Advertisement

ಸಾಗರ : ಕೆಎಸ್‌ಆರ್‌ಟಿಸಿ ಡಿಪೋದಲ್ಲಿಯೇ ಬಸ್‌ನಿಂದ ಡಿಸೇಲ್ ಕಳ್ಳತನ !

08:59 PM Jul 25, 2022 | Team Udayavani |

ಸಾಗರ : ಇಲ್ಲಿನ ಜೋಗ ರಸ್ತೆಯಲ್ಲಿನ ಕೆಎಸ್‌ಆರ್‌ಟಿಸಿ ಘಟಕದ ಆವರಣದಲ್ಲಿಯೇ ನಿಲ್ಲಿಸಲಾಗಿದ್ದ ಸರ್ಕಾರಿ ಬಸ್‌ನಿಂದ ಡಿಸೇಲ್ ಕಳ್ಳತನ ಮಾಡಲಾಗಿರುವ ವಿಚಿತ್ರ ಘಟನೆ ನಡೆದಿದ್ದು, ಈ ಸಂಬಂಧ ಘಟಕ ವ್ಯವಸ್ಥಾಪಕರು ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Advertisement

ಘಟಕದ ಸಾಗರ-ಶಿವಮೊಗ್ಗ-ರಾಯಚೂರು ಮಾರ್ಗದ ಕೆಎ 14 ಎಫ್ 0009 ಸಂಖ್ಯೆಯ ಬಸ್‌ಗೆ ಚಾಲಕನಾಗಿ ಕರ್ತವ್ಯ ನಿರ್ವಹಿಸುತ್ತಿರುವ ಪ್ರವೀಣ್ ಜೈನ್ ಎಂಬುವವರು ಜು. 21ರಂದು 190 ಲೀಟರ್ ಇಂಧನ ತುಂಬಿಸಿ ಟ್ಯಾಂಕ್ ಭರ್ತಿ ಮಾಡಿದ್ದರು. ಇಂಧನ ತುಂಬಿಸಿದ ನಂತರ ವಾಹನದ ತಾಂತ್ರಿಕ ನಿರ್ವಹಣೆ ಮಾಡಿಸಿ ಭದ್ರತಾ ವ್ಯವಸ್ಥೆಯ ಎದುರುಗಡೆ ಮೂಲೆಯಲ್ಲಿರುವ ನೀರಿನ ಟ್ಯಾಂಕ್ ಹತ್ತಿರ ಬಸ್ ನಿಲ್ಲಿಸಲಾಗಿತ್ತು. ಜು. 22ರಂದು ಬೆಳಿಗ್ಗೆ ಚಾಲಕ ಪ್ರವೀಣ್ ಕರ್ತವ್ಯಕ್ಕಾಗಿ ಘಟಕಕ್ಕೆ ಬಂದಾಗ ವಾಹನದ ಇಂಧನ ಪರಿಶೀಲಿಸಿದ್ದಾರೆ. ಇಂಧನದ ಪ್ರಮಾಣ ಕಡಿಮೆ ಇದ್ದಿದ್ದು ಕಂಡು ಬಂದಿದೆ.

ಸಂಚಾರ ಮೇಲ್ವಿಚಾರಕ, ಪಾಳಿ ಮುಖ್ಯಸ್ಥ ಮತ್ತು ಇಂಧನ ಶಾಲೆಯ ಸಿಬ್ಬಂದಿ ಪರಿಶೀಲಿಸಿದಾಗ ಇಂಧನ ಕಡಿಮೆ ಇರುವುದು ಸ್ಪಷ್ಟವಾಗಿದೆ.

ಮತ್ತೊಮ್ಮೆ ಇಂಧನ ತುಂಬಿಸಿದಾಗ 35 ಲೀಟರ್ ಇಂಧನ ಹಾಕಲು ಸಾಧ್ಯವಾಗಿದೆ. ಘಟಕದಲ್ಲಿ ನಿಲ್ಲಿಸಲಾಗಿದ್ದ ವಾಹನದಿಂದ 35 ಲೀಟರ್ ಇಂಧನವನ್ನು ಕಳ್ಳತನ ಮಾಡಿರುವುದು ಬಯಲಿಗೆ ಬಂದಿದೆ. ಅಂದಾಜು 3,097 ರೂ. ಮೌಲ್ಯದ ಡೀಸೆಲ್ ಕಳ್ಳತನವಾಗಿದೆ ಎಂದು ಭಾವಿಸಲಾಗಿದೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next