿ ಕಏತ್ರದಲ್ಲಿ 1, ಬಸವನಬಾಗೇವಾಡಿ 2, ಬಬಲೇಶ್ವರ 3, ವಿಜಯಪುರ ನಗರ 3, ನಾಗಠಾಣಾ ಹಾಗೂ ಇಂಡಿ ಕ್ಷೇತ್ರ ವ್ಯಾಪ್ತಿಯಲ್ಲಿ ತಲಾ 1 ಹಾಗೂ ಸಿಂದಗಿ ಕ್ಷೇತ್ರದ ವ್ಯಾಪ್ತಿಯಲ್ಲಿ 3 ಕಡೆಗಳಲ್ಲಿ ಅಂತರ ಜಿಲ್ಲಾ ಚಕ್‍ಪೋಸ್ಟ್ ಸ್ಥಾಪಿಸಲಾಗಿದೆ ಎಂದರು.

ಅಪರ ಜಿಲ್ಲಾಧಿಕಾರಿ ಮಹದೇವ ಮುರಗಿ ವೇದಿಕೆ ಮೇಲಿದ್ದರು.334 ಮತಗಟ್ಟೆ ಕ್ರಿಟಿಕಲ್ : ಜಿಲ್ಲೆಯಲ್ಲಿ ಒಟ್ಟು 2072 ಮತಗಟ್ಟೆಗಳ ಪೈಕಿ 334 ಮತಗಟ್ಟೆಗಳನ್ನು ಕ್ರಿಟಿಕಲ್ ಮತಗಟ್ಟೆಗಳು ಎಂದು ಗುರುತಿಸಲಾಗಿದೆ.

ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರದ 241 ಮತಗಟ್ಟೆಗಳ ಪೈಕಿ 24, ದೇವರಹಿಪ್ಪರಗಿಯ 252 ಮತಗಟ್ಟೆಗಳ ಪೈಕಿ 28, ಬಸವನ ಬಾಗೇವಾಡಿಯ 232 ಮತಗಟ್ಟೆಗಳ ಪೈಕಿ 33, ಬಬಲೇಶ್ವರದ 243 ಮತಗಟ್ಟೆಗಳ ಪೈಕಿ 37, ವಿಜಯಪುರ ನಗರದ 269 ಮತಗಟ್ಟೆಗಳ ಪೈಕಿ 118, ನಾಗಠಾಣದ 296 ಮತಗಟ್ಟೆಗಳ ಪೈಕಿ 38, ಇಂಡಿಯ 268 ಮತಗಟ್ಟೆಗಳ ಪೈಕಿ 32 ಹಾಗೂ ಸಿಂದಗಿಯ 271 ಮತಗಟ್ಟೆಗಳ ಪೈಕಿ 24 ಮತಗಟ್ಟೆಗಳನ್ನು ಕ್ರಿಟಿಕಲ್ ಮತಗಟ್ಟೆಗಳು ಎಂದು ಗುರುತಿಸಲಾಗಿದೆ ಎಂದು ವಿವರಿಸಿದರು.

ಪ್ರಸಕ್ತ ಚುನಾವಣೆಯಲ್ಲಿ 3949 ಬ್ಯಾಲೆಟ್ ಯೂನಿಟ್, 2769 ಕಂಟ್ರೋಲ್ ಯೂನಿಟ್, 2999 ವಿವಿಪ್ಯಾಟ್‍ಗಳನ್ನು ಬಳಕೆ ಮಾಡಲಾಗುತ್ತಿದೆ. ಈಗಾಗಲೇ ಈ ಯಂತ್ರಗಳ ಬಳಕೆಗೆ ಸಂಬಂಧಿಸಿಂತೆ ಅಧಿಕಾರಿಗಳಿಗೆ ತರಬೇತಿ, ಮತದಾರರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಕೈಗೊಳ್ಳಲಾಗುತ್ತಿದೆ ಎಂದರು.

80 ವರ್ಷದವರು, ದಿವ್ಯಾಂಗರಿಗೆ ಪೋಸ್ಟಲ್ ಓಟ್ : ಚುನಾವಣಾ ಆಯೋಗದ ಮಾರ್ಗ ಸೂಚಿಯಂತೆ ಪ್ರಸ್ತುತ ಚುನಾವಣೆ ಸಂದರ್ಭದಲ್ಲಿ 80 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ, ದಿವ್ಯಾಂಗರಿಗೆ, ಕೋವಿಡ್ ಸೋಂಕಿತರಿಗೆ ಫೆÇೀಸ್ಟಲ್ ಬ್ಯಾಲೆಟ್ ಮೂಲಕ ಮತದಾನಕ್ಕೆ ಅವಕಾಶ ಕಲ್ಪಸಲಾಗುತ್ತಿದೆ. ಜಿಲ್ಲೆಯಲ್ಲಿ ಇಆರ್‍ಓ ನೆಟ್ ತಂತ್ರಾಶದ ಪ್ರಕಾರ ಜಿಲ್ಲೆಯಲ್ಲಿ 80 ವರ್ಷ ಮೇಲ್ಪಟ್ಟ 38,727 ಮತದಾರರು, 20,295 ದಿವ್ಯಾಂಗರು ಸೇರಿ ಪೋಸ್ಟಲ್ ಮತಪತ್ರಕ್ಕೆ 59,022 ಮತದಾರರು ಅರ್ಹರಿದ್ದಾರೆ.

ಜಿಲ್ಲೆಯಲ್ಲಿ ಮತದಾನ ಪ್ರಮಾಣ ಹೆಚ್ಚಳಕ್ಕಾಗಿ ಜನರಿಗೆ ಮತದಾನ ಮಹತ್ವದ ಕುರಿತು ಮನವರಿಕೆ ಮಾಡಿದ್ದೇವೆ. ಚುನಾವಣೆ ಸಂದರ್ಭದಲ್ಲಿ ರೈತರು ತಮ್ಮ ಕೃಷಿ ಉತ್ಪನ್ನ ಮಾರಾಟ ಮಾಡಿದ್ದಕ್ಕೆ ಅಗತ್ಯ ದಾಖಲೆ ಇರಿಸಿಕೊಂಡು ಹಣ ಸಾಗಾಟ ಮಾಡಿದಲ್ಲಿ ಚಕ್‍ಪೋಸ್ಟ್‍ಗಳಲ್ಲಿ ಸಮಸ್ಯೆ ಇರುವುದಿಲ್ಲ.
-ರಾಹುಲ್ ಶಿಂಧೆ
ಅಧ್ಯಕ್ಷರು-ಸ್ವೀಪ್ ಸಮಿತಿ /ಜಿಲ್ಲಾ ನೋಡಲ್ ಅಧಿಕಾರಿ,ಮಾದರಿ ನೀತಿ ಸಂಹಿತೆ-ವಿಜಯಪುರ

ಜಿಲ್ಲೆಯಲ್ಲಿ 1,239 ರೌಡಿಶೀಟರ್ ಗಳಿದ್ದು, 281 ರೌಡಿಗಳನ್ನು ಚುನಾವಣೆಗಳಲ್ಲಿ ದೌರ್ಜನ್ಯದಿಂದ ಮತದಾನ ಮಾಡಿಸುವ ಕೃತ್ಯದಲ್ಲಿ ಪಾಲ್ಗೊಂಡುದಾಗಿ ಪತ್ತೆ ಮಾಡಿ, ಎಚ್ಚರಿಕೆ ನೀಡಲಾಗಿದೆ. 830 ರೌಡಿಶೀಟರ್‍ಗಳಿಂದ ಮುಚ್ಚಳಿಕೆ ಪಡೆಯಲಾಗಿದೆ. ಜಿಲ್ಲಾಧಿಕಾರಿ ಕಛೇರಿ ಹಾಗೂ ಎಸ್ಪಿ ಕಛೇರಿಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸಾರ್ವಜನಿಕ ಭಾವನೆ ಧಕ್ಕೆ ತರುವ, ತಪ್ಪು ಸಂದೇಶ ಹರಡುವವರ ಮೇಲೆ ನಿಗಾ ಇರಿಸಲಾಗಿದೆ.
-ಎಚ್.ಡಿ.ಆನಂದಕುಮಾರ
ಎಸ್ಪಿ, ವಿಜಯಪುರ

Advertisement

Udayavani is now on Telegram. Click here to join our channel and stay updated with the latest news.

Next