Advertisement

ಮಳೆ ಎದುರಿಸಲು ಪೂರ್ಣ ಸಜ್ಜಾಗದ ಜಿಲ್ಲಾಡಳಿತ: ಕೆಲವೆಡೆ ನೆರೆ; ಭೀತಿಯ ಆತಂಕ

10:08 AM May 24, 2023 | Team Udayavani |

ಉಡುಪಿ: ನಗರ, ಗ್ರಾಮೀಣ ಪ್ರದೇಶ ಸೇರಿದಂತೆ ಜಿಲ್ಲಾದ್ಯಂತ ಕುಡಿಯುವ ನೀರಿನ ಸಮಸ್ಯೆ ಹೆಚ್ಚುತ್ತಿರುವ ಬೆನ್ನಲ್ಲೇ ಮಳೆಗಾಲವನ್ನು ಸಮರ್ಪಕವಾಗಿ ಎದುರಿಸಬೇಕಾದ ಸವಾಲು ಇದೆ. ಕಳೆದ ಜೂನ್‌/ಜುಲೈಯಲ್ಲಿ ಜಿಲ್ಲೆಯ ಕೆಲವು ಭಾಗದಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿತ್ತು. ಈ ಬಾರಿ ಚುನಾವಣೆ ಹಿನ್ನೆಲೆಯಲ್ಲಿ ಮಳೆಗಾಲಕ್ಕೆ ಬೇಕಾಗಿರುವ ಸಿದ್ಧತೆ ತುಸು ವಿಳಂಬವಾಗಿರುವುದರಿಂದ ಕೆಲವು ಪ್ರದೇಶಗಳಲ್ಲಿ ನೆರೆಯ ಭೀತಿ ತಪ್ಪಿಲ್ಲ.

Advertisement

ತಹಶೀಲ್ದಾರ್‌ ನೇತೃತ್ವದ ಕಾರ್ಯ ಪಡೆಗಳು ಈಗಾಗಲೇ ಒಂದು ಹಂತದ ಸಭೆ ನಡೆಸಿ, ಅಧೀನ ಅಧಿಕಾರಿಗಳಿಗೆ ಸಿದ್ಧತೆಗೆ ಬೇಕಾದ ಸೂಚನೆ ನೀಡಿವೆ. ಜಿಲ್ಲಾಡಳಿತದಿಂದಲೂ ಎಲ್ಲ ತಹ ಶೀಲ್ದಾರ್‌ಗಳಿಗೂ ಮಳೆಗಾಲ ಸಮ ರ್ಪಕವಾಗಿ ಎದುರಿಸಲು ತಂಡವನ್ನು ಸಜ್ಜುಗೊಳಿಸುವಂತೆ ನಿರ್ದೇಶನ ನೀಡಲಾಗಿದೆ. ಆದರೆ ಗ್ರಾ.ಪಂ. ಮಟ್ಟದಲ್ಲಿರುವ ಕಾರ್ಯಪಡೆಗಳು ಇನ್ನು ಕ್ರಿಯಾಶೀಲವಾಗಿಲ್ಲ. ಗ್ರಾಮ ಗಳಲ್ಲಿ ಆಗಬೇಕಿರುವ ತುರ್ತು ಕಾಮಗಾರಿಗಳಿಗೂ ವೇಗ ಸಿಕ್ಕಿಲ್ಲ ಎಂಬ ಆರೋಪಗಳು ಕೇಳಿ ಬರುತ್ತಿವೆ.

ತೋಡುಗಳ ಸ್ವತ್ಛತೆ
ಉಡುಪಿ ನಗರದಲ್ಲಿ ಇಂದ್ರಾಣಿ ನದಿಯ ಹೂಳೆತ್ತುವುದು ಮತ್ತು ಮಳೆ ನೀರು ಹರಿಯುವ ತೋಡುಗಳನ್ನು ಸ್ವತ್ಛಗೊಳಿಸುವ ಕಾರ್ಯ ವೇಗವಾಗಿ ಸಾಗುತ್ತಿದೆ. ಕೆಲವು ಕಡೆಗಳಲ್ಲಿ ಇನ್ನಷ್ಟೇ ಹೂಳೆತ್ತುವ ಹಾಗೂ ತೋಡು ಸ್ವತ್ಛತೆ ಕಾರ್ಯ ಆಗಬೇಕಿದೆ. ಗ್ರಾಮೀಣ ಭಾಗದಲ್ಲಿ ಇನ್ನೂ ತೋಡುಗಳ ಸ್ವತ್ಛತೆ ಕಾರ್ಯ ಆರಂಭವಾಗಿಲ್ಲ.

ಸಮಸ್ಯೆ ಹೆಚ್ಚಿರುವುದೆಲ್ಲಿ?
ಉಡುಪಿ ನಗರದ ಬನ್ನಂಜೆ, ಮಠದಬೆಟ್ಟು, ಕಲ್ಸಂಕ, ಬಡಗುಪೇಟೆ, ಬೈಲಕೆರೆ, ಕುಂದಾಪುರದ ಕೋಟೇಶ್ವರ ಮೇಲ್ಸೇತುವೆ ಆಸುಪಾಸು, ಪಡುಬಿದ್ರಿ, ವಾರಂಬಳ್ಳಿ, ಹಂದಾಡಿ, ನಾವುಂದ ಗ್ರಾಮದ ಸಾಲುºಡ, ಅರೆಹೊಳೆ ಸೇರಿದಂತೆ ಬೈಂದೂರು ತಾಲೂಕಿನ ವಿವಿಧ ಪ್ರದೇಶ, ಬ್ರಹ್ಮಾವರ ತಾಲೂಕಿನ ಉಪ್ಪೂರು ಗ್ರಾ.ಪಂ. ವ್ಯಾಪ್ತಿಯ ಕೆಲವು ಪ್ರದೇಶ, ಕಡಲ್ಕೊರೆತ ಎದುರಿಸುವ ಮಲ್ಪೆ, ಕಾಪು, ಮರವಂತೆ, ಶಿರೂರು ಭಾಗದಲ್ಲಿ ಅಗತ್ಯ ಮುನ್ನೆಚ್ಚರಿಕ ಕ್ರಮಗಳನ್ನು ಈಗಿಂದಲೇ ತೆಗೆದುಕೊಳ್ಳಬೇಕಾಗಿದೆ. ಕಳೆದ ಬಾರಿ ನಾವುಂದ ಗ್ರಾ.ಪಂ. ವ್ಯಾಪ್ತಿಯಲ್ಲಿ ಪ್ರವಾಹದಿಂದ ಜನಜೀವನ ಸಂಪೂರ್ಣ ಅಸ್ತವ್ಯಸ್ಥಗೊಂಡಿತ್ತು.

ದ.ಕ: ಸಿದ್ಧತೆ ಪ್ರಗತಿಯಲ್ಲಿ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಂಗಳೂರು ನಗರ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಮಳೆಗಾಲದ ಸಿದ್ಧತೆ ಮುಂದುವರಿದಿದೆ. ಜಿಲ್ಲಾಧಿಕಾರಿ ಮತ್ತು ಜಿ.ಪಂ. ಸಿಇಒ ನೇತೃತ್ವದಲ್ಲಿ ಈಗಾಗಲೇ ಸಭೆಗಳು ನಡೆದಿದ್ದು, ತಾಲೂಕು ವ್ಯಾಪ್ತಿಯಲ್ಲಿ ನೂತನ ಶಾಸಕರು ಸಭೆ ನಡೆಸಿದ್ದಾರೆ. ತಹಶೀಲ್ದಾರ್‌ ನೇತೃತ್ವದ ಕಾರ್ಯಪಡೆಯ ಸಭೆ ನಡೆಸಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಗ್ರಾ.ಪಂ.ವ್ಯಾಪ್ತಿಯಲ್ಲಿ ತೋಡುಗಳ ಹೂಳು ತೆಗೆಯುವ ಕೆಲಸಗಳು ನಡೆಯುತ್ತಿದೆ. ಮಂಗಳೂರು ನಗರ ವ್ಯಾಪ್ತಿಯಲ್ಲೂ ರಾಜಕಾಲುವೆಗಳ ಹೂಳು ತೆರವು ಕೆಲಸಗಳು ಭರದಿಂದ ಸಾಗಿದ್ದು, ಕೆಲವು ಕಡೆಗಳಲ್ಲಿ ಹೂಳನ್ನು ಇನ್ನಷ್ಟೇ ತೆರವುಗೊಳಿಸಬೇಕಾಗಿದೆ.2018ರ ಮಹಾಮಳೆಯನ್ನು ಜನರು ಇನ್ನೂ ನೆನಪಿಸಿಕೊಳ್ಳುತ್ತಿದ್ದಾರೆ. ಧಾರಾ ಕಾರ ಮಳೆ ಸುರಿಯುವಾಗ ಕೃತಕ ನೆರೆ ಸೃಷ್ಟಿಆಗದಂತೆ ಮುನ್ನೆಚ್ಚರಿಕೆ ವಹಿಸುವಂತೆ ಅಧಿಕಾರಿಗಳು ಎಚ್ಚರ ವಹಿಸುವಂತೆಯೂ ಜನತೆ ಆಗ್ರಹಿಸುತ್ತಿದ್ದಾರೆ.

Advertisement

ಮುಗಿಯದ ಪೈಪ್‌ಲೈನ್‌ ಕಾಮಗಾರಿ
ಚುನಾವಣೆ ಹಿನ್ನೆಲೆಯಲ್ಲಿ ಜಲ ಜೀವನ್‌ ಮಿಷನ್‌ ಕಾಮಗಾರಿ ಸ್ವಲ್ಪ ವಿಳಂಬವಾಗಿದೆ. ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಚುನಾವಣೆ ಅನಂತರ ಪೈಪ್‌ಲೈನ್‌ ಅಳವಡಿಸುವ ಕಾರ್ಯಕ್ಕೆ ವೇಗ ಸಿಕ್ಕಿದೆ. ಜೆಸಿಬಿ ಮೂಲಕ ರಸ್ತೆ ಬದಿಗಳನ್ನು ಅಗದು ಪೈಪ್‌ ಅಳವಡಿಸಲಾಗುತ್ತಿದೆ. ಆದರೆ ಗುಂಡಿ ಮುಚ್ಚುವ ಸಂದರ್ಭದಲ್ಲಿ ಪೂರ್ಣ ಪ್ರಮಾಣದ ಫಿನಿಶಿಂಗ್‌ ನೀಡುತ್ತಿಲ್ಲ. ಇದು ಮಳೆಗಾಲದಲ್ಲಿ ಸಾಕಷ್ಟು ಸಮಸ್ಯೆ ತಂದೊಡ್ಡುವ ಸಾಧ್ಯತೆಯೂ ಇದೆ. ಹಾಗಾಗದಂತೆ ಗ್ರಾ.ಪಂ. ಹಾಗೂ ಸಂಬಂಧಪಟ್ಟ ಇಲಾಖೆ ನೋಡಿಕೊಳ್ಳಬೇಕು ಎಂಬುದು ಸ್ಥಳೀಯರ ಆಗ್ರಹ.

ಮಳೆಗಾಲದ ನಿರ್ವಹಣೆಗೆ ತಹಶೀಲ್ದಾರ್‌ಗಳ ನೇತೃತ್ವದ ಕಾರ್ಯಪಡೆಗೆ ಸೂಚನೆ ನೀಡಿದ್ದೇವೆ. ಜಿಲ್ಲಾದ್ಯಂತ ಪ್ರವಾಹ ಎದುರಾಗಬಹುದಾದ ಪ್ರದೇಶಗಳ ಪಟ್ಟಿಯನ್ನು ಸಿದ್ಧಪಡಿಸಿಕೊಂಡಿದ್ದೇವೆ. ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಈ ಸಂಬಂಧ ಕಾರ್ಯ ಆರಂಭವಾಗಿದೆ.
– ಕೂರ್ಮಾ ರಾವ್‌ ಎಂ., ಉಡುಪಿ ಜಿಲ್ಲಾಧಿಕಾರಿ

ಮಳೆಗಾಲಕ್ಕೆ ಬೇಕಾದ ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಎಲ್ಲ ಪಿಡಿಒಗಳಿಗೂ ನಿರ್ದೇಶನ ನೀಡಿದ್ದೇವೆ. ಸೆಮಿಅರ್ಬನ್‌ ಗ್ರಾ.ಪಂ.ಗಳಲ್ಲಿ ಸಮಸ್ಯೆ ಹೆಚ್ಚಿದೆ. ಅದರ ನಿವಾರಣೆಗಾಗಿ ಕೆಲವೊಂದು ಕಾರ್ಯತಂತ್ರಗಳನ್ನು ರೂಪಿಸುತ್ತಿದ್ದೇವೆ. ಗ್ರಾಮೀಣ ಭಾಗದ ತೋಡುಗಳ ಸ್ವತ್ಛತೆ ಆದಷ್ಟು ಬೇಗ ಪೂರ್ಣಗೊಳಿಸಲಿದ್ದೇವೆ.
-ಪ್ರಸನ್ನ ಎಚ್‌., ಉಡುಪಿ ಜಿ.ಪಂ. ಸಿಇಒ

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next