Advertisement

ಹಳಕರ್ಟಿ ಶರೀಫ್ ದರ್ಗಾ ಉರುಸ್‌ಗೆ ಭಕ್ತಸಾಗರ

08:33 PM Aug 12, 2022 | Team Udayavani |

ವಾಡಿ: ಪಟ್ಟಣ ಸಮೀಪದ ಹಳಕರ್ಟಿ ಶರೀಫ್ ದರ್ಗ ಉರುಸ್‌ಗೆ ದೇಶದ ನಾನಾ ಭಾಗಗಳಿಂದ ಭಕ್ತಸಾಗರವೇ ಹರಿದು ಬಂದಿದೆ. ಹಜರತ್ ಖ್ವಾಜಾ ಸೈಯ್ಯದ್ ಮೊಹ್ಮದ್ ಬಾದಶಹಾ ಖ್ವಾದ್ರೀ ದರ್ಗಾದ 45ನೇ ಉರುಸ್ ಶುಭ ಶುಕ್ರವಾರ ಸಾಮೂಹಿಕ ನಮಾಜ್ ಮೂಲಕ ಆರಂಭಗೊಂಡಿತು.

Advertisement

ಹೈದರಾಬಾದ್ ದಿಂದ ಎರಡು ಸಾವಿರ ಭಕ್ತರು ವಿಶೇಷ ರೈಲಿನಲ್ಲಿ ಸುಗಂಧ ದೃವ್ಯದ ಮೂಲಕ ಆಗಮಿಸಿ ಉರುಸ್ ಸಂಭ್ರಮ ಹೆಚ್ಚಿಸಿದರು.
ಪಟ್ಟಣದ ರೈಲು ನಿಲ್ದಾಣದಲ್ಲಿ ಸಂಧಲ್ ಆಮಿಸುತ್ತಿದ್ದ ವಿಶೇಷ ರೈಲನ್ನು ಸ್ವಾಗತಿಸಿದ ಹಳಕರ್ಟಿ ದರ್ಗಾದ ಹಜರತ್ ಖ್ವಾಜಾ ಸೈಯ್ಯದ್ ಅಬುತುರಾಬ ಶಹಾ ಖ್ವಾದ್ರಿ ಚಿಸ್ತಿ ಯಮನಿ ಬಂದಾನವಾಜ್ ತುರಾಬ ಖ್ವಾದೀರ್, ಹಳಕರ್ಟಿ ಕಟ್ಟಿಮನಿ ಹಿರೇಮಠದ ಪೂಜ್ಯ ಶ್ರೀಮುನೀಂದ್ರ ಸ್ವಾಮೀಜಿ, ದಂದಗುಂಡದ ಶ್ರೀಸಂಗನಬಸವ ಸ್ವಾಮೀಜಿ ಹಾಗೂ ವಿವಿಧ ದರ್ಗಾಗಳ ಪೂಜ್ಯರು, ಸಂಧಲ್ ಮೆರವಣಿಗೆಯಲ್ಲಿ ಭಾಗವಹಿಸುವ ಮೂಲಕ ಕೋಮು ಸೌಹಾರ್ಧತೆ ಮೆರೆದರು.

ಇದಕ್ಕೂ ಮೊದಲು ಶುಕ್ರವಾರ ಹಳಕರ್ಟಿ ದರ್ಗಾ ಶರೀಫ್ ಸಮಾದಿಗೆ ಗುಲಾಬಿ ಹೂಗಳ ಅರ್ಪಣೆ, ಸುಗಂಧ ದೃವ್ಯ ಸಿಂಪರಣೆ, ಭಕ್ತಿಯ ಚಾದರ್ ಹೊದಿಕೆ ನೆರವೇರಿಸಿದ ಸಾವಿರಾರು ಜನ ಮುಸ್ಲಿಂ ಭಕ್ತರು, ವಿಶಾಲವಾದ ದರ್ಗ ಆವರಣದಲ್ಲಿ ಸಾಮೂಹಿಕವಾಗಿ ಉರುಸ್ ನಮಾಜ್ ಕೈಗೊಳ್ಳುವ ಮೂಲಕ ಸಂಪ್ರದಾಯ ಪೂರ್ಣಗೊಳಿಸಿದರು. ಮಹಾರಾಷ್ಟ್ರ, ಆಂದ್ರಾ, ತೆಲಂಗಾಣ, ಕೇರಳ, ಪಶ್ಚಿಮ ಬಂಗಾಳ ಸೇರಿದಂತೆ ದೇಶ ವಿದೇಶಗಳಲ್ಲಿ ವಾಸವಿದ್ದ ದರ್ಗಾ ಶರೀಫರ ಅನುಯಾಯಿಗಳು ಉರುಸ್ ಉತ್ಸವದಲ್ಲಿ ಪಾಲ್ಗೊಂಡಿದ್ದರು.

ಖವ್ವಾಲಿ ಗಾಯನ, ಕವಿತೆಗಳ ವಾಚನ, ಶೇರ್ ಶಾಯರಿ ಪಠಣ ಸೇರಿದಂತೆ ಪ್ರಾರ್ಥನೆ ಹಾಗೂ ಪ್ರವಚನಗಳು ನಡೆದವು. ಶನಿವಾರ ಮತ್ತು ರವಿವಾರ ಎರಡು ದಿನಗಳ ಕಾಲ ನಿರಂತರವಾಗಿ ಭಕ್ತರ ಆಗಮನವಾಗಲಿದ್ದು, ಒಂದು ಲಕ್ಷ ಜನ ಅನುಯಾಯಿಗಳು ಶರೀಫರ ದರ್ಶನ ಪಡೆಯಲಿದ್ದಾರೆ ಎನ್ನಲಾಗಿದೆ.

ಉರುಸ್‌ಗೆ ವಿಶೇಷವಾಗಿ ಪೊಲೀಸ್ ಭದ್ರತೆ ಒದಗಿಸಲಾಗಿದ್ದು, ಮನರಂಜನಾ ತಾಣಗಳಲ್ಲಿ ಕಾವಲು ಕಾಯಲು ಖಾಸಗಿ ಸಿಬ್ಬಂದಿಗಳನ್ನು ಉರುಸ್ ಸಮಿತಿಯೇ ನೇಮಿಸಿದೆ. ಲಕ್ಷ ಜನರಿಗೆ ದಾಸೋಹ ಕಾರ್ಯ ನಡೆಯುತ್ತಿದೆ. ಹಿಂದೂ ಹಾಗೂ ಮುಸ್ಲಿಂ ಭಕ್ತರು ಬೇಧವಿಲ್ಲದೆ ಉರುಸ್‌ನಲ್ಲಿ ಪಾಲ್ಗೊಂಡಿದ್ದು ಕಂಡು ಬಂದಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next