Advertisement

Karnataka Election Result: ಗೆದ್ದವರು ಬೆಂಗಳೂರಿಗೆ, ಸೋತವರು ಗೋವಾಕ್ಕೆ

02:37 PM May 17, 2023 | Team Udayavani |

ಧಾರವಾಡ: ನಮ್ಮ ಸಾಹೇಬ್ರಗೆ ಎಷ್ಟು ಬಿದ್ದವು? ಎರಡನೇ ರೌಂಡ್ಸ್‌ನ್ಯಾಗ ನಾವ ಲೀಡ್‌, ನಮ್ಮ ಸಾಹೇಬ್ರ ಗೆದ್ದರೂ..ಜೈ ವಾಗಲಿ, ಅಯ್ಯೋ ಈ ಸಲಾ ನಮ್ಮ ಸೋಲು ಪಕ್ಕಾ, ನಡಿರಪಾ ಇನ್ನೇನು ಇಲ್ಲಿ ಕೆಲಸಾ ಗೋವಾಕ್ಕ ಹತ್ತೋಣ. ಹೌದು, ವಿಧಾನಸಭೆ ಚುನಾವಣೆ ರಾಜ್ಯದ ಇತರ ಜಿಲ್ಲೆಗಳಲ್ಲಿ ಕೈ-ಕಮಲ ಪಕ್ಷಗಳ ಕಾರ್ಯಕರ್ತರ ಮಧ್ಯೆ ರಾಗದ್ವೇಷವನ್ನು ಹುಟ್ಟು ಹಾಕಿದ್ದು ಎಲ್ಲರಿಗೂ ಗೊತ್ತಿರುವ ಸಂಗತಿ. ಕೆಲವು ಕಡೆಗಳಲ್ಲಂತೂ ಕೊಲೆ, ಚಾಕು ಇರಿತ, ಪಟಾಕಿ ಸಿಡಿಸುವುದು, ಘೋಷಣೆ ಕೂಗಿ ಇರಿಸು
ಮುರುಸು ಮಾಡಿದ ಘಟನೆಗಳು ನಡೆದಿವೆ. ಆದರೆ ಜಿಲ್ಲೆಯಲ್ಲಿ ಇಂತಹ ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲವಾದರೂ, ಸೋಲುಂಡ ಪಕ್ಷದ ಕಾರ್ಯಕರ್ತರು ಮಾತ್ರ ಗೋವಾ ಯಾತ್ರೆ ಕೈಗೊಂಡಿದ್ದಾರೆ.

Advertisement

ಸತತ ಎರಡು ಮೂರು ತಿಂಗಳ ಕಾಲ ಹಗಲು ರಾತ್ರಿ ಎನ್ನದೇ ತಮ್ಮ ತಮ್ಮ ಪಕ್ಷಗಳ ಮುಖಂಡರೊಂದಿಗೆ ಆಯಾ ಕ್ಷೇತ್ರಗಳ ಅಭ್ಯರ್ಥಿಗಳ ಪರವಾಗಿ ಕೆಲಸ ಮಾಡಿದ್ದ ಕಾರ್ಯಕರ್ತರು ಇದೀಗ ಗೋವಾದ ರೆಸಾರ್ಟ್ ಗಳು, ಕಡಲ ತೀರದ ಸುಂದರ ಬೀಚ್‌ಗಳಲ್ಲಿ ಜಾಲಿ‌ ಮೂಡ್‌ನ‌ಲ್ಲಿ ಸುತ್ತಾಡುತ್ತಿದ್ದಾರೆ. ಕೆಲ ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೂ ತಮ್ಮ ನಾಯಕರ ಸೋಲು ತೀವ್ರ ನಿರಾಸೆ ತಂದಿದ್ದರಿಂದ ಗ್ರಾಮಗಳನ್ನೇ ತೊರೆದು ಒಂದಿಷ್ಟು ರಿಲ್ಯಾಕ್ಸ್‌ ಪಡೆಯಲು ಗೋವಾದಲ್ಲಿದ್ದಾರೆ.

ಹೊಲವನ್ನೇ ಬೆಟ್ಟಿಂಗ್‌ ಕಟ್ಟಿದ್ದ ಭೂಪರು: ಮನಸ್ಸಿಗೆ ಒಂದಿಷ್ಟು ನೆಮ್ಮದಿ ಪಡೆದುಕೊಳ್ಳಲು ಸ್ನೇಹಿತರು ಮತ್ತು ಪಕ್ಷದ ಕಾರ್ಯಕರ್ತರೊಂದಿಗೆ ಕೆಲವರು ಗೋವಾದತ್ತ ಹೋಗಿದ್ದಾರೆ. ಇನ್ನು ಕೆಲವಷ್ಟು ಜನರು ದಾಂಡೇಲಿ ರೆಸಾರ್ಟ್‌ಗಳಲ್ಲಿಯೇ ಬೀಡುಬಿಟ್ಟಿದ್ದಾರೆ.

ಚುನಾವಣೆ ಫಲಿತಾಂಶ ಬಂದು ನಾಲ್ಕು ದಿನ ಕಳೆದರೂ ಮರಳಿ ಗ್ರಾಮಗಳತ್ತ ಮುಖ ಮಾಡಿಲ್ಲ. ಇನ್ನು ಜಿಲ್ಲೆಯಲ್ಲಿ ಚುನಾವಣೆ ಫಲಿತಾಂಶಕ್ಕಾಗಿ ಬೆಟ್ಟಿಂಗ್‌ ದಂಧೆ ಕೂಡ ನಡೆದು ಹೋಗಿದೆ. ಈ ಪೈಕಿ ಧಾರವಾಡ ಗ್ರಾಮೀಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಉಪ್ಪಿನಬೆಟಗೇರಿ ಪಕ್ಕದ ಹಳ್ಳಿಯೊಂದರಲ್ಲಿನ ರೈತರಿಬ್ಬರು ಈ ಬಾರಿ ಕಾಂಗ್ರೆಸ್‌ ಅಭ್ಯರ್ಥಿ ವಿನಯ್‌ ಕುಲಕರ್ಣಿ ಮತ್ತು ಬಿಜೆಪಿ ಅಭ್ಯರ್ಥಿ ಅಮೃತ ದೇಸಾಯಿ ಅವರಲ್ಲಿ ಯಾರು ಗೆಲ್ಲುತ್ತಾರೆ ನೋಡೋಣ ಎಂದು ಪರಸ್ಪರ ಸವಾಲು ಹಾಕಿಕೊಂಡು ಎರಡು ಎಕರೆಯಷ್ಟು ಜಮೀನನ್ನು ಬೆಟ್ಟಿಂಗ್‌ ಕಟ್ಟಿದ್ದ ಪ್ರಕರಣ ಕೂಡ ನಡೆದಿದೆ.

ಇನ್ನು ಗ್ರಾಮೀಣ ಕ್ಷೇತ್ರದ ಹಳ್ಳಿ ಹಳ್ಳಿಗಳಲ್ಲಿ ಸಾವಿರ ಸಾವಿರ ರೂ. ಹಣವನ್ನು ಯುವಕರ ಪಡೆ ಬೆಟ್ಟಿಂಗ್‌ ಕಟ್ಟಿದ್ದು ಚುನಾವಣೆ ಮರುದಿನ ಹೊರಬಿದ್ದಿದೆ. ಈ ಪೈಕಿ ಪೊಲೀಸರಿಗೆ ಕೆಲವು ಪ್ರಕರಣಗಳು ಗೊತ್ತಾಗಿದ್ದರೂ, ಅವುಗಳನ್ನು ಸ್ಥಳೀಯವಾಗಿ ಪರಿಹರಿಸಿಕೊಳ್ಳುವಂತೆ ಪಕ್ಷದ ವರಿಷ್ಠರಿಗೆ ಸೂಚಿಸಿ ಕೈ ತೊಳೆದುಕೊಂಡಿದ್ದಾರೆ.

Advertisement

ಜಾಲತಾಣಗಳಲ್ಲಿ ವೈರಲ್‌ ತಂತ್ರ: ಜಿಲ್ಲೆಯಲ್ಲಿ ವಿಧಾನಸಭೆ ಚುನಾವಣೆ ಫಲಿತಾಂಶ ಬಂದಾಗಿದ್ದು, ಗೆಲುವು-ಸೋಲು ಘೋಷಣೆಯಾಗಿ ಹೋಗಿದೆ. ಆದರೆ ಕೈ ಮತ್ತು ಕಮಲ ಪಕ್ಷದ ಕಾರ್ಯಕರ್ತರು ಮಾತ್ರ ಚುನಾವಣೆಯಲ್ಲಿ ತಾವು ಮಾಡಿದ ಸಾಧನೆಯನ್ನು ವಾರ್ಡ್‌ವಾರು ಫಲಿತಗಳನ್ನು ಜಾಲತಾಣದಲ್ಲಿ ಹರಿಬಿಡುತ್ತಿದ್ದಾರೆ. ಅಷ್ಟೇಯಲ್ಲ, ಆಯಾ ವಾರ್ಡ್‌ನಲ್ಲಿ ಪಡೆದ ಮತಗಳು, ಮುನ್ನಡೆ ಮತ್ತು ಹಿನ್ನಡೆ ಅಂಕಿ-ಅಂಶಗಳನ್ನು ಸಂಗ್ರಹಿಸಿ ಅವುಗಳನ್ನು ಆಯಾ ಗ್ರಾಮಗಳ ವಾಟ್ಸ್‌ ಆ್ಯಪ್‌ ಗುಂಪಿನಲ್ಲಿ ತೇಲಿಬಿಟ್ಟು ತಮ್ಮ ಸಾಧನೆಗೆ ತಾವೇ ಬೆನ್ನು ತಟ್ಟಿಕೊಳ್ಳುತ್ತಿದ್ದಾರೆ. ಹೆಚ್ಚು ಮತ ಪಡೆದವರು ಸೋತವರನ್ನು ಗೇಲಿ ಮಾಡುತ್ತಿದ್ದಾರೆ.

ನಿಲ್ಲದ ವೈಷಮ್ಯ ಭಾವ: ಕೆಲವು ಕ್ಷೇತ್ರ ವ್ಯಾಪ್ತಿಯಲ್ಲಿ ಸೋತ ಅಭ್ಯರ್ಥಿಗಳ ಬೆಂಬಲಿಗರು ತೀವ್ರ ಮಾನಸಿಕ ಆಘಾತಕ್ಕೆ ಒಳಗಾಗಿದ್ದು ಸತ್ಯ. ಗೆದ್ದವರು ತಮ್ಮ ಗ್ರಾಮಗಳಲ್ಲಿ ಡಿಜೆ, ಲೈಟಿನ ರಥ ತರಿಸಿ ಅಭ್ಯರ್ಥಿಗಳನ್ನು ಕೂಡಿಸಿ ಮೆರವಣಿಗೆ ಮಾಡುತ್ತಿದ್ದಾರೆ. ಇದು ಕೆಲವರ ಆಕ್ರೋಶಕ್ಕೆ ಕಾರಣವಾದರೆ, ಹಳ್ಳಿಗಳಲ್ಲಿ ಯುವಕರ ಮಧ್ಯೆ ವೈಷಮ್ಯ ಭಾವ ಹೆಚ್ಚುವಂತೆ ಮಾಡಿದೆ.

ಕಾರ್ಯಕರ್ತರಲ್ಲಿ ಜಿಪಂ ಲೆಕ್ಕಾಚಾರ
ತಮ್ಮ ಗ್ರಾಮಗಳು ಮತ್ತು ವಾರ್ಡ್‌ಗಳಲ್ಲಿ ತಮ್ಮ ಪಕ್ಷಕ್ಕೆ ಎಷ್ಟು ಮತಗಳನ್ನು ತಾವು ತಂದುಕೊಟ್ಟಿದ್ದೇವೆ ಎನ್ನುವ ವಿವರಣೆಯನ್ನು ಕೂಡ ಎಲ್ಲರೂ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ ಮಾಡುತ್ತಿದ್ದಾರೆ. ಮುಂಬರುವ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆಯಲ್ಲಿ ಕೂಡ ಗೆಲುವು ನಮ್ಮ ಪಕ್ಷದ್ದೇ ಆಗಲಿದೆ ಎನ್ನುವ ಬರಹವುಳ್ಳ ಪೋಸ್ಟ್‌ಗಳನ್ನು ಸ್ಟೇಟಸ್‌ಗೆ ಹಾಕಿಕೊಳ್ಳುತ್ತಿದ್ದಾರೆ. ಅದರಲ್ಲೂ ಜಿಪಂ ಕ್ಷೇತ್ರ ವ್ಯಾಪ್ತಿಯಲ್ಲಿ ತಮ್ಮ ಪಕ್ಷ ಪಡೆದುಕೊಂಡ ಮತವನ್ನು ಆಧರಿಸಿಕೊಂಡೆ ಮುಂದಿನ ಜಿಪಂ ಚುನಾವಣೆಗೆ ಸಜ್ಜಾಗಿ ಎಂದು ಸವಾಲು ಹಾಕುತ್ತಿದ್ದಾರೆ.

ಚುನಾವಣೆಯಲ್ಲಿ ಸೋಲು-ಗೆಲುವು ಸಾಮಾನ್ಯ. ಆದರೆ ಯುವಕರು ತಮ್ಮ ಪಕ್ಷಗಳ ಸೋಲು ಗೆಲುವನ್ನು ಸಮಾನವಾಗಿ
ಸ್ವೀಕರಿಸಬೇಕು. ಪಕ್ಷಗಳ ವರಿಷ್ಠರು, ಮುಖ್ಯಸ್ಥರು ಪರಸ್ಪರ ಚೆನ್ನಾಗಿಯೇ ಇರುತ್ತಾರೆ. ಹೀಗಾಗಿ ಯುವಕರು ವೈಷಮ್ಯ ಬೆಳೆಸಿಕೊಳ್ಳುವ ಅಗತ್ಯವಿಲ್ಲ.
*ಪಿ.ಎಚ್‌. ನೀರಲಕೇರಿ,
ಕಾಂಗ್ರೆಸ್‌ ಮುಖಂಡ

ಚುನಾವಣೆ ಸಮಯದಲ್ಲಿ ವಿಷಯವಾರು ಭಿನ್ನಾಭಿಪ್ರಾಯಗಳು ಎಲ್ಲೆಡೆ ಇದ್ದೇ ಇರುತ್ತವೆ. ಆದರೆ ಚುನಾವಣೆ  ಮೊದಲು ಮತ್ತು ನಂತರ ಎಲ್ಲರೂ ಪರಸ್ಪರ ಪ್ರೀತಿಯಿಂದಲೇ ನಡೆದುಕೊಳ್ಳುವ ಅಗತ್ಯವಿದೆ. ಎಂತದೇ ಸಂದರ್ಭದಲ್ಲೂ ರಾಜಕೀಯವನ್ನು
ವ್ಯಕ್ತಿಗತ ನೆಲೆಯಲ್ಲಿ ತರಲೇಬಾರದು.
*ನಾಗೇಂದ್ರ ಮಟ್ಟಿ,
ಹಿರಿಯ ವಕೀಲರು, ಧಾರವಾಡ

ಬಸವರಾಜ್‌ ಹೊಂಗಲ್‌

Advertisement

Udayavani is now on Telegram. Click here to join our channel and stay updated with the latest news.

Next