Advertisement

ಭಿನ್ನಮತ ಪರಿಹಾರಕ್ಕೆ ಫ‌ಡ್ನವೀಸ್‌ ಭೇಟಿಯಾಗಿದ್ದರೇ ಉದ್ಧವ್‌ ಠಾಕ್ರೆ?

12:12 AM Jul 18, 2022 | Team Udayavani |

ಮುಂಬೈ: ಮಹಾರಾಷ್ಟ್ರದಲ್ಲಿ ಎಂವಿಎ ಸರ್ಕಾರ ಪತನಗೊಳ್ಳುವುದಕ್ಕೆ ಮೊದಲು ಅಂದಿನ ಸಿಎಂ ಆಗಿದ್ದ ಉದ್ಧವ್‌ ಠಾಕ್ರೆ ಅವರು ಬಿಜೆಪಿ ನಾಯಕ, ಹಾಲಿ ಡಿಸಿಎಂ ದೇವೇಂದ್ರ ಫ‌ಡ್ನವೀಸ್‌ ಜತೆಗೆ ಮಾತುಕತೆ ನಡೆಸಿದ್ದರು ಎಂಬ ವಿಚಾರ ಬೆಳಕಿಗೆ ಬಂದಿದೆ.

Advertisement

ಫ‌ಡ್ನವೀಸ್‌ ಜತೆಗಿನ ಮಾತುಕತೆ ವೇಳೆ, ಏಕನಾಥ ಶಿಂಧೆಯವರಿಗೆ ಬೆಂಬಲ ನೀಡುವ ಬದಲು ನೇರವಾಗಿ ತಮ್ಮ ಜತೆಯೇ ಮಾತುಕತೆ ನಡೆಸಬೇಕು. ಈ ಮೂಲಕ ಪೂರ್ಣ ಶಿವಸೇನೆ ಬಿಜೆಪಿ ಜತೆಗೆ ಇರಲಿದೆ ಎಂದು ಫ‌ಡ್ನವೀಸ್‌ಗೆ, ಉದ್ಧವ್‌ ಮನವರಿಕೆ ಮಾಡಿಕೊಡಲು ಮುಂದಾಗಿದ್ದರು. ಖುದ್ದಾಗಿ ಈ ಭೇಟಿ ನಡೆದಿತ್ತು ಎಂದು ಮೂಲಗಳನ್ನು ಉಲ್ಲೇಖಿಸಿ  ಇಂಡಿಯಾ ಟುಡೇ’ ವರದಿ ಮಾಡಿದೆ.

ಹಾಲಿ ಮುಖ್ಯಮಂತ್ರಿ ಏಕನಾಥ ಶಿಂಧೆ ನೇತೃತ್ವದಲ್ಲಿ ಶಾಸಕರು ಬಂಡಾಯ ಎದ್ದಾಗ ಉದ್ಧವ್‌ ಅವರು ಪ್ರಧಾನಿ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರಿಗೆ ಫೋನ್‌ ಮಾಡಲು ಮುಂದಾಗಿದ್ದರೂ ಅವರು ಸ್ಪಂದಿಸಲಿಲ್ಲ ಎಂದು ಹೇಳಲಾಗಿದೆ.

ಶಿವಸೇನೆಯ ಕೆಲವು ನಾಯಕರು ಶಿಂಧೆ ಜತೆಗೆ ಮಾತುಕತೆ ನಡೆಸಲು ಮುಂದಾಗಿ, ಬಿಕ್ಕಟ್ಟಿನ ಪರಿಸ್ಥಿತಿ ತಿಳಿಗೊಳಿಸಲು ಯತ್ನಿಸಿದ್ದರು. ಆದರೆ, ಉದ್ಧವ್‌ ಜತೆಗೆ ಸಂಧಾನಕ್ಕೆ ಅವರೂ ಸಿದ್ಧರಿರಲಿಲ್ಲ ಎಂದೂ ವರದಿ ಹೇಳಿದೆ. 2019ರಲ್ಲಿ ಬಿಜೆಪಿ ನಾಯಕರು ಉದ್ಧವ್‌ ಜತೆಗೆ ಮಾತುಕತೆಗೆ ಯತ್ನಿಸಿದ್ದರಾದರೂ ಅವರು ಒಪ್ಪಿಕೊಂಡಿರಲಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next