ಬೆಳ್ತಂಗಡಿ: ಧರ್ಮಸ್ಥಳ ಕ್ಷೇತ್ರದಲ್ಲಿ ಅನೇಕ ವರ್ಷಗಳಿಂದ ಲಕ್ಷದೀಪೋತ್ಸವ ಸಂದರ್ಭ ವಸ್ತು ಪ್ರದರ್ಶನ ಏರ್ಪಡಿಸುತ್ತಾ ಬರಲಾಗಿದೆ. ಕೊರೊನಾದಿಂದ ವಿಚಲಿತರಾದ ನಮಗೆ ಮತ್ತೆ ಈ ವರ್ಷ ವಸ್ತು ಪ್ರದರ್ಶನ ನಡೆಸಲು ಅವಕಾಶ ದೊರೆತಿದೆ. ಜನರಿಗೆ ಮಾಹಿತಿ ತಂತ್ರಜ್ಞಾನದ ಜತೆಗೆ ಮನೋರಂಜನೆ ನೀಡುವ ಉದ್ದೇಶವೇ ವಸ್ತು ಪ್ರದರ್ಶನ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆ ನುಡಿದರು.
ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಕಾರ್ತಿಕ ಮಾಸದ ಮಂಗಳಪರ್ವದಲ್ಲಿ ನಡೆಯುವ ಲಕ್ಷದೀಪೋತ್ಸವ ಮಹೋತ್ಸವದ ಆರಂಭದ ದಿನವಾದ ನ.19 ರಂದು ಧರ್ಮಸ್ಥಳ ಪ್ರೌಢಶಾಲೆ ವಠಾರದಲ್ಲಿ ರಾಜ್ಯಮಟ್ಟದ ವಸ್ತು ಪ್ರದರ್ಶನ ಉದ್ಘಾಟನೆ ವೇಳೆ ಶುಭಹಾರೈಸಿದರು.
ಗ್ರಾಮೀಣಾಭಿವೃದ್ಧಿ ಯೋಜನೆಯಡಿ ಗ್ರಾಮೀಣ ಪ್ರದೇಶದಲ್ಲಿ ಆದಂತಃ ಪರಿವರ್ತನೆಗಳು, ಅನೇಕ ಯಶಸ್ವಿ ಪ್ರಯೋಗಳನ್ನು ಇಲ್ಲಿ ಪರಿಚಯಿಸಲಾಗಿದೆ. ಸರಕಾರಿ ಸಂಸ್ಥೆಗಳು, ಬ್ಯಾಂಕ್, ಸಂಘ-ಸಂಸ್ಥೆಗಳು ಬಂದಿವೆ. ಜನರಿಗೆ ಸಾಕಷ್ಟು ಮಾಹಿತಿ ಹಾಗೂ ಸಂಜೆ ಹೊತ್ತಿನಲ್ಲಿ ಮನೋರಂಜನೆ ದೊರೆಯುತ್ತದೆ. ಮಕ್ಕಳು, ಕುಟುಂಬ ಸಮೇತರಾಗಿ ಬನ್ನಿ, ಲಕ್ಷದೀಪೋತ್ಸವದ ಸಂಭ್ರಮವನ್ನು ಕಾಣಿ ಎಂದು ಹೆಗ್ಗಡೆ ಸ್ವಾಗತಿಸಿದರು.
ವಸ್ತು ಪ್ರದರ್ಶನ ಮಳಿಗೆ ಉದ್ಘಾಟಿಸಿ ಶುಭಹಾರೈಸಿದ ಶಾಸಕ ಹರೀಶ್ ಪೂಂಜ, ಕೊರೊನಾ ಕಾಲಘಟ್ಟ ಸರಿದು 43ನೇ ವರ್ಷದ ವಸ್ತು ಪ್ರದರ್ಶನ ಮಳಿಗೆ ಉದ್ಘಾಟನೆ ಭಾಗ್ಯ ನನಗೆ ದೊರೆತಿರುವುದು ಹರ್ಷ ತಂದಿದೆ. ಲಕ್ಷಾಂತರ ಮಂದಿ ಸೇರುವ ಭಕ್ತಿರೆಡೆಗೆ ಹೊಸ ಜ್ಞಾನದ ಬೆಳಕು ನೀಡುವ ವಸ್ತು ಪ್ರದರ್ಶನದಲ್ಲಿ ಎಲ್ಲರೂ ಪಾಲುಪಡೆಯಬೇಕು.
ಲಕ್ಷದೀಪೋತ್ಸವದಿಂದ ಜೀವನಕ್ಕೆ ಹೊಸ ಬೆಳಕು ತರಲಿ, ಪೂಜ್ಯರ ಹೆಗ್ಗಡೆ ಅವರ ಆಶೀರ್ವಾದ ರಾಜ್ಯದ ಜನತೆ ದೊರೆಯಲಿ ಎಂದು ಹೇಳಿದರು.
Related Articles
ಎಸ್ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ| ಸತೀಶ್ಚಂದ್ರ ಎಸ್. ದೀಪ ಬೆಳಗುವ ಮೂಲಕ ಮಳಿಗೆ ಉದ್ಘಾಟಿಸಿದರು.
ಡಾ| ಹೆಗ್ಗಡೆಯವರವ ಮೊಮ್ಮಗಳು ಮಾನ್ಯಾ, ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ| ಎಲ್.ಎಚ್.ಮಂಜುನಾಥ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನಿಲ್ ಕುಮಾರ್, ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆಯ ಆಡಳಿತ ನಿರ್ದೇಶಕ ಕೆ.ಎನ್. ಜನಾರ್ದನ್, ವಸ್ತು ಪ್ರದರ್ಶನ ಮಳಿಗೆಯ ಮೇಲುಸ್ತುವಾರಿ ಯತೀಶ್ ಬಳಂಜ, ಹೆಗ್ಗಡೆಯವರ ಆಪ್ತ ಕಾರ್ಯದರ್ಶಿ ಎ.ವಿ.ಶೆಟ್ಟಿ, ಎಸ್ಡಿಎಂ ಆಸ್ಪತ್ರೆಯ ಆಡಳಿತಾಧಿಕಾರಿ ಜನಾರ್ದನ್, ಜನಜಾಗೃತಿ ವೇದಿಕೆ ರಾಜ್ಯ ಕಾರ್ಯದರ್ಶಿ ವಿವೇಕ್ ವಿನ್ಸೆಂಟ್ ಪಾçಸ್, ಎಸ್ಡಿಎಂ ಶಿಕ್ಷಣ ಸಂಸ್ಥೆಗಳ ಸಿಇಒ ಹರೀಶ್, ಬಿಜೆಪಿ ಮಂಡಲ ಅಧ್ಯಕ್ಷ ಜಯಂತ್ ಕೋಟ್ಯಾನ್, ಕಾರ್ಯದರ್ಶಿ ಪ್ರಶಾಂತ್ ಪಾರೆಂಕಿ, ರತ್ನರಾಜ ಹೆಗ್ಡೆ, ರಾಮಕೃಷ್ಣ ಗೌಡ, ಡಾ| ದೇವಿಪ್ರಸಾದ್ ಬೊಳ್ಮ ಇತರರು ಉಪಸ್ಥಿತರಿದ್ದರು.
ತುಳು ನಾಡಿನ ಶೈಲಿಯಲ್ಲಿ ಉದ್ಘಾಟನೆ
ಈ ಬಾರಿಯ ವಸ್ತು ಪ್ರದರ್ಶನ ಮಳಿಗೆಯನ್ನು ವಿಶೇಷವಾಗಿ (ತುಳುವಿನ ಪದ -ತಡಮೆ) ಬಿದುರಿನಂದ ಮಾಡಿದ ಸರಂಗೋಲನ್ನು ಸರಿಸುವ ಮೂಲಕ ಹಾಗೂ (ಕೊಲು¤ರಿ) ಬಟ್ಟೆ ಹಾಗೂ ಸಲಕೆಯಿಂದ ತಯಾರಿಸಿದ ದೀಪವನ್ನು ಹಚ್ಚುವ ಮೂಲಕ ವಸ್ತು ಪ್ರದರ್ಶನ ಉದ್ಘಾಟಿಸಿಲಾಯಿತು. ಸರಕಾರಿ, ಆಹಾರ, ವಾಹನ, ಕೃಷಿ ಉಪಕರಣ, ಕರಕುಶಲ, ಸೋಲಾರ್, ದೇಸಿದನದ ಉತ್ಪನ್ನ, ಐಸ್ ಕ್ರೀಂ, ಪಾನೀಯ, ಹೋಟೆಲ್ ಬ್ಯಾಂಕ್ ಸಹಿತ ಕೃಷಿ ಪರಿಕರ ಹೊಂದಿರುವ ವಿವಿಧ 196 ವಸ್ತು ಪ್ರದರ್ಶನ ಮಳಿಗೆ ಸೇರಿವೆ. ಡಾ| ಹೆಗ್ಗಡೆ ಮಳಿಗೆ ವೀಕ್ಷಿಸಿ, ಮಾಹಿತಿ ಪಡೆದು ಮೆಚ್ಚುಗೆ ವ್ಯಕ್ತಪಡಿಸಿದರು.