Advertisement

ಕೆರೆಯಂಗಳದಲ್ಲಿ ನುಂಗಣ್ಣರದೇ ದರ್ಬಾರ್‌; ರೆಸಾರ್ಟ್‌-ಹೋಟೆಲ್‌ ಉದ್ಯಮಕ್ಕೂ ಜಾಗ

03:13 PM Oct 07, 2022 | Team Udayavani |

ಧಾರವಾಡ: ತಮ್ಮ ಹರಿವು ವಿಸ್ತರಿಸಿಕೊಳ್ಳಲು ಯತ್ನಿಸಿ ಮಂಕಾದ ರಾಜಕಾಲುವೆಗಳು, ಸಿಟ್ಟಿಗೆದ್ದು ಭೋರ್ಗರೆದು ಅಕ್ಕಪಕ್ಕದ ಬೆಳೆಯನ್ನೇ ಕಿತ್ತುಕೊಂಡು ಹರಿಯುತ್ತಿರುವ ಹಳ್ಳಗಳು, ತಮ್ಮ ಒಂದು ಅಂಗವನ್ನೇ ಕಿತ್ತುಕೊಂಡರೂ ಅದಕ್ಕೆ ಪ್ರತಿರೋಧ ಒಡ್ಡಲಾರದ ಸ್ಥಿತಿಯಲ್ಲಿರುವ ಕೆರೆಕುಂಟೆಗಳು, ಮೌನ ರೋಧನೆ ಅನುಭವಿಸುತ್ತಿರುವ ಗೋಮಾಳಗಳು. ಒಟ್ಟಿನಲ್ಲಿ ಎಲ್ಲೆಡೆಗೂ ಈಗ ನುಂಗಣ್ಣರದ್ದೇ ದರ್ಬಾರ್‌.

Advertisement

ಹೌದು, ಜಿಲ್ಲೆ ವ್ಯಾಪ್ತಿಯ ಜನಜೀವನ ಸುಸೂತ್ರವಾಗಿ ನಡೆಯುವುದಕ್ಕೆ ಆಸರೆಯಾಗಿದ್ದ ಕೆರೆಕುಂಟೆ, ಹಳ್ಳಕೊಳ್ಳ, ಗಾಂವಠಾಣಾ-ಗೋಮಾಳ ಹಾಗೂ ನಗರ ಪ್ರದೇಶದಲ್ಲಿನ ರಾಜಕಾಲುವೆಗಳು ಅತಿಕ್ರಮಣಕ್ಕೆ ಒಳಗಾಗಿದ್ದು, ಇವುಗಳನ್ನು ಗುರುತಿಸಿ ತೆರವುಗೊಳಿಸದೇ ಹೋದರೆ, ಬೆಂಗಳೂರು ನಗರದಲ್ಲಿ ಉಂಟಾದ ಪ್ರವಾಹದಂತೆಯೇ ಹುಬ್ಬಳ್ಳಿ-ಧಾರವಾಡಕ್ಕೂ ಜಲ ಗಂಡಾಂತರ ತಪ್ಪಿದ್ದಲ್ಲ. ಮುನ್ಸೂಚನೆ ಎಂಬಂತೆ 2020 ಮತ್ತು 2011ರಲ್ಲಿ ಧಾರವಾಡದ ಜನ್ನತ ನಗರ, ನೇಕಾರ ನಗರ, ದೈವಜ್ಞ ಕಲ್ಯಾಣ ಮಂಟಪ, ಕೋಳಿಕೇರಿ ಸುತ್ತಲಿನ ಪ್ರದೇಶಗಳು ಹಾಗೂ ಬಸ್‌ ಡಿಪೋ ವೃತ್ತದ ಸುತ್ತಲಿನ ಪ್ರದೇಶಗಳಲ್ಲಿ ರಾಜಕಾಲುವೆಗಳಲ್ಲಿನ ನೀರು ರಸ್ತೆ ಮೇಲೆ ಹರಿದು ಮನೆಗಳಿಗೆ ನುಗ್ಗಿ ಹಾನಿಯಾದರೆ, ಗ್ರಾಮಗಳಲ್ಲಿ ಕೆರೆಗಳು ಅತಿಕ್ರಮಣವಾಗಿದ್ದರಿಂದ ರೈತರ ಸಾವಿರಾರು ಎಕರೆ ಬೆಳೆ ಹಾನಿಗೆ ಒಳಗಾಗಿತ್ತು.

ಕೆರೆಯಂಗಳಗಳೇ ಅತಿಕ್ರಮಣ:

ಜಿಲ್ಲೆಯ 1200 ಕೆರೆಗಳ ಪೈಕಿ 300ಕ್ಕೂ ಅಧಿಕ ಕೆರೆಗಳು ಅತಿಕ್ರಮಣಕ್ಕೆ ಒಳಗಾಗಿವೆ. ಸ್ವತಃ ಗ್ರಾಪಂಗಳೇ ತಮ್ಮೂರಿನ ಅತಿಕ್ರಮಣ ಸಹಿಸಿಕೊಂಡು ಸುಮ್ಮನಿದ್ದು, ಸ್ಥಳೀಯ ರಾಜಕಾರಣವೂ ಇದಕ್ಕೆ ಕಾರಣವಾಗಿದೆ. 2015ರಲ್ಲಿ ಅಂದಿನ ಸರ್ಕಾರ ಕೆರೆಗಳ ಅತಿಕ್ರಮಣ ತೆರವಿಗೆ ಕಷ್ಟಪಟ್ಟಿತ್ತು. ಜಿಲ್ಲೆಯ 120 ಕೆರೆಗಳನ್ನು ಸಮೀಕ್ಷೆ ನಡೆಸಿ ಅತಿಕ್ರಮಣಗೊಂಡಿದ್ದ 76.8 ಎಕರೆಯಷ್ಟು ಭೂಮಿಯನ್ನು ಮರಳಿ ಪಡೆದುಕೊಂಡಿತ್ತು. ಇನ್ನು ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯ ಕೆರೆಗಳ ಕೋಡಿಗಳು-ಕಾಲುವೆಗಳ ಜಾಗೆಯೂ ಅತಿಕ್ರಮಣಕ್ಕೆ ಒಳಗಾಗಿದೆ. ಕಾಲುವೆಗಳ ನೀರನ್ನು ಹೊಲದಿಂದ ಹೊಲಗಳಿಗೆ ಸಾಗಿಸಲು ಗುರುತಿಸಿದ ನೀರಾವರಿ ಕಚ್ಚಾ ಕಾಲುವೆ ಮಾರ್ಗ(ಸಿಮೆಂಟ್‌ ಕಾಲುವೆ ಅಲ್ಲ) ಕೂಡ ಮಾಯವಾಗಿದೆ. ಧಾರವಾಡ, ಕಲಘಟಗಿ, ಅಳ್ನಾವರ ತಾಲೂಕಿನಲ್ಲಿ 73.8 ಸಾವಿರ ಎಕರೆಯಷ್ಟು ಭೂಮಿಗೆ ಕೆರೆ ಗಳಿಂದಲೇ ಭತ್ತದ ಬೆಳೆಗೆ ನೀರು ಲಭಿಸುತ್ತಿತ್ತು. ಆಗಿದ್ದ ಕಚ್ಚಾ ನೀರಾವರಿ ಕಾಲುವೆಗಳಿಂದು ಕಣ್ಮರೆಯಾಗಿವೆ. ಕಬ್ಬು ಬೆಳೆ ಬಂದಾಗಿನಿಂದ ಎಲ್ಲಾ ಕಾಲುವೆಗಳಲ್ಲೂ ಜೆಸಿಬಿ ಸದ್ದು ಮುಳುಗಿಸಿ ಅವುಗಳನ್ನು ಸಾಗುವಳಿ ಮಾಡಿ ಕಬ್ಬು ನಾಟಿ ಮಾಡಲಾಗಿದೆ.

ದೈತ್ಯ ಕೆರೆಗಳ ಸಮೀಕ್ಷೆ ಕಷ್ಟ

Advertisement

50 ಎಕರೆಗಿಂತಲೂ ಮೇಲ್ಪಟ್ಟ ದೊಡ್ಡ ಕೆರೆಗಳು ಜಿಲ್ಲೆಯಲ್ಲಿ 120ಕ್ಕೂ ಅಧಿಕ ಇವೆ. ನೀರಸಾಗರ, ಉಣಕಲ್‌, ಮುಗದ ಕೆರೆ, ಮುಗಳಿಕೆರೆ, ಹುಲಿಕೇರಿಕೆರೆ, ಹುಲಕೊಪ್ಪ ಕೆರೆ, ಬಣದೂರು ಕೆರೆ, ಮುರುಕಟ್ಟಿ ಕೆರೆ, ವೀರಾಪುರ ಕೆರೆ, ರಾಮಾಪುರ ಕೆರೆ,ದೇವಿಕೊಪ್ಪ ಕೆರೆ, ದಾಸ್ತಿಕೊಪ್ಪ ಕೆರೆ, ಮುತ್ತಗಿ ಕೆರೆ, ಡೋರಿ ಕೆರೆ, ಬೆಣಚಿ ಕೆರೆ, ಹಸರಂಬಿ ಕೆರೆ, ಶಿವಪುರ ಕೆರೆ, ನಿಗದಿ ಮತ್ತು ಬೆನಕಟ್ಟಿ ಕೆರೆ ಹಾಗೂ ಹೊನ್ನಾಪುರದ ಕೆರೆಗಳ ಅಂಗಳಗಳ ಅತಿಕ್ರಮಣ ಗುರುತಿಸುವುದೇ ಕಷ್ಟವಾಗಿ ಹೋಗಿದೆ. ಇನ್ನು 25-50 ಎಕರೆ ವಿಸ್ತೀರ್ಣ ಹೊಂದಿರುವ ಕೆರೆಗಳಲ್ಲಂತೂ ಅತಿಕ್ರಮಣವಾಗಿ ಮುಗಿದು ಹೋಗಿದೆ. ಅಲ್ಲಲ್ಲಿ ಜಿಲ್ಲಾಡಳಿತ ಮತ್ತು ಜಿಪಂ ವ್ಯಾಪ್ತಿಯಲ್ಲಿ ಅಧಿಕಾರಿಗಳು ಒಮ್ಮೊಮ್ಮೆ ಜೆಸಿಬಿಗಳನ್ನು ಬಳಕೆ ಮಾಡಿ ಘರ್ಜಿಸಿದ್ದಾಗಿದೆ. ಆದರೆ ಮತ್ತೆ ಮೂರು ನಾಲ್ಕು ವರ್ಷಗಳಲ್ಲಿ ಕೆರೆಗಳ ಅಂಗಳದೊಳಕ್ಕೆ ನುಂಗಣ್ಣರು ನುಗ್ಗಿ ಬೆಳೆ ತೆಗೆಯುತ್ತಿದ್ದಾರೆ.

ಕೆರೆಯಂಗಳದಲ್ಲಿ ಹೋಟೆಲ್‌ ಉದ್ಯಮ

ಜಿಲ್ಲೆಯ ಪಶ್ಚಿಮ ಭಾಗದ ಗುಡ್ಡಗಾಡು ಪ್ರದೇಶದಲ್ಲಿನ ಕೆರೆಗಳ ಅಂಗಳ ಅಥವಾ ಕೋಡಿಗಳ ಪಕ್ಕದಲ್ಲೇ ಇರುವ ಖಾಸಗಿ ಜಮೀನು ಖರೀದಿಸಿ, ಕೆರೆಯ ಕೋಡಿಗಳನ್ನು ಅತಿಕ್ರಮಿಸಿಕೊಂಡು ರೆಸಾರ್ಟ್‌ಗಳನ್ನು ನಿರ್ಮಿಸಲಾಗುತ್ತಿದೆ. ಹೊನ್ನಾಪುರ, ಡೋರಿ, ಕಂಬಾರಗಣವಿ, ವೀರಾಪುರ ಹಾಗೂ ಮಾವಿನಕೊಪ್ಪ ಸೇರಿದಂತೆ ಅನೇಕ ಕಡೆಗಳಲ್ಲಿ ಕೆರೆಯ ಅಂಗಳಕ್ಕೆ ಹೊಂದಿಕೊಂಡಿರುವ ಖಾಸಗಿ ಜಮೀನುಗಳನ್ನು ನಗರದ ಹೋಟೆಲ್‌ ಉದ್ಯಮಿಗಳು ಖರೀದಿಸಿ ಕೆರೆಯಂಗಳಕ್ಕೆ ಹೊಂದಿಕೊಂಡಂತೆ ರೆಸಾರ್ಟ್‌ ಅಥವಾ ದಾಬಾಗಳನ್ನು ಆರಂಭಿಸಿದ್ದಾರೆ. 1200 ಕೆರೆಗಳ ಪೈಕಿ 430ಕ್ಕೂ ಅಧಿಕ ಕೆರೆಗಳು ಜಿಪಂ ವ್ಯಾಪ್ತಿಯಲ್ಲಿದ್ದರೆ, ಉಳಿದವು ಸಣ್ಣ ನೀರಾವರಿ ಮತ್ತು ಅರಣ್ಯ ಇಲಾಖೆ ಅಡಿಯಲ್ಲಿವೆ. ಇಲಾಖೆಗಳ ಮಧ್ಯೆ ಹೊಂದಾಣಿಕೆ ಕೊರತೆಯೋ ಅಥವಾ ಬೇಜವಾಬ್ದಾರಿಯೋ ಗೊತ್ತಿಲ್ಲ. ನುಂಗಣ್ಣರಿಗೆ ಅನುಕೂಲವಾಗುವಂತಹ ವಾತಾವರಣ ನಿರ್ಮಾಣವಾಗಿದ್ದಂತೂ ಸತ್ಯ. ಇದನ್ನು ಕಠಿಣ ನಿಲುವುಗಳ ಮೂಲಕ ತೆರವುಗೊಳಿಸಿ ಕೆರೆಗಳ ಸಂರಕ್ಷಣೆ ಮಾಡಬೇಕು ಎಂದು ಆಗ್ರಹಿಸುತ್ತಿದ್ದಾರೆ ರೈತರು ಮತ್ತು ಪರಿಸರ ಪ್ರೇಮಿಗಳು.

ನದಿಗಳಿಲ್ಲದ ಜಿಲ್ಲೆಗೆ ಕೆರೆಗಳೇ ಜೀವಸೆಲೆ

ಯಾವುದೇ ನದಿಗಳು ಇಲ್ಲದೇ ಇರುವ ಧಾರವಾಡ ಜಿಲ್ಲೆಯಲ್ಲಿ 1200 ಕೆರೆಗಳಿದ್ದು, ಪ್ರತಿ ಕೆರೆಯಿಂದಲೂ ಒಂದೊಂದು ಕೋಡಿ ಬಿದ್ದು ಹರಿಯುವ ಚಿಕ್ಕಪುಟ್ಟ ಹಳ್ಳಗಳು ಇವೆ. ಅವುಗಳಲ್ಲಿ ಕೆಲವಷ್ಟು ಆಗಲೇ ಅತಿಕ್ರಮಣವಾಗಿದ್ದು, ಇನ್ನುಳಿದವುಗಳನ್ನಾದರೂ ಜಿಲ್ಲಾಡಳಿತ ಮತ್ತು ಜಿಪಂ ತನ್ನ ಸುಪರ್ದಿಗೆ ಪಡೆದು ರಕ್ಷಣೆ ಮಾಡಿಕೊಳ್ಳಬೇಕಾಗಿದೆ. 430ಕ್ಕೂ ಅಧಿಕ ಕೆರೆಗಳ ತೋಬು ದುರಸ್ತಿಯಾಗದೇ ಕೆರೆಗಳಲ್ಲಿ ಸರಿಯಾಗಿ ನೀರು ನಿಲ್ಲುತ್ತಿಲ್ಲ. ಇನ್ನು ಜಿಲ್ಲೆಯ ಶೇ.60 ರೈತರು ನೀರಾವರಿಗಾಗಿ ಕೊಳವೆಬಾವಿಗಳನ್ನು ಅವಲಂಬಿಸಿದ್ದಾರೆ. ಇದಕ್ಕೆ ಅಂತರ್ಜಲ ಹಿಡಿದಿಡುವುದೊಂದೇ ದಾರಿ. ಈ ಕೆಲಸವನ್ನು ಕೆರೆಗಳು ಮಾಡುತ್ತಿವೆ. ಇದೀಗ ಕೆರೆಗಳು ವರ್ಷದಿಂದ ವರ್ಷಕ್ಕೆ ಅತಿಕ್ರಮಣಗೊಳ್ಳುತ್ತ ಸಾಗಿದರೆ ಮುಂದೇನು ಗತಿ ಎಂಬ ಪ್ರಶ್ನೆ ಎದುರಾಗಲಿದೆ.

ಕೆರೆಗಳ ಅತಿಕ್ರಮಣ ತೆರವು ಆಗಾಗ ನಡೆಯುತ್ತಲೇ ಬಂದಿದೆ. ನಾವೆಂದೂ ಅತಿಕ್ರಮಣಕಾರರಿಗೆ ಸೊಪ್ಪು ಹಾಕುವುದಿಲ್ಲ. ಈಗಲೂ ಅಷ್ಟೇ, ಬೆಳೆಗಳಿದ್ದರೂ ಅವುಗಳನ್ನು ತೆರವುಗೊಳಿಸಿ ನಮ್ಮ ಜಿಲ್ಲೆಯ ಕೆರೆಗಳನ್ನು ನಾವು ರಕ್ಷಣೆ ಮಾಡಿಕೊಳ್ಳುತ್ತೇವೆ. –ಡಾ| ಸುರೇಶ ಇಟ್ನಾಳ, ಜಿಪಂ ಸಿಇಒ

ಕೆರೆಗಳ ಅತಿಕ್ರಮಣ ಅವ್ಯಾಹತವಾಗಿ ನಡೆದಿದ್ದು, ಅವುಗಳನ್ನು ಒಮ್ಮೆಯೂ ಚೆನ್ನಾಗಿ ಸಮೀಕ್ಷೆ ಮಾಡಿಸಿಲ್ಲ. ರಾಜಕೀಯ ಪಕ್ಷಗಳ ಸ್ಥಳೀಯ ಮುಖಂಡರೇ ಕೆರೆಯಂಗಳಗಳನ್ನು ನುಂಗಿ ಹಾಕಿದ್ದಾರೆ. ಕೆರೆಗಳ ನಕ್ಷೆ ಹಿಡಿದು ಪಹಣಿಯೊಂದಿಗೆ ಸರಿಯಾಗಿ ಅಳೆದರೆ ನಿಜಕ್ಕೂ ಕೆರೆ ಅತಿಕ್ರಮಣ ಗೊತ್ತಾಗುತ್ತದೆ. –ಜಿ.ಬಿ. ಟೊಂಗಳಿ, ದೇವಿಕೊಪ್ಪ ರೈತ ಮುಖಂಡ

Advertisement

Udayavani is now on Telegram. Click here to join our channel and stay updated with the latest news.

Next