Advertisement

ಖಾಸಗಿ ಪಿಯು ಕಾಲೇಜುಗಳಲ್ಲಿ ಡಿಸ್ಕೌಂಟ್ ಪೈಪೋಟಿ ಶುರು

02:29 PM May 07, 2019 | Team Udayavani |

ಚನ್ನರಾಯಪಟ್ಟಣ: ಎಸ್ಸೆಸ್ಸೆಲ್ಸಿ ಫ‌ಲಿತಾಂಶ ಹೊರಬಿದ್ದು ಎಂಟು ದಿನ ಕಳೆದಿರುವಾಗ ಶೇ.90ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ತಮ್ಮ ಕಡೆ ಸೆಳೆಯಲು ಖಾಸಗಿ ಕಾಲೇಜುಗಳು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದು ಡಿಸ್ಕೌಂಟ್ ಮೊರೆ ಹೋಗಿವೆ.

Advertisement

ನೀವು ತಾಲೂಕಿನ ಟಾಪರ್‌ ಪಟ್ಟಿಯಲ್ಲಿ ಮೊದಲ ಹತ್ತು ಸ್ಥಾನದಲ್ಲಿ ಇದ್ದರೆ ನಿಮಗೆ ಯಾವುದೇ ರೀತಿ ಶುಲ್ಕ ವಿಧಿಸದೇ ಪಿಯುಗೆ ಪ್ರವೇಶ ಮಾಡಿಕೊಂಡು ಉಚಿತ ವಾಗಿ ಶಿಕ್ಷಣ ನೀಡುತ್ತೇವೆ. ನಮ್ಮಲ್ಲಿ ಗುಣಮಟ್ಟದ ಶಿಕ್ಷಣ ನೀಡಲಾಗುತ್ತದೆ. ತಾಲೂಕಿಗೆ ನಮ್ಮ ಕಾಲೇಜು ಫ‌ಸ್ಟ್‌, ನಮ್ಮಲ್ಲಿ ಶೇ.100 ಫ‌ಲಿತಾಂಶ ಲಭಿಸಿದೆ. ನಾವು ಸೀಮಿತ ವಿದ್ಯಾರ್ಥಿಗಳನ್ನು ದಾಖಲಿಸಿಕೊಂಡು ಗುಣ ಮಟ್ಟದಲ್ಲಿ ಬೋಧನೆ ಮಾಡುತ್ತೇವೆ ನಮ್ಮ ಕಾಲೇಜಿಗೆ ಸೇರಲು ಅದೃಷ್ಟ ಮಾಡಿರಬೇಕು ಹೀಗೆ ಅಬ್ಬರದ ಪ್ರಚಾರಗಳನ್ನು ಮಾಡುವ ಮೂಲಕ ವಿದ್ಯಾರ್ಥಿಗಳನ್ನು ತಮ್ಮ ಕಡೆ ಸೆಳೆಯಲು ಖಾಸಗಿ ಕಾಲೇಜುಗಳು ಮುಂದಾಗುತ್ತಿವೆ.

ಗಾಡನಿದ್ರೆಯಲ್ಲಿ ಡಿಡಿಪಿಯು: ಹೀಗೆ ಮನಸೋಇಚ್ಛೆ ಪ್ರಚಾರ ಮಾಡುವ ಮೂಲಕ ವಿದ್ಯಾರ್ಥಿ ಹಾಗೂ ಪೋಷಕರನ್ನು ಖಾಸಗಿ ಕಾಲೇಜುಗಳು ದಿಕ್ಕು ತಪ್ಪಿಸುತ್ತಿ ದ್ದರೂ ಈ ಬಗ್ಗೆ ಕ್ರಮ ವಹಿಸಬೇಕಾದ ಪದವಿ ಪೂರ್ವ ಶಿಕ್ಷಣ ಇಲಾಖೆ ಮತ್ರ ಕಣ್ಣು ಮುಚ್ಚಿ ಕೂತಿದ್ದು ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತೆ ವರ್ತಿಸುತ್ತಿದೆ. ಪದವಿ ಪೂರ್ವ ಶಿಕ್ಷಣ ಇಲಾಖೆ ತಾಲೂಕು ಕೇಂದ್ರದಲ್ಲಿ ಇಲ್ಲ ಹಾಗಾಗಿ ಖಾಸಗಿ ಕಾಲೇಜುಗಳು ಅಡಿದ್ದೇ ಆಟ, ಅವರಿಗೆ ಕಡಿವಾಣ ಹಾಕುವವರು ಇಲ್ಲದಂತಾಗಿದೆ.

ಗೊಂದಲದಲ್ಲಿ ಪಾಲಕರು, ವಿದ್ಯಾರ್ಥಿಗಳು: ತಮ್ಮ ಕಾಲೇಜಿನ ದಾಖಲಾತಿ ಹೆಚ್ಚಿಸಿಕೊಳ್ಳುವ ಸಲುವಾಗಿ ಖಾಸಗಿ ಕಾಲೇಜುಗಳು ಹಲವು ತಂತ್ರಗಾರಿಕೆ ಮಾಡು ತ್ತಿದ್ದಾರೆ. ಒಂದು ಕಾಲೇಜು ಆಫ‌ರ್‌ ನೀಡಿದರೆ ಮತ್ತೂಂದು ಕಾಲೇಜು ಸಂಪೂರ್ಣ ಉಚಿತ ಎನ್ನು ತ್ತಿದೆ. ಕೆಲ ಕಾಲೇಜಿನ ಆಡಳಿತ ಮಂಡಳಿ ಒಂದು ಹೆಜ್ಜೆ ಮುಂದೆ ಹೋಗಿ ಕೇವಲ ಒಂದು ರೂ. ಪಾವತಿ ಮಾಡಿ ಪಿಯು ಶಿಕ್ಷಣ ಪಡೆಯಿರಿ ಎಂಬ ದೊಡ್ಡ ದೊಡ್ಡ ಜಾಹೀರಾತು ನೀಡಿ ಪೋಷಕರ ಪೋಷಕರ ಮನವೊಲಿಲು ಯತ್ನಿಸುತ್ತಿದೆ.

ಇಷ್ಟೆಲ್ಲಾ ಆಫ‌ರ್‌ ಕಣ್ಣ ಮುಂದೆ ಇದ್ದರೂ ಹೆಚ್ಚಿನ ಡೊನೇಷನ್‌ ಪಡೆಯುವ ಕಾಲೇಜುಗಳೇ ಶ್ರೇಷ್ಠ ಎಂಬ ನಂಬಿಕೆಯಿಂದ ಪಾಲಕರು ದುಬಾರಿ ಶುಲ್ಕ ನೀಡಿ ತಮ್ಮ ಮಕ್ಕಳನ್ನು ದಾಖಲು ಮಾಡುತ್ತಿದ್ದಾರೆ.

Advertisement

ಮನೆ ಬಾಗಿಲು ತಟ್ಟುತ್ತಿದ್ದಾರೆ: ಟೀವಿ, ದಿನಪತ್ರಿಕೆಗಳಲ್ಲಿ ಜಾಹೀರಾತು ನೀಡುವುದಲ್ಲದೇ ಖಾಸಗಿ ಶಿಕ್ಷಣ ಸಂಸ್ಥೆಗಳು ಎಸ್ಸೆಸ್ಸೆಲ್ಸಿಯಲ್ಲಿ ಹೆಚ್ಚು ಅಂಕ ಪಡೆದು ತೇರ್ಗಡೆ ಹೊಂದಿರುವ ವಿದ್ಯಾರ್ಥಿಗಳ ಮನೆ ಬಾಗಿಲು ತಟ್ಟುತ್ತಿದ್ದಾರೆ. ಇಷ್ಟು ಸಾಲದು ಎಂಬಂತೆ ಶೇ.95 ರಷ್ಟು ಅಂಕಪಡೆದ ಮನೆಗೆ ಹೋಗುವ ಸಂಸ್ಥೆಯವರು ನಿಮ್ಮ ಮೊದಲನೇ ಮಗ, ಮಗಳು, ನಮ್ಮ ಕಾಲೇಜಿಗೆ ಸೇರಿಸಿದರೆ ಎರಡನೇ ಮಗ, ಮಗಳು ಎಸ್ಸೆಸ್ಸೆಲ್ಸಿಯಲ್ಲಿ ಎಷ್ಟೇ ಅಂಕ ಪಡೆದು ತೇರ್ಗಡೆ ಹೊಂದಿದ್ದರೂ ಅವರಿಗೂ ಡಿಸ್ಕೌಂಟ್ ನೀಡುತ್ತೇವೆ ಎಂದು ಪೋಷಕರ ಬೆನ್ನುಬಿದ್ದಿರುವ ಖಾಸಗಿ ಕಾಲೇಜುಗಳಿಗೆ ಕಡಿವಾಣ ಹಾಕುವಲ್ಲಿ ಶಿಕ್ಷಣ ಇಲಾಖೆ ಸಂಪೂರ್ಣ ವಿಫ‌ಲವಾಗಿದೆ.

ಆರು ತಿಂಗಳಲ್ಲಿ ಕುತ್ತಿಗೆಗೆ ಬರುತ್ತದೆ: ಖಾಸಗಿ ಕಾಲೇಜುಗಳು ಈಗ ಉಚಿತ ಹಾಗೂ ಡಿಸ್ಕೌಂಟ್ ಮೂಲಕ ನಿಮ್ಮನ್ನು ಗುಂಡಿಗೆ ಬೀಳಿಸಿಕೊಂಡು ಆರು ತಿಂಗಳ ನಂತರ ನಿಮ್ಮ ಕುತ್ತಿಗೆಗೆ ಹಗ್ಗ ಹಾಕುತ್ತಾರೆ ಬಹಳ ಜಾಗ್ರತೆಯಿಂದ ಇರಬೇಕು. ಉಚಿತ ಎನ್ನುವುದು ಬೋಧನೆ ಶುಲ್ಕ ಇಲ್ಲವೇ ಡೊನೇಷನ್‌ಗೆ ಇರುತ್ತದೆಯೇ ಎಂಬುದ ತಿಳಿದುಕೊಳ್ಳಿ, ಯಾವುದೇ ಪ್ರತಿಷ್ಠಿತ ಕಾಲೇಜಿನ ಸಿಬ್ಬಂದಿ ತಮ್ಮ ಮನೆ ಬಾಗಿಲಿಗೆ ಬಂದರು ಎಂಬ ಮನೋಭಾವದಿಂದ ನಿಮ್ಮ ಮಗುವನ್ನು ಅಲ್ಲಿಗೆ ಸೇರಿಸುವ ಮುಂಚೆ ಪೋಷಕರು ಜಾಗ್ರತೆ ವಹಿಸಬೇಕಿದೆ.

ಸರ್ಕಾರಿ ಉಪನ್ಯಾಸಕರ ಖಾಸಗಿ ಕಾಲೇಜು ವ್ಯಾಮೋಹ: ತಾಲೂಕಿನಲ್ಲಿ ಕೆಲ ಸರ್ಕಾರಿ ಕಾಲೇಜಿನ ಉಪನ್ಯಾಸಕರು ಹಾಗೂ ಪ್ರಾಂಶುಪಾಲರು ಹಣದ ಆಸೆಗೆ ಬಲಿಯಾಗಿ ಖಾಸಗಿ ಕಾಲೇಜಿಗೆ ತಮ್ಮ ಮಗುವನ್ನು ದಾಖಲಿಸುವಂತೆ ಪ್ರೇರೇಪಣೆ ಮಾಡುತ್ತಿದ್ದಾರೆ. ಮಕ್ಕಳ ಅಂಕಪಟ್ಟಿ ತೆಗೆದುಕೊಂಡು ಸರ್ಕಾರಿ ಕಾಲೇಜಿಗೆ ದಾಖಲು ಮಾಡಲು ಪೋಷಕರು ಹೋದರೆ ನಿಮ್ಮ ಮಕ್ಕಳಿ ಇಷ್ಟೊಂದು ಅಂಕ ಪಡೆದಿದ್ದಾರೆ ಹಾಗಾಗಿ ಮುಂದಿನ ಭವಿಷ್ಯ ಮುಖ್ಯ ಎಂದು ಖಾಸಗಿ ಕಾಲೇಜುಗಳ ಹೆಸರು ಹೇಳಿ ಪಾಲಕರನ್ನು ದಿಕ್ಕು ತಪ್ಪಿಸುತ್ತಿದ್ದಾರೆ. ದಯಮಾಡಿ ಪದವಿ ಪೂರ್ವ ಶಿಕ್ಷಣ ಇಲಾಖೆ ಈ ಬಗ್ಗೆ ತನಿಖೆಗೆ ಮುಂದಾಗಬೇಕು.

● ಶಾಮಸುಂದರ್‌ ಕೆ. ಅಣ್ಣೇನಹಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next