Advertisement

ಮಕ್ಕಳು ಸಾಹಿತ್ಯ ಓದುವ ಅಭಿರುಚಿ ಬೆಳೆಸಿಕೊಳ್ಳಿ

04:09 PM Dec 05, 2022 | Team Udayavani |

ಬಾಗಲಕೋಟೆ: ಮಕ್ಕಳು ಪಠ್ಯದ ಜತೆಗೆ ಪೂರಕವಾಗಿ ಸಾಹಿತ್ಯ ಓದುವುದರಿಂದ ಜ್ಞಾನ ವೃದ್ಧಿಯಾಗುತ್ತದೆ. ಹಾಗೂ ಬಾವಿ ಬದುಕು ಸುಂದರವಾಗುತ್ತದೆ. ಹೀಗಾಗಿ ಮಕ್ಕಳು ಸಾಹಿತ್ಯ ಓದುವ ಅಭಿರುಚಿ ಬೆಳೆಸಿಕೊಳ್ಳಬೇಕು ಎಂದು ಬಾಗಲಕೋಟೆಯ ಉಪ ವಿಭಾಗಾಧಿ ಕಾರಿ ಶ್ವೇತಾ ಬೀಡಿಕರ್‌ ಹೇಳಿದರು.

Advertisement

ನವನಗರದ ಕನ್ನಡ ಸಾಹಿತ್ಯ ಪರಿಷತ್ತು ಭವನದಲ್ಲಿ ರವಿವಾರ ನಡೆದ ತಿಂಗಳ ಅತಿಥಿ ವಿಶೇಷ ಕಾರ್ಯಕ್ರಮ ಸರಣಿ-6 ರ ಉತ್ತರಕನ್ನಡ ಜಿಲ್ಲೆಯ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಮಕ್ಕಳ ಸಾಹಿತಿ ತಮ್ಮಣ್ಣ ಬೀಗಾರ ಅವರ ಕುರಿತಾದ ಸಾಹಿತ್ಯಾವಲೋಕನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನಾನೂ ಸಹ ಆಂಗ್ಲ ಮತ್ತು ಕನ್ನಡ ಭಾಷಾ ಸಾಹಿತ್ಯ ಓದಿದವಳು. ಬಾಲ್ಯದಿಂದ ಕಥೆ, ನಾಟಕ, ಕವಿತೆ ಮುಂತಾದ ಸಾಹಿತ್ಯ ಪ್ರಕಾರಗಳನ್ನು ಓದುತ್ತಿದ್ದೆ. ಈ ಹುದ್ದೆಗೆ ಬರುವುದಕ್ಕಿಂತ ಮೊದಲು ಎಸ್‌. ಎಲ್‌. ಭೈರಪ್ಪ, ಕುವೆಂಪು ಹೀಗೆ ವಿವಿಧ ಸಾಹಿತಿಗಳ ಸಾಹಿತ್ಯ ಓದುವ ಹವ್ಯಾಸವಿತ್ತು. ಸದ್ಯ ಕೆಲಸದ ಒತ್ತಡದಲ್ಲಿ ಕಡಿಮೆಯಾಗಿದೆ. ಇನ್ನು ಮುಂದೆ ಓದನ್ನು ಬೆಳೆಸಿಕೊಳ್ಳುತ್ತೇನೆ. ಮಕ್ಕಳಾದ ತಾವು ಸಾಹಿತ್ಯ ಪ್ರಕಾರಗಳಾದ ಕಥೆ, ಕವನ, ನಾಟಕ ಇತ್ಯಾದಿಗಳ ಓದಿನ ಹವ್ಯಾಸ ಬೆಳೆಸಿಕೊಳ್ಳಿ ಎಂದರು.

ಬಾಗಲಕೋಟೆಯ ಬಾಲಕಿಯರ ಸರ್ಕಾರಿ ಪಪೂ ಕಾಲೇಜಿನ ಉಪನ್ಯಾಸಕ ಶಿವಶಂಕರ ಮುತ್ತಗಿ ತಿಂಗಳ ಅತಿಥಿಗಳ ಸಾಹಿತ್ಯಾವಲೋಕನ ಮಾಡಿದರು. ತಿಂಗಳ ಅತಿಥಿಗಳಾಗಿ ತಮ್ಮಣ್ಣ ಬೀಗಾರ ಸನ್ಮಾನ ಸ್ವೀಕರಸಿ ಮಾತನಾಡಿ, ಬಾಗಲಕೋಟೆ ಕನ್ನಡ ಸಾಹಿತ್ಯ ಪರಿಷತ್ತಿ ಮಾಡುತ್ತಿರುವ ಕಾರ್ಯ ಶ್ಲಾಘನೀಯವಾಗಿದೆ. ಲೇಖಕರ ಎದುರಲ್ಲಿ ಅವರ ಸಾಹಿತ್ಯ ಕುರಿತು ಅವಲೋಕನ ಮಾಡುತ್ತಿರುವ ಬಾಗಲಕೋಟೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ರಾಜ್ಯದಲ್ಲಿ ಮಾದರಿಯಾಗಿದೆ. ಮಕ್ಕಳ ಸಾಹಿತ್ಯ ನನಗೆ ತುಂಬಾ ಹಿಡಿಸಿದ್ದರಿಂದ ಅದನ್ನು ಮುಂದುವರಿಸಿದ್ದೇನೆ. ಸುಮಾರು 28 ಮಕ್ಕಳ ಕೃತಿಗಳನ್ನು ರಚಿಸಿದ್ದೇನೆ. ಮಕ್ಕಳ ಮನಸ್ಸನ್ನು ಅರಳಿಸುವ, ಅವರ ಭವಿಷ್ಯವನ್ನು ರೂಪಿಸುವ ಉದ್ದೇಶ ನನ್ನ ಬರವಣಿಗೆಯದಾಗಿದೆ ಎಂದರು.

ತಮ್ಮಣ್ಣ ಬೇಗಾರ ಅವರ ಸಾಹಿತ್ಯ ಓದಿದ ಮಕ್ಕಳು ಅನೇಕ ಪ್ರಶ್ನೆಗಳಿಗೆ ತಮ್ಮಣ್ಣ ಬೇಗಾರ ಉತ್ತರ ನೀಡಿದರು. ಮಕ್ಕಳ ಸಾಹಿತಿ ಸೋಮಲಿಂಗ ಬೇಡರ ಮತ್ತು ಬಿಟಿಡಿಎ ಪ್ರಾಥಮಿಕ ಶಾಲಾ ಮಕ್ಕಳು ಅವರೊಂದಿಗೆ ಸಾಹಿತ್ಯ ಸಂವಾದ ಮಾಡಿದರು.

Advertisement

ಕಸಾಪ ಜಿಲ್ಲಾಧ್ಯಕ್ಷ ಶಿವಾನಂದ ಶೆಲ್ಲಿಕೇರಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಕನ್ನಡ ನಾಡು-ನುಡಿಗಾಗಿ ಸಾಹಿತ್ಯ ಸೇವೆ ಮಾಡಿರುವವರ ಕೃತಿಗಳ ಅವಲೋಕನದಿಂದ ಸಾಹಿತ್ಯದಲ್ಲಿರುವ ಮೌಲ್ಯಗಳು ಮಕ್ಕಳಿಗೆ ಸ್ಫೂರ್ತಿ ಮತ್ತು ಪ್ರೇರಣೆ ನೀಡುವಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಕಂಕಣಬದ್ಧವಾಗಿದೆ ಎಂದು ಹೇಳಿದರು.

ಬಿಟಿಡಿಎ ಶಾಲೆಯ ಮುಖ್ಯಾಧ್ಯಾಪಕ ಶರಣಪ್ಪ ಬೇವೂರ, ಕಸಾಪ ತಾಲೂಕ ಕೋಶಾಧ್ಯಕ್ಷ ಬಸಲಿಂಗಯ್ಯ ಮಠಪತಿ, ಗೌರವ ಕಾರ್ಯದರ್ಶಿ ಶಂಕರ ಹೂಗಾರ, ಜಿಲ್ಲಾ ಮಾಧ್ಯಮ ಕಾರ್ಯದರ್ಶಿ ಸಂಗಮೇಶ ಬಡಿಗೇರ, ಕಥೆಗಾರ ಅನಿಲ ಗುನ್ನಾಪುರ, ಸಂಘಟನಾ ಕಾರ್ಯದರ್ಶಿ ಮುತ್ತು ಬಳ್ಳಾ, ಬಿಟಿಡಿಎ ಶಾಲಾ ಮಕ್ಕಳು, ಶಿಕ್ಷಕರು ಪಾಲ್ಗೊಂಡಿದ್ದರು. ಅರ್ಜನ ಮತ್ತು ಅಜಯ ಕೋರಿಶೆಟ್ಟರ ಪ್ರಾರ್ಥಿಸಿದರು. ಬಾಗಲಕೋಟೆ ತಾಲೂಕ ಕಸಾಪ ಅಧ್ಯಕ್ಷ ಪಾಂಡುರಂಗ ಸಣ್ಣಪ್ಪನವರ ಸ್ವಾಗತಿಸಿದರು. ಮಲ್ಲಿಕಾರ್ಜುನ ಶೆಲ್ಲಿಕೇರಿ ಆಶಯ ನುಡಿ ಹೇಳಿದರು. ಜಿಲ್ಲಾ ಗೌರವ ಕಾರ್ಯದರ್ಶಿ ಡಾ|ಚಂದ್ರಶೇಖರ ಕಾಳನ್ನವರ ಕಾರ್ಯಕ್ರಮ ನಿರೂಪಿಸಿದರು. ಜಿಲ್ಲಾ ಕೋಶಾಧ್ಯಕ್ಷ ಡಾ| ಸಿ.ಎಂ.ಜೋಶಿ ವಂದಿಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next