Advertisement

ಧಾರವಾಡದಲ್ಲಿ ಮೊದಲ ಒಮಿಕ್ರಾನ್ ಸೋಂಕು ಪತ್ತೆ: ಯಾರೂ ಭಯಪಡಬೇಕಿಲ್ಲ ಎಂದ ಡಿಸಿ

12:47 PM Dec 20, 2021 | Team Udayavani |

ಧಾರವಾಡ: ಜಿಲ್ಲೆಯಲ್ಲಿ ಮೊದಲ ಒಮಿಕ್ರಾನ್ ಸೋಂಕಿತ ವ್ಯಕ್ತಿ ಪತ್ತೆಯಾಗಿದ್ದು, ಯಾರೂ ಭಯಪಡಬೇಕಿಲ್ಲ. ಆದರೆ, ಎಚ್ಚರಿಕೆಯಿಂದ ಇರಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಹೇಳಿದರು.

Advertisement

ಧಾರವಾಡದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು, 54 ವರ್ಷದ ಮಹಿಳೆಯಲ್ಲಿ ಒಮಿಕ್ರಾನ್ ಸೋಂಕು ಇರುವುದು ಗೊತ್ತಾಗಿದೆ. ಆದರೆ, ಮಹಿಳೆ ಗುಣಮುಖರಾಗಿದ್ದಾರೆ. ಅವರಲ್ಲಿ ಯಾವುದೇ ತೀವೃತರದ ಲಕ್ಷಣಗಳು ಕಂಡು ಬಂದಿಲ್ಲ. ಡಿ.4 ರಂದು ಅವರನ್ನು ತಪಾಸಣೆ ನಡೆಸಲಾಗಿತ್ತು. ಮಾರನೇ ದಿನ ಅವರಿಗೆ ಕೊರೊನಾ ಇದೆ ಎಂದು ಗೊತ್ತಾಯಿತು. ನಂತರ ಅವರನ್ನು ಒಮಿಕ್ರಾನ್ ತಪಾಸಣೆಗೊಳಪಡಿಸಿದಾಗ ಅವರಲ್ಲಿ ಒಮಿಕ್ರಾನ್ ಸೋಂಕು ಇರುವುದು ಗೊತ್ತಾಯಿತು. ಐದು ದಿನಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಅವರು ಇದೀಗ ಗುಣಮುಖರಾಗಿದ್ದಾರೆ ಎಂದರು.

ಖಾಸಗಿ ಸಂಸ್ಥೆಯಲ್ಲಿ ಈ ಮಹಿಳೆ ಕೆಲಸ ಮಾಡುತ್ತಿದ್ದಾರೆ. ಜ್ವರದಿಂದ ಅವರು ಬಳಲುತ್ತಿದ್ದರು. ಇದೀಗ ಅವರನ್ನು ಎರಡು ಬಾರಿ ಮತ್ತೊಮ್ಮೆ ತಪಾಸಣೆಗೆ ಒಳಪಡಿಸಲಾಗಿದ್ದು, ಎರಡೂ ವರದಿಗಳು ನೆಗೆಟಿವ್ ಎಂದು ಬಂದಿವೆ. ಸದ್ಯ ಅವರಲ್ಲಿ ಸೋಂಕಿನ ಲಕ್ಷಣಗಳಿಲ್ಲ. ಆದರೂ ಇನ್ನೂ ಒಂದು ವಾರ ಹೋಮ್ ಐಸೋಲೇಷನ್‌ನಲ್ಲಿರಲು ಸೂಚಿಸಲಾಗಿದೆ ಎಂದರು.

ಇವರ ಪ್ರಾಥಮಿಕ ಸಂಪರ್ಕಕ್ಕೆ ಬಂದ 137 ಜನರನ್ನೂ ತಪಾಸಣೆ ನಡೆಸಲಾಗಿದ್ದು, ಯಾರಲ್ಲೂ ಸೋಂಕು ಪತ್ತೆಯಾಗಿಲ್ಲ. ಇವರ ಕೆಲಸ ಮಾಡುತ್ತಿದ್ದ ಸಂಸ್ಥೆಯಲ್ಲಿನ ಎಲ್ಲಾ ಸಿಬ್ಬಂದಿಯನ್ನು ತಪಾಸಣೆ ಮಾಡಲಾಗಿದ್ದು, ಯಾರಲ್ಲೂ ಸೋಂಕು ಪತ್ತೆಯಾಗಿಲ್ಲ ಎಂದರು.

ಎಸ್‌ಡಿಎಂ ಘಟನೆ ಆದ ಮೇಲೆ ಇದೀಗ ಜಿಲ್ಲೆಯಲ್ಲಿ ಒಂದಂಕಿಯ ಕೊರೊನಾ ಸೋಂಕಿತರು ಪತ್ತೆಯಾಗುತ್ತಿದ್ದಾರೆ. ಅವರ ವರದಿಯನ್ನೂ ಒಮಿಕ್ರಾನ್‌ ತಪಾಸಣೆಗೆ ಕಳುಹಿಸಲಾಗುತ್ತಿದೆ. ಸದ್ಯ ಒಮಿಕ್ರಾನ್ ಸೋಂಕಿಗೆ ಒಳಗಾಗಿರುವ ಈ ಮಹಿಳೆ ಸಂಪೂರ್ಣ ಗುಣಮುಖರಾಗಿದ್ದಾರೆ. ಡಿ.6 ರಂದು ಇವರ ಸ್ಯಾಂಪಲ್ ಕಲೆಕ್ಟ್ ಮಾಡಿ ಓಮಿಕ್ರಾನ್ ತಪಾಸಣೆಗೆ ಕಳುಹಿಸಲಾಗಿತ್ತು. ಅದರ ವರದಿ ನಿನ್ನೆ ಬಂದಿದೆ. ಆದರೆ, ಅವರು ಈಗಾಗಲೇ ಗುಣಮುಖರಾಗಿದ್ದಾರೆ. ಇವರು ಕೋವಿಶೀಲ್ಡ್ ಎರಡೂ ಡೋಸ್‌ಗಳನ್ನು ಪಡೆದುಕೊಂಡಿದ್ದರು. ಇವರ ವೈಯಕ್ತಿಕ ಮಾಹಿತಿ ಬಹಿರಂಗಪಡಿಸಲು ಬರುವುದಿಲ್ಲ ಎಂದರು.

Advertisement

ಇವರಿಗೆ ಟ್ರಾವೆಲ್ ಹಿಸ್ಟರಿ ಏನೂ ಇಲ್ಲ. ಇವರು ಕೆಲಸ ಮಾಡುತ್ತಿದ್ದ ಕಚೇರಿಗೆ ರಜೆ ಘೋಷಣೆ ಮಾಡಲಾಗಿದೆ. ಇವರ ಸಂಪರ್ಕಕ್ಕೆ ಬಂದ ಎಲ್ಲರನ್ನೂ ತಪಾಸಣೆ ಮಾಡಲಾಗಿದ್ದು, ಯಾರಲ್ಲೂ ಸೋಂಕು ಪತ್ತೆಯಾಗಿಲ್ಲ ಎಂದರು.

ಹೊಸ ವರ್ಷಾಚರಣೆ, ಕ್ರಿಸ್‌ಮಸ್ ಹಬ್ಬಕ್ಕೆ ಸರ್ಕಾರದಿಂದ ಹೊಸ ಮಾರ್ಗಸೂಚಿಗಳು ಬರಲಿವೆ. ಅವು ಬಂದ ನಂತರ ಕಠಿಣವಾಗಿ ಅವುಗಳನ್ನು ಪಾಲಿಸಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next