Advertisement

ವಿಕಲತೆಯ ನೆಪ ಉಂಟೆ ಮಾತೃವಾತ್ಸಲ್ಯಕೆ?

03:50 AM Mar 26, 2017 | |

ನಾನು ಕಾಲೇಜಿನಲ್ಲಿದ್ದಾಗ ಸಂಜೀವ್‌ ಕುಮಾರ್‌ ಮತ್ತು ಜಯಾ ಬಾಧುರಿ ಅಮೋಘವಾಗಿ ನಟಿಸಿದ್ದ ಕೋಶಿಶ್‌(ಪ್ರಯತ್ನ) ಎಂಬ ಹಿಂದಿ ಚಲನಚಿತ್ರ ನೋಡಿದ್ದೆ. ನನ್ನನ್ನು ಬಹುವಾಗಿ ಕಾಡಿದ, ಹಲವು ರೀತಿಯಲ್ಲಿ ಪ್ರಭಾವಿಸಿದ ಚಿತ್ರವಿದು. ಇದರಲ್ಲಿ ನಾಯಕ, ನಾಯಕಿ ಇಬ್ಬರೂ ಹುಟ್ಟು ಮೂಗ ಮತ್ತು ಕಿವುಡರು. ಅವರಿಬ್ಬರೂ ಪರಸ್ಪರ ಮೆಚ್ಚಿ , ಮದುವೆಯಾಗಿ, ಮುಂದೆ ತಮ್ಮ ಈ ದೈಹಿಕ ನ್ಯೂನತೆಯಿಂದಾಗಿ ಬದುಕಲ್ಲಿ ಅನುಭವಿಸುವ ಅನೇಕ ಏರಿಳಿತಗಳನ್ನು ಕಾಣಿಸುವ ವಿಶಿಷ್ಟ ಚಿತ್ರಕಥೆಯಿದು. ಈ ಚಿತ್ರದಲ್ಲಿ ನಾಯಕಿಗೆ ಮಗುವೊಂದು ಹುಟ್ಟುವ ಸಮಯದಲ್ಲಿ, ಅವರಿಬ್ಬರೂ ತಮ್ಮ ಮಗು ತಮ್ಮಂತೇ ಮೂಕ, ಕಿವುಡ ಆಗಿರದೇ, ಇತರರೆಲ್ಲರಂತೇ ಸ್ವಸ್ಥವಾಗಿದ್ದರೆ ಸಾಕಪ್ಪಾ ಎಂದು ತೊಳಲಾಡುವ, ಹುಟ್ಟಿದ ಮೇಲೆ ಅದು ಸಕಲ ರೀತಿಯಲ್ಲೂ ಚೆನ್ನಾಗಿರುವುದನ್ನು ಪರೀಕ್ಷಿಸಿ ನಲಿವಿನ ನಗು ಬೀರುವ ಸನ್ನಿವೇಶವೆಲ್ಲಾ ಈಗಲೂ ಕಣ್ಣಿಗೆ ಕಟ್ಟಿದಂತಿದೆ. ದೈಹಿಕವಾಗಿ ಯಾವುದೇ ಸಮಸ್ಯೆ ಇಲ್ಲದ ಹೆಣ್ಮಕ್ಕಳಲ್ಲೂ ತಾಯ್ತನ ಸಂತಸದ ಜೊತೆ ಸಹಜವಾಗಿ ತುಸು ಆತಂಕವನ್ನೂ ಹೊತ್ತು ತರುತ್ತದೆ. ಅದರಲ್ಲೂ ಕೆಲವರಂತೂ ತುಸು ಹೆಚ್ಚೇ ಭಯ ಬಿದ್ದು ಮಗು ಪಡೆಯಲು ಹಿಂದೇಟು ಹಾಕುತ್ತಾರೆ. ಅಂಥಾದ್ದರಲ್ಲಿ ಅಂಗವಿಕಲರಿಗೆ ಇದು ಮತ್ತೂ ದೊಡ್ಡ ಸವಾಲೇ!

Advertisement

ನಮ್ಮ ಪರಿಚಿತರೋರ್ವರ ಸಹೋದರಿಗೆ ಒಂದು ಕೈ ಇಲ್ಲ. ಆಕೆಯನ್ನು ಮೆಚ್ಚಿ ವರಿಸಿದ ಹುಡುಗನಿಗೆ ಎಡಗಣ್ಣು ಸ್ವಲ್ಪ ಸಮಸ್ಯೆ ಇದೆ. ಒಮ್ಮೆ ಹೀಗೇ ಆಕೆಯ ಅತ್ತಿಗೆ ನಮ್ಮಲ್ಲಿಗೆ ಬಂದಾಗ ಹೀಗೆ ಹೇಳಿಕೊಂಡಿದ್ದರು- “”ಅಯ್ಯೋ ಮಕ್ಕಳಾಗುವುದು ಎಂದರೆ ತಮಾಷೆಯೇ? ಎಲ್ಲಾ ಸರಿ ಇದ್ದವರಿಗೇ ಬೆಳೆಸುವುದು ಕಷ್ಟ ಮಾರಾಯರೆ. ಇನ್ನು ಇವಳ್ಳೋ ಒಂದು ಕೈ ಇಲ್ಲದವಳು. ಅವಳ ಪತಿಗೂ ಒಂದು ಕಣ್ಣು ಸಮಾ ಕಾಣಿಸದು. ಅದಕ್ಕೇ ನಾವೆಲ್ಲ  ಹೇಳಿಬಿಟ್ಟಿದ್ದೇವೆ, ಆಲೋಚಿಸಿ ಮಾಡ್ಕೊಳ್ಳಿ ಅಂತ. ಆ ಮಗು ಕೂಡ ಇವರಂತೇ ಆಗಿºಟ್ರೆ ಕಷ್ಟವಪ್ಪ” ಎಂದುಬಿಟ್ಟಿದ್ದರು. ನಾನಾಗ ಡಿಗ್ರಿಯಲ್ಲಿದ್ದೆ. ಕಿರಿಯಳಾಗಿದ್ದ ನಾನು ಮನೆಗೆ ಬಂದಿದ್ದ ಆ ಹಿರಿಯರಿಗೆ ಎದುರಾಡಲು ಹಿಂಜರಿದು ಸುಮ್ಮನಾಗಿದ್ದೆ. “”ಅದ್ಯಾಕೆ ಇವೆಲ್ಲಾ ಅಷ್ಟೊಂದು ಹೆದರಿಸಿದ್ದಾರೆ. ಅವರಿಷ್ಟ, ಅವರ ಸಂಕಲ್ಪ. ಇವರೇನು ಸಾಕುವುದಾ ಮಗುವನ್ನು?!” ಎಂದು ಅಮ್ಮನಲ್ಲಿ ಆಮೇಲೆ ಅಸಮಾಧಾನ ತೋಡಿಕೊಂಡಿದ್ದೆ. “ಜನರೇ ಹೀಗೆ. ಹೆದರುವವರನ್ನೇ ಹೆಚ್ಚು ಹೆದರಿಸುತ್ತಿರುತ್ತಾರೆ’ ಎಂದು ಅಮ್ಮ ಸಮಾಧಾನ ಪಡಿಸಿದ್ದಳು. ಮುಂದೆ ಈ ಹೆದರಿಸುವ ಸಮಾಜದಿಂದ ಎಷ್ಟೊಂದು ಜೀವಗಳು ಈ ತಾಯ್ತನದ ಸುಖದಿಂದ ವಂಚಿತವಾಗಿವೆ ಎಂಬುದು ಮತ್ತಷ್ಟು ಸ್ಪಷ್ಟವಾಗುತ್ತ ಹೋಯಿತು. ಇವೆೆಲ್ಲದರಿಂದ ಅರಿವಾಗಿದ್ದೇನೆಂದರೆ- ತಮ್ಮ ದೈಹಿಕ ಸಮಸ್ಯೆಗಿಂತಲೂ ಮಾನಸಿಕ ಒತ್ತಡ, ಕಿರಿ ಕಿರಿ, ಹಿಂಸೆ ನೂರು ಪಟ್ಟು ಜಾಸ್ತಿಯಾಗಿಯೇ ಮಗು ಪಡೆಯಲು ಹಿಂದೇಟು ಹಾಕುವವರೇ ಹೆಚ್ಚು ಮತ್ತು ಇದಕ್ಕೆ ಬಹುದೊಡ್ಡ ಕೊಡುಗೆ ಕೊಡುವವರೇ ಅವರ ನೆಂಟರಿಷ್ಟರು ಮತ್ತು ಸಮಾಜ ಎಂದು.

ನಮ್ಮಲ್ಲೊಂದು ಬಹು ದೊಡ್ಡ ಅಪಾಯಕಾರಿ ಭ್ರಮೆಯಿದೆ. ಯಾರಿಗೆ ಯಾವ ಅಂಗ ನೂನ್ಯವಾಗಿರುತ್ತದೋ ಅಂಥವರಿಗೆ ಅಂಥದ್ದೇ ಮಗು ಹುಟ್ಟುತ್ತದೆ ಎಂದು! ಈ ಭಯವನ್ನು ವ್ಯವಸ್ಥಿತವಾಗಿ, ಅರಿತೋ, ಅರೆಯದೆಯೋ ಪರಿಚಿತರು, ಬಂಧುಗಳು ಅಂಗಾಂಗ ನ್ಯೂನತೆಯುಳ್ಳವರ ತಲೆಯೊಳಗೆ ಹನಿ ವಿಷದಂತೆ ತುಂಬುತ್ತ ಹೋಗುತ್ತಾರೆ. ಇದರಿಂದ ಸ್ವಭಾವತಃ ಆ ವಿಷಯದ ಕುರಿತು ಅಂಜುತ್ತಿದ್ದವರಿಗೆ ಸಂಪೂರ್ಣ ಧೈರ್ಯವೇ ಇಲ್ಲದಂತಾಗಿಬಿಡುತ್ತದೆ. ನುರಿತ ವೈದ್ಯರ ಸಲಹೆಗಳಿಗಿಂತ, ಅಸಂಬದ್ಧ ಊಹಾಪೋಹಗಳು, ಕಟ್ಟುಕತೆಗಳೇ ಇಲ್ಲಿ ಗಾಢ (ಅಡ್ಡ) ಪರಿಣಾಮಗಳನ್ನು ಬೀರುತ್ತವೆ.

ನಾನೇ ತಾಯಿಯಾಗುವ ಸಂದರ್ಭದಲ್ಲೂ ನನ್ನನ್ನು ಒಂದಿಬ್ಬರು ಹೆದರಿಸಿದ್ದರು. “”ನಿನ್ನ ಮಗುವೂ ನಿನ್ನಂತೇ ಆಗಿಬಿಟ್ಟರೆ ಏನು ಮಾಡುವೆ? ಅದು ಹಠ ಮಾಡಿದರೆ ಹೇಗೆ ಸಂಭಾಳಿಸುವೆ? ಎತ್ತಿಕೊಂಡು ಹೇಗೆ ತಿರುಗುವೆ? ಈಗಿನ ಮಕ್ಕಳ್ಳೋ ಮಹಾ ಪುಂಡರು. ತಿರುಗಾಡ್ತಲೇ ತಿನ್ನುತ್ತವೆ. ನೀನು ಹೇಗೆ ತಿನ್ನಿಸುವಿ” ಎಂದೆಲ್ಲಾ ಅಲವತ್ತುಕೊಂಡು ನನಗೇ ಇಲ್ಲದ ತಲೆಬಿಸಿಯನ್ನು ತಾವು ಮಾಡಿಕೊಂಡು, ಬೇಡವೆಂದರೂ ನನ್ನೊಳಗೇ ತುಸು ಅಧೀರತೆಯನ್ನು ಹುಟ್ಟಿಸಿಬಿಟ್ಟಿದ್ದರು. ಆದರೆ, ಮತ್ತೆ ಮತ್ತೆ ನನ್ನ ಸಹಾಯಕ್ಕೆ ಬಂದಿದ್ದು ಗೀತೆಯ ಕೃಷ್ಣನೇ. “ನಿನ್ನನ್ನು ಕುಗ್ಗಿಸುವ ಮನೋ ದೌರ್ಬಲ್ಯಗಳನ್ನು ಕೊಡವಿ ಬಿಸುಟು ಮೇಲೆದ್ದು ನಿಲ್ಲು’ ಎಂದು ಅರ್ಜುನನಿಗೆ ಆತ ಹೇಳಿದ್ದನ್ನೇ ಪದೇ ಪದೇ ನೆನೆಸಿಕೊಂಡಿದ್ದೆ. ಕೊಲ್ಲುವವನಿಗಿಂತ ಕಾಯುವವ ಮೇಲಂತೆ. ಹೆದರಿಸುವವರ ಜೊತೆಗೇ ಮೇಲೆಬ್ಬಿಸುವವರೂ ಇದ್ದೇ ಇರುತ್ತಾರೆ. “ಶಿಶು ಎಂದರೆ ಮಣ್ಣಿನ ಮುದ್ದೆಯಂತೇ. ನಿನಗೆ ಬೇಕಾದ ಆಕಾರ ನೀ ಕೊಡಬಹುದು. ನಿನ್ನ ಸಮಸ್ಯೆಗಳನ್ನು ಎಳವೆಯಲ್ಲೇ ಮನದಟ್ಟು ಮಾಡುತ್ತ ಹೋದರೆ ಅದು ನಿನಗೇ ಹೊಂದಿಕೊಂಡು ಬೆಳೆದುಬಿಡುತ್ತದೆ ನೋಡ್ತಿರು’ ಎಂದು ಆತ್ಮೀಯರೊಬ್ಬರು ಅಂದು ಹೇಳಿದ್ದು ಬಹಳ ಧೈರ್ಯ ಕೊಟ್ಟಿತ್ತು. 

ದೈಹಿಕ ಅಂಗವೈಕಲ್ಯವಿದ್ದವರು ಮಗು ಪಡೆದು ಬೆಳೆಸಲು ಖಂಡಿತ ಹಿಂದೇಟು ಹಾಕಬೇಕಿಲ್ಲ. ನುರಿತ ವೈದ್ಯರ ಸಲಹೆ/ಮಾರ್ಗದರ್ಶನ ಅತ್ಯಗತ್ಯ ಅಷ್ಟೇ. ನನ್ನ ಮಗಳಿಗೆ ನಾನು ಎಲ್ಲರಂತೇ ನಡೆಯಲಾಗದು ಎಂಬುದನ್ನು ಸೂಕ್ಷ್ಮವಾಗಿ ತಿಳಿಸುತ್ತ ಹೋಗಿದ್ದೆ. ಅದನ್ನವಳು ಒಪ್ಪಿಕೊಳ್ಳಲು ಸಾಕಷ್ಟು ಸಮಯ ತೆಗೆದುಕೊಂಡರೂ, ನನ್ನ ಪರಿಸ್ಥಿತಿಗೆ ಬಹು ಚೆನ್ನಾಗಿ ಹೊಂದಿಕೊಳ್ಳುತ್ತ ಬೆಳೆದಳು. ನನಗೆ ಬೆಂಬಲವಾಗಿ ನಿಂತಳು. ನಿರೀಕ್ಷೆಗೂ ಮೀರಿ ಸಹಕಾರ ನೀಡಿದಳು. ಇನ್ನು ಮಕ್ಕಳು ಹಠ ಮಾಡುತ್ತಾರೆ ಎಂದೋ, ತಮ್ಮ ಮುದ್ದಿಗಾಗೋ, ಬಹು ಬೇಗ ತಿಂದು ಬಿಡುತ್ತಾರೆ ಎಂಬ ಭಾವದಲ್ಲಿ ಹಲವರು ಮಕ್ಕಳಿಗೆ ತಿರುಗಾಡಿಸುತ್ತ ತಿನ್ನಿಸುವುದನ್ನೇ ರೂಢಿ ಮಾಡಿಸುತ್ತಾರೆ. ಆದರೆ, ಇದು ಅನಿವಾರ್ಯ ಖಂಡಿತ ಅಲ್ಲ. ಒಂದೆಡೆ ಕುಳಿತಲ್ಲೇ ಎಲ್ಲವನ್ನೂ ತಿಂದು ಮುಗಿಸುವ ಅಭ್ಯಾಸವನ್ನು ಆರಂಭದಿಂದಲೇ ಮಾಡಿಸುತ್ತ ಬಂದರೆ ಯಾವುದೇ ಸಮಸ್ಯೆ ನಮ್ಮನ್ನು ಬಾಧಿಸದು ಮತ್ತು ಒಂದೆಡೆ ಕುಳಿತು ತಿನ್ನುವುದು ಆರೋಗಕ್ಕೂ ಹಿತಕರ ಎನ್ನುತ್ತಾರೆ ವೈದ್ಯರು. ನಡೆಯಲಾಗದ ಹೆತ್ತವರು, ನೆಲದಲ್ಲಿ ಕುಳಿತೇ ಹಲವು ಆಟಗಳನ್ನು ಪುಟಾಣಿಗಳೊಡನೆ ಆಡಬಹುದು. ಸಾಮಾನ್ಯ ಆಟದಲ್ಲೇ ಹೊಸ ಹೊಸ ಪ್ರಯೋಗಗಳನ್ನು ಮಾಡಿ ಅವರನ್ನು ಆಕರ್ಷಿಸಿ ಹಿಡಿದಿಟ್ಟುಕೊಳ್ಳಬಹುದು. ಅವರು ನಡೆಯುವಾಗ ಕಿಲಾಡಿತನ ಮಾಡಿದರೆ, “ಅಮ್ಮ/ಅಪ್ಪನಿಗೆ ಸಹಾಯ ಮಾಡು ಪುಟ್ಟಾ ‘ ಎಂದು ಕರೆದು ಅವರನ್ನು ಸಣ್ಣ ಪುಟ್ಟ ಕೆಲಸಗಳಲ್ಲಿ ವ್ಯಸ್ತರನ್ನಾಗಿಸಿಟ್ಟುಕೊಳ್ಳಬಹುದು. ಇದರಿಂದ ಕ್ರಮೇಣ ಅವರ ತುಂಟತನ ಕ್ರಿಯಾತ್ಮಕತೆಗೆ ಹೊರಳತೊಡಗುತ್ತದೆ.

Advertisement

ಮಕ್ಕಳು ಹಿಂಬಾಲಿಸುವುದು ಹೆಚ್ಚು ತಮ್ಮ ಹೆತ್ತವರನ್ನೇ. ನಾವೇನು ಮಾಡುತ್ತೇವೆಯೋ ಅದನ್ನೇ ಅವರೂ ಮಾಡಲು ಇಚ್ಛಿಸುತ್ತಾರೆ. ನಾನು ನನ್ನ ಮಗಳು ಅದಿತಿಗೆ ಒಂದೆರಡು ವರುಷವಾಗುತ್ತಿದ್ದಂತೇ ದೊಡ್ಡ ದೊಡ್ಡ ಬಣ್ಣದ ಚಿತ್ರಗಳುಳ್ಳ ಹಲವು ಪುಸ್ತಕಗಳನ್ನು ತಂದುಕೊಟ್ಟಿದ್ದೆ. ಸ್ವತಃ ನಾನೂ ಪುಸ್ತಕ ಬಿಡಿಸಿಟ್ಟುಕೊಂಡು ಅವಳ ಮುಂದೆ ಓದುತ್ತ, ಅವಳಿಗೆ ಅವಳ ಪುಸ್ತಕವನ್ನು ಕೊಟ್ಟು ವಿವರಿಸುತ್ತ ಆಸಕ್ತಿ ಹೆಚ್ಚಿಸತೊಡಗಿದೆ. ಕ್ರಮೇಣ ನಾನು ಪುಸ್ತಕ ಹಿಡಿದಾಕ್ಷಣ ಆಕೆಯೂ ತನ್ನ ಪುಸ್ತಕಗಳ ರಾಶಿ ಹಾಕಿಕೊಂಡು ಚಿತ್ರಗಳನ್ನು ನೋಡುತ್ತಾ ತನ್ನದೇ ಕಥೆ ಕಟ್ಟತೊಡಗಿದಳು. ಈಗಂತೂ ಹಲವು ಕಥಾ ಪುಸ್ತಕಗಳು ಅವಳ ಅತ್ಯುತ್ತಮ ಗೆಳೆಯರಾಗಿದ್ದಾರೆ. ದಿನದಲ್ಲಿ ತುಸು ಸಮಯವನ್ನು ನಾವಿಬ್ಬರೂ ಓದುವಿಕೆಗಾಗಿ ಮೀಸಲಿಡುತ್ತಿದ್ದೇವೆ. ನಾಲ್ಕನೆಯ ತರಗತಿಯಲ್ಲಿರುವ ಮಗಳು ಇಂಗ್ಲಿಷ್‌ ಮಾತ್ರವಲ್ಲದೆ, ಕನ್ನಡ ಭಾಷೆಯ ಪುಸ್ತಕಗಳನ್ನು ಬಲು ಆಸಕ್ತಿಯಿಂದ ಓದುತ್ತಾಳೆ ಎಂಬುದು ನಮಗಿಬ್ಬರಿಗೂ ಬಲು ಹೆಮ್ಮೆಯ ವಿಷಯ.

ತೇಜಸ್ವಿನಿ ಹೆಗಡೆ

Advertisement

Udayavani is now on Telegram. Click here to join our channel and stay updated with the latest news.

Next