Advertisement

ಯಾಂತ್ರಿಕ ಜೀವನಶೈಲಿಯಿಂದ ಕಾಯಿಲೆ ಹೆಚ್ಚು

05:19 PM Jun 02, 2022 | Team Udayavani |

ರಾಮದುರ್ಗ: ಇಂದಿನ ಯಾಂತ್ರಿಕ ಜೀವನಶೈಲಿಯಿಂದಾಗಿ ಹೆಚ್ಚಿನ ಜನರಲ್ಲಿ ಹೃದಯ ಸಂಬಂಧಿ ಕಾಯಿಲೆ ಹೆಚ್ಚಾಗುತ್ತಿವೆ. ಮೊದಲು ವಯಸ್ಕರಲ್ಲಿ ಕಾಣಿಸುತ್ತಿದ್ದ ಹೃದಯ ರೋಗ ಈಗ ಹದಿ ಹರೆಯದವರಲ್ಲಿ ಕಾಣಿಸಿಕೊಳ್ಳುತ್ತಿದೆ ಎಂದು ಆಯುರ್ವೇದ ವೈದ್ಯ ಡಾ| ಮಂಜುನಾಥ ಕುರುಡಗಿ ಆತಂಕ ವ್ಯಕ್ತಪಡಿಸಿದರು.

Advertisement

ಪಟ್ಟಣದ ನೇಕಾರ ಪೇಟೆಯ ಶ್ರೀ ದುಗ್ಗಳೆ ದಾಸಿಮಯ್ಯ ಮಹಿಳಾ ಮಂಡಳದ ಪ್ರಥಮ ವಾರ್ಷಿಕೋತ್ಸವ ನಿಮಿತ್ತ ಮಹಿಳಾ ಮಂಡಳ ಹಾಗೂ ಧಾರವಾಡದ ಎಸ್‌ಡಿಎಂ ನಾರಾಯಣ ಹಾರ್ಟ್‌ ಸೆಂಟರ್‌ ಆಶ್ರಯದಲ್ಲಿ ತಾಲೂಕು ಆಯುರ್ವೇದ ಆಸ್ಪತ್ರೆಯಲ್ಲಿ ನಡೆದ ಉಚಿತ ಹೃದಯರೋಗ ತಪಾಸಣೆ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ಅವಸರದ ಜೀವನದಲ್ಲಿ ನಿಯಮಿತ ಆಹಾರ ಸೇವಿಸದೇ ಜಂಕ್‌ ಫುಡ್‌ನಿಂದ ಹೃದಯ ಸಂಬಂ ಧಿತ ರೋಗಗಳ ಹೆಚ್ಚಳಕ್ಕೆ ಕಾರಣವಾಗಿದೆ. ನಮ್ಮ ಪಚನಕ್ರಿಯೆಗೆ ಅನುಸಾರ ಮಿತ ಆಹಾರ ಸೇವನೆ ಹಾಗೂ ರಾಗ-ದ್ವೇಷಗಳಿಂದ ದೂರ ಉಳಿದಲ್ಲಿ ರೋಗಗಳಿಂದ ದೂರ ಉಳಿಯಲು ಸಾಧ್ಯವಿದೆ ಎಂದರು.

ಎಸ್‌ಡಿಎಂ ಆಸ್ಪತ್ರೆ ಹೃದಯ ರೋಗ ತಜ್ಞ ಡಾ| ಮಹೇಶ ಹೊನ್ನಳ್ಳಿ ಮಾತನಾಡಿ, ತಂಬಾಕು ವ್ಯಸನ ಹಾಗೂ ಮದ್ಯ ಸೇವನೆಯಿಂದ ಸಾಕಷ್ಟು ಯುವಕರು ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಸಕಾಲದಲ್ಲಿ ಸೂಕ್ತ ಚಿಕಿತ್ಸೆ ಪಡೆಯದೇ ಅನೇಕರು ಬಲಿಯಾಗುತ್ತಿದ್ದಾರೆ. ಆರೋಗ್ಯಕ್ಕೆ ಸಂಬಂಧಿಸಿದಂತೆ ಸರ್ಕಾರ ಅನೇಕ ಸವಲತ್ತು ಕಲ್ಪಿಸಿದೆ. ಜೊತೆಗೆ ಇಂತಹ ಉಚಿತ ಶಿಬಿರಗಳ ಸದುಪಯೋಗ ಪಡೆದು ಆರೋಗ್ಯ ವೃದ್ಧಿಸಿಕೊಳ್ಳಬೇಕು ಎಂದರು.

ಧಾರವಾಡದ ನಾರಾಯಣ ಹಾರ್ಟ್‌ ಸೆಂಟರ್‌ನ ಸೀನಿಯರ್‌ ಮ್ಯಾನೇಜರ್‌ ಅಜಯ್‌ ಹುಲಮನಿ ಮಾತನಾಡಿ, ಬೆಂಗಳೂರಿನ ನಾರಾಯಣ ಹೃದಯಾಲಯದಲ್ಲಿರುವ ಸೌಲಭ್ಯಗಳು ನಮ್ಮ ಧಾರವಾಡದ ಆಸ್ಪತ್ರೆಯಲ್ಲಿವೆ. ಆರೋಗ್ಯ-ಬಿಪಿಎಲ್‌ ಕಾರ್ಡ ಮೂಲಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕು ಎಂದರು.

Advertisement

ಪುರಸಭೆ ಮಾಜಿ ಅಧ್ಯಕ್ಷೆ ಗಾಯತ್ರಿ ದೇವಾಂಗಮಠ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಮಹಿಳಾ ಮಂಡಳ ಅಧ್ಯಕ್ಷೆ ಪೂಜಾ ಕಟಾವಕರ ಅಧ್ಯಕ್ಷತೆ ವಹಿಸಿದ್ದರು. ಶಿಬಿರದಲ್ಲಿ ಒಟ್ಟು 201 ಜನರ ಆರೋಗ್ಯ ತಪಾಸಣೆ ನಡೆಸಲಾಯಿತು.

ಈ ವೇಳೆ ಶ್ರೀ ಬನಶಂಕರಿ ದೇವಾಂಗ ಸಮಾಜದ ಅಧ್ಯಕ್ಷ ನಾರಾಯಣ ಬೆನ್ನೂರ, ಜಿಪಂ ಮಾಜಿ ಸದಸ್ಯೆ ರತ್ನಾ ಯಾದವಾಡ, ನ್ಯಾಯವಾದಿ ಜಮುನಾ ಪಟ್ಟಣ, ಡಾ| ವೀರೇಶ ಗೊರಾಬಾಳ, ಎಸ್‌.ಎಂ. ಮುರುಡಿ, ಶ್ರೀನಿವಾಸ ಕುರುಡಗಿ, ಪ್ರಕಾಶ ಸೂಳಿಭಾಂವಿ, ಪುಂಡಲೀಕ ವಡಕಣ್ಣವರ ಇದ್ದರು. ವೈಜಯಂತಿ ಕನಕನ್ನವರ ಸ್ವಾಗತಿಸಿದರು. ಎಸ್‌.ಎಸ್‌. ಯಲಿಗೋಡ ನಿರೂಪಿಸಿದರು. ಲಲಿತಾ ಕಾಟೂಕರ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next