Advertisement

ಧರ್ಮಸ್ಥಳ ಲಕ್ಷ ದೀಪೋತ್ಸವ ನಾಲ್ಕನೇ ದಿನ; ಸ್ವಾಮಿಗೆ ಕಂಚಿಮಾರು ಕಟ್ಟೆ ಉತ್ಸವ ಕಳೆ

04:12 PM Nov 23, 2022 | Team Udayavani |

ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳದ ಮಂಜುನಾಥಸ್ವಾಮಿಗೆ ಲಕ್ಷದೀಪೋತ್ಸವದ ಪ್ರಯುಕ್ತ ನೆರವೇರುತ್ತಿರುವ ಉತ್ಸವಾದಿಗಳಲ್ಲಿ ನಾಲ್ಕನೇ ದಿನ ಮಂಗಳವಾರ ರಾತ್ರಿ ಕಂಚಿಮಾರು ಕಟ್ಟೆ ಉತ್ಸವ ಸಂಭ್ರಮದಿಂದ ಸಹಸ್ರಾರು ಭಕ್ತರು ಪಾಲ್ಗೊಳ್ಳುವಿಕೆಯೊಂದಿಗೆ ನೆರವೇರಿತು.

Advertisement

ಶ್ರೀ ಕ್ಷೇತ್ರದಲ್ಲಿ ನಡೆದ ಸರ್ವಧರ್ಮ ಸಮ್ಮೇಳದ ಬಳಿಕ ಶ್ರೀ ಮಂಜುನಾಥಸ್ವಾಮಿಯ ಕಂಚಿಮಾರು ಕಟ್ಟೆ ಉತ್ಸದ ಧಾರ್ಮಿಕ ವಿಧಿ ವಿಧಾನಗಳು ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆ ಸಮ್ಮುಖದಲ್ಲಿ ನಡೆಯಿತು.

ರಾತ್ರಿ ದೇವಸ್ಥಾನದ ಶ್ರೀ ಮಂಜುನಾಥ ಸ್ವಾಮಿಗೆ ಸಕಲ ಶಾಸ್ತ್ರಗಳೊಂದಿಗೆ ಪೂಜೆ ನಡೆಸಿ, ಬಳಿಕ ಒಳಾಂಗಣದಲ್ಲಿ ಸಂಪ್ರದಾಯದಂತೆ ಜಾಗಟೆ, ಶಂಖ, ನಾದಸ್ವರ, ಡೋಲು, ಸಂಗೀತ ಮೂಲಕ ಹೂಗಳು ಮತ್ತು ಆಭರಣಗಳಿಂದ ಅಲಂಕೃತ ಪಲ್ಲಕ್ಕಿಯಲ್ಲಿ ಉತ್ಸವ ಮೂರ್ತಿಯ ಪ್ರದಕ್ಷಿಣೆ ಹಾಕಲಾಯಿತು.

ಬಳಿಕ ದೇವಸ್ಥಾನದ ಮುಂಭಾಗದಿಂದ ಕ್ಷೇತ್ರದ ಗಜಪಡೆ, ಬಸವ, ಪಂಜು, ಗೊಂಬೆಗಳ ಮೆರವಣಿಗೆಯೊಂದಿಗೆ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಪಲ್ಲಕ್ಕಿಯಲ್ಲಿ ದೇವರ ಉತ್ಸವ ಮೂರ್ತಿಯನ್ನು ಕಂಚಿಮಾರು ಕಟ್ಟೆಗೆ ಒಯ್ದು, ಅಲ್ಲಿ ಸಕಲ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು. ಅಲ್ಲಿ ಸಂಗೀತ, ನಾದಸ್ವರ ಮೂಲಕ ಅಷ್ಟಾವಧಾನ ಸೇವೆಯೊಂದಿಗೆ ದೇವರಿಗೆ ಪೂಜೆ ಸಲ್ಲಿಸಲಾಯಿತು.

ಬಳಿಕ ದೇವಸ್ಥಾನದ ಮುಂಭಾಗದಲ್ಲಿ ದೇವರನ್ನು ಬೆಳ್ಳಿರಥದಲ್ಲಿ ಕೂರಿಸಿ ಮಂಗಳಾರತಿ ಬೆಳಗಿ, ಭಕ್ತರು ದೇವಳಕ್ಕೆ ಒಂದು ಸುತ್ತಿನ ಪ್ರದಕ್ಷಿಣೆಯನ್ನೆಳೆದು ದೇವಳದ ಮುಂಭಾಗದಿಂದ ದೇವಳದ ಪ್ರಾಂಗಣದೊಳಗೆ ಸುತ್ತು ಬಂದು ದೇವರ ಗುಡಿಯಲ್ಲಿ ಮೂರ್ತಿಯನ್ನು ವಿರಾಜಮಾನಗೊಳಿಸಲಾಯಿತು. ಬಳಿಕ ವೈಧಿಕರು ದೇವರಿಗೆ ಆರತಿ ಬೆಳಗಿ ಭಕ್ತರಿಗೆ ಆರತಿ ಹಾಗೂ ಪ್ರಾಸದ ರೂಪದಲ್ಲಿ ಹೂ ನೀಡುವ ಮೂಲಕ ಕಂಚಿಮಾರು ಕಟ್ಟೆ ಉತ್ಸವ ಪೂರ್ಣಗೊಂಡಿತು.

Advertisement

ಈ ಸಂದರ್ಭದಲ್ಲಿ ಹೆಗ್ಗಡೆ ಕುಟುಂಬಸ್ಥರು, ಕ್ಷೇತ್ರದ ಆಡಳಿತದ ಸಿಬಂದಿ ಪ್ರಮುಖರು, ವೈದಿಕ ಸಮಿತಿಯವರು, ಸಹಸ್ರಾರು ಭಕ್ತರು ಉಪಸ್ಥಿತರಿದ್ದರು.

ರಿಕಿ ಕೇಜ್‌ ಸಂಗೀತ ನೃತ್ಯ-ವೈವಿಧ್ಯ
ನ.23ರಂದು ಸಂಜೆ 5.30ರಿಂದ ವಸ್ತುಪ್ರದರ್ಶನ ಮಂಟಪದಲ್ಲಿ ಮೇಘಾ ಭಟ್‌ ಮಡಿಕೇರಿ ಅವರಿಂದ ಶಾಸ್ತ್ರೀಯ ಸಂಗೀತ ನೆರೆದ ಸಭಿಕರನ್ನು ಗಾಯನದಲ್ಲಿ ತೇಲಾಡಿಸಿತು. ಅಪೂರ್ವ ಅನಿರುದ್ಧ ಬೆಂಗಳೂರು ಅವರಿಂದ ವೀಣಾ ವಾದನ, ವಿ.ರಜನಿ ಎಲ್‌.ಕರಿಗಾರ, ಕಾಣೆಬೆನ್ನೂರು ಅವರಿಂದ ಹಿಂದುಸ್ಥಾನಿ ಸಂಗೀತ, ವಿದೂಷಿ ಶಾಲಿನಿ ಆತ್ಮಭೂಷಣ್‌ ಮತ್ತು ತಂಡ ನೃತ್ಯೋಪಸನಾ ಕಲಾಕೇಂದ್ರ ಪುತ್ತೂರು ಅವರಿಂದ ಸಮೂಹ ನೃತ್ಯ, ರಾತ್ರಿ 10ರಿಂದ 11.30ರವರೆಗೆ ಭದ್ರಾವತಿ ಶಂಕರ್‌ ಬಾಬು ಅವರ ಆರ್ಕೇಸ್ಟ್ರಾ ರಸಮಂಜರಿ ಗಮನ ಸೆಳೆಯಿತು.

ರಾತ್ರಿ 8.30 ಕ್ಕೆ ಹೆಸರಾಂತ ಕಲಾವಿದ, ಬಹು-ಗ್ರ್ಯಾಮಿ ಪ್ರಶಸ್ತಿ ವಿಜೇತ ಸಂಗೀತ ಸಂಯೋಜಕ, ಅರ್ಥ್ ಡೇ ನೆಟ್‌ವರ್ಕ್‌ ರಾಯಭಾರಿ ರಿಕಿ ಕೇಜ್‌ರಿಂದ ಅಮೃತವರ್ಷಿಣಿ ಸಭಾಭವನದಲ್ಲಿ ಸಂಗೀತ ನೃತ್ಯ ವೈವಿದ್ಯ ಮನೋರಂಜನೆಯ ಮಾಯಾನಗರಿಯಲ್ಲಿ ತೇಲಿಸಿತು.

ಲಕ್ಷದೀಪೋತ್ಸವದ ಐದನೇ ದಿನವಾದ ನ.23ರಂದು ರಾತ್ರಿ ಮಂಜುನಾಥ ಸ್ವಾಮಿಗೆ ಗೌರಿಮಾರುಕಟ್ಟೆ ಉತ್ಸವವು ಧರ್ಮಾಧಿಕಾರಿಯವರು ಸಮ್ಮುಖದಲ್ಲಿ ಸಂಭ್ರಮದಿಂದ ನೆರವೇರಿತು. ಐದು ದಿನಗಳ ಉತ್ಸವ ಪೂರ್ಣಗೊಳ್ಳುತ್ತಲೇ ಮಂಜುನಾಥ ಸ್ವಾಮಿಯ ಕಣ್ತುಂಬಿಕೊಳ್ಳಲು ಭಕ್ತಸಾಗರವೇ ಹರಿದುಬಂದಿತ್ತು. ರಾಜ್ಯದ ನಾನಾ ಕಡೆಗಳಿಂದ ಬಂದ ಡೊಳ್ಳುಕುಣಿತ, ಶಂಖ, ಜಾಗಟೆ, ಭಜನೆ ಸಹಿತ ವಿಧ ವಿಧವಾದ ಸೇವೆಗಳನ್ನು ಸ್ವಾಮಿಗೆ ಪ್ರಸಕ್ತ ವರ್ಷದ ಮೂಲಕ ಶ್ರೀ ಕ್ಷೇತ್ರ ಧರ್ಮಸ್ಥಳದ ಲಕ್ಷದೀಪೋತ್ಸವ ಸಮಿತಿಯಿಂದ ನಡೆದ ಕಾರ್ತಿಕ ಮಾಸದ ಮಂಗಳ ಪರ್ವದ ಲಕ್ಷದೀಪೋತ್ಸವ ಸಂಪನ್ನಗೊಂಡಿತು.

ನ.24ರಂದು ಸಮವಸರಣ ಪೂಜೆ
ನ.24ರಂದು ಸಂಜೆ ಗಂಟೆ 6ರಿಂದ ನೆಲ್ಯಾಡಿ ಬೀಡು ಬಳಿ ಇರುವ ಬಸದಿಯಲ್ಲಿ ಭಗವಾನ್‌ ಶ್ರೀ ಚಂದ್ರನಾಥ ಸ್ವಾಮಿಯ ಸಮವಸರಣ ಪೂಜಾ ಕಾರ್ಯಕ್ರಮ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next