Advertisement

ಉರಿ ಬಾಳಿಗೆ ತಂಪೆರೆಯುತ್ತಿದ್ದ ಸಂಜೆಯ ಆ ಸಮಯ

09:45 PM Jul 04, 2021 | Team Udayavani |

ತ್ಯಾಗರಾಜ ನಗರ ಮತ್ತು  ಅದರ ಸುತ್ತಮುತ್ತಲಿನ ಪರಿಸರವನ್ನು ಇಂದು ನೆನೆದರೂ ಮನಸ್ಸು ಆಹ್ಲಾದಗೊಳ್ಳುತ್ತದೆ. ಡಿವಿಜಿ ರಸ್ತೆಯ ಓಡಾಟ, ಸೌತ್‌ ಎಂಡ್‌ ವೃತ್ತದಲ್ಲಿದ್ದ ಸರಕಾರಿ ಗ್ರಂಥಾಲಯದಿಂದ ತಂದು ಓದುತ್ತಿದ್ದ ಪುಸ್ತಕಗಳು, ಕಾಲೋನಿಯ ಮೂಲೆ ಅಂಗಡಿಯಿಂದ ತಪ್ಪದೆ ತಂದು ಓದುತ್ತಿದ್ದ ಪತ್ರಿಕೆ, ಪ್ರತಿ ಸೋಮವಾರ ಹೋಗಿಬರುತ್ತಿದ್ದ  ಗವಿ ಗಂಗಾಧರ ದೇವಸ್ಥಾನ… ಒಟ್ಟಾರೆ ಅಂದಿನ ಪರಿಸರವೇ  ಜೀವನ ಪ್ರೀತಿಯನ್ನು  ಹೊಮ್ಮಿಸುವಂತಿದ್ದವು. ಕುಸಿದುಹೋಗಿದ್ದ ಆತ್ಮವಿಶ್ವಾಸ ಮತ್ತೆ ತಲೆ ಎತ್ತಿದ್ದು ನಮ್ಮ ಆ  ಹೊಸ ಬಿಡಾರದಲ್ಲಿ. ಮುಕ್ತ ವಾತಾವರಣದಲ್ಲಿ ಬದುಕುವ ಖುಷಿಯ ಮುಂದೆ ಪ್ರಪಂಚದ ಯಾವ ಸುಖವೂ ಹೆಚ್ಚಲ್ಲ ಎನ್ನುವುದು ನನ್ನ ಅನುಭವಕ್ಕೆ ಬಂದಿದ್ದು ಅÇÉೇ.ಮಾಯಾಮೃಗದ ಮರುಪ್ರಸಾರ ಕೆಲವು ದಿನಗಳ ಮೊದಲೇ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗತೊಡಗಿತ್ತು.

Advertisement

ಈಗಾಗಲೇ ನೋಡಿದ್ದರೂ ಮತ್ತೆ ಪ್ರಸಾರಗೊಳ್ಳಲಿದ್ದ ಧಾರಾವಾಹಿಗಾಗಿ ನಿರೀಕ್ಷೆ ಹೆಚ್ಚಾಗುವಂತೆ ಮಾಡಿತ್ತು. ಇಪ್ಪತ್ತೆರಡು ವರ್ಷಗಳ ಹಿಂದೆ ದೂರದರ್ಶನದಲ್ಲಿ ಮೂಡಿಬಂದ ಸದಭಿರುಚಿಯ ಸುಂದರ ಧಾರಾವಾಹಿ ಇದು. ಈಗಿನಂತೆ ನೂರೆಂಟು ಚಾನೆಲ್‌ಗ‌ಳು ಇರದಿದ್ದ ಕಾಲದಲ್ಲಿ, ಮನೆ ಮನೆಗಳಲ್ಲೂ ಸಂಜೆ ನಾಲ್ಕರ ಹೊತ್ತಿಗೆ ಮೊಳಗುತ್ತಿದ್ದ ಶೀರ್ಷಿಕೆ  ಗೀತೆ “ಮಾಯಾಮೃಗ ಮಾಯಾಮೃಗ ಮಾಯಾಮೃಗವೆಲ್ಲಿ?..’ ಧಾರಾವಾಹಿಗಿಂತ ಮೊದಲು ಬರುತ್ತಿದ್ದ ಆ ಗೀತೆಯೇ ಬಹಳ ಆಕರ್ಷಕವೆನ್ನಿಸಿತ್ತು. ಯಾಕೆಂದರೆ,  ಒಂದಲ್ಲ ಒಂದು ಆಸೆ, ಆಮಿಷಗಳ ಮಾಯಾಮೃಗದ ಬೆನ್ನು ಹತ್ತಿ ಬಳಲಿದವರೇ ನಾವೆಲ್ಲರು!

ಹನಿಹನಿಯಾಗಿ ಆನಂದಿಸುತ್ತಾ ಮೂರೋ ನಾಲ್ಕೋ ಗುಟುಕಿಗೆ ಮುಗಿದುಹೋಗಿ ಮರುದಿನದ ಕಂತಿಗಾಗಿ ಕಾತರದಿಂದ ಕಾಯುವಂತೆ ಮಾಡುತ್ತಿತ್ತು ಆ ಧಾರಾವಾಹಿ. ಯಾವುದೇ ಹಾಡು, ಸಿನೆಮಾ, ಕತೆ, ಕಾದಂಬರಿಯಾಗಲಿ ಅದರ ನೆನಪುಗಳು ಅದನ್ನು ಕೇಳಿದ, ನೋಡಿದ, ಓದಿದ ದಿನಗಳಲ್ಲಿ ನಾವಿದ್ದ ಪರಿಸ್ಥಿತಿಯೊಂದಿಗೆ ತಳುಕು ಹಾಕಿಕೊಂಡಿರುತ್ತವೆ. ಹಾಗಾಗಿ, ಮಾಯಾಮೃಗದ ಮೊದಲ ಕಂತುಗಳನ್ನು ನೋಡುತ್ತಿದ್ದಂತೆ ನಾನೂ ಕೂಡ ಅಂತಹುದ್ದೇ ನಾಸ್ಟಾಲ್ಜಿಯಾ ಎಂದು ಕರೆಸಿಕೊಳ್ಳುವ ನೆನಪುಗಳ ಅಲೆಯಲ್ಲಿ ತೇಲಿ ಹೋದೆ.

ನಾವು ಆಗಷ್ಟೇ ತ್ಯಾಗರಾಜ ನಗರದ ವಠಾರವೊಂದರಲ್ಲಿ ಸಣ್ಣ ಮನೆ ಹಿಡಿದು, ಎರಡು ಪುಟ್ಟ ಮಕ್ಕಳೊಂದಿಗೆ ಬಿಡಾರ ಹೂಡಿದ್ದೆವು. ಗಂಡನ ಸರಕಾರಿ ಕೆಲಸದಿಂದ ಬರುತ್ತಿದ್ದ  ಸಂಬಳದಿಂದ ತೃಪ್ತಿಯ ಬದುಕು ನಡೆಸಬಹುದಾಗಿದ್ದರೂ ಅವಿವೇಕದಿಂದ ಮಾಡಿಕೊಂಡಿದ್ದ ಅನಗತ್ಯ ಸಾಲಗಳು ಮನಸ್ಸಿನ ನೆಮ್ಮದಿ ಯನ್ನು  ಕಸಿದುಕೊಂಡಿದ್ದವು. ಈ ಮನೆಗೆ ಬರುವ ಮೊದಲು ನಾನಿದ್ದ ಕೌಟುಂಬಿಕ ವಾತಾವರಣ ಉಸಿರು ಗಟ್ಟಿಸುವಂತಿದ್ದು, ನನ್ನೆಲ್ಲ ಜೀವನೋತ್ಸಾಹವನ್ನೇ ಬಸಿದು ಬೆಂಡಾಗಿಸಿತ್ತು. ನನ್ನ ಲೇಖನಿಗೂ ಗ್ರಹಣ ಹಿಡಿದು, ಬರವಣಿಗೆ ನಿಂತೇ ಹೋಗಿತ್ತು.

ಇಲ್ಲಿ ಕಳೆದ ದಿನಗಳು ನನ್ನ ಬದುಕಿನ ರಮ್ಯ ಚೈತ್ರ ಕಾಲವೆನ್ನಬಹುದು. ತ್ಯಾಗರಾಜ ನಗರ ಮತ್ತು ಅದರ ಸುತ್ತಮುತ್ತಲಿನ ಪರಿಸರವನ್ನು ಇಂದು ನೆನೆದರೂ ಮನಸ್ಸು ಆಹ್ಲಾದಗೊಳ್ಳುತ್ತದೆ. ಡಿವಿಜಿ ರಸ್ತೆಯ ಓಡಾಟ, ಸೌತ್‌ ಎಂಡ್‌ ವೃತ್ತದಲ್ಲಿದ್ದ ಸರಕಾರಿ ಗ್ರಂಥಾಲಯದಿಂದ ತಂದು ಓದುತ್ತಿದ್ದ ಪುಸ್ತಕಗಳು, ಕಾಲೋನಿಯ ಮೂಲೆ ಅಂಗಡಿಯಿಂದ ತಪ್ಪದೆ ತಂದು ಓದುತ್ತಿದ್ದ ಹಾಯ್‌ ಬೆಂಗಳೂರು ಪತ್ರಿಕೆ,  ಪ್ರತಿ ಸೋಮವಾರ ಹೋಗಿಬರುತ್ತಿದ್ದ ಗವಿ ಗಂಗಾಧರ ದೇವಸ್ಥಾನ… ಒಟ್ಟಾರೆ ಅಂದಿನ ಪರಿಸರವೇ ಜೀವನ ಪ್ರೀತಿಯನ್ನು ಹೊಮ್ಮಿಸುವಂತಿದ್ದವು. ಕುಸಿದುಹೋಗಿದ್ದ ಆತ್ಮವಿಶ್ವಾಸ ಮತ್ತೆ ತಲೆ ಎತ್ತಿದ್ದು ನಮ್ಮ ಆ  ಹೊಸ ಬಿಡಾರದಲ್ಲಿ. ಮುಕ್ತ ವಾತಾವರಣದಲ್ಲಿ ಬದುಕುವ ಖುಷಿಯ ಮುಂದೆ ಪ್ರಪಂಚದ ಯಾವ ಸುಖವೂ ಹೆಚ್ಚಲ್ಲ ಎನ್ನುವುದು ನನ್ನ ಅನುಭವಕ್ಕೆ ಬಂದಿದ್ದು ಅÇÉೇ.

Advertisement

ಒಂದೇ ಕೋಣೆಯ ಆ ಬಾಡಿಗೆ ಮನೆ. ಅಡುಗೆ ಮನೆ, ಒಂದು ಹಾಲ…. ಮನೆಯಿಂದ ಹೊರಗೆ ಪುಟ್ಟ ಬಚ್ಚಲು. ಆರೆಂಟು ಮನೆಗಳಿಗೆ ಸೇರಿ ಎರಡು ಟಾಯ್ಲೆಟ್‌ಗಳು!

ಕೋಣೆ ಇತ್ತು ಅದರೆ ಅದು ಆಟಕ್ಕುಂಟು ಲೆಕ್ಕಕ್ಕಿಲ್ಲದ ಉಗ್ರಾಣದಂಥದ್ದು. ಸಮಸ್ತವೂ ಹಜಾರ ಅಥವಾ ಹಾಲ್‌ನಲ್ಲಿಯೇ ಆಗಬೇಕು. ಆ ಪುಟ್ಟ ಹಾಲಿನ ಮೂಲೆಯಲ್ಲಿ ಮೂಗಿಗಿಂತ ಮೂಗುತಿ ಭಾರ ಎನ್ನುವಂತೆ ಆ ಮನೆಯ ಇರಸರಿಕೆಗೆ ಹೊಂದದೆ ಪ್ರತ್ಯೇಕವಾಗಿ ಕಾಣುತ್ತಿದ್ದ, ಆ ಕಾಲಕ್ಕೆ ಅಪರೂಪವೆನ್ನಿಸಿದ್ದ ಇಪ್ಪತ್ತೂಂಬತ್ತು ಇಂಚಿನ ದೊಡ್ಡ ಬಿಪಿಎಲ್‌ ಟಿವಿ. ಕ್ರಿಕೆಟ್‌ ಮ್ಯಾಚ್‌ ಪ್ರಸಾರದ ದಿನಗಳಲ್ಲಂತೂ ನಮ್ಮ ಮನೆಯೇ ಒಂದು ಪುಟ್ಟ ಥಿಯೇಟರ್‌ ಆಗಿ ಪರಿವರ್ತನೆಯಾಗಿರುತ್ತಿತ್ತು. ವಠಾರದಲ್ಲಿದ್ದ ನಮ್ಮ ನೆರೆಹೊರಯವರು ಸರಳ ಮನಸ್ಸಿನ ಸುಂದರ ಜನ. ಯಾವ ಹೊತ್ತಿಗೂ ಯಾವುದೇ ಸಹಾಯಕ್ಕೆ ಸಿದ್ಧರಾಗಿರುತ್ತಿದ್ದ ಉಪಕಾರಿ ಮನೋಭಾವದ ಅವರೆಲ್ಲರನ್ನೂ ಇಂದಿಗೂ ಸ್ಮರಣೀಯರೇ ಆಗಿದ್ದಾರೆ.

ಮೂರು ಮತ್ತು ಐದು ವರ್ಷದವರಾಗಿದ್ದ ಮಕ್ಕಳನ್ನು ಸನಿಹದ ಆಚಾರ್ಯ ಪಾಠಶಾಲೆಗೆ ಸೇರಿಸಿದ್ದೆವು. ಬೆಳಗ್ಗೆ 8 ಗಂಟೆಗೆ ಮನೆ ಬಿಟ್ಟರೆ ಮಧ್ಯಾಹ್ನ 2.30ಗೆ ವಾಪಸ್‌. ಆಟೋ ಗೊತ್ತು ಮಾಡಿದರೆ ಅದಕ್ಕೆ ಕೊಡಬೇಕಿದ್ದ 125 ರೂಪಾಯಿಗಳನ್ನು ಉಳಿಸಲು ನಾನೇ ಪ್ರತಿದಿನ ಅವರನ್ನು ಕರೆತರುತ್ತಿದೆ. ಮಾಯಾಮೃಗ ಶುರುವಾಗುವುದರೊಳಗೆ ಮನೆ ಸೇರುವ ಧಾವಂತ. ಅದೂ ಇದೂ ಮಾತಾಡುತ್ತಾ ಪುಟ್ಟ ಹೆಜ್ಜೆಗಳನ್ನಿಡುತ್ತಾ ಬರುವ ಮಕ್ಕಳಿಬ್ಬರನ್ನು ಮನೆ ಸೇರಿಸಿ, ಅವರ  ಊಟ-ಉಪಚಾರ ಮುಗಿಸುವುದರೊಳಗೆ  ಆ ಹೊತ್ತು ಸಮೀಪಿಸಿಯೇ ಬಿಟ್ಟಿರುತ್ತಿತ್ತು.

ಹಾಲಿನಲ್ಲಿ ಚಾಪೆ ಹಾಸಿ, ದಿಂಬು ಹಾಕಿ,  ಮಕ್ಕಳನ್ನು ಅಕ್ಕಪಕ್ಕ ಮಲಗಿಸಿಕೊಂಡು ಟಿವಿ ಹಾಕಿದರೆ “ಮಾಯಾಮೃಗ’  ಶೀರ್ಷಿಕೆ ಗೀತೆ ಪ್ರಾರಂಭವಾಗುತ್ತಿತ್ತು.  ಆಹಾ! ಅದೆಂಥಾ ನೆಮ್ಮದಿಯ ಕ್ಷಣಗಳವು!  ನಿ¨ªೆ ಹೋಗಲು ಒಲ್ಲದೆ ಏಳಲು ಹವಣಿಸುತ್ತಿದ್ದ ಮಕ್ಕಳ ಹಣೆಯ ಮೇಲೆ ಮೆಲ್ಲನೆ ತಟ್ಟುತ್ತಾ ನಾನು ಧಾರಾವಾಹಿ ನೋಡಲು ಶುರುಮಾಡುತ್ತಿ¨ªೆ. ಮೂರು ವರ್ಷದ ಮಗ ಬೆಳಗಿನಿಂದ ಆಗಿದ್ದ ದಣಿವಿಗೆ ಕ್ಷಣದÇÉೇ ನಿದ್ರೆಗೆ ಜಾರಿರುತ್ತಿದ್ದ. ಮಗಳು ನಿದ್ರೆಗೆ ಒಪ್ಪದೆ ಕೊಸರಾಡುತ್ತಾ ನನ್ನೊಂದಿಗೆ ಟಿವಿಗೆ ಕಣ್ಣು ಹೂಡುತ್ತಿದ್ದಳು.

ಧಾರಾವಾಹಿ ಮುಗಿಯುವ ಹೊತ್ತಿಗೆ ನನಗೂ ಸಣ್ಣಗೆ ಕಣ್ಣೆಳೆಯಲು ಶುರುವಾಗಿದ್ದನ್ನು ಗಮನಿಸಿದ ಮಗಳು ಎದ್ದು ಮೆಲ್ಲನೆ ಬಾಗಿಲು ತೆರೆದು ಹೊರಗೆ ಓಡಿರುತ್ತಿದ್ದಳು. ಅವಳಿಗಾಗಿ ವಠಾರದ ಮಕ್ಕಳ ದಂಡು ಆಡಲು ಕಾದಿರುತ್ತಿತ್ತು. ಒಂದು ಸಣ್ಣ ನಿದ್ರೆಯಿಂದ ಎ¨ªಾಗಲೂ ಮನಸ್ಸಿನಲ್ಲಿ ಮಾಯಾಮೃಗ.. ಮಾಯಾಮೃಗ.. ಮಾಯಾಮೃಗವೆಲ್ಲಿ?.. ಸುಳಿದಾಡುತ್ತಿತ್ತು.

ಅನಂತರ ನಾವು ಹೊಸ ಕನಸುಗಳನ್ನು ಹೊತ್ತು ಅಮೆರಿಕಕ್ಕೆ ಬಂದೆವು.  ಇಲ್ಲಿ ಬಂದಿಳಿದ ಪ್ರಾರಂಭದಲ್ಲಿ ಎದುರಾಗಿದ್ದು ಮತ್ತೆ ಅಸ್ಥಿರ, ಅಭದ್ರತೆಯ ದಿನಗಳೇ!  ಹೇಗೋ ಒಂದು ನೆಲೆ ಕಂಡುಕೊಂಡಿದ್ದ, ಆ ಬದುಕನ್ನು ತೊರೆದು ಇದಾವ ಮಾಯಾಮೃಗವನ್ನರಸಿ ಇಲ್ಲಿಗೆ ಬಂದೆವು? ಎಂಬ ದುಗುಡ ಮನವನ್ನು ಆವರಿಸದ ದಿನಗಳಿಲ್ಲ. ಆ ದಿನಗಳೂ ಸರಿದವು.

ಹೊಸ  ಸವಾಲುಗಳನ್ನು ಯಶಸ್ವಿಯಾಗಿ ಎದುರಿಸುತ್ತಾ ಮುಂದೆ ಸಾಗಿದಂತೆ ಬದುಕು ಹೂ ಹಾದಿಯನ್ನೇ ನಮ್ಮೆದುರು ತೆರೆಯಿತು. ಅಂದು ನನ್ನ ಹಿಂದೆಮುಂದೆ  ಸುತ್ತಾಡುತ್ತಾ, ಬಾಂದಳದಲಿ ಮೆರೆಯುತ್ತಿದೆ ಮಾಯಾಮೃಗ ಚರ್ಮ ಎಂದು ತಮಗೆ ತಿಳಿದಂತೆ ಜೋರಾಗಿ  ಹಾಡಿಕೊಳ್ಳುತ್ತಿದ್ದ ಮಕ್ಕಳು ಇಂದು ಬೆಳೆದಿದ್ದಾರೆ. ಓದು ಮುಗಿಸಿ ಜವಾಬ್ದಾರಿಯುತ ಹುದ್ದೆಗಳನ್ನು ನಿರ್ವಹಿಸುತ್ತಿದ್ದಾರೆ.

ಯೂಟ್ಯೂಬ್‌ನಲ್ಲಿ ಮಾಯಾಮೃಗದ ಮೊದಲ ಕೆಲವು ಎಪಿಸೋಡುಗಳನ್ನು ನೋಡುತ್ತಿರುವಂತೆ ನನ್ನ ಬದುಕೇ ಮತ್ತೂಮ್ಮೆ ಮನದ ಪರದೆಯ ಮೇಲೆ ಮರುಕಳಿಸಿದಂತಯಿತು. ನನ್ನಂತೆಯೇ ಬದುಕಿನ ಬೇಗೆಯಲ್ಲಿ ಬೆಂದು ಹೋಗುತ್ತಿದ್ದ ಅನೇಕರ ಬಾಳಿಗೆ ನೆಮ್ಮದಿ ಹನಿಸುತ್ತಿದ್ದ ಮಾಯಾಮೃಗ ಪ್ರಸಾರವಾಗುತ್ತಿದ್ದ ಆ ದಿನಗಳ ನೆನಪೇ ಹಿತವೆನ್ನಿಸುತ್ತದೆ.

ಈ ಚಂದದ ಧಾರಾವಾಹಿಯನ್ನು ನಮ್ಮ ಕಣ್ಣುಗಳೆದುರು ತೆರೆದಿಟ್ಟ  ನಿರ್ದೇಶಕ ಟಿ.ಎನ್‌. ಸೀತಾರಾಂ ಮತ್ತವರ ತಂಡ ಇಂದಿಗೂ ಮನೆಮನದಂಗಳದಲ್ಲಿ ನೆಲೆಯಾಗಿದ್ದಾರೆ.

ತ್ರಿವೇಣಿ ಶ್ರೀನಿವಾಸ ರಾವ್‌, 

ಶಿಕಾಗೋ

Advertisement

Udayavani is now on Telegram. Click here to join our channel and stay updated with the latest news.

Next