Advertisement

ಪುರಸಭೆ ಸಿಒ ಸುರೇಖಾ ವಿರುದ್ಧ ಧರಣಿ

05:35 PM Jul 20, 2022 | Shwetha M |

ಮುದ್ದೇಬಿಹಾಳ: ಪುರಸಭೆ ಮುಖ್ಯಾಧಿಕಾರಿ ಧೋರಣೆ ಖಂಡಿಸಿ ಮತ್ತು 12 ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪುರಸಭೆ ಆಡಳಿತ ಪಕ್ಷ ಕಾಂಗ್ರೆಸ್‌ನ ಇಬ್ಬರು ಸದಸ್ಯರು ಪುರಸಭೆ ಕಚೇರಿ ಎದುರೇ ಮಂಗಳವಾರದಿಂದ ಧರಣಿ ಆರಂಭಿಸಿದ್ದಾರೆ.

Advertisement

ಸ್ಥಾಯಿ ಸಮಿತಿ ಅಧ್ಯಕ್ಷ ಶಿವು ಶಿವಪುರ ಮತ್ತು ಸದಸ್ಯ ಮಹಿಬೂಬ ಗೊಳಸಂಗಿ ಧರಣಿ ಆರಂಭಿಸಿದ್ದು ಇವರಿಗೆ ಆಡಳಿತ ಪಕ್ಷದ ಸದಸ್ಯರಾದ ಮಹ್ಮದರಫೀಕ್‌ ದ್ರಾಕ್ಷಿ, ಹನುಮಂತ ಭೋವಿ, ಅಧ್ಯಕ್ಷೆ ಪ್ರತಿಭಾ ಅಂಗಡಗೇರಿ ಅವರ ಪತಿ, ಗುತ್ತಿಗೆದಾರ ರುದ್ರಗೌಡ ಅಂಗಡಗೇರಿ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಗುರು ತಾರನಾಳ, ಸಮಾಜ ಸೇವಕ ಶಾಂತಗೌಡ ಪಾಟೀಲ ನಡಹಳ್ಳಿ, ಹೋರಾಟಗಾರ ಮಂಜುನಾಥಸ್ವಾಮಿ ಕುಂದರಗಿ, ಪುರಸಭೆ ಮಳಿಗೆಗಳಲ್ಲಿ ಬಾಡಿಗೆ ಇರುವ ಕೆಲವರು ಧರಣಿಗೆ ಬೆಂಬಲ ಸೂಚಿಸಿದ್ದಾರೆ.

ಏತನ್ಮಧ್ಯೆ ಧರಣಿ ಕೈ ಬಿಟ್ಟು ಪುರಸಭೆ ಸಾಮಾನ್ಯ ಸಭೆಯಲ್ಲೇ ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳುವಂತೆ ಸ್ಥಳಕ್ಕೆ ಭೇಟಿ ನೀಡಿದ್ದ ತಹಶೀಲ್ದಾರ್‌ ಬಿ.ಎಸ್‌.ಕಡಕಭಾವಿ, ಸಿಪಿಐ ಆನಂದ ವಾಘ್ಮೋಡೆ ಅವರು ಮಾಡಿಕೊಂಡ ಮನವಿಗೆ ಸ್ಪಂದನೆ ದೊರಕಿಲ್ಲ. ಜಿಲ್ಲಾಧಿಕಾರಿಯೇ ಬಂದು ಸಮಸ್ಯೆ ಆಲಿಸಿ ಬೇಡಿಕೆ ಈಡೇರಿಸುವವರೆಗೂ ಧರಣಿ ಮುಂದುವರಿಸಲಾಗುತ್ತದೆ ಎಂದು ಧರಣಿ ನಿರತರು ತಿಳಿಸಿದ್ದಾರೆ.

ಮುಖ್ಯಾಧಿಕಾರಿ ಸುರೇಖಾ ಬಾಗಲಕೋಟ ಪಟ್ಟಣದಲ್ಲೇ ವಾಸ್ತವ್ಯ ಮಾಡಬೇಕು. ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಆಡಳಿತ ಮಂಡಳಿ ಗಮನಕ್ಕೆ ತಂದಿಲ್ಲ, ಅನುಮತಿಯನ್ನೂ ಪಡೆದುಕೊಂಡಿಲ್ಲ. ಸಾರ್ವಜನಿಕರ ಆಸ್ತಿ ಉತಾರೆ ವಿಳಂಬವಾಗುತ್ತಿದ್ದು ತುರ್ತು ಸೇವೆ ಒದಗಿಸಬೇಕು. 2018ರಲ್ಲಿ ಸುರೇಶ ಕಶೆಟ್ಟಿ ಹೆಸರಿನಲ್ಲಿ ವಾಹನ ಬಾಡಿಗೆ ತೆಗೆದಿರುವ ಕುರಿತು ವಿಚಾರಣೆ ನಡೆಸಬೇಕು. 2018ರಲ್ಲಿ ಆಗಿನ ಆಶ್ರಯ ಸಮಿತಿ ಅಧ್ಯಕ್ಷರು ರಿ.ಸ.ನಂ.73ರಲ್ಲಿ 346 ಫಲಾನುಭವಿಗಳನ್ನು ಆಯ್ಕೆ ಮಾಡಿದ್ದು ಅವರಿಗೆ ಹಕ್ಕುಪತ್ರ ವಿತರಿಸಬೇಕು ಮತ್ತು ಇದನ್ನು ಕೊಳಚೆ ಅಭಿವೃದ್ಧಿ ಮಂಡಳಿಗೆ ಹಸ್ತಾಂತರಿಸಬಾರದು.

ವಸತಿ ಯೋಜನೆಯಡಿ ಫಲಾನುಭವಿಗಳ ಆಯ್ಕೆ ಕ್ರಮಬದ್ಧವಾಗಿಲ್ಲದ ಕಾರಣ ರದ್ದುಪಡಿಸಬೇಕು. ಪುರಸಭೆ ವಾಣಿಜ್ಯ ಮಳಿಗೆಗಳ ಹರಾಜು ಪ್ರಕ್ರಿಯೆಯಲ್ಲಿ ದೋಷಗಳಿದ್ದು ರದ್ದುಪಡಿಸಿ ಇ-ಆಕ್ಷನ್‌ ಮೂಲಕ ಜರುಗಿಸಬೇಕು. 2018ರಲ್ಲಿ ಸಾರ್ವಜನಿಕ ಜಾಗೆಗಳನ್ನು ಎರಡು ಸಂಸ್ಥೆಗಳಿಗೆ ನೋಂದು ಮಾಡಿದ ಅಧಿಕಾರಿ ಮೇಲೆ ಕ್ರಮ ಜರುಗಿಸಬೇಕು. ಆಲಮಟ್ಟಿ ರಸ್ತೆಗೆ ಹೊಂದಿಕೊಂಡಿರುವ ಮಳಿಗೆ ಮಾಲೀಕ ಅಪ್ಪು ರಾವುಜಪ್ಪ ಮದರಿ ಹೆಸರಲ್ಲಿ ಕಾನೂನು ಬಾಹಿರವಾಗಿ ದಾಖಲಿಸಿ ಉತಾರೆ ನೀಡಿದ್ದು ರಿ.ಸ.ನಂ. 65ರ ಪ್ಲಾಟ್‌ ನಂಬರ್‌ 5ರಲ್ಲಿ ಗುಂಟೆ ಜಾಗೆ ದಾಖಲಿಸಿಕೊಂಡ ಅಧಿಕಾರಿ ಮೇಲೆ ಕ್ರಮ ಜರುಗಿಸಬೇಕು. ಪುರಸಭೆ ಕಾರ್ಯಾಲಯದಲ್ಲಿನ ಸಿಸಿ ಕ್ಯಾಮರಾ ಚಾಲೂ ಮಾಡಬೇಕು.

Advertisement

ಪಟ್ಟಣದಲ್ಲಿನ ಕಾಮಗಾರಿ ಕಳಪೆಯಾಗಿದ್ದು ಅಂದಾಜು ಪತ್ರಿಕೆಗೂ, ಕಾಮಗಾರಿಗೂ ವ್ಯತ್ಯಾಸವಿದ್ದು ಕ್ರಮ ಜರುಗಿಸಬೇಕು ಮತ್ತು ನಗರೋತ್ಥಾನ 4ನೇ ಹಂತದ ಕ್ರಿಯಾಯೋಜನೆ ಕುರಿತು ಸಾಮಾನ್ಯ ಸಭೆಗೆ ತಪ್ಪು ತಿಳಿವಳಿಕೆ ನಿಡಿದ ಅಧಿಕಾರಿ ಮೇಲೆ ಕ್ರಮ ಜರುಗಿಸಬೇಕು ಎನ್ನುವ ಬೇಡಿಕೆಗಳನ್ನು ಇಡಲಾಗಿದೆ. ಧರಣಿ ಸ್ಥಳಕ್ಕೆ ಭೇಟಿ ನೀಡಿ ಬೆಂಬಲ ಸೂಚಿಸಿದ ಶಾಂತಗೌಡ ಪಾಟೀಲ ನಡಹಳ್ಳಿ ಮಾತನಾಡಿ, ಪುರಸಭೆ ಅಧ್ಯಕ್ಷ, ಸದಸ್ಯರಿಗೆ ಸ್ವತಂತ್ರವಾಗಿ, ಕಾನೂನು ಬದ್ಧವಾಗಿ ಕೆಲಸ ಮಾಡುವುದು ಸಾಧ್ಯವಾಗುತ್ತಿಲ್ಲ. ಧರಣಿನಿರತರ ಬೇಡಿಕೆ ನ್ಯಾಯಯುತವಾಗಿವೆ. ಪಕ್ಷಾತೀತವಾಗಿ ಬೆಂಬಲ ನೀಡುತ್ತೇನೆ. ಇನ್ನೂ ಅನೇಕ ಸಮಸ್ಯೆಗಳಿದ್ದು ಇನ್ನೆರಡು ದಿನಗಳಲ್ಲಿ ಪತ್ರಿಕಾಗೋಷ್ಠಿ ನಡೆಸುತ್ತೇವೆ.

ಗ್ರಾಪಂ ಸದಸ್ಯರು ದಂಗೆ ಏಳುವ ಸ್ಥಿತಿ ಉದ್ಭವವಾಗಿದೆ. ಇವರ ಹಕ್ಕುಗಳನ್ನು ಮೊಟಕುಗೊಳಿಸುವುದರ ವಿರುದ್ಧ ಧ್ವನಿ ಎತ್ತುತ್ತೇವೆ. ಪುರಸಭೆ, ಗ್ರಾಪಂಗಳ ಅಧ್ಯಕ್ಷ, ಸದಸ್ಯರ ಹಕ್ಕು ಮೊಟಕುಗೊಳಿಸಬಾರದು. ಮನೆ ಹಂಚಿಕೆ ಮಾಡುವ ಅಧಿಕಾರ ಗ್ರಾಮಸಭೆಯಲ್ಲಿ ಪಾಲ್ಗೊಂಡವರಿಗೆ ಇರುತ್ತದೆಯೇ ಹೊರತು ಬೇರೆಯವರಿಗೆ ಇರುವುದಿಲ್ಲ. ಗ್ರಾಪಂ ಸದಸ್ಯರನ್ನು ಮನೆಗೆ ಕರೆದು ಸಭೆ ಮಾಡುವುದಲ್ಲ ಎಂದು ಸ್ಥಳೀಯ ಶಾಸಕರ ವಿರುದ್ಧ ನೇರವಾಗಿಯೇ ಹರಿಹಾಯ್ದರು.

Advertisement

Udayavani is now on Telegram. Click here to join our channel and stay updated with the latest news.

Next