Advertisement

Dharwad; ಶಂಕರ ಹಲಗತ್ತಿ ,ರಜನಿ ಸೇರಿ ಜಿಲ್ಲೆಯ ನಾಲ್ವರಿಗೆ ನಾಟಕ ಅಕಾಡೆಮಿ ಪ್ರಶಸ್ತಿ

07:18 PM Aug 08, 2024 | Team Udayavani |

ಧಾರವಾಡ: ರಂಗಭೂಮಿಗೆ ವಿಶೇಷ ಕೊಡುಗೆ ನೀಡಿದ ಧಾರವಾಡ ಜಿಲ್ಲೆಯ ನಾಲ್ಕು ಜನ ರಂಗಕರ್ಮಿಗಳಿಗೆ ಕಳೆದ ಮೂರು ವರ್ಷಗಳ ಅವಧಿಯಲ್ಲಿನ ವಿವಿಧ ವರ್ಷಗಳ ನಾಟಕ ಅಕಾಡೆಮಿ ಪ್ರಶಸ್ತಿ ಲಭಿಸಿದೆ.

Advertisement

2023-24ನೇ ಸಾಲಿನಲ್ಲಿ ಹಿರಿಯ ರಂಗಕರ್ಮಿ ರಂಗ ಸಂಘಟಕ ಶಂಕರ ಹಲಗತ್ತಿ ಅವರಿಗೆ, 2022-23ನೇ ಸಾಲಿನಲ್ಲಿ ಪಟ್ಟಿಯಲ್ಲಿ ರಜನಿ ಗರುಡ ಅವರಿಗೆ ಹಾಗೂ 2024-25ನೇ ಸಾಲಿಗಾಗಿ ಹುಬ್ಬಳ್ಳಿಯ ಚೆನ್ನಬಸಪ್ಪ ಕಾಳೆ ಅವರಿಗೆ ಕಲ್ಚರ್‍ಡ್ ಕಾಮಿಡಿಯನ್ ಕೆ.ಹಿರಣ್ಣಯ್ಯ ದತ್ತಿ ಪುರಸ್ಕಾರ ಹಾಗೂ ನಂದರಾಣಿ ಕಲ್ಕತ್ತಾ ಅವರಿಗೆ ಪದ್ಮಶ್ರೀ ಚಿಂದೋಡಿ ವೀರಪ್ಪ ದತ್ತಿ ಪುರಸ್ಕಾರ ಲಭಿಸಿದೆ.

ಕಳೆದ ಮೂರು ವರ್ಷಗಳಿಂದ ನಾಟಕ ಅಕಾಡೆಮಿಯ ಪ್ರಶಸ್ತಿ ಪ್ರಕಟಗೊಂಡಿರಲಿಲ್ಲ. ಇದೀಗ ನಾಟಕ ಅಕಾಡೆಮಿ ಅಧ್ಯಕ್ಷ ನಾಗರಾಜ ಮೂರ್ತಿ ಅವರು ಪ್ರಶಸ್ತಿ ಪ್ರಕಟಿಸಿದ್ದು, ಧಾರವಾಡ ಜಿಲ್ಲೆಯ ರಂಗಭೂಮಿ ಸೇವಕರಿಗೆ ಸರ್ಕಾರದ ಗೌರವ ಲಭಿಸಿದೆ.

ಹಲಗತ್ತಿ ಬಗ್ಗೆ ಒಂದಿಷ್ಟು: ಬೆಳಗಾವಿಯ ರಾಮದುರ್ಗ ತಾಲೂಕಿನ ಕಲಹಾಳ ಗ್ರಾಮವು ಶಂಕರ ಚನ್ನಪ್ಪ ಹಲಗತ್ತಿ ಅವರಿಗೆ ಜನ್ಮಭೂಮಿಯಾದರೆ ಕರ್ಮಭೂಮಿ ಧಾರವಾಡವೇ. ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿಯಾಗಿರುವ ಅವರದ್ದು ಎಂ.ಎ., ಎಲ್‌ಎಲ್‌ಬಿ ವಿದ್ಯಾರ್ಹತೆ. 20 ವರ್ಷ ಕಾಲೇಜು ಶಿಕ್ಷಣ ಇಲಾಖೆಯ ಸರಕಾರಿ ಸೇವೆಗೆ ಸ್ವಯಂ ನಿವೃತ್ತಿ ಪಡೆದು ವಕೀಲ ವೃತ್ತಿಯೊಂದಿಗೆ ಕಳೆದ 35 ವರ್ಷಗಳಿಂದ ಮಕ್ಕಳ ಕ್ಷೇತ್ರದಲ್ಲಿ ವಿವಿಧ ಸ್ಥರಗಳಲ್ಲಿ ಕಾರ್ಯ ಮಾಡಿದ್ದಾರೆ.

ನಿಧಿಶೋಧ, ಸೋಜಿಗದ ಹಸು ಕಾದಂಬರಿ, ಮಕ್ಕಳಕಥಾ ಗುಚ್ಛ, ವನದರಾಣಿ ನಾಟಕ ರಚಿಸಿರುವ ಅವರು, ಸಾಕಷ್ಟು ಸಂಪಾದನೆ, ಅಂಕಣ ಬರಹ, ಹರಟೆ ಸಂಕಲನ ಸೇರಿದಂತೆ ಸಾಹಿತ್ಯ ಕ್ಷೇತ್ರಕ್ಕೆ ಕೊಡುಗೆ ನೀಡಿದ್ದಾರೆ. ಎರಡು ದಶಕಗಳಿಂದಲೂ ಮಕ್ಕಳಿಗಾಗಿ ಗುಬ್ಬಚ್ಚಿ ಗೂಡು ಮಾಸಿಕದ ಪ್ರಧಾನ ಸಂಪಾದಕರಾಗಿ ಸೇವೆ ಸಲ್ಲಿಸಲಿದ್ದು, ಚಿಲಿಪಿಲಿ ಪ್ರಕಾಶನದ ಪ್ರಕಾಶಕರಾಗಿ 200ಕ್ಕೂ ಹೆಚ್ಚು ಮಕ್ಕಳ ಸಾಹಿತ್ಯದ ವಿವಿಧ ಮಕ್ಕಳ ಸಾಹಿತಿಗಳ ಕೃತಿಗಳನ್ನು ಪ್ರಕಟಿಸಿದ್ದಾರೆ. ಗುಬ್ಬಚ್ಚಿಗೂಡು ಪತ್ರಿಕೆ ಮೂಲಕ ಆರು ಮಕ್ಕಳ ಸಾಹಿತಿಗಳ ಸಮ್ಮೇಳನ ಸಂಘಟಿಸಿದಲ್ಲದೇ ಕರ್ನಾಟಕ ಬಾಲವಿಕಾಸ ಅಕಾಡೆಮಿ ಸ್ಥಾಪನೆಗೆ ಹಕ್ಕೊತ್ತಾಯ ಮಂಡಿಸಿದ್ದಲ್ಲದೇ ಅದರ ಮೊದಲ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. 50ಕ್ಕೂ ಹೆಚ್ಚು ಮಕ್ಕಳ ನಾಟಕ ನಿರ್ದೇಶನ ಮಾಡಿದ್ದು, ಸಾಕಷ್ಟು ಮಕ್ಕಳ ನಾಟಕೋತ್ಸವ ಮಾಡಿದ್ದಾರೆ. ಶಿಕ್ಷಣ ಸಿರಿ ರಾಜ್ಯ ಪ್ರಶಸ್ತಿ ಪುರಸ್ಕಾರ ಸೇರಿದಂತೆ ಸಾಕಷ್ಟು ಪ್ರಶಸ್ತಿಗಳು ಅರಸಿ ಬಂದಿವೆ.

Advertisement

ರಜನಿ ಬಗ್ಗೆ ಒಂದಿಷ್ಟು: ಉತ್ತರ ಕನ್ನಡ ಜಿಲ್ಲೆಯ ಶಿರಸಿ ಬಳಿಯ ಪುಟ್ಟ ಹಳ್ಳಿಯವರು. ನೀನಾಸಮ್ ರಂಗಶಿಕ್ಷಣ ಕೇಂದ್ರದಲ್ಲಿ ತರಬೇತಿ ಪಡೆದು ನಂತರ ತಿರುಗಾಟದಲ್ಲಿ ನಟಿಯಾಗಿದ್ದರು.  ಮೊದಲು ಶಿರಸಿ, ಗದಗದಲ್ಲಿ ಮಕ್ಕಳಿಗೆ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ರಂಗತರಬೇತಿ ಶಿಬಿರ ಮಾಡಿದ್ದಾರೆ. ಕವಿ-ಕಾವ್ಯ ಟ್ರಸ್ಟ್ ಹೆಗ್ಗೋಡು ಮತ್ತು ಯುನಿಸೆಫ್ ನಡೆಸಿದ ಅಂಗನವಾಡಿ ಶಿಕ್ಷಕರಿಗೆ ಸಾಂಸ್ಕೃತಿಕ ತರಬೇತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿದ್ದರು. ನಂತರ ಸಂಗಾತಿ ಡಾ. ಪ್ರಕಾಶ ಗರುಡರೊಡನೆ ಧಾರವಾಡದಲ್ಲಿ ನೆಲೆಸಿ, ಬಾಲಬಳಗ ಸೃಜನಶೀಲ ಶಿಕ್ಷಣ ಸಂಸ್ಥೆಯನ್ನು ಹುಟ್ಟುಹಾಕಿ, ಪರ್ಯಾಯ ಶಿಕ್ಷಣ ಕ್ರಮದ ಶಾಲೆಯನ್ನು ಪ್ರಾರಂಭಿಸಿದರು.

ನಿರಂತರ ರಂಗಚಟುವಟಿಕೆಗಳಲ್ಲಿ ತೊಡಗಿಕೊಂಡಿರಲು ‘ಗೊಂಬೆಮನೆ’ಟ್ರಸ್ಟನ್ನು 1997ರಲ್ಲಿ ಪ್ರಾರಂಭಿಸಿದರು. ಆ ಮೂಲಕ ಮಕ್ಕಳ ರಂಗತರಬೇತಿ, ಶಿಕ್ಷಕರಿಗೆ, ಹವ್ಯಾಸಿ ಕಲಾವಿದರಿಗೆ ರಂಗತರಬೇತಿ, ನಾಟಕ, ಶಿಕ್ಷಣ ಕುರಿತಾದ ಕಾರ್ಯಾಗಾರ – ತರಬೇತಿ ಮಾಡಿದ್ದಾರೆ. ಸಾಂಪ್ರದಾಯಿಕ ತೊಗಲುಗೊಂಬೆಯಾಟವನ್ನು ಮಕ್ಕಳಿಗಾಗಿ ಹೊಸದಾಗಿ ವಿನ್ಯಾಸ ಮಾಡಿ, ಅದರ ಛಾಯಾಚಲನೆ ರೆಪರ್ಟರಿಯು ದೇಶದಾದ್ಯಂತ ಸಂಚರಿಸಿ, 6000 ಕ್ಕೂ ಅಧಿಕ ಪ್ರದರ್ಶನಗಳನ್ನು ನೀಡಿದ್ದಾರೆ. ಶಿಕ್ಷಣಕ್ಕಾಗಿ ರಂಗಭೂಮಿ ಕಾರ್ಯಕ್ರಮದ ತರಬೇತಿಯನ್ನು ಶಿಕ್ಷಕರಿಗೆ ಮತ್ತು ಪ್ರಶಿಕ್ಷಕರಿಗೆ ಕರ್ನಾಟಕದಾದ್ಯಂತ ಮಾಡಿದ್ದಾರೆ. ಉತ್ತರಕರ್ನಾಟಕದ ಬಯಲಾಟ ಪರಂಪರೆಯ ಸದ್ಯದ ಸ್ಥಿತಿಗತಿಯ ಕುರಿತು ಅಧ್ಯಯನ ಮತ್ತು ದಾಖಲೆಯನ್ನು ಮಾಡಿದ್ದಾರೆ. ಕನ್ನಡ ರಂಗಭೂಮಿಯ ಮುಖ್ಯವಾಹಿನಿಯಲ್ಲಿ ಕಳೆದ 35 ವರ್ಷಗಳಿಂದ ನಟನೆ, ನಿರ್ದೇಶನ, ವಸವಿನ್ಯಾಸ, ಬರವಣಿಗೆ ಸಂಘಟನೆಯ ಕೆಲಸಗಳಲ್ಲಿ  ತೊಡಗಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next