Advertisement

ನೂತನ ಕಟ್ಟಡದೊಂದಿಗೆ ಧರ್ಮಸ್ಥಳ ಪೊಲೀಸ್‌ ಠಾಣೆ ಮೇಲ್ದರ್ಜೆಗೆ

08:06 PM Jun 24, 2021 | Team Udayavani |

ಬೆಳ್ತಂಗಡಿ: ಧರ್ಮಸ್ಥಳ ಪೊಲೀಸ್‌ ಠಾಣೆಯ ನೂತನ ಕಚೇರಿ ನಿರ್ಮಾಣಕ್ಕೆ ಸರಕಾರ 2.18 ಕೋಟಿ ರೂ. ಅನುದಾನವನ್ನು ಬಿಡುಗಡೆಗೊಳಿಸಿದೆ. ಪೊಲೀಸ್‌ ಹೌಸಿಂಗ್‌ ಕಾರ್ಪೋರೇಶನ್‌ ವಿಭಾಗದಿಂದ ಧರ್ಮಸ್ಥಳದ ಸರ್ವೇ ನಂ.159/1ಎ1 ರಲ್ಲಿ 85 ಸೆಂಟ್ಸ್‌ನಲ್ಲಿ ನೂತನ ಪೊಲೀಸ್‌ ಠಾಣೆ ನಿರ್ಮಾಣಕ್ಕೆ ಸಿದ್ಧತೆ ನಡೆಸಲಾಗಿದೆ.

Advertisement

ಶ್ರೀ ಕ್ಷೇತ್ರ ಧರ್ಮಸ್ಥಳ ಸದಾ ಭಕ್ತರಿಂದ ಗಿಜಿಗುಡುವ ಯಾತ್ರಾಸ್ಥಳ. ವರ್ಷಂಪ್ರತಿ ಭಕ್ತರನ್ನು ಆಕರ್ಷಿಸುತ್ತದೆ. ಹೀಗಾಗಿ ಭವಿಷ್ಯದಲ್ಲಿ ಧರ್ಮಸ್ಥಳದಲ್ಲಿ ಪೊಲೀಸ್‌ ವೃತ್ತ ಠಾಣೆ ನಿರ್ಮಿಸುವ ಸನ್ನಿವೇಶ ಎದುರಾದಲ್ಲಿ ಪೂರಕ ವಾತಾವರಣ ಕಲ್ಪಿಸುವಲ್ಲಿ ಮುಂದಾಲೋಚನೆಯಡಿ ಕಟ್ಟಡ ಸಿದ್ಧಗೊಳ್ಳಲಿದೆ.

ಸುಸಜ್ಜಿತ ನೂತನ ಠಾಣೆ:

81 ಗ್ರಾಮವನ್ನು ಹೊಂದಿರುವ ಬೆಳ್ತಂಗಡಿ ತಾಲೂಕಿನಲ್ಲಿ ಬೆಳ್ತಂಗಡಿ ವೃತ್ತಕ್ಕೆ ಸಂಬಂಧಿಸಿದಂತೆ ವೇಣೂರು, ಪೂಂಜಾಲಕಟ್ಟೆ, ಧರ್ಮಸ್ಥಳ ಠಾಣೆಗಳಿವೆ. ಧರ್ಮಸ್ಥಳದಲ್ಲಿ ಪ್ರಸಕ್ತ ತಾ.ಪಂ. ಕಟ್ಟಡದಲ್ಲಿ ಠಾಣೆ ಇದೆ. ಹೀಗಾಗಿ ಹೌಸಿಂಗ್‌ ಕಾರ್ಪೋರೇಶನ್‌ ವಿಭಾಗದಿಂದ ಕಟ್ಟಡ ನಿರ್ಮಾಣಗೊಳ್ಳಲಿದೆ. 2 ಮಹಡಿ ಹೊಂದಿರಲಿದ್ದು, 4,035 ಚದರ ಅಡಿ ವಿಸ್ತೀರ್ಣ ಇರಲಿದೆ. ಕೆಳ ಅಂತಸ್ತು 2905.2 ಹಾಗೂ ಮೇಲಿನ ಅಂತಸ್ತು 1129.8 ಚದರ ಅಡಿ ವಿಸ್ತೀರ್ಣದ 3ಡಿ ನೀಲನಕಾಶೆ ಹಂತದಲ್ಲಿದೆ.

ಹೆಚ್ಚುವರಿ ಬೇಡಿಕೆ:

Advertisement

ಹೆಚ್ಚುವರಿ ಸಿಬಂದಿ ನೇಮಕವಾದಲ್ಲಿ ಕರ್ತವ್ಯ ನಿರ್ವಹಿಸಲು ಅನು ಕೂಲವಾ ಗುವಂತೆ ವಸತಿಗೃಹದ ಆವಶ್ಯಕತೆ ಇದ್ದು, ಸರಕಾರ ಮಂಜೂರುಗೊಳಿಸಬೇಕಾಗಿದೆ. ಅದಕ್ಕೆ ಬೇಕಾದಂತಹ ನಿವೇಶನ ನೇತ್ರಾವತಿ ಸ್ನಾನಘಟ್ಟದ ಬಳಿ 2 ಎಕ್ರೆ ಮಂಜೂ ರಾಗಿದ್ದು, 1 ಎಕ್ರೆ ಜಮೀನು ಅರಣ್ಯ ಇಲಾಖೆಯ ಸುಪರ್ದಿಯಲ್ಲಿದೆ.

ಡಾ| ಹೆಗ್ಗಡೆ ಮನವಿ : ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆಯವರು 2016ರಲ್ಲಿ ಧರ್ಮಸ್ಥಳದಲ್ಲಿ ಪೊಲೀಸ್‌ ಠಾಣೆ ತೆರೆಯುವಂತೆ ಆಗಿನ ಗೃಹ ಸಚಿವ ಡಾ| ಜಿ.ಪರಮೇಶ್ವರ್‌ ಹಾಗೂ ಸರಕಾರಕ್ಕೆ ಪತ್ರ ಬರೆದಿದ್ದರು. ಅವರ ಮನವಿಯ ಮೇರೆಗೆ ಗ್ರಾಮ ಪಂಚಾಯತ್‌ ಕಟ್ಟಡದಲ್ಲಿ ಪೊಲೀಸ್‌ ಠಾಣೆ ಆರಂಭಿಸಲಾಗಿತ್ತು. ಇದೀಗ ಶಾಸಕ ಹರೀಶ್‌ ಪೂಂಜ ಅವರ ಮುತುವರ್ಜಿಯಿಂದ ನೂತನ ಕಟ್ಟಡಕ್ಕೆ 2.18 ಕೋಟಿ ರೂ. ಅನುದಾನ ಬಿಡುಗಡೆಗೊಂಡು ನೂತನ ಕಟ್ಟಡ ಭಾಗ್ಯ ಒದಗಿಬಂದಿದೆ. ಪ್ರಮುಖ ಕ್ಷೇತ್ರಗಳನ್ನು ಸಂಪರ್ಕಿಸುವ ಕೊಕ್ಕಡದಲ್ಲಿ ಪೊಲೀಸ್‌ ಹೊರಠಾಣೆ ನಿರ್ಮಿಸಬೇಕು ಎಂಬ ಬೇಡಿಕೆ ಇದ್ದು ಅಲ್ಲಿಯೂ 10 ಸೆಂಟ್ಸ್‌  ಜಾಗ ಮೀಸಲಿಡಲಾಗಿದೆ.

ಪೊಲೀಸ್‌ ಸ್ಟೇಷನ್‌ಗೆ ಸಿಬಂದಿ : ಧರ್ಮಸ್ಥಳ ಪೊಲೀಸ್‌ ಠಾಣೆಗೆ ಎಸ್‌ಐ ಸಹಿತ 37 ಸಿಬಂದಿ ಹುದ್ದೆ ಮಂಜೂರಾಗಿದ್ದು 34 ಸಿಬಂದಿ ಕರ್ತವ್ಯದಲ್ಲಿದ್ದಾರೆ. ದೂರದೃಷ್ಟಿ ಚಿಂತನೆಯೊಂದಿಗೆ ಗ್ರೇಡ್‌ 4 ಪೊಲೀಸ್‌ ಠಾಣೆಯಾದಲ್ಲಿ ಅದಕ್ಕೆ ಬೇಕಾದ ಕೊಠಡಿಗಳನ್ನು ಈಗಲೇ ಸಿದ್ಧಪಡಿಸಲಾಗುತ್ತಿದ್ದು, ವೃತ್ತ ನಿರೀಕ್ಷಕರು, ಉಪನಿರೀಕ್ಷಕ 1, ಉಪನಿರೀಕ್ಷಕರ-2(ಕ್ರೈಂ ಹಾಗೂ ಸಿವಿಲ್‌  ವಿಭಾಗ) ಈ ರೀತಿ ಠಾಣೆಯೂ ಮೇಲ್ದರ್ಜೆಗೆ ಏರುವ ನಿಟ್ಟಿನಲ್ಲಿ ಸಂಪೂರ್ಣ ವ್ಯವಸ್ಥೆ ಒಳಗೊಳ್ಳಲಿದೆ.

 

 -ವಿಶೇಷ ವರದಿ

 

Advertisement

Udayavani is now on Telegram. Click here to join our channel and stay updated with the latest news.

Next