Advertisement

ಅಭಿವೃದ್ದಿಗೆ ಬೇಕು ಎಲ್ಲರ ಸಹಕಾರ: ಶಿವಾನಂದ

05:19 PM Jul 24, 2022 | Shwetha M |

ಬಸವನಬಾಗೇವಾಡಿ: ಕೃಷ್ಣಾ ನ್ಯಾಯಾಧಿಕರಣ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ವ್ಯಾಜ್ಯ ಇದೆ. ಅದು ಇತ್ಯರ್ಥವಾದಲ್ಲಿ ವಿಜಯಪುರ ಜಿಲ್ಲೆ ಸಂಪೂರ್ಣ ನೀರಾವರಿ ಆಗುತ್ತದೆ. ಬರಗಾಲವೆಂಬ ಜಿಲ್ಲೆಯ ಹಣೆ ಬರಹ ಬದಲಾಗಿ ಜಿಲ್ಲೆ ಬಂಗಾರದ ಕಡ್ಡಿಯಾಗುತ್ತದೆ ಎಂದು ಮಾಜಿ ಸಚಿವ, ಶಾಸಕ ಶಿವಾನಂದ ಪಾಟೀಲ ಹೇಳಿದರು.

Advertisement

ಶನಿವಾರ ತಾಲೂಕಿನ ಮಸಬಿನಾಳ ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆಯಿಂದ 5 ಕೋಟಿ ರೂ. ವೆಚ್ಚದಲ್ಲಿ ರಸ್ತೆ ಅಗಲೀಕರಣ, ಸಿಸಿ ರಸ್ತೆ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ, ಘನತ್ಯಾಜ ವಿಲೆವಾರಿ ವಾಹನ ಹಾಗೂ ಅಂಗನವಾಡಿ ಕಟ್ಟಡ ಉದ್ಘಾಟನೆ ನೆರವೇರಿಸಿ ನಂತರ ನಡೆದ ಸಾರ್ವಜನಿಕ ಸಮಾರಂಭದಲ್ಲಿ ಅವರು ಮಾತನಾಡಿದರು.

ವಿಜಯಪುರ ಜಿಲ್ಲೆ ಸಂಪೂರ್ಣ ನೀರಾವರಿ ಯೋಜನೆಗೆ ಒಳಪಡಬೇಕಾದರೆ ಕೃಷ್ಣಾ ನ್ಯಾಯಾ ಧಿಕರಣ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಇರುವ ವ್ಯಾಜ್ಯ ಇತ್ಯರ್ಥವಾಗಬೇಕು. ಕೇಂದ್ರ ಸರ್ಕಾರ ಗೇಜಟ್‌ ನೋಟಿಫಿಕೇಶನ್‌ ಹೊರಡಿಸಿದಾಗ ಕೃಷ್ಣಾ ನ್ಯಾಯಾಧಿಕರಣದ ಸಮಸ್ಯೆ ಬಗೆಹರಿಯಲು ಸಾಧ್ಯ ಎಂದು ಹೇಳಿದರು.

ಕೇಂದ್ರ ರಾಜ್ಯ ಸರ್ಕಾರದ ಅನುದಾನ ತರುವ ಕೆಲಸ ನನ್ನದಾಗಿದ್ದು ಅದನ್ನು ಸರಿಯಾಗಿ ಬಳಸಿಕೊಳ್ಳುವುದು ಗ್ರಾಪಂ ಸದಸ್ಯರ ಕರ್ತವ್ಯವಾಗಿದೆ. ಎಲ್ಲರ ಸಹಕಾರ ಇದ್ದಾಗ ಮಾತ್ರ ಅಭಿವೃದ್ಧಿ ಕೆಲಸ ನಿಂತ ನೀರಾಗದೆ ಹರಿಯುವ ನೀರಾಗುತ್ತದೆ ಎಂದರು.

ಸರ್ಕಾರದಲ್ಲಿ ಯಾವುದೇ ಕಾಲದಲ್ಲಿಯೂ ಅನುದಾನದ ಕೊರತೆಯಿಲ್ಲ. ಸರ್ಕಾರದಲ್ಲಿ ಅನುದಾನ ಇದ್ದೆ ಇರುತ್ತದೆ. ಆದರೆ ಅನುದಾನವನ್ನು ತರುವ ಶಕ್ತಿ ಸಾಮರ್ಥ್ಯ ಆ ಶಾಸಕನಾದವನಿಗೆ ಬೇಕು. ಅದನ್ನು ಬಿಟ್ಟು. ಸರ್ಕಾರದಲ್ಲಿ ಅನುದಾನದ ಕೊರತೆಯಿತ್ತು. ಹೀಗಾಗಿ ಕ್ಷೇತ್ರದ ಅಭಿವೃದ್ಧಿಗೆ ಹಿನ್ನಡೆಯಾಗಿದೆ ಎಂದು ಮಾತಿನಲ್ಲೆ ಕ್ಷೇತ್ರದ ಜನರನ್ನು ಮರುಳು ಮಾಡುವ ವ್ಯಕ್ತಿಗಳಿಗೆ ಮಣೆ ಹಾಕದಿರಿ. ಕೆಲಸ ಮಾಡುವ ವ್ಯಕ್ತಿಗೆ ಮಣೆ ಹಾಕಿ ಅವರು ದುಡಿದ ಕೆಲಸಕ್ಕೆ ಸಂಬಳ ನೀಡಿ ಎಂದು ಕೋರಿದರು.

Advertisement

ವಿರಕ್ತಮಠದ ಸಿದ್ದರಾಮ ಶ್ರೀಗಳು ಸಾನ್ನಿಧ್ಯ, ಗ್ರಾಪಂ ಅಧ್ಯಕ್ಷೆ ಪಾರ್ವತಿ ಮೂರಮಾನ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಈರಣ್ಣ ಪಟ್ಟಣಶೆಟ್ಟಿ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಸುರೇಶ ಹಾರಿವಾಳ, ಎಪಿಎಂಸಿ ಅಧ್ಯಕ್ಷ ವಿಶ್ವನಾಥ ಪಾಟೀಲ, ಗ್ರಾಪಂ ಉಪಾಧ್ಯಕ್ಷ ಅಪ್ಪಾಸಾಹೇಬ ಮಡಗೊಂಡ, ಯರನಾಳ ಗ್ರಾಪಂ ಅಧ್ಯಕ್ಷ ಬಸವರಾಜ ಜಾಲಗೇರಿ, ರಾಮು ಕೌಲಗಿ, ರಾಜುಗೌಡ ಪಾಟೀಲ, ಸಂಗಮೇಶ ಓಲೇಕಾರ, ತಾಪಂ ಇಒ ಭಾರತಿ ಚಲುವಯ್ಯ, ಪಿಡಬ್ಲ್ಯೂಡಿ. ಎಇಇ ಜೆ.ವಿ. ಕಿರಸೂರ, ಜೆಇ ಭೀಮನಗೌಡ ಬಿರಾದಾರ ಇದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next