Advertisement

ಪ್ರಾಣ ಬಿಡುತ್ತೇವೆ, ಭೂಮಿ ಬಿಡೋಲ್ಲ; ಭೂಸ್ವಾಧೀನ ವಿರೋಧಿ ಹೋರಾಟ

03:09 PM Jun 18, 2022 | Team Udayavani |

ದೇವನಹಳ್ಳಿ: ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿಯಿಂದ ದೇವನಹಳ್ಳಿ ಸ್ವಯಂಘೋಷಿತ ಬಂದ್‌ ಹಿನ್ನೆಲೆ ಚನ್ನರಾಯಪಟ್ಟಣದಲ್ಲಿ ಕೆಐಎಡಿಬಿ ಭೂಸ್ವಾಧೀನ ವಿರೋಧಿಸಿ, ಪಟ್ಟಣದ ತಾಲೂಕು ಕಚೇರಿ ಮುಂಭಾಗ ದಲ್ಲಿ ರೈತರು ಬೃಹತ್‌ ಪ್ರತಿಭಟನೆ ನಡೆಸಿದರು.

Advertisement

ಪ್ರವಾಸಿಮಂದಿರದಿಂದ ಪ್ರಾರಂಭಗೊಂಡ ಪ್ರತಿಭಟನಾ ರ್ಯಾಲಿ ಪಟ್ಟಣದ ರಾಜಬೀದಿಗಳಲ್ಲಿ ತೆರಳಿ ತಾಲೂಕು ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿ, ರೈತರು ಬೆಳೆದ ಹೂವು, ಹಣ್ಣು, ತರಕಾರಿ ಚೆಲ್ಲಿ ಆಕ್ರೋಶ ವ್ಯಕ್ತಪಡಿಸಿದರು. ಬಿಜೆಪಿ ಸರ್ಕಾರ ಹಾಗೂ ಕೈಗಾರಿಕಾ ಸಚಿವ ಮುರುಗೇಶ್‌ ನಿರಾಣಿ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದರು. ಯಾವುದೇ ಕಾರಣಕ್ಕೂ ಭೂಸ್ವಾಧೀನ ಮಾಡಲು ಬಿಡುವುದಿಲ್ಲ. ಪ್ರಾಣ ಬೇಕಾದರೂ ಬಿಡುತ್ತೇವೆ. ಭೂಮಿ ಬಿಡುವುದಿಲ್ಲ. ರೈತರ ಫ‌ಲವತ್ತಾದ ಕೃಷಿ ಭೂಮಿ ಉಳಿಸಬೇಕು.

ದೇಶದ ಬೆನ್ನೆಲುಬು ರೈತರ ಬೆನ್ನುಮೂಳೆ ಮುರಿಯಬೇಡಿ ಎಂದು ಸರ್ಕಾರಕ್ಕೆ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್‌ ವಾದ) ಸಂಘಟನಾ ಸಂಚಾಲಕ ಕಾರಹಳ್ಳಿ ಶ್ರೀನಿವಾಸ್‌ ಮಾತನಾಡಿ, ಕೆಐಎಡಿಬಿ ಮೂಲಕ ಸ್ವಾಧೀನ ಪಡಿಸಲು ಮುಂದಾಗಿರುವ ರೈತರ ಜಮೀನು ಬಿಟ್ಟು ಕೊಟ್ಟು ರೈತರು ಎಲ್ಲಿಗೆ ಹೋಗಬೇಕು. ಏರ್‌ಪೋರ್ಟ್‌ ಮಾಡುವಾಗ ಭೂಮಿ ಕಳೆದುಕೊಂಡ ರೈತರು ಅಭಿವೃದ್ಧಿಗೊಂಡಿಲ್ಲ. ಎಲ್ಲವೂ ನಾಶವಾಗಿ ಹೋಗಿದೆ. ಅಧಿ ಕಾರಿಗಳು ಬಹುತೇಕ ಅಗರ್ಭ ಶ್ರೀಮಂತರ ಕುಟುಂಬದಿಂದ ಬಂದಿರುವುದಿಲ್ಲ. ರೈತ ಕುಟುಂಬಗಳಿಂದ ಬಂದಿರುತ್ತಿರಿ.ರೈತರ ಸಮಸ್ಯೆ, ಕಷ್ಟ ಸುಖಗಳ ಬಗ್ಗೆ ಹೆಚ್ಚು ಅರಿವಿದೆ.

ಬಂಡವಾಳ ಶಾಹಿಗಳ ಪರವಾಗಿ ಕೆಲ ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ. ಇಂತಹ ಭೂಸ್ವಾಧೀನ ಪ್ರಕ್ರಿಯೆ ಕೂಡಲೇ ಕೈಬಿಡಬೇಕು ಎಂದು ಆಗ್ರಹಿಸಿದರು. ಗ್ರಾಪಂ ಸದಸ್ಯ ಮಾರೇಗೌಡ ಮಾತನಾಡಿ, ನಮಗೆ ಭೂಮಿ ಬಿಟ್ಟು ಕೊಡಿ, ನಮಗೆ ಯಾವುದೇ ಅಭಿವೃದ್ಧಿ ಬೇಡ. ಇರುವ ಅಲ್ಪ ಸ್ವಲ್ಪ ಭೂಮಿಯನ್ನು ರೈತರಿಂದ ಕಸಿದುಕೊಂಡರೆ ನಮ್ಮ ಪಿಳೀಗೆಗೆ ನಮ್ಮ ಕೊಡುಗೆ ಏನು ಕೊಡಬೇಕು. ನೀರಾವರಿ ಭೂಮಿಯನ್ನು ಅಭಿವೃದ್ಧಿ ಪಡಿಸಲು ಇದೇ ಹೋಬಳಿ ಯಾಕೆ ಬೇಕು. ನಮ್ಮ ಜೀವನ ಭೂಮಿಯಿಂದ ಅಂತಹ ಭೂಮಿ ಯನ್ನು ಕಳೆದುಕೊಂಡು ನಾವೇನು ಮಾಡಬೇಕು ಎಂದರು.

ಭೂಸ್ವಾಧೀನ ಪ್ರಕ್ರಿಯೆ ಹಿಂದಕ್ಕೆ ಪಡೆಯಲಿ: ಆಮ್‌ ಆದ್ಮಿ ಪಕ್ಷದ ಜಿಲ್ಲಾ ಉಸ್ತುವಾರಿ ಬಿ.ಕೆ.ಶಿವಪ್ಪ ಮಾತನಾಡಿ, ಸರ್ಕಾರದ ಮಟ್ಟದಲ್ಲಿಯೇ ಕೆಐಎಡಿಬಿ ಭೂಸ್ವಾಧೀನ ಪ್ರಕ್ರಿಯೆ ಕುರಿತು ಪ್ರತಿಷ್ಠೆ ಯಾಗಿ ಪರಿಗಣಿಸಿರುವ ಸಚಿವರು, ರೈತವಿರೋಧಿ ಪ್ರತಿಯೊಂದು ನಡೆಯು ಮುಂದಿನ ಚುನಾಲ್ಲಿ ಭಾರೀ ಮೊತ್ತದಲ್ಲಿ ತೊಡಕಾಗಲಿದೆ. ಸರ್ಕಾರಕ್ಕೆ ಇನ್ನು ಸಮಯವಿದೆ. ಅನ್ನದಾತರ ಹಿತ ದೃಷ್ಟಿಯಿಂದ ಫ‌ಲವತ್ತಾದ ಭೂಸ್ವಾಧೀನ ಪ್ರಕ್ರಿಯೆ ಹಿಂದಕ್ಕೆ ಪಡೆಯಲಿ ಎಂದು ಒತ್ತಾಯಿಸಿದರು.

Advertisement

ನೋಟಿಫಿಕೇಷನ್‌ ಮಾಡಿರುವ ಭೂಮಿ ಕೃಷಿ ಭೂಮಿ ಆಗಿದೆ: ತಾಲೂಕು ರೈತಸಂಘದ ಅಧ್ಯಕ್ಷ  ಗಾರೆ ರವಿಕುಮಾರ್‌ ಮಾತನಾಡಿ, ನಲ್ಲೂರು, ನಲ್ಲಪ್ಪನಹಳ್ಳಿ, ಚೀಮಾ ಚನ ಹಳ್ಳಿ, ಪಾಳ್ಯ, ಚನ್ನರಾಯಪಟ್ಟಣ, ಹ್ಯಾಡಾಳ, ಪೋಲನಹಳ್ಳಿ, ಮಲ್ಲೇಪುರ, ಮುಟ್ಟ ಬಾರ್ಲು, ಗೋಕರೆ ಬಚ್ಚೇನಹಳ್ಳಿ, ತೆಲ್ಲೋಹಳ್ಳಿ, ಹರಳೂರು, ಮುದ್ದೇನಹಳ್ಳಿ ಗ್ರಾಮ ಗಳ ಸುಮಾರು 2,336 ಎಕರೆ ಭೂಮಿ ನೋಟಿμಕೇಷನ್‌ ಸಹ ಮಾಡಿದೆ. ನೋಟಿಫಿ ಕೇಷನ್‌ ಮಾಡಿರುವ ಬಹುಪಾಲು ಭೂಮಿಯು ಕೃಷಿ ಭೂಮಿಯಾಗಿದ್ದು, ಇದರಲ್ಲಿ ದಿನನಿತ್ಯದ ಆಹಾರ ಧಾನ್ಯ, ತರಕಾರಿ, ದ್ರಾಕ್ಷಿ, ಮಾವು, ರೇಷ್ಮೆ ಸೇರಿ ಸುಮಾರು ತೋಟಗಾರಿಕಾ ಬೆಳೆ ಬೆಳೆದು ಜೀವನೋಪಾಯ ಮಾಡಲಾಗುತ್ತಿದೆ ಎಂದರು.

ಬಿಎಸ್‌ಪಿ ರಾಜ್ಯ ಉಸ್ತುವಾರಿ ಮಾರಸಂದ್ರ ಮುನಿಯಪ್ಪ, ತಾಲೂಕು ಜೆಡಿಎಸ್‌ ಅಧ್ಯಕ್ಷ ಆರ್‌. ಮುನೇಗೌಡ, ಪ್ರಧಾನ ಕಾರ್ಯದರ್ಶಿ ಜಿ.ಎ. ರವೀಂದ್ರ, ರಾಜ್ಯ ರೈತಸಂಘದ ಉಪಾಧ್ಯಕ್ಷ ವೆಂಕಟ ನಾರಾಯಣಪ್ಪ, ಕರ್ನಾಟಕ ರಾಜ್ಯ ರೈತಸಂಘದ ಜಿಲ್ಲಾಧ್ಯಕ್ಷ ಬಚ್ಚಹಳ್ಳಿ ವೆಂಕಟೇಶ್‌, ಉಪಾಧ್ಯಕ್ಷ ನಾರಾಯಣಸ್ವಾಮಿ (ನಾಣಿ), ಹಸಿರು ಸೇನೆಯ ತಾಲೂಕು ಅಧ್ಯಕ್ಷ ಶಶಿಕುಮಾರ್‌, ಕರವೇ ಗೌರವಾ ಧ್ಯಕ್ಷ ಎನ್‌.ಚಂದ್ರಶೇಖರ್‌, ತಾಲೂಕು ಅಧ್ಯಕ್ಷ ಜಯ ಶಂಕರ್‌, ಉಪಾಧ್ಯಕ್ಷ ಗಯಾಜ್‌ ಪಾಷ, ನಾಸಿರ್‌ ಅಹಮದ್‌, ಶಿವಪ್ರಕಾಶ್‌, ಪಿ.ನಾಗೇಶ್‌, ಜಿಲ್ಲಾಧ್ಯಕ್ಷ ನಾರಾಯಣಸ್ವಾಮಿ, ಕೆ.ಸಿ. ನರೇಂದ್ರ ಬಾಬು, ಬಿಎಸ್‌.ಪಿ ಜಿಲ್ಲಾಧ್ಯಕ್ಷ ತಿಮ್ಮ ರಾಯಪ್ಪ, ಸಂಚಾಲಕ ಆವತಿ ತಿಮ್ಮರಾಯಪ್ಪ, ಅತ್ತಿ ಬೆಲೆ ನರಸಪ್ಪ, ರೈತ ವೆಂಕಟರಮಣಪ್ಪ, ಮೋಹನ್‌ ಕುಮಾರ್‌, ರಮೇಶ್‌, ಬಾಬು, ಅಶ್ವಥಪ್ಪ, ನಂಜಪ್ಪ, ದೇವರಾಜಪ್ಪ, ಸತ್ಯಪ್ಪ, ಮುಕುಂದ, ಮುನಿರಾಜು, ಗೋಪಾಲಪ್ಪ, ಸೇರಿದಂತೆ ಸುತ್ತಮುತ್ತಲಿನ ಗ್ರಾಮದ ರೈತರು ಇದ್ದರು.

ರೈತರಿಗೆ ಹಣ ನೀಡಿ ಮನವೊಲಿಸುವ ಷಡ್ಯಂತ್ರ
ಕಳೆದ 75ದಿನಗಳಿಂದ ರೈತರು ಅನಿರ್ದಿಷ್ಟಾವಧಿ ಧರಣಿ ಮಾಡುತ್ತಿದ್ದಾರೆ. ಭೂಸ್ವಾಧಿನ ಪ್ರಕ್ರಿಯೆಯನ್ನು ಕೂಡಲೇ ಕೈಬಿಡಬೇಕು. ಕೈಗಾರಿಕಾ ಸಚಿವ ಮುರುಗೇಶ್‌ ನಿರಾಣಿ ಬಡವರು, ದಲಿತರಿಗೆ ಹಣದ ಆಮಿಷವನ್ನು ನೀಡಿ ಮನವೊಲಿಸುವ ಷಡ್ಯಂತ್ರ ಮಾಡುತ್ತಿದ್ದಾರೆ. ಪ್ರತಿಭಟನೆ ಮಾಡುತ್ತಿರುವ ರೈತರು ರೈತರಲ್ಲ ಎಂದು ನಿರಾಣಿ ಹೇಳುತ್ತಾರೆ. ಇಲ್ಲಿನ ಕೆಐಎಡಿಬಿ ಭೂಸ್ವಾಧೀನದ ಹಣದಿಂದ ಮುಖ್ಯಮಂತ್ರಿ ಆಗುತ್ತೇನೆಂಬ ಕನಸಿನಲ್ಲಿ ಮುರುಗೇಶ್‌ ನಿರಾಣಿ ಇದ್ದಾರೆ. ಮುಖ್ಯಮಂತ್ರಿ ಕನಸನ್ನು ಬಿಟ್ಟು ಬಿಡಿ. ಇನ್ನು ಮುಂದೆ ಆಗುವುದಿಲ್ಲ. ಯಡಿಯೂರಪ್ಪ ಸರ್ಕಾರದಲ್ಲಿ ಕಟ್ಟಾಸುಬ್ರಮಣ್ಯ ನಾಯ್ಡು ಕೆಲವು ಹಗರಣಗಳಿಂದ ಜೈಲಿಗೆ ಹೋಗಿದ್ದರು. ಅದೇ ರೀತಿ ಮುರುಗೇಶ್‌ ನಿರಾಣಿ ಸಹ ಹೋಗುತ್ತಾರೆ ಎಂದು ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್‌ ವಾದ)ಸಂಘಟನಾ ಸಂಚಾಲಕ ಕಾರಹಳ್ಳಿ ಶ್ರೀನಿವಾಸ್‌ ಕಿಡಿಕಾರಿದರು.

ರೈತರ ಸಮಸ್ಯೆ ಬಗೆಹರಿಸುವೆ: ಎಂಟಿಬಿ ನಾಗರಾಜ
ರೈತರ ಪ್ರತಿಭಟನೆ ವೇಳೆಯಲ್ಲಿ ಪೌರಾಡಳಿತ ಮತ್ತು ಸಣ್ಣ ಕೈಗಾರಿಕಾ ಸಚಿವ ಎಂಟಿಬಿ ನಾಗರಾಜ ಸ್ಥಳಕ್ಕೆ ಭೇಟಿ ನೀಡಿ ರೈತರ ಸಮಸ್ಯೆ ಆಲಿಸಿ ನಂತರ ರೈತರಿಂದ ಮನವಿ ಪತ್ರ ಸ್ವೀಕರಿಸಿದರು. ಈ ವೇಳೆ ಮಾತನಾಡಿದ ಅವರು, 8ದಿನದೊಳಗಾಗಿ ಮುಖ್ಯಮಂತ್ರಿ, ಕೈಗಾರಿಕಾ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರ ಜೊತೆ ಸಭೆ ನಡೆಸಲು ಅವಕಾಶ ಮಾಡಿ ಕೊಡುತ್ತೇನೆ. ರೈತರ ಸಮಸ್ಯೆ ಸಂಬಂಧಪಟ್ಟಂತೆ ಕೈಗಾರಿಕಾ ಸಚಿವರೊಂದಿಗೆ ಮಾತನಾಡಿದ್ದೇನೆ. ದೇವನಹಳ್ಳಿಗೆ ಕೈಗಾರಿಕಾ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಒಂದು ಸಭೆಯನ್ನು ಮಾಡಲಾಗುವುದು. ಒಂದೇ ಹೋಬಳಿಯಲ್ಲಿ 1,777 ಎಕರೆ ಜಮೀನನ್ನು ಭೂಸ್ವಾಧೀನ ಮಾಡುತ್ತಿರುವುದರ ಬಗ್ಗೆ ಮುಖ್ಯಮಂತ್ರಿ ಗಮನಕ್ಕೆ ತಂದಿದ್ದೇವೆ. ರೈತರ ಜೊತೆ ನಾವಿದ್ದೇವೆ. ರೈತರ ಸಮಸ್ಯೆಬಗೆಹರಿಸಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next