Advertisement

ತ್ಯಾಜ್ಯ ವಿಲೇ; 2023ರಿಂದ ಬಯೋ ಮೈನಿಂಗ್‌

12:13 PM Jun 26, 2022 | Team Udayavani |

ಹುಬ್ಬಳ್ಳಿ: ಅವಳಿ ನಗರದಲ್ಲಿ ಕಳೆದ ಹಲವಾರು ವರ್ಷಗಳಿಂದ ಸಂಗ್ರಹಗೊಂಡಿರುವ ತ್ಯಾಜ್ಯದ ವಿಲೇವಾರಿ ನಿಟ್ಟಿನಲ್ಲಿ 2023ರಿಂದ ಬಯೋಮೈನಿಂಗ್‌ ಆರಂಭಗೊಳ್ಳುವ ವಿಶ್ವಾಸವಿದೆ ಎಂದು ಮಹಾನಗರ ಪಾಲಿಕೆ ಆಯುಕ್ತ ಡಾ| ಬಿ.ಗೋಪಾಲಕೃಷ್ಣ ತಿಳಿಸಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಾರಾಣಸಿ, ಭೂಪಾಲ ಬಿಟ್ಟರೆ ಮೂರನೇ ಬಯೋ ಮೈನಿಂಗ್‌ ಕಾರ್ಯ ಹುಬ್ಬಳ್ಳಿಯಲ್ಲಿಯೇ ಆರಂಭವಾಗಲಿದೆ. ಈ ನಿಟ್ಟಿನಲ್ಲಿ ಈಗಾಗಲೇ ಪ್ರಕ್ರಿಯೆಗಳು ನಡೆದಿವೆ. ಧಾರವಾಡದ ಹೊಸ ಯಲ್ಲಾಪುರದಲ್ಲಿರುವ ತ್ಯಾಜ್ಯಸಂಗ್ರಹ ಸ್ಥಳದಲ್ಲಿ ಹಸಿರುಬೆಟ್ಟ ನಿರ್ಮಾಣ ನಿಟ್ಟಿನಲ್ಲಿ ಯೋಜಿಸಲಾಗಿದ್ದು, ಅಂದಾಜು 30 ಕೋಟಿ ರೂ. ಪ್ರಸ್ತಾವನೆ ಸರಕಾರಕ್ಕೆ ಸಲ್ಲಿಸಲಾಗಿದೆ ಎಂದರು.

ಒಣ ತ್ಯಾಜ್ಯವನ್ನು ಆದಾಯವಾಗಿ ಪರಿವರ್ತಿಸುವ ನಿಟ್ಟಿನಲ್ಲಿ ಎರಡು ಎನ್‌ಜಿಒಗಳಿಗೆ ಎರಡು ಕಾಂಪ್ಯಾಕ್ಟ್ ಕೇಂದ್ರಗಳನ್ನು ನೀಡಲಾಗಿದೆ. ಅವಳಿನಗರದಲ್ಲಿ ಒಟ್ಟು ಇಂತಹ ಐದು ಕೇಂದ್ರಗಳಿವೆ. ಹಸಿ ತ್ಯಾಜ್ಯವನ್ನು ಕಾಂಪೋಸ್ಟ್‌ ಆಗಿ ಪರಿವರ್ತಿಸಲಾಗಿದ್ದು, ಭೂ ಸಮೃದ್ಧಿ ಹೆಸರಲ್ಲಿ ಇದುವರೆಗೆ ಸುಮಾರು 90 ಟನ್‌ ಮಾರಾಟವಾಗಿದೆ. ಈ ಹಿಂದೆ 3 ರೂ. ಗೆ ಕೆಜಿಯಂತೆ ನೀಡಲಾಗುತ್ತಿತ್ತು. ಇದೀಗ 10 ರೂ.ಗೆ ಕೆಜಿಯಂತೆ ಮಾರಾಟ ಆಗುತ್ತಿದೆ ಎಂದು ಹೇಳಿದರು.

ಪ್ರಸ್ತುತ ಅವಳಿ ನಗರದಲ್ಲಿ ಶೇ.80 ಮನೆಗಳಿಂದ ತ್ಯಾಜ್ಯ ಸಂಗ್ರಹವಾಗುತ್ತಿದ್ದು, ಶೇ.70 ತ್ಯಾಜ್ಯ ವಿಂಗಡಣೆಯಾಗುತ್ತಿದೆ. ತ್ಯಾಜ್ಯ ಸಂಗ್ರಹ ಹಾಗೂ ವಿಂಗಡಣೆ ಇನ್ನಷ್ಟು ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಇದಕ್ಕಾಗಿ ಇನ್ನೂ 20-30 ತ್ಯಾಜ್ಯ ಸಂಗ್ರಹ ಟಿಪ್ಪರ್‌ ಹಾಗೂ ಟ್ರ್ಯಾಕ್ಟರ್‌ಗಳು ಬರಲಿವೆ ಎಂದರು.

ಅವಳಿ ನಗರ ಸ್ವಚ್ಛತೆ ಜಾಗೃತಿಗೆ ಸಂಗೀತಗಾರ ಪದ್ಮಶ್ರೀ ಪುರಸ್ಕೃತ ಡಾ| ವೆಂಕಟೇಶ ಕುಮಾರ, ನಟ ಅನಿರುದ್ಧ ಅವರನ್ನು ರಾಯಭಾರಿಗಳಾಗಿ ನೇಮಕ ಮಾಡಲಾಗಿದೆ. ಕಳೆದ ಮೂರ್‍ನಾಲ್ಕು ದಿನಗಳಿಂದ ಸ್ವಚ್ಛತೆ ದೃಷ್ಟಿಯಿಂದ ಅನೇಕ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗಿದ್ದು, ನಟ ಅನಿರುದ್ಧ ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ.

Advertisement

ಪಾಲಿಕೆ ಎಲ್ಲ ವಲಯಗಳ ವ್ಯಾಪ್ತಿಯಲ್ಲಿ ಸುಮಾರು 2,000 ಸಸಿಗಳನ್ನು ನೆಡಲಾಗಿದೆ. ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಸ್ವಚ್ಛತೆ ಹಾಗೂ ತ್ಯಾಜ್ಯ ಮರು ಬಳಕೆ ನಿಟ್ಟಿನಲ್ಲಿ ಚಿತ್ರಕಲಾ ಹಾಗೂ ಪ್ರಬಂಧ ಸ್ಪರ್ಧೆಯಲ್ಲಿ ಸುಮಾರು 1,000 ಮಕ್ಕಳು ಪಾಲ್ಗೊಂಡಿದ್ದರು.

ಸ್ವಚ್ಛತೆ ದೃಷ್ಟಿಯಿಂದ ಸಂಗೀತ ಕಾರ್ಯಕ್ರಮವೂ ನಡೆಸಲಾಗಿದೆ. ನೃತ್ಯ ತರಬೇತಿಯಲ್ಲಿ ತೊಡಗಿರುವ ಪೌರಕಾರ್ಮಿಕರನ್ನು ಸನ್ಮಾನಿಸಲಾಗಿದೆ ಎಂದು ತಿಳಿಸಿದರು.

ಮಹಾಪೌರ ಈರೇಶ ಅಂಚಟಗೇರಿ, ಉಪ ಮಹಾಪೌರ ಉಮಾ ಮುಕುಂದ, ಪಾಲಿಕೆ ಸ್ವಚ್ಛತಾ ರಾಯಭಾರಿ ನಟ ಅನಿರುದ್ಧ, ಪಾಲಿಕೆ ಸದಸ್ಯರಾದ ತಿಪ್ಪಣ್ಣ ಮಜ್ಜಗಿ, ರಾಜಣ್ಣಾ ಕೊರವಿ, ಶಿವು ಮೆಣಸಿನಕಾಯಿ, ಮೀನಾಕ್ಷಿ ವಂಟಮೊರೆ, ರೂಪಾ ಶೆಟ್ಟಿ, ನಿರಂಜನ ಹಿರೇಮಠ ಸೇರಿದಂತೆ ಅನೇಕ ಸದಸ್ಯರು, ಪಾಲಿಕೆ ಅಧಿಕಾರಿಗಳು ಇದ್ದರು.

ಪಾಲಿಕೆ ಆಯೋಜಿಸಿದ್ದ ಸ್ವಚ್ಛತೆ ಕುರಿತ ಚಿತ್ರಕಲೆ-ಪ್ರಬಂಧ ಸ್ಪರ್ಧೆ ಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾ ಯಿತು. ನಾಗರಿಕರೊಂದಿಗೆ ಸಂವಾದ ನಡೆಸಲಾಯಿತು.

ರೇನ್‌ ಕೋಟ್‌ ವಿತರಣೆಗೆ ಸೂಚನೆ

ಅನೇಕ ಕಡೆಗಳಲ್ಲಿ ಪೌರಕಾರ್ಮಿಕರು ಸುರಕ್ಷತಾ ಸಲಕರಣೆಗಳನ್ನು ಬಳಸದಿರುವುದು, ಒಣತ್ಯಾಜ್ಯಕ್ಕೆ ಅವರೇ ಬೆಂಕಿ ಹಚ್ಚುವುದು ಕಂಡುಬಂದಿದೆ. ಸುರಕ್ಷತಾ ಸಲಕರಣೆಗಳನ್ನು ನೀಡಿದ್ದರೂ ಅನೇಕರು ಬಳಸುತ್ತಿಲ್ಲ. ಕೈ ಕವಚ, ಗಮ್‌ಬೂಟ್‌ಗಳನ್ನು ಬಳಸಿದರೆ ಕೆಲವರಿಗೆ ಕೈಗೆ ಗುಳ್ಳೆ ಬರುವುದು, ನಡೆಯಲು ಸಾಧ್ಯವಾಗದಿರುವುದು ಆಗಿರುವುದು ಕಂಡುಬಂದಿದ್ದು, ಪೌರಕಾರ್ಮಿರಿಕಗೆ ಸರಿಹೊಂದುವ ರೀತಿಯ ಸುರಕ್ಷತಾ ಸಲಕರಣೆಗಳನ್ನು ನೀಡಲಾಗುವುದು ಎಂದು ಆಯುಕ್ತರು ಹೇಳಿದರು.

ಎಲ್ಲ ಪೌರಕಾರ್ಮಿಕರಿಗೆ ರೇನ್‌ಕೋಟ್‌ಗಳನ್ನು ನೀಡುವಂತೆ ಎಲ್ಲ ವಲಯಗಳ ಸಹಾಯಕ ಆಯುಕ್ತರಿಗೆ ಸೂಚನೆ ನೀಡಿದ್ದೇನೆ. ಪೌರಕಾರ್ಮಿಕರಲ್ಲಿ ಕಾಯಂ ಪೌರಕಾರ್ಮಿಕರು, ಪಾಲಿಕೆಯಿಂದ ನೇರವಾಗಿ ವೇತನ ಪಡೆಯುವವವರು ಹಾಗೂ ಗುತ್ತಿಗೆದಾರ ಕಡೆಯಿಂದ ಕಾರ್ಯನಿರ್ವಹಿಸುವ ಗುತ್ತಿಗೆ ಪೌರಕಾರ್ಮಿಕರು ಇದ್ದಾರೆ. ಇವರ ಕಾಯಂಮಾತಿ ಇಲ್ಲವೆ ಎಲ್ಲರಿಗೂ ಪಾಲಿಕೆಯಿಂದ ನೇರ ವೇತನಕ್ಕೆ ಸರಕಾರದ ಹಂತದಲ್ಲಿ ನೀತಿ ಆಗಬೇಕಾಗಿದೆ ಎಂದರು.

ದಂಡ ಸಂಗ್ರಹ ನೆಗೆತ

ಮೇ 29ರಿಂದ ಖಾಲಿ ನಿವೇಶನಗಳ ಸ್ವಚ್ಛತೆ ಅಭಿಯಾನ ಕೈಗೊಳ್ಳಲಾಗಿದೆ. ನಿರಂತರ ಉಸ್ತುವಾರಿ ಕೈಗೊಳ್ಳಲಾಗುತ್ತಿದೆ. ಎಲ್ಲೆಂದರಲ್ಲೇ ತ್ಯಾಜ್ಯ ಎಸೆಯುವವರ ಮನವೊಲಿಕೆಗೆ ಜಾಗೃತಿ ಮೂಡಿಸಿ ಮನವಿ ಮಾಡಿದರೂ ಅಲ್ಲೇ ತ್ಯಾಜ್ಯ ಎಸೆಯುವವರ ವಿರುದ್ಧ ದಂಡಾಸ್ತ್ರ ಬಳಕೆ ಮಾಡಲಾಗುತ್ತಿದೆ. ತ್ಯಾಜ್ಯ ಎಸೆಯುವವರ ವಿರುದ್ಧ ಕಳೆದ 4-5 ತಿಂಗಳಲ್ಲಿ ಸಂಗ್ರಹವಾದ ದಂಡದ ಮೊತ್ತ ಕಳೆದ 10 ವರ್ಷಗಳಿಗಿಂತ ಹೆಚ್ಚಿನದಾಗಿದೆ. ಅವಳಿನಗರದಲ್ಲಿ ತ್ಯಾಜ್ಯ ಎಸೆಯುವ ಸುಮಾರು 650 ಸ್ಥಳಗಳು ಇದ್ದವು. ಈ ಹಿಂದೆ ತ್ಯಾಜ್ಯ ಸಂಗ್ರಹ ತೊಟ್ಟಿ ಇರಿಸಿದ ಸ್ಥಳಗಳೇ ಇವಾಗಿದ್ದು, ಅಲ್ಲಿ ತ್ಯಾಜ್ಯ ಎಸೆಯುವುದನ್ನು ತಡೆಯುವ ಯತ್ನದ ಫಲವಾಗಿ ಇದೀಗ ಕೇವಲ 29 ಸ್ಥಳಗಳಲ್ಲಿ ಮಾತ್ರ ತ್ಯಾಜ್ಯ ಎಸೆಯುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಅವುಗಳನ್ನು ಸಹ ಇಲ್ಲವಾಗಿಸಲಾಗುವುದು ಎಂದರು.

ಪ್ಲಾಗಥಾನ್‌ಗೆ ಉತ್ತಮ ಸ್ಪಂದನೆ

ಅವಳಿನಗರದಲ್ಲಿ ಶನಿವಾರ ನಡೆದ ಪ್ಲಾಗಥಾನ್‌ಗೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ವಿದ್ಯಾರ್ಥಿಗಳು, ಸಂಘ-ಸಂಸ್ಥೆಯವರು, ಪಾಲಿಕೆ ಸದಸ್ಯರು, ಅಧಿಕಾರಿಗಳು ಆಯಾ ವಾರ್ಡ್‌ಗಳಲ್ಲಿ ರಸ್ತೆ ಬದಿ ತ್ಯಾಜ್ಯ ಸಂಗ್ರಹ, ಸ್ವಚ್ಛತೆ ಕಾರ್ಯದಲ್ಲಿ ಪಾಲ್ಗೊಂಡಿದ್ದರು. ಧಾರವಾಡದಲ್ಲಿ 400-500 ಜನರು ಭಾಗಿಯಾಗಿದ್ದರೆ, ಹುಬ್ಬಳ್ಳಿಯಲ್ಲಿ 500ಕ್ಕೂ ಹೆಚ್ಚು ಜನರು ಭಾಗಿಯಾಗಿದ್ದರು. ನಗರ ಸ್ವಚ್ಛತೆ  ದೃಷ್ಟಿಯಿಂದ ಹಳೇಹುಬ್ಬಳ್ಳಿ, ಗೋಕುಲರಸ್ತೆ ಹಾಗೂ ಲ್ಯಾಮಿಂಗ್ಟನ್‌ ಶಾಲೆ ಬಳಿ ಗೋಡೆ ಬರಹ ಬರೆಯಲಾಗಿದೆ. ಸ್ವಚ್ಛತೆ ದೃಷ್ಟಿಯಿಂದ ಪಾಲಿಕೆ ಇನ್ನೇನು ಮಾಡಬಹುದು, ಯಾವ ನೀತಿ ರೂಪಿಸಬಹುದು ಎಂಬುದರ ಬಗ್ಗೆ ಚರ್ಚಿಸಿ ಇನ್ನಷ್ಟು ನಿರ್ಧಾರಗಳನ್ನು ಕೈಗೊಳ್ಳಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next