Advertisement

ಸಾರಾಯಿ ಮುಕ್ತ ರಾಜ್ಯ ಕಲ್ಪನೆಗೆ ಅಂಕಿತ ಹಾಕಿ: ದಿಂಗಾಲೇಶ್ವರ ಶ್ರೀ

06:07 PM Apr 30, 2020 | Suhan S |

ಲಕ್ಷ್ಮೇಶ್ವರ: ಕೋವಿಡ್ 19  ಹಿನ್ನೆಲೆಯಲ್ಲಿ ಒಂದು ತಿಂಗಳಿಂದ ಮದ್ಯ ಮಾರಾಟ ಬಂದ್‌ ಮಾಡಲಾಗಿದ್ದು, ರಾಜ್ಯದಲ್ಲಿ ಶಾಂತಿ ನೆಲೆಸಿದೆ. ಆದ್ದರಿಂದ ಲಾಕ್‌ಡೌನ್‌ ಹಿಂಪಡೆದ ಬಳಿಕವೂ ಮದ್ಯ ಮಾರಾಟವನ್ನು ಸಂಪೂರ್ಣ ನಿಷೇಧಿಸುವ ಮೂಲಕ ಸಾರಾಯಿ ಮುಕ್ತ ರಾಜ್ಯದ ಕಲ್ಪನೆಗೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪನವರು ಅಂಕಿತ ಹಾಕಬೇಕು ಎಂದು ಬಾಲೇಹೊಸೂರಿನ ದಿಂಗಾಲೇಶ್ವರ ಸ್ವಾಮಿಗಳು ಆಗ್ರಹಿಸಿದ್ದಾರೆ.

Advertisement

ಈ ಕುರಿತು ಶ್ರೀಗಳು ಪತ್ರಿಕಾ ಹೇಳಿಕೆ ನೀಡಿದ್ದು, ಸಾರಾಯಿ ನಿಷೇಧದಿಂದ ಕುಡುಕರ ಕುಟುಂಬಗಳು ನೆಮ್ಮದಿ, ಸಂತೋಷದಿಂದ ಬದುಕುವಂತಾಗುತ್ತದೆ. ಬಡತನ ನಿರ್ಮೂಲನೆ, ಆರೋಗ್ಯಕರ, ಸ್ವಾಸ್ಥ ಸಮಾಜದ ನಿರ್ಮಾಣಕ್ಕೆ ನಾಂದಿಯಾಗುತ್ತದೆ. ಸಾರಾಯಿ ಮಾರಾಟದಿಂದ ಅದೆಷ್ಟೋ ಮಹಿಳೆಯರು, ಮಕ್ಕಳು ಚಿತ್ರಹಿಂಸೆ, ಹಲ್ಲೆಯಿಂದ ನಿತ್ಯ ಕಣ್ಣೀರಿನಲ್ಲಿ ಗೋಳಾಡುವಂತಾಗಿದೆ. ಸಾರಾಯಿ ಮಾರಾಟ ಮಾಡಿ ರಾಜ್ಯ ನಡೆಸುವ ಕಾರ್ಯದಿಂದ ಮಹಿಳೆಯರ, ಮಕ್ಕಳ, ತಾಯಂದಿರ ಶಾಪಕ್ಕೆ ಗುರಿಯಾಗಬೇಕಾತ್ತದೆ. ಮಕ್ಕಳ ಶಿಕ್ಷಣ ಮತ್ತು ಬದುಕಿನ ಮೇಲೆ ಕಟ್ಟ ಪರಿಣಾಮ ಬೀರುತ್ತದೆ. ಸಾರಾಯಿ ನಿಷೇಧದಿಂದ ರಾಜ್ಯದ ಆರ್ಥಿಕ ಸ್ಥಿತಿ ಅಧೋಗತಿಗೆ ಹೋಗಲ್ಲ. ಸರ್ಕಾರ ಒಂದಿಷ್ಟು ಸೌಲತ್ತುಗಳನ್ನು, ಅಭಿವೃದ್ಧಿ ಕಾರ್ಯಗಳನ್ನು ಕಡಿಮೆ ಮಾಡಿಯಾದರೂ ಸಾರಾಯಿ, ಗುಟಕಾ ಮಾರಾಟ ಸಂಪೂರ್ಣ ನಿಷೇಧ ಮಾಡಬೇಕು. ದೇಶಕ್ಕೆ ಉಂಟಾಗುವ ಆರ್ಥಿಕ ಹೊರೆಗಿಂತ ಜನರ ಜೀವ ಮುಖ್ಯ ಎಂಬ ನಿಲುವಿನಿಂದ ಲಾಕ್‌ಡೌನ್‌ ಘೋಷಿಸಿದಂತೆ ಪ್ರಧಾನಮಂತ್ರಿಗಳು, ರಾಜ್ಯದ ಮುಖ್ಯಮಂತ್ರಿಗಳು ದೇಶವನ್ನು ಸಂಪೂರ್ಣ ಸಾರಾಯಿ ಮುಕ್ತ ಮಾಡಬೇಕು. ಕೊರೊನಾ ವೇಳೆ ರಾಜ್ಯದಲ್ಲಿ ಮದ್ಯ ನಿಷೇಧ ಮಾಡಿದ ಪರಿಣಾಮ ಅಪಘಾತ, ಹಲ್ಲೆ, ಅಪರಾಧ ಚುಟುವಟಿಕೆಗಳು, ಕಾನೂನು ಉಲ್ಲಂಘನೆಯಂತಹ ಪ್ರಕರಣ ಕಡಿಮೆಯಾಗಿವೆ. ಆದ್ದರಿಂದ ರಾಜ್ಯವನ್ನು ಸಾರಾಯಿ ಮುಕ್ತ ಮಾಡುವ ಈ ಐತಿಹಾಸಿಕ ನಿಲುವು, ನಿರ್ಣಯ ರಾಜ್ಯದಿಂದಲೇ ಆರಂಭವಾಗುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪನವರು ದೃಢ ನಿರ್ಧಾರ ಕೈಗೊಳ್ಳಬೇಕು ಎಂದು ಶ್ರೀಗಳು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next