Advertisement

ಇಲ್ಲಿದೆ ಪಕ್ಷಿ ಕಾಶಿ

03:45 PM Jan 20, 2018 | |

ದೇವನಹಳ್ಳಿಯ ಕೃಷಿಕ ಶಿವನಾಪುರ ರಮೇಶ್‌ರ ತೋಟ ಪಕ್ಷಿಕಾಶಿಯಾಗಿದೆ.ಅಲ್ಲಿ 35ಕ್ಕೂ ಹೆಚ್ಚು ಜಾತಿಯ ನೂರಾರು ಪಕ್ಷಿಗಳಿವೆ. ಇಂಡಿಯನ್‌ ಪಿಟ್ಟ ಹಕ್ಕಿ ಹಿಮಾಲಯದಿಂದ ರಮೇಶ್‌ ತೋಟಕ್ಕೆ ಬಂದು, ಇಲ್ಲಿನ ಆಹಾರ ತಿಂದು, ವಾಸವಿದ್ದು ಹೋಗುತ್ತದೆ.  ಪಕ್ಷಿಗಳಿಗೆಂದೇ ತೋಟದಲ್ಲಿ ಬಗೆ ಬಗೆಯ ಹಣ್ಣಿನ ಗಿಡಗಳನ್ನು ಬೆಳೆಸಿದ್ದಾರೆ ರಮೇಶ್‌. ಸಂಪೂರ್ಣ ಸಾವಯವ ಉತ್ಪನ್ನವಾಗಿರುವ ಇಲ್ಲಿ ಹಣ್ಣು ಹಂಪಲನ್ನು ತಿಂದು ಖುಷಿಪಡುವ ಪಕ್ಷಿಗಳು ದಿನವೂ ಬೆಳಗ್ಗೆ ಸಂಜೆಯಾದರೆ ಸಂಗೀತ ಕಛೇರಿಯನ್ನು ನಡೆಸುತ್ತವೆ…ರೈತನಾದವನು ಹೀಗೀ ಪಕ್ಷಿಗಳ ಸಂಘ ಮಾಡಬಹುದು ಅನ್ನೋದಕ್ಕೆ ರಮೇಶರೇ ಉದಾಹರಣೆ. 

Advertisement

   ಅದು ತೋಟ. ಎಡ ಭಾಗದಲ್ಲಿ ಕಾರ್‌ಶೆಡ್‌. ಎದುರಿಗೆ ಮನೆ. ಅದರ ಮುಂಭಾಗದಲ್ಲಿ ವಿಶಾಲವಾದ ತೋಟ. ಅದನ್ನು ತುಂಬಿಕೊಂಡಂತೆ ನೂರಾರು ಪುಟ್ಟ ,ಪುಟ್ಟ ಹಣ್ಣಿನ ಗಿಡಗಳು. ಅದರ ಮಧ್ಯೆ ಏನೋ ಗಾಢವಾಗಿ ನೋಡುತ್ತಾ ನಿಂತಿದ್ದ ರಮೇಶ್‌. ಪೂರ್ತಿ ಹೆಸರು ಶಿವನಾಪುರ ರಮೇಶ್‌. ಕೃಷಿ ಇವರ ಬದುಕು.  ತಲೆಯ ಮೇಲೊಂದು ಟೊಪ್ಪಿ. ಮೈತುಂಬಾ ಕೋಟು.  ರಮೇಶ್‌ ಯಾರದೋ ಕಣ್ಣಲ್ಲಿ ಕಣ್ಣಿಟ್ಟಂತೆ ಇತ್ತು. 
ಯಾರದೂ..? ತೋರ್‌ ಬೆರಳು ತುಟಿಯ ಮೇಲೆ ಹೋಗಿ ನಿಂತಾಗ “ಶ್‌..ಶ್‌’ ಸದ್ದು ಬಂತು.  ಅವರು ನಿಂತ ಎಡಭಾಗಕ್ಕೆ ಕಲ್ಲಂಕಣದ ಕೋಟೆ ಬಾವಿ. ಅದರಲ್ಲಿ ಏನೋ ಅನಾಹುತವಾಗಿರಬಹುದೇ? 

ಅನುಮಾನ.
 ಕ್ಷಣಾರ್ಧದಲ್ಲಿ ಕ್ಷಣಭಂಗುರ. ಇಣುಕಿದರೆ ಟರ್ಕಿ ಕೋಳಿ  ಓಡಾಡುತ್ತಿದೆ. ಅರೆ, ಬಾವಿ ಮುಚ್ಚೋದು ಅಂದರೆ ಇಡೀ ಬಾವಿಗೆ ಮಣ್ಣು ತುರುಕಿ, ಬಂಡೆ ಹಾಸಿ, ನೆಲಸಮಮಾಡಿ ನಿಟ್ಟುಸಿರು ಬಿಟ್ಟುಬಿಡೋದೇ. ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರದಲ್ಲಿ ಬರ ಬಡಿದು, ರೈತರ ತೋಟದಲ್ಲಿ ಬಾವಿಗಳು ಮುಚ್ಚಿ ಹಾಕಿದ್ದಾರೆ.   ಆದರೆ ಇವರು ಹಾಗೆ  ಮಾಡಿಲ್ಲ. ಬಾವಿಯ ಕಂಠಪೂರ್ತಿ ಮುಚ್ಚಿ, ಮೆಟ್ಟಿಲು ಇಟ್ಟು. ಅದರೊಳಗೆ ದೊಡ್ಡ ದೊಡ್ಡ ಕೋಳಿಗಳನ್ನು ಬಿಟ್ಟು ಬಾವಿಯನ್ನು ಸದ್ಬಳಕೆ ಮಾಡಿದ್ದಾರೆ. ಹೀಗೆ ಮಾಡಿದ್ದರಿಂದ ಒಂದು ಕಡೆ ನೀರು ಇಂಗಿಸಿದಂತೆಯೂ ಆಯಿತು. ಮತ್ತೂಂದು ಕಡೆ ಕೋಳಿಗೂ ಮನೆಯಾಯಿತು ಅನ್ನೋದು ರಮೇಶ್‌ ಲೆಕ್ಕಾಚಾರ. ಅವರು ಆಗಾಗ ಬಾವಿಗಿಳಿದು ಅದನ್ನು ನೋಡಿಕೊಂಡು ಬರುತ್ತಾರೆ. 

Advertisement

 ಹೀಗೇಕೇ?
 “ನಾವಂತೂ ಭೂಮಿಗೆ ನೀರು ಕುಡಿಸುತ್ತಿಲ್ಲ. ಈ ರೀತಿಯಾದರೂ ಕುಡೀಲಿ’ ಅಂತ ಹೇಳಿ ರಮೇಶ್‌ ನಕ್ಕರು. 
 “ಸ್ವಲ್ಪ, ನೋಡಿ, ನೋಡಿ ಅಲ್ಲಿ, ಅಲ್ಲಿ..’ ಹೀಗೆ ಹೇಳಿ.  ಎರಡೂ ಕೈಯನ್ನು ಸೊಂಟದ ಮೇಲೆ ಇಟ್ಟುಕೊಂಡು ನಿಂತರು. ಅವರಿಂದೆ ನಾವು. ನಮ್ಮ ಕಣ್ಣಿಗಂತೂ ಏನೂ ಕಾಣುತ್ತಿಲ್ಲ. ಬರೀ ಚಿಲಿಪಿಲಿ ದನಿಯೇ.. ಹೀಗಿದ್ದಾಗಲೇ, ಒಂದಷ್ಟು ಕಂದು ಬಣ್ಣ ಮರದ ಅಂಚಿಗೆ ಮಿಂಚಿ ಮರೆಯಾದಂತಾಯಿತು. 
 “ನೋಡಿ, ಕಲ್ಲು ಗೊರವಗಳನ್ನು. ಬಡ್ಡಿಮಂಗದ್‌ ಎಷ್ಟು ಧೈರ್ಯ ಗೊತ್ತ ಅವಕ್ಕೆ ಹದ್ದುಗಳನ್ನೂ ಅಟ್ಟಿಸಿಕೊಂಡು ಹೋಗ್ತವೆ.  ನನ್ನ ಮಗಳು ಎಷ್ಟೋ ಸಲ ಕೋತಿ, ನಾಯಿನಾ  ಓಡಿಸಿದಂತೆ ಕೋಲು ತಗೊಂಡು ಅಟ್ಟಿಸಿಕೊಂಡು ಹೋಗಿದ್ದೂ ಉಂಟು ‘ ನಕ್ಕು ನುಡಿದರು.

  

  ಸಾಮಾನ್ಯವಾಗಿ ಜಮೀನಿನಲ್ಲಿ ಈ ರೀತಿ ಹಕ್ಕಿಗಳ ದಾಳಿ ನಡೆದರೆ ಆಗೆಲ್ಲಾ,  ರೈತರ ಮುಖ ಕೆಂಡವಾಗುತ್ತದೆ. ಆದರೆ ರಮೇಶ್‌ ನಿರುಮ್ಮಳವಾಗಿದ್ದರು.  ಅಲ್ನೋಡಿ, ಮಧ್ಯಾಹ್ನ ಆದರೆ ಶುರು ಮಾಡ್ತದೆ… ಅಂತ ಮತ್ತೆ ಹೇಳಿದರು.

 ನೋಡ ನೋಡುತ್ತಿದ್ದಂತೆ ರಮೇಶ್‌ ಮತ್ತಷ್ಟು ಸೀರಿಯಸ್ಸಾದರು. ಈ ಸಲ ತಥಾಕಥಿತವಾಗಿ ಎಂಥದೋ ದುರಂತ ಸಂಭವಿಸಿರಲೇ ಬೇಕು ಅಂತ ಅನುಮಾನ ಪಡುವಷ್ಟರಮಟ್ಟಿಗೆ  ಅವರ ಹುಬ್ಬುಗಳು ಮೇಲಕ್ಕೆ ಏರಿದವು. ಕಣ್ಣ ಮೈದಾನ ಬಿಗಿದು, ಸುಲೋಚನದಿಂದಲೇ ಮತ್ತಷ್ಟು ಅಗಲವಾಗಿದ್ದೇ ಅವರ ಕೈ ರೈಫ‌ಲ್‌ ರೀತಿ ನೇರ ಚಾಚಿ ತೋಬೇìರಳು ಚೂಪಾಗಿ ಮುಂದೆ ಬಾಗಿ ಮಿಕ್ಕ ನಾಲ್ಕು ಬೆರಳು ಮಡಚಿ ಹಿಂದೆ ಸರಿದವು… “ಕಾಣಿಸ್ತಾ, ಕಾಣಿಸ್ತಾ’ ಅಂದರು. ಗಡಿಯಲ್ಲಿ ನುಸುಳುಕೋರರು ನುಸುಳಿದರೋ ಏನೋ ಅನ್ನೋ ರೀತಿ ಸ್ವಲ್ಪ ನಿಶಬ್ದ.. ಮತ್ತೆ.. ಎರಡೂ ತುಟಿಗಳಿಂದ ಶ್‌.. ಸದ್ದು ಮಾಡಿದರು.  ನೋಡಿದರೆ…ಮರದಲ್ಲಿ ಚಿಟ್ಟೆ ಗಿಳಿ ಕೂತಿದೆ.  ಬಹಳ ಸಣ್ಣದ್ದು. ರಮೇಶ್‌ “ನೋಡಿ’ ಅಂದಾಕ್ಷಣ ನೋಡಲು ಹೇಗೆ ಸಾಧ್ಯ? ಅದು ಕಾಣುವುದಾದರೂ ಹೇಗೆ?  ಪಕ್ಷಿ ವೀಕ್ಷಣೆ ಸುಲಭದ್ದಲ್ಲ.  ಕಟ್ಟಡ, ಟ್ರಾಫಿಕ್‌, ಹೊಗೆ ಹೀಗೆ ಹಸಿರನ್ನು ಹೀರದ ನಗರ ಕಣ್ಣುಗಳು ಒಮ್ಮೆಗೇ ಪಕ್ಷಿಗಳನ್ನು ನೋಡುವುದು ಎಂದರೆ ಹೇಗೆ? ಎಲ್ಲ ಒದ್ದಾಟಗಳನ್ನು ಮೀರಿ ಹಾಗೇ ಗುರಿ ಇಕ್ಕಿ ನೋಡತೊಡಗುವ ಹೊತ್ತಿಗೆ… ಪುರ್‌ ಅಂತ ರೆಕ್ಕೆ ಬಿಚ್ಚಿ ಹಾರಲು ಸಿದ್ದವಾಗಿತ್ತು ಚಿಟ್ಟೆ ಗಿಳಿ. 

  ಅವರ ಜೊತೆಗೆ ಹೀಗೆ ಹೆಜ್ಜೆ ಹಾಕುತ್ತಾ ತೋಟದಲ್ಲಿ ಸಾಗುತ್ತಿದ್ದರೆ ಮನೆಯ ಹಿಂಬಿದಿಯಲ್ಲಿ ಒಂದಷ್ಟು ಪುಟ್ಟ ಪುಟ್ಟ ಗಿಡಗಳ ಪೊದೆ ಇತ್ತು… ಇಂಡಿಯನ್‌ ಪಿಟ್‌ನ ಮನೆ ಅದು. ಸೇಫಾಗಿ ಇಟ್ಟಿದ್ದೀವಿ. ಚಳಿ ಕಳೆದ ತಕ್ಷಣ ಬರುತ್ತೆ. ಹಿಮಾಲಯದಿಂದ ಬರಬೇಕಲ್ಲ. ಬರೀ ಗಂಡು ಹಕ್ಕಿ ಮಾತ್ರ ಬರೋದು.  ಹೆಣ್ಣನ್ನು ಅಲ್ಲೇ ಬಿಟ್ಟು ಬರುತೆÌ.  ಇಲ್ಲಿನ ಆಹಾರ ತಿಂದು ಹೋದರೆ ಅದಕ್ಕೆ ಸಂತಾನಾಭಿವೃದ್ಧಿ ಸುಸೂತ್ರವಾಗಿ ಆಗುತ್ತಂತೆ’ ರಮೇಶ್‌ ಬಾಣಂತನ ಮಾಡುವ ಅಮ್ಮನಂತೆ ಹೇಳುತ್ತಾ ಹೋದರು. 

 ದೇವನಹಳ್ಳಿಯ ರಾಣಿ ಸರ್ಕಲ್‌ ನಲ್ಲಿರುವ ರಮೇಶ ಅವರ ತೇಜ ನರ್ಸರಿಗೆ ಹೋದರೆ ಇಂಥದೊಂದು ಪಕ್ಷಿಗಳ ಪರಸಂಗ ನೋಡಬಹುದು.  ಹೆಚ್ಚು ಕಡಿಮೆ 30-35 ಜಾತಿಯ ಹಕ್ಕಿಗಳಿವೆ. ಅಂದರೆ ಸರಿಸುಮಾರು 500ಕ್ಕೂ ಹೆಚ್ಚು ಹಕ್ಕಿಗಳ ತಂಗುದಾಣ ಈ ನರ್ಸರಿ. ರಮೇಶ್‌ ನರ್ಸರಿಯಲ್ಲಿ ಟಿಕಲ್‌ ಬ್ಲೂ ಫ್ಲೈಕ್ಯಾಚರ್‌, ಗೋಲ್ಡನ್‌ ಓರಿಯಲ್‌, ಬಾರ್ನ್ ಔಲ್‌, ರಾಬಿನ್‌, ಸ್ಪಾಟೆಡ್‌ ಔಲೆಟ್‌, ಲೀಫ್ ಬರ್ಡ್‌ ಹೀಗೆ ಹಲವಾರು ಹಕ್ಕಿಗಳು. ಬೆಳಗ್ಗೆ, ಸಂಜೆಯಾದರೆ ಸಂಗೀತ ಕಛೇರಿ. ರಾಗಗಳನ್ನು ಗುರುತಿಸುವ ಛಾತಿ ಇದ್ದರೆ ಸಾಕು.  ಕ್ಯಾಮೆರ ಹಿಡಿದು ಬಂದವರಿಗೆ ಸ್ವರ್ಗ.  “ಆರಂಭದಲ್ಲಿ ನನಗೂ ಗೊತ್ತಾಗ್ತಿರಲಿಲ್ಲ. ರಾಬಿನ್‌, ಮಡಿವಾಳ ಹಕ್ಕಿ ಮನೆಯ ಮೇಲೆ ಮಕ್ಕಳನ್ನು ಕರೆದುಕೊಂಡು ಬಂದು ಆಟವಾಡೋದು. ಏಕಪ್ಪ ಅಂದುಕೊಂಡೆ?  ನಿಧಾನಕ್ಕೆ ತಿಳೀತು. ಇದು ನಾನು ಜಾಗ ಕೊಟ್ಟಿದ್ದಕ್ಕೆ, ರಕ್ಷಣೆ ಮಾಡಿದ್ದಕ್ಕೆ ನನಗೆ ಥ್ಯಾಂಕ್ಸ್‌ ಹೇಳ್ಳೋಕೆ ಸಕುಟುಂಬ ಸಮೇತ ಬರುತ್ತಿತ್ತು ಅಂತ ರಮೇಶ್‌ ನೆನಪಿಸಿಕೊಂಡರು.

 ರಮೇಶ್‌ ಪಕ್ಷಿ ತಜ್ಞರೇನಲ್ಲ. ಹುಟ್ಟ ರೈತ.  ಆದರೆ ಪರಿಸರ ಪ್ರೇಮಿ. ನಂದಿಬೆಟ್ಟದ ಪಕ್ಕದಲ್ಲಿರೋ ಚನ್ನರಾಯಸ್ವಾಮಿ ಬೆಟ್ಟಕ್ಕೆ ಡೈನಾಮೇಟ್‌ ಇಟ್ಟು ಉಡೀಸ್‌ ಮಾಡಲು ಮುಂದಾದಾಗ ಮೊದಲು ಆತಂಕ ಗೊಂಡವರು ಇದೇ ರಮೇಶ್‌. 
ಜನ ಕಟ್ಟಿಕೊಂಡು ಹೋಗಿ ಹೋರಾಟ ನಡೆಸಿ ನಿಲ್ಲಿಸಿದರು. ಪ್ರತಿ ಮಳೆಗಾಲದಲ್ಲಿ ಚನ್ನರಾಯಸ್ವಾಮಿ ಬೆಟ್ಟದ ಬಂಡೆಗಳ ಮೇಲಿಂದ ಧುಮುಕುವ ಜೋಗ್‌ಫಾಲ್ಸ್‌ನ್ನು ಛತ್ರಿ ಹಿಡಿದು ನೋಡಿಕೊಂಡು ಬರುತ್ತಾರೆ. ಅಂಥ ಪ್ರಕೃತಿ ಪ್ರೀತಿ ಅವರದ್ದು.  

 “ಪಕ್ಷಿಗಳ ವೀಕ್ಷಣೆ ಮಾಡೋದು ನನಗೆ ಹವ್ಯಾಸ.  ಅಂಥಾ ಜ್ಞಾನ ಇಲ್ಲ. ಅದರಲ್ಲಿ ಆಳವಾಗಿ ಇಳಿಯೋಕೆ ಸಮಯ ಬೇಕು. ಕೃಷಿ ಕೆಲಸಗಳು ಜಾಸ್ತಿ ಇರೋದರಿಂದ ಅದನ್ನು ಮಾಡೋಕೆ ಆಗಲಿಲ್ಲ. ಆದರೆ ಒಬ್ಬ ರೈತನಾಗಿ ಹೀಗೂ ಮಾಡಬಹುದಲ್ಲ ಅಂತ ಪ್ರಯೋಗ ಶುರುವಾಡಿದೆ.   ನಮ್ಮ ತೋಟದಲ್ಲಿ ಹೆಚ್ಚಾ ಕಡಿಮೆ 60 ಜಾತಿಯ ಹಣ್ಣುಗಳ ಗಿಡಗಳಿವೆ.  ಗಿಡದಲ್ಲಿರೋ ಎಲ್ಲಾ ಹಣ್ಣುಗಳನ್ನು ಕೀಳ್ಳೋದಿಲ್ಲ. ಒಂದಷ್ಟು ಹಣ್ಣ ಕೊಳೆಯುತ್ತೆ, ಕೆಳಗೆ ಬೀಳುತ್ತೆ. ಹಾಗೇ ಆಗಲೀ ಅಂತ ಬಿಡುತ್ತೇನೆ. ಏಕೆಂದರೆ ಅವಕ್ಕೆ ಹುಳುಗಳು ನಾಟುತ್ತೆ. ಆ ಹುಳುಗಳನ್ನು ತಿನ್ನಲು ಪಕ್ಷಿಗಳು ಹುಡುಕಿಕೊಂಡು ಬರುತ್ತವೆ. ಇದರಿಂದಾಗಿ ಹಕ್ಕಿಗಳಿಗೆ ಒಂದು ಕಡೆ ಸೂರು, ಇನ್ನೊಂದು ಕಡೆ ಆಹಾರ ಎರಡೂ ಸಿಕ್ಕಂತೆ ಆಯಿತು.  ನನ್ನ ತೋಟ ಪೂರ್ತಿ ಸಾವಯವ ಆದ್ದರಿಂದ ವಿಷ ಆಹಾರ ಇಲ್ಲ.  ಅದಕ್ಕೆ ರಕ್ಷಣೆ, ಶುದ್ಧ ಆಹಾರ ಎರಡೂ ಸಿಕ್ಕಂತೆ ಆಗುತ್ತದೆ -ರಮೇಶ್‌ ವಿವರಿಸುತ್ತಾ ಹೋದರು.  

 ಹಾಗಾದರೆ ಹಣ್ಣುಗಳನ್ನೆಲ್ಲ ಪಕ್ಷಿಗಳೇ ತಿಂದರೆ ಲಾಸ್‌ ಆಗೋಲ್ವೇ?
 ಹೇಗೆ ಲಾಸ್‌ ಆಗುತ್ತದೆ? ಮೂರು ಕೆ.ಜಿ ಹಣ್ಣು ತಿಂದರೆ ನಾಲ್ಕು ಕೆ.ಜಿ ಹುಳ್ಳುಗಳನ್ನು ತಿನ್ನುತೆÌ. ಸಾವಿರಾರು ಹುಳು ಕೊಲ್ಲಲು ರೈತ ಎಷ್ಟೆಲ್ಲಾ ತಲೆ ಕೆಡಿಸಿಕೊಳ್ಳಬೇಕು, ಒದ್ದಾಡಬೇಕು ಗೊತ್ತಾ? ಇದು ಲಾಭ ಅಲ್ವೇ? ಲಾಸ್‌ ಹೇಗೆ ಆಗುತ್ತೆ?- ರಮೇಶ್‌ ಸಾರ್ಥಕ ಪ್ರಶ್ನೆ ಕೇಳಿದರು. 

 ಪಕ್ಷಿಗಳಿಗೆ ಸಪೋಟ ಅಂದರೆ ಇಷ್ಟ. ಅದರಲ್ಲೂ ಸಾವಯದ್ದಾದರೆ ಪ್ರಾಣ.  ಏಕೆಂದರೆ ಅದರಲ್ಲಿ ಹೆಚ್ಚಿನ ನ್ಯೂಟ್ರೀಷಿಯನ್‌, ಕಾಬೋìಹೈಡ್ರೇಟ್‌ ಇರುತ್ತವೆ. ಚೆರ್ರಿ , ಸೀಬೆ ಹಣ್ಣಗಳೂ ಪಕ್ಷಿಗಳಿಗೆ ಪ್ರಾಣಪ್ರಿಯ. ಇವರ ತೋಟದಲ್ಲಿ ಸಣ್ಣ, ಸಣ್ಣ ಚೆರಿಗಿಡಗಳಿವೆ. ಇವುಗಳಲ್ಲಿ ಒಂದಷ್ಟನ್ನು ಪಕ್ಷಿಗಳಿಗೆ ಅಂತಲೇ ಎತ್ತಿಡುತ್ತಾರೆ. 

ರಮೇಶ್‌ ಪಕ್ಷಿ ಪ್ರೀತಿ ಎಷ್ಟಿದೆ ಎಂದರೆ,  ಎಷ್ಟೋ ಸಲ ನರ್ಸರಿಯಲ್ಲಿನ ಗಿಡಗಳನ್ನು ಮಾರಾಟ ಮಾಡಬೇಕಾದರೆ ಹಕ್ಕಿ ಗೂಡುಗಳು ಇವೆಯೇ ಅಂತ ನೋಡುತ್ತಾರೆ.  ಒಂದು ಪಕ್ಷ ಗೂಡು ಕಟ್ಟಿದ್ದರೆ ಆ ಭಾಗದ ಗಿಡಗಳನ್ನು ಮಾರಾಟ ಮಾಡುವುದಿಲ್ಲ. ಹೀಗಾಗಿ ರಮೇಶ್‌ ಯೋಗ ಮಾಡುತ್ತಿದ್ದರೆ  ಪಕ್ಷಿಗಳೇ ವೀಕ್ಷಕವಿವರಣೆ ಕೊಡುತ್ತಿರುತ್ತದೆ. 

 ಇಡೀ ತೋಟದ ರಚನೆ ಕೂಡ ಪಕ್ಷಿಗಳ ಇರುವಿಕೆಗೆ ಪೂರಕವಾಗಿದೆ. ಪಶ್ಚಿಮದ ದಿಕ್ಕಿಗೆ ನೀಲಗಿಗಳಂಥ ಮರಗಳು ಇವೆ. ಹೀಗಾಗಿ ಎಷ್ಟೇ ಜೋರಾಗಿ ಗಾಳಿಬೀಸಿದರು ಹಕ್ಕಿಗಳಿಗೆ, ಗೂಡಿಗೆ ಯಾವುದೇ ತೊಂದರೆ ಆಗೋಲ್ಲ. 

 ನರ್ಸರಿ ಮೂಲೆಯಲ್ಲಿ ಒಂದಷ್ಟು ತೊಗರಿ ಚೆಲ್ಲಿದ್ದಾರೆ. ಅವು ತಲೆ ಎತ್ತರಕ್ಕೆ ಬೆಳೆದಿದ್ದವು.  “ನೋಡಿ, ಗಿಳಿಗಳಿಗೆ ತೊಗರಿ ಅಂದರೆ ಇಷ್ಟ. ಅದೋ…ಬಂತು ಬಂತು ನೋಡಿ…. ‘ ಅಂತ ತೋರಿಸಿದರು.  

ರಮೇಶರ ಪಿಳಿ ಪಿಳಿ ಕಣ್ಣಗಳಲ್ಲಿ ಒಂದಷ್ಟು ಚಿಟ್ಟೆ ಗಿಳಿಗಳು ಹಾರಿಹೋದಂತಾದವು. 

ಕಟ್ಟೆ ಗುರುರಾಜ್‌

ಚಿತ್ರಗಳು: ಶಿವಸುಬ್ರಹ್ಮಣ್ಯ ಕೆ.

Advertisement

Udayavani is now on Telegram. Click here to join our channel and stay updated with the latest news.

Next