Advertisement

ವಿದ್ಯುತ್ ಪಿಪಿಎ ಹಗರಣ ಸಿದ್ದರಾಮಯ್ಯ ಕಾಲಕ್ಕೂ ವ್ಯಾಪಿಸಿದೆಯೇ?: ಪರಿಶೀಲನೆಗೆ ಮುಂದಾದ ಸರ್ಕಾರ

10:38 AM Sep 12, 2022 | Team Udayavani |

ಬೆಂಗಳೂರು: ಖಾಸಗಿ ವಿದ್ಯುತ್ ಕಂಪನಿಗಳ ಜತೆಗೆ ಈ ಹಿಂದೆ ರಾಜ್ಯ ಸರಕಾರ ಮಾಡಿಕೊಂಡ ದೀರ್ಘಾವಧಿ ಒಪ್ಪಂದ (ಪಿಪಿಎ) ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನೇ ಸುತ್ತಿಕೊಳ್ಳಲಿದೆಯೇ? ಇಂಥದೊಂದು ಚರ್ಚೆ ಈಗ ಆಡಳಿತ ಪಕ್ಷದ ವಲಯದಲ್ಲಿ ಕೇಳಿ ಬರಲಾರಂಭಿಸಿದ್ದು, ವಿದ್ಯುತ್ ಪಿಪಿಎ ಮೂಲಕ ಕಾಂಗ್ರೆಸ್ ಗೆ ಶಾಕ್ ಕೊಡಲು ಬಿಜೆಪಿ ನಿರ್ಧರಿಸಿದೆ ಎನ್ನಲಾಗಿದೆ.

Advertisement

ನಲವತ್ತು ಪರ್ಸೆಂಟ್ ಆರೋಪವನ್ನು ಪ್ರತಿ ದಿನ ಜಪ ಮಾಡುತ್ತಿರುವ ಕಾಂಗ್ರೆಸ್‌ ಗೆ ತಿರುಗೇಟು ನೀಡಲು ಬಿಜೆಪಿ, ದುರ್ಬೀನು ಹಾಕಿ ಹುಡುಕಾಟ ಆರಂಭಿಸಿದಾಗ ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ನಡೆದ ಶಿಕ್ಷಕರ ನೇಮಕ ಪ್ರಕರಣದ ಜತೆಗೆ ಈಗ ಇಂಧನ ಇಲಾಖೆಯಲ್ಲೂ ಒಂದಿಷ್ಟು ವಿಚಾರಗಳು ಲಭ್ಯವಾಗಿದೆ. ವಿದ್ಯುತ್ ಒಡಂಬಡಿಕೆಗಳ ಪೈಕಿ ಕೆಲವು ಸಂಶಯಾತ್ಮಕವಾಗಿರುವುದು ಕಂಡು ಬಂದಿವೆ.

ಡಿ.ಕೆ.ಶಿವಕುಮಾರ್ ಇಂಧನ ಸಚಿವರಾಗುವ ಮುನ್ನ ಅಂದರೆ 2014 ಜುಲೈಗೆ ಮುಂಚೆ ನಡೆದಿರುವ ವಿದ್ಯುತ್ ಖರೀದಿ ಒಪ್ಪಂದಗಳ ಬಗ್ಗೆ ಸಾಕಷ್ಟು ಅನುಮಾನ ಕಂಡುಬಂದಿದ್ದು, ಕಂಪನಿಗಳಿಗೆ  ಅನುಕೂಲ ಮಾಡಿಕೊಡುವ ಉದ್ದೇಶ ಎದ್ದು ಕಾಣಿಸಿದೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ:ಫೈನಲ್ ಪಂದ್ಯದಲ್ಲಿ ಪಾಕ್ ವಿರುದ್ಧ ಲಂಕೆಗೆ ಜಯ: ಬೀದಿಗಳಲ್ಲಿ ಹಾಡಿ ಕುಣಿದ ಅಫ್ಘಾನಿಗರು

ತಾತ್ಕಾಲಿಕ ವಿದ್ಯುತ್ ಅಭಾವದ ದುರ್ಲಾಭ ಪಡೆದು ಕಾರ್ಯ ಸಾಧುವಲ್ಲದ ದೀರ್ಘಾವಧಿ ಒಪ್ಪಂದ, ಸ್ಪರ್ಧಾತ್ಮಕಕ್ಕಿಂತಲೂ ಅನಿವಾರ್ಯತೆಗೆ ಕಟ್ಟುಬಿದ್ದಂತೆ ಹೆಚ್ಚಿನ ದರ ನಿಗದಿ ಮಾಡಿ, ಷರತ್ತುಗಳ ಬಗ್ಗೆ ನಿರ್ಲಕ್ಷ್ಯ, ಪಾರದರ್ಶಕ ಕಾಯ್ದೆ ಉಲ್ಲಂಘನೆ ಮುಂತಾದವು ಈಗ ಸಂಶಯಕ್ಕೆ ಪುಷ್ಠಿ ನೀಡಿದೆ.

Advertisement

ತಂತ್ರಜ್ಞಾನ ಮತ್ತು ವಿದ್ಯುತ್ ಉತ್ಪಾದನೆ ನಿಂತ ನೀರಲ್ಲ. ಆಡಳಿತ ನಡೆಸುವವರಿಗೂ ಒಪ್ಪಂದದ ಪ್ರಸ್ತಾವನೆ ಸಿದ್ಧಪಡಿಸುವವರಿಗೂ ಇರಬೇಕಾದ ಪ್ರಾಥಮಿಕ ಜ್ಞಾನ. ಆದರೆ, ರಾಜ್ಯದ ಜನರ ಕಷ್ಟವನ್ನೇ ‘ಲಾಭದ ವ್ಯವಹಾರ’ಕ್ಕೆ ‘ಕೈ’ ಹಾಕಿವೆ ಎಂದು ತಜ್ಞರು ದಾಖಲೆ ಪರಿಶೀಲನೆ ವೇಳೆ ಬೇಸರ ವ್ಯಕ್ತಪಡಿಸಿದ್ದಾರೆ.

ದರ ನಿಗದಿಯು, ಒಪ್ಪಂದದ ಅವಧಿ, ಸರ್ಕಾರಕ್ಕೆ ತನಗೆ ಬೇಕಾದ ಷರತ್ತುಗಳನ್ನು ಹಾಕಿಕೊಳ್ಳುವ ಅವಕಾಶಗಳಿದ್ದರೂ ಕಾಣದ ಕೈಗಳ ಪ್ರಭಾವದಿಂದ ಕಂಪನಿಗಳಿಗೆ ಅನುಕೂಲ ಮಾಡಿಕೊಟ್ಟಿವೆ ಎಂಬುದು ಕಂಡುಬಂದಿವೆ.

ಪವನ ಹಾಗೂ ಸೌರ ವಿದ್ಯುತ್ ಮೂಲದ ಸರಾಸರಿ ವೆಚ್ಚ ಪರಿಗಣಿಸಿಲ್ಲ. ಗರಿಷ್ಠ ದರವನ್ನು ನಿಗದಿ ಮಾಡುವಾಗ ನಿರ್ದಿಷ್ಟ ಕಾಲಮಿತಿ ಕಡೆಗಣಿಸಲಾಗಿದೆ. ಹೆಚ್ಚು ಬಳಕೆ ಮಾಡುವ ಅವಧಿ, ಸಾಮಾನ್ಯ ಅವಧಿ ಎರಡರ ಮಧ್ಯೆ ವ್ಯತ್ಯಾಸ ತಿಳಿಯದೇ ಏಕರೂಪದಲ್ಲಿ ಯೂನಿಟ್ ದರ ನಿಗದಿ ಮಾಡಿ ಬೊಕ್ಕಸಕ್ಕೆ ಅನಗತ್ಯ ಹೊರೆ ಹೇರಲಾಗಿದೆ ಎಂದು ಅಂದಾಜಿಸಲಾಗಿದೆ.

ಎಷ್ಟು ನಷ್ಟ?

ಪ್ರತಿ ಯೂನಿಟ್‌ಗೆ ಗರಿಷ್ಠ 11 ರೂ. ವರೆಗೆ 25 ವರ್ಷಗಳವರೆಗೆ ಖರೀದಿ ಒಪ್ಪಂದ ಮಾಡಿಕೊಳ್ಳಲಾಗಿದೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಎರಡು ಸಾವಿರ ಕೋಟಿ ರೂ. ವರೆಗೂ ಹೆಚ್ಚುವರಿ ಹೊರೆ ಬೀಳುತ್ತಿದೆ ಎಂಬ ಅಂದಾಜಿಸಲಾಗಿದೆ. ಇದೇ ಕಾರಣಕ್ಕೆ ಸರ್ಕಾರ ಪ್ರತಿ ಒಡಂಬಡಿಕೆಯನ್ನು ಪರಿಶೀಲಿಸಿ ಕಾನೂನು ತಜ್ಞರ ಮೂಲಕ ಪರಿಹಾರ ಮಾರ್ಗೋಪಾಯಗಳನ್ನು ಕಂಡುಕೊಳ್ಳುವ ಪ್ರಕ್ರಿಯೆ ನಡೆಸಿದೆ.

Advertisement

Udayavani is now on Telegram. Click here to join our channel and stay updated with the latest news.

Next