Advertisement

ಅಭಿವೃದ್ಧಿ, ಹೈಕೋರ್ಟ್‌ ಪೀಠ ಸ್ಥಾಪನೆಗೆ ಆದ್ಯತೆ: ಜೆ.ಆರ್‌.ಲೋಬೋ

03:34 PM May 08, 2023 | Team Udayavani |

ಮಂಗಳೂರು: ದ.ಕ ಜಿಲ್ಲಾ ಕಾಂಗ್ರೆಸ್‌ ಕಾನೂನು ವಿಭಾಗದ ನೇತೃತ್ವದಲ್ಲಿ ಜಿಲ್ಲೆಯ ವಕೀಲರು ಮಂಗಳೂರು ನಗರ ದಕ್ಷಿಣ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಜೆ.ಆರ್‌.ಲೋಬೋ ಅವರೊಂದಿಗೆ ಸಂವಾದ ನಡೆಸಿದರು.

Advertisement

ಐವನ್‌ ಡಿ’ಸೋಜ ಅವರು ವಕೀಲರನ್ನು ಸ್ವಾಗತಿಸಿ, ಸುಜ್ಞಾನವಂತ ಮತ್ತು ಬಹಳ ಅನುಭವ ಹೊಂದಿದ ಜೆ.ಆರ್‌. ಲೋಬೋರವರು ಮಂಗಳೂರು ನಗರ ಮತ್ತು ದ.ಕ ಜಿಲ್ಲೆಯ ಅಭಿವೃದ್ಧಿಗಾಗಿ ಶಾಸಕರಾಗುವುದು ಅತೀ ಅವಶ್ಯ. ಆದ್ದ‌ರಿಂದ ಎಲ್ಲ ವಕೀಲರು ಸೇರಿ ಅವರನ್ನು ಚುನಾಯಿಸಲು ಶ್ರಮಿಸಬೇಕು ಎಂದು ಮನವಿ ಮಾಡಿದರು.

ಕಾಂಗ್ರೆಸ್‌ ಕಾನೂನು ವಿಭಾಗದ ಜಿಲ್ಲಾಧ್ಯಕ್ಷ ಮನೋರಾಜ್‌ ರಾಜೀವ್‌ ಅವರು ಮಾತನಾಡಿ, ದ.ಕ, ಉಡುಪಿ, ಮಡಿಕೇರಿ, ಚಿಕ್ಕಮಗಳೂರು ಜಿಲ್ಲೆಯ ಜನರಿಗೆ ಅನುಕೂಲವಾಗಲು ಮಂಗಳೂರಿನಲ್ಲಿ ಕರ್ನಾಟಕ ಉತ್ಛ ನ್ಯಾಯಾಲಯದ ಸಂಚಾರಿ ಪೀಠ ಸ್ಥಾಪಿಸುವ ಅಗತ್ಯವಿದೆ. ನ್ಯಾಯಾಲಯದ ಸಮೀಪ ವಕೀಲರ ಛೇಂಬರ್ ಸ್ಥಾಪಿಸಿ ಕಿರಿಯ ವಕೀಲರಿಗೆ ಕಡಿಮೆ ದರದಲ್ಲಿ ಬಾಡಿಗೆಗೆ ನೀಡಿ ವಕೀಲರನ್ನು ಪ್ರೋತ್ಸಾಹಿಸಬೇಕು. ಸರಕಾರಿ ಭೂಮಿಯಲ್ಲಿ ಅಥವಾ ಜಮೀನನ್ನು ಭೂಸ್ವಾಧೀನಪಡಿಸಿ ವಕೀಲರಿಗೆ ವಸತಿ ಲೇಔಟ್‌ ಸೌಕರ್ಯ ನೀಡಬೇಕು ಎಂದು ಬೇಡಿಕೆಯಿಟ್ಟರು. ಹಿರಿಯ ವಕೀಲರಾದ ಬಿ.ಇಬ್ರಾಹಿಂ, ಯಶವಂತ ಮರೋಳಿ, ಎಂ.ಪಿ.ನೊರೊನ್ಹಾ, ಮೊಹಮ್ಮದ್‌ ಹನೀಫ್ ಅಭಿಪ್ರಾಯ ಮಂಡಿಸಿದರು.

ಇದಕ್ಕೆ ಸ್ಪಂದಿಸಿದ ಜೆ.ಆರ್‌.ಲೋಬೋರವರು ತಾನು ಶಾಸಕನಾದರೆ ಮಂಗಳೂರಿನಲ್ಲಿ ಶಿಕ್ಷಣ, ಮಾಹಿತಿ ತಂತ್ರಜ್ಞಾನ, ಕ್ರೀಡೆ, ಕೈಗಾರಿಕೆ, ಪ್ರವಾಸೋದ್ಯಮ ಕ್ಷೇತ್ರದಲ್ಲಿ ಗಣನೀಯ ಅಭಿವೃದ್ಧಿ ಮಾಡಲು ಯೋಜನೆ ಹೊಂದಿದ್ದೇನೆ ಎಂದರು.

ಮಂಗಳೂರಿಗೆ ರಸ್ತೆ, ರೈಲು ಮಾರ್ಗ, ಜಲ ಮಾರ್ಗ, ವಾಯು ಮಾರ್ಗದ ಸಂಪರ್ಕವಿದ್ದು ವಿಮಾನ ನಿಲ್ದಾಣ, ಬಂದರು ಮತ್ತಿತರ ಸೌಲಭ್ಯಗಳಿವೆ. ಪ್ರಸ್ತುತ ಎಲ್ಲ ಬೃಹತ್‌ ಕೈಗಾರಿಕೆಗಳು ಮತ್ತು ಉದ್ಯಮಗಳು ಬೆಂಗಳೂರಿನಲ್ಲಿ ಕೇಂದ್ರೀಕೃತವಾಗಿದ್ದು ಬೆಂಗಳೂರು ಮತ್ತು ಮದ್ರಾಸ್‌ ಮುಖಾಂತರ ಸಿದ್ಧಪಡಿಸಿದ ಉತ್ಪನ್ನಗಳು ಸಾಗಾಟವಾಗುತ್ತಿವೆ. ಹಾಸನದಲ್ಲಿ ಬೃಹತ್‌ ಕೈಗಾರಿಕೆಗಳನ್ನು ಸ್ಥಾಪಿಸಿದಲ್ಲಿ ಮಂಗಳೂರಿನ ಬಂದರು, ವಿಮಾನ ನಿಲ್ದಾಣದ ಮುಖಾಂತರ ಸಿದ್ಧಪಡಿಸಿದ ಉತ್ಪನ್ನಗಳು ಸಾಗಾಟವಾದಲ್ಲಿ ಮಂಗಳೂರು ನಗರ ಅಭಿವೃದ್ಧಿಯಾಗುತ್ತದೆ ಎಂದರು.

Advertisement

1,500 ಎಕರೆ ಭೂ ಸ್ವಾಧೀನಪಡಿಸಿ ಅಂತಾರಾಷ್ಟ್ರೀಯ ಕ್ರಿಕೆಟ್‌ ಮತ್ತಿತರ ಕ್ರೀಡಾ ಮೈದಾನಗಳನ್ನು ಸ್ಥಾಪಿಸಿದಲ್ಲಿ ಜಗತ್ತಿನ ಎಲ್ಲ ಮೂಲೆಗಳಿಂದಲೂ ಜನರು ಮಂಗಳೂರಿಗೆ ಬರುವಂತಾಗುತ್ತದೆ, ಇದರಿಂದಾಗಿ ಪ್ರವಾಸೋದ್ಯಮ ಬೆಳೆಯುತ್ತದೆ. ವ್ಯವಹಾರಗಳು ಹೆಚ್ಚುತ್ತವೆ. ಶಾಂತಿ ಸುವ್ಯವಸ್ಥೆ ಕಾಪಾಡುವ ಮುಖಾಂತರ ಮಂಗಳೂರಿನಲ್ಲಿ ಲಭ್ಯವಿರುವ ನೆಲ, ಜಲ, ವಾಯು ಮಾರ್ಗಗಳ ಸಂಪರ್ಕದ ಪ್ರಯೋಜನ ಪಡೆದು ಬಹುದೊಡ್ಡ ಹೂಡಿಕೆದಾರರನ್ನು ಸೆಳೆಯಲು ಅವಕಾಶವಿದೆ.

ಇದರಿಂದ ಕ್ಷೇತ್ರದ ಜನರಿಗೆ ನೆಮ್ಮದಿ ಉಂಟಾಗುವುದು ಮಾತ್ರವಲ್ಲ, ವಕೀಲರಿಗೂ ವಿವಿಧ ಕ್ಷೇತ್ರಗಳಲ್ಲಿ ತಮ್ಮ ವಕೀಲ ವೃತ್ತಿಯನ್ನು ಉನ್ನತ ಮಟ್ಟದಲ್ಲಿ ನಡೆಸಲು ಹಲವು ಅವಕಾಶಗಳು ಲಭಿಸುತ್ತವೆ. ಕರ್ನಾಟಕ ಉತ್ಛ ನ್ಯಾಯಾಲಯದ ಸಂಚಾರಿ ಪೀಠವನ್ನು ಮಂಗಳೂರಿನಲ್ಲಿ ಸ್ಥಾಪಿಸಲು ಹೋರಾಡುವೆ ಮತ್ತು ಸಂಚಾರಿ ಪೀಠ ಸ್ಥಾಪನೆಯಿಂದ ಜನರಿಗೆ ಕಡಿಮೆ ವೆಚ್ಚದಲ್ಲಿ ನ್ಯಾಯ ಸಿಗಲು ಅವಕಾಶ ಲಭಿಸುತ್ತದೆ. ಮಾತ್ರವಲ್ಲ ಮಂಗಳೂರಿನ ವಕೀಲರು ಬಹಳ ಬುದ್ಧಿವಂತರಾಗಿರುವುದರಿಂದ ವಕೀಲ ವೃತ್ತಿಯೂ ಸಮೃದ್ಧಿಭರಿತವಾಗಲಿದೆ ಎಂದು ಹೇಳಿದರು.

ವಕೀಲರು ಹೌಸಿಂಗ್‌ ಸೊಸೈಟಿಯನ್ನು ರಚಿಸಿದರೆ ಸರಕಾರಿ ಜಮೀನಿನಲ್ಲಿ ಅಥವಾ ಭೂ ಸ್ವಾಧೀನ ಮಾಡಿ ವಕೀಲರಿಗೆ ಹೌಸಿಂಗ್‌ ಲೇ ಔಟ್‌ನ್ನು ಸ್ಥಾಪಿಸಲು ಸಹಕರಿಸುವುದಾಗಿ ಭರವಸೆ ನೀಡಿದರು.

ವೇದಿಕೆಯಲ್ಲಿ ಹಿರಿಯ ವಕೀಲರಾದ ನಾರಾಯಣ ಪೂಜಾರಿ, ಎಂ.ಪಿ.ಶೆಣೈ, ಮುಜಾಫ‌ರ್‌, ಕಳ್ಳಿಗೆ ತಾರಾನಾಥ ಶೆಟ್ಟಿ, ಎ.ಸಿ.ಜಯರಾಜ್‌ ಉಪಸ್ಥಿತರಿದ್ದರು. ದಿನಕರ ಶೆಟ್ಟಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next