Advertisement

ರಾಜ್ಯದಲ್ಲಿ ಪ್ರವಾಸೋದ್ಯಮ ಬೆಳಕಿಗೆ ತಂದ ದೇಶಪಾಂಡೆ

01:45 PM Jul 01, 2022 | Team Udayavani |

ಸಿದ್ದರಾಮಯ್ಯನವರು ಪ್ರವಾಸೋದ್ಯಮ ಖಾತೆಯ ಜವಾಬ್ದಾರಿಯನ್ನು ಆರ್‌.ವಿ.ಡಿ ಅವರಿಗೆ ವಹಿಸಿದ ನಂತರ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳಲು ದೇಶಪಾಂಡೆ ಜಾರಿಗೆ ತಂದ ನೀತಿಗಳೇ ಪ್ರಮುಖ ಕಾರಣ.

Advertisement

ರಾಜ್ಯದ ಪ್ರವಾಸೋದ್ಯಮ ಕ್ಷೇತ್ರವನ್ನು ಸಾಕಷ್ಟು ಅಭಿವೃದ್ಧಿಪಡಿಸಿ ಕರ್ನಾಟಕವನ್ನು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳುವಂತೆ ಹತ್ತು ಹಲವಾರು ಯೋಜನೆಗಳನ್ನು ಜಾರಿಗೊಳಿಸಿದ ಕೀರ್ತಿ ಆರ್‌.ವಿ. ದೇಶಪಾಂಡೆ ಅವರಿಗೆ ಸಲ್ಲುತ್ತದೆ.

ವಿವಿಧ ಖಾತೆಗಳ ಸಚಿವರಾಗಿ ಸೇವೆ ಸಲ್ಲಿಸಿ ಅನುಭವ ಹೊಂದಿದ್ದ ದೇಶಪಾಂಡೆಯವರು ಅವುಗಳನ್ನು ಸಮರ್ಥವಾಗಿ ನಿಭಾಯಿಸಿ ರಾಜ್ಯದ ಅಭಿವೃದ್ಧಿಗೆ ಸಾಕಷ್ಟು ಕೊಡುಗೆ ನೀಡುವಲ್ಲಿ ಪ್ರಾಮಾಣಿಕವಾಗಿ ಪ್ರಯತ್ನಿಸಿದ್ದಾರೆ.

ಅಲ್ಪಾವಧಿಗೆ ಟೂರಿಸಂ ಖಾತೆ ಸಚಿವರಾಗಿದ್ದ ದೇಶಪಾಂಡೆಯವರು ಜವಾಬ್ದಾರಿ ವಹಿಸಿಕೊಂಡ ಘಳಿಗೆಯಿಂದಲೇ ಅನೇಕ ಯೋಜನೆಗಳನ್ನು ಜಾರಿಗೆ ತಂದು ಪ್ರವಾಸೋದ್ಯಮವನ್ನು ಎಲ್ಲೆಡೆ ವಿಸ್ತರಿಸಿ ಅನೇಕ ಉದ್ಯೋಗಗಳ ಸೃಷ್ಟಿ, ಆರ್ಥಿಕ ಅಭಿವೃದ್ಧಿಗೆ ಶ್ರಮಿಸಿದ್ದಾರೆ.

Advertisement

ಭವಿಷ್ಯತ್ತಿನ ಕುರಿತು ಅಪಾರ ಚಿಂತನೆ ಹೊಂದಿರುವ ದೇಶಪಾಂಡೆಯವರು ಸಮಗ್ರ ಅಭಿವೃದ್ಧಿಗಾಗಿ 2015ರಲ್ಲಿ ಕರ್ನಾಟಕದ ಪ್ರಪ್ರಥಮ ಪ್ರವಾಸೋದ್ಯಮ ನೀತಿಯನ್ನು ಹೊರ ತಂದು ಅದಕ್ಕೊಂದು ಸ್ಪಷ್ಟ ಚಿತ್ರ ನೀಡಿದ್ದಾರೆ. ಈ ನೀತಿ ಪ್ರವಾಸೋದ್ಯಮ ಕ್ಷೇತ್ರದ ಅಭಿವೃದ್ಧಿಗೆ ಹಿನ್ನಡೆ ಉಂಟು ಮಾಡಬಹುದಾದ ಹಲವಾರು ಸಮಸ್ಯೆಗಳನ್ನು ಪರಿಹರಿಸಿ, ಅಡೆತಡೆಗಳನ್ನು ನಿವಾರಿಸಿ ಹೊಸ ಶಕ್ತಿ ತುಂಬಿತು.

ನೂತನ ಪ್ರವಾಸೋದ್ಯಮ ನೀತಿ ಜಾರಿಗೆ ತರುವ ಮುನ್ನ ಸಂಪೂರ್ಣವಾಗಿ ತಜ್ಞರೊಂದಿಗೆ ಸಮಾಲೋಚಿಸಿ ಒಂದು ಕರ್ನಾಟಕ ಟೂರಿಸಂ ವಿಷನ್‌ ಗ್ರೂಪ್‌ ಅನ್ನು ಸ್ಥಾಪಿಸಿದರು. ಈ ಗುಂಪಿನಲ್ಲಿದ್ದ ಪರಿಸರ ತಜ್ಞರು, ಚಿಂತಕರು ಕೈಗಾರಿಕೋದ್ಯಮಿಗಳು, ಹಿರಿಯರು ದೇಶಪಾಂಡೆ ಅವರ ಮಾರ್ಗದರ್ಶನದಲ್ಲಿ ಅಚ್ಚುಕಟ್ಟಾಗಿ ಕೆಲಸ ನಿರ್ವಹಿಸಿದ್ದಾರೆ.

ಪ್ರಮುಖವಾಗಿ ಹಳಿಯಾಳ-ಜೋಯಿಡಾ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುವ ದೇಶಪಾಂಡೆ ಅವರು ರಾಜ್ಯಮಟ್ಟದಲ್ಲಿ ಕ್ಷೇತ್ರ ಗುರುತಿಸಿಕೊಳ್ಳುವಂತೆ ಹತ್ತು ಹಲವಾರು ಯೋಜನೆಗಳನ್ನು ಜಾರಿ ಮಾಡಿದ್ದಾರೆ. ಈ ಮೊದಲು ಹಳಿಯಾಳ ದಾಂಡೇಲಿ ಹಾಗೂ ಜೋಯಿಡಾ ಪ್ರದೇಶಗಳಿಗೆ ಪ್ರವಾಸಿಗರು ಬರುತ್ತಿದ್ದಾರಾದರೂ ಹೇಳಿಕೊಳ್ಳುವಷ್ಟು ಮಟ್ಟಿಗೆ ಪ್ರವಾಸೋದ್ಯಮ ಅಭಿವೃದ್ಧಿಯಾಗಿರಲಿಲ್ಲ. ಇವರ ಕಾಲಾವ ಧಿಯಲ್ಲಿ ಟೂರಿಸಂ ಕಾನೂನುಗಳನ್ನು ಸರಳಗೊಳಿಸಿದ ನಂತರ ಕ್ಷೇತ್ರಕ್ಕೆ ಪ್ರತಿವರ್ಷ ಲಕ್ಷಾಂತರ ಪ್ರವಾಸಿಗರು ಭೇಟಿ ನೀಡುತ್ತಿರುವುದು ಗಮನಾರ್ಹ.

ಈ ಹಿಂದೆ ರೆಸಾರ್ಟ್‌ ಅಥವಾ ಹೋಂಸ್ಟೇ ಆರಂಭಿಸಬೇಕೆಂದರೆ ನೂರಾರು ಸಮಸ್ಯೆಗಳಿದ್ದವು. ದೇಶಪಾಂಡೆ ಅವರ ದೂರದೃಷ್ಟಿಯಿಂದ ಕಾನೂನಿನ ಚೌಕಟ್ಟಿನಲ್ಲಿ ಎಲ್ಲ ಸಮಸ್ಯೆಗಳನ್ನು ಪರಿಹರಿಸಿ ಕ್ಷೇತ್ರದಲ್ಲಿ ಅಷ್ಟೇ ಅಲ್ಲ ರಾಜ್ಯಾದ್ಯಂತ ಸಾವಿರಾರು ರೆಸಾರ್ಟ್‌ಗಳ ಆರಂಭಕ್ಕೆ ಪ್ರಪ್ರಥಮ ಪ್ರವಾಸೋದ್ಯಮ ನೀತಿ ಅನುಕೂಲವಾಯಿತು. ರೆಸಾರ್ಟ್‌ ಮತ್ತು ಹೋಂಸ್ಟೇಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆ ಕಂಡ ನಂತರ ಸಾಕಷ್ಟು ಉದ್ಯೋಗಾವಕಾಶಗಳು ಸೃಷ್ಟಿಯಾದವು. ಇದರಿಂದಾಗಿ ಕ್ಷೇತ್ರದಲ್ಲಿ ಬಹುತೇಕ ನಿರುದ್ಯೋಗ ಸಮಸ್ಯೆಗೆ ಪರಿಹಾರ ದೊರೆತಿದ್ದು ಸಾವಿರಾರು ಸಂಖ್ಯೆ ಯುವಕರು ಪ್ರವಾಸೋದ್ಯಮ ಕ್ಷೇತ್ರದಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ.

ಅಭಿವೃದ್ಧಿಯ ಧ್ಯೋತಕವಾಗಿ ಕ್ಷೇತ್ರದ ಭೂಮಿಯ ದರ ಕೆಲವೇ ಕೆಲವು ವರ್ಷಗಳಲ್ಲಿ ಏರಿಕೆ ಕಂಡಿದೆ. ಪ್ರವಾಸೋದ್ಯಮ ನೀತಿಯು ಕೈಗಾರಿಕೋದ್ಯಮಿಗಳಿಗೂ ಸಾಕಷ್ಟು ಅನುಕೂಲಕರವಾದ ವಾತಾವರಣ ನಿರ್ಮಿಸಿಕೊಟ್ಟಿದೆ. ಅಭಿವೃದ್ಧಿ ಕಾಣದ ಸಾಕಷ್ಟು ಸ್ಥಳಗಳನ್ನು ಕಾನೂನಿನ ಹದ್ದುಬಸ್ತಿನಲ್ಲಿ ಖಾಸಗಿಯವರಿಗೆ ಲೀಸ್‌ ಮೇಲೆ ಕೊಡಬಹುದಾದ ಯೋಜನೆಗಳ ಜಾರಿಗೆ ತಂದಿದ್ದಾರೆ.

ಈ ನಿಟ್ಟಿನಲ್ಲಿ ಕರ್ನಾಟಕ ಟೂರಿಸಂ ಫೆಲಿಸಿಟೇಶನ್‌ ಆಕ್ಟ್ ಜಾರಿಗೆ ತಂದು ಹೋಂಸ್ಟೇಗಳ ರಿಜಿಸ್ಟ್ರೇಷನ್‌ ಮತ್ತು ಸರ್ಟಿಫಿಕೇಟ್‌ ಅನ್ನು ಸರಳೀಕರಣಗೊಳಿಸಿದರು. ಅಷ್ಟೇ ಅಲ್ಲ ಕಾವೇರಿ ನದಿ ಪಾತ್ರದ ಪ್ರವಾಸೋದ್ಯಮ ಸ್ಥಳಗಳ ಅಭಿವೃದ್ಧಿಗಾಗಿ ಕರ್ನಾಟಕ ಟೂರಿಸಂ ಮೂಲಭೂತ ಸೌಕರ್ಯ ಲಿಮಿಟೆಡ್‌ ಆರಂಭಿಸಿ ಅಗತ್ಯವಾಗಿ ಬೇಕಾದ ಸಹಾಯ-ಸಹಕಾರ ನೀಡಿ ಪ್ರವಾಸೋದ್ಯಮ ಬೆಳವಣಿಗೆಯ ಹಾದಿ ಸುಗಮಗೊಳಿಸಿದ ಕೀರ್ತಿ ದೇಶಪಾಂಡೆ ಅವರಿಗೆ ಸಲ್ಲುತ್ತದೆ.

ರಾಜ್ಯದ ಪ್ರವಾಸೋದ್ಯಮ ರಾಷ್ಟ್ರ-ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳಬೇಕೆಂಬ ಮಹತ್ವಾಕಾಂಕ್ಷೆ ಹೊಂದಿದ್ದ ದೇಶಪಾಂಡೆಯವರು ಅಂತಾರಾಷ್ಟ್ರೀಯ ಉತ್ಸವಗಳಿಗೆ ಪ್ರಚಾರಕರನ್ನು ಕಳುಹಿಸಿದರು. ಕರ್ನಾಟಕ ಹಬ್ಬಗಳನ್ನು ಆರಂಭಿಸಿ ದೇಶದ ಪ್ರಮುಖ ನಗರಗಳಲ್ಲಿ ಹಬ್ಬಗಳನ್ನು ಆಯೋಜಿಸಿದರು. ಟೂರಿಸಂ ಅಗತ್ಯತೆಗೆ ಬಂಡವಾಳದ ಅಗತ್ಯತೆಯನ್ನು ಅರಿತಿದ್ದ ದೇಶಪಾಂಡೆಯವರು ಇನ್ವೆಸ್ಟ್‌ ಕರ್ನಾಟಕ ಟೂರಿಸಂ ಯೋಜನೆ ಆರಂಭಿಸಿ ಪ್ರವಾಸೋದ್ಯಮಕ್ಕೆ ಕೋಟಿಗಟ್ಟಲೆ ಬಂಡವಾಳ ಆಕರ್ಷಿಸಿದರು.

ಪ್ರವಾಸೋದ್ಯಮ ಖಾತೆ ವಹಿಸಿಕೊಂಡ ನಂತರ ದೇಶಪಾಂಡೆ ಅವರ ಬಹುದೊಡ್ಡ ಸಾಧನೆಯೆಂದರೆ 2015ರಲ್ಲಿ ಬೆಂಗಳೂರಿನಲ್ಲಿ ʼಪಾಟಾʼ ಅಂತಾರಾಷ್ಟ್ರೀಯ ಸಮ್ಮೇಳನ ಆಯೋಜಿಸಿದ್ದರು. 57 ದೇಶಗಳ ಪ್ರತಿನಿ ಧಿಗಳು, 19 ರಾಜ್ಯಗಳ ಪ್ರತಿನಿ ಧಿಗಳು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಪ್ರವಾಸೋದ್ಯಮ ಬೆಳವಣಿಗೆಗೆ ದೇಶ-ವಿದೇಶಗಳ ಹೂಡಿಕೆದಾರರು ಒಡಂಬಡಿಕೆಗಳಿಗೆ ಸಹಿ ಹಾಕಲಾಯಿತು.

ಕರ್ನಾಟಕ ಟೂರಿಸಂಗೆ ಅಂತರಾಷ್ಟ್ರೀಯ ಗುಣಮಟ್ಟದ ಪರಿಕಲ್ಪನೆಗಳನ್ನು ಜಾರಿಗೆ ತರುವಲ್ಲಿ ದೇಶಪಾಂಡೆ ಅವರ ಪಾತ್ರ ಹಿರಿದಾಗಿದೆ. ಇವರ ಆಡಳಿತಾವ ಧಿಯಲ್ಲಿ ಪ್ರವಾಸೋದ್ಯಮ ಸಾಕಷ್ಟು ಅಭಿವೃದ್ಧಿ ಕಂಡಿದ್ದು ರಾಜ್ಯಕ್ಕೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಮೂರು ಪಟ್ಟು ಹೆಚ್ಚಳವಾಗಿದೆ.

ಪೂರಕ ಯೋಜನೆಗಳ ಜಾರಿ: ಪ್ರವಾಸೋದ್ಯಮ ಕ್ಷೇತ್ರಕ್ಕೆ ಪೂರಕವಾಗಿ ಬೇಕಾದ ಮೂಲಸೌಕರ್ಯಗಳ ಅಭಿವೃದ್ಧಿಗಾಗಿ ಕೇಂದ್ರ-ರಾಜ್ಯ ಸರ್ಕಾರಗಳ ಬೆಂಬಲದಿಂದ ಲಾಸ್ಟ್‌ ಮೆಲ್‌ ಕನೆಕ್ಟಿವಿಟಿ ರಸ್ತೆಗಳು, ಪ್ರವಾಸಿ ತಾಣಗಳ ಅಭಿವೃದ್ಧಿಗೆ ಕ್ರಮ, ಪ್ರವಾಸಿಗರ ಸುರಕ್ಷತೆ ಕುರಿತು ಅಗತ್ಯ ನೆರವು ನೀಡಿದರು. ಪರಿಶಿಷ್ಟ ಪಂಗಡ, ಪರಿಶಿಷ್ಟ ಜಾತಿ ಯುವಕರು ಪ್ರವಾಸೋದ್ಯಮ ಕ್ಷೇತ್ರದಲ್ಲಿ ಗುರುತಿಸಿಕೊಳ್ಳಬೇಕೆಂದು ರಾಜ್ಯ ಸರಕಾರದ ಮೂಲಕ ಟ್ಯಾಕ್ಸಿ ಖರೀದಿಗಳ ಮೇಲೆ ಲಕ್ಷ ರೂಪಾಯಿಗಳವರೆಗೆ ರಿಯಾಯಿತಿ ನೀಡಿದ್ದು, ಪರಿಣಾಮ ಸಾಕಷ್ಟು ಯುವಕರಿಂದು ಸ್ವ ಉದ್ಯೋಗದಲ್ಲಿ ತೊಡಗಿದ್ದಾರೆ.

ಪ್ರವಾಸೋದ್ಯಮ ಸಂಬಂಧ ಮಾನವ ಸಂಪನ್ಮೂಲ ಅಭಿವೃದ್ಧಿಗಾಗಿ ನಿರುದ್ಯೋಗಿ ಯುವಕರಿಗೆ ಹೌಸ್‌ ಕೀಪಿಂಗ್‌, ಖಾದ್ಯ ಮತ್ತು ಪಾನೀಯಗಳ ತಯಾರಿಕೆ, ಸಂವಹನ ಕೌಶಲ್ಯ, ಇತಿಹಾಸ, ಸಂಸ್ಕೃತಿ ಮತ್ತು ದೇಶೀಯ ಭಾಷೆಗಳ ಸಂವಹನ ತರಬೇತಿ ನೀಡುವ ಕಾರ್ಯಕ್ರಮಗಳನ್ನು ಕೆಲವು ವಿಶ್ವವಿದ್ಯಾಲಯಗಳು ಮತ್ತು ಇನ್ನಿತರೆ ಸಂಸ್ಥೆಗಳ ಸಹಯೋಗದಲ್ಲಿ ದೇಶಪಾಂಡೆ ಅವರು ಆರಂಭಿಸಿದ್ದಾರೆ.

ಪ್ರವಾಸಿಗರಿಗೆ ಉನ್ನತ ಗುಣಮಟ್ಟದ ವಸತಿ ಒದಗಿಸುವ ಉದ್ದೇಶದಿಂದ ಪ್ರವಾಸಿ ತಾಣಗಳ ಸುತ್ತಮುತ್ತ ಹೋಟೆಲ್‌ಗ‌ಳು ಸ್ಥಾಪನೆಗೆ ಬೆಂಬಲ ನೀಡಿದ್ದಾರೆ. ಪ್ರವಾಸಿಗರ ಹಿತರಕ್ಷಣೆಗಾಗಿ ಪ್ರವಾಸಿ ಮಿತ್ರ ಯೋಜನೆ ಆರಂಭಿಸಿದ್ದಾರೆ. ಹೋಮ್‌ಗಾರ್ಡ್‌ ಗಳ ಸಹಯೋಗದಲ್ಲಿ ವಿಶೇಷ  ರಕ್ಷಣಾದಳದ ಯೋಜನೆಯ ರೂವಾರಿ ಇವರಾಗಿದ್ದಾರೆ.

ಸ್ವಕ್ಷೇತ್ರಕ್ಕೆ ಕೊಡುಗೆ ಅಪಾರ: ಪ್ರವಾಸಿ ತಾಣಗಳು ಅಭಿವೃದ್ಧಿ ಜತೆಗೆ ಹೋಂಸ್ಟೇ ಮತ್ತು ರೆಸಾರ್ಟ್‌ಗಳ ಆರಂಭಕ್ಕೆ ಕಾನೂನಿನ ತೊಡಕುಗಳನ್ನು ನಿವಾರಿಸಿದ ನಂತರ ಪೂರಕವಾಗಿ ಬೇಕಾದ ರಸ್ತೆಗಳನ್ನು ಉತ್ತಮ ಗುಣಮಟ್ಟದೊಂದಿಗೆ ನಿರ್ಮಿಸಿದರು. ಮೊದಲು ದಾಂಡೇಲಿಯಲ್ಲಿ ಮೌಲಂಗಿ ಇಕೋ ಪಾರ್ಕ್‌ ಸ್ಥಾಪಿಸಿ ಸಾವಿರಾರು ಪ್ರವಾಸಿಗರನ್ನು ಆಕರ್ಷಿಸಿದರು. ನಂತರ ದಾಂಡೇಲಿಯಲ್ಲಿ ಕ್ರೊಕೊಡೈಲ್‌ ಪಾರ್ಕ್‌ ನಿರ್ಮಾಣ ಮತ್ತು ರಾಮನಗರದ ಹತ್ತಿರ ಕುವೇಶಿಯಲ್ಲಿ ದೇಶದಲ್ಲಿ ಪ್ರಥಮವಾಗಿ ಕೆನೋಪಿ ವಾಕ್‌(ಮರಗಳ ಮೇಲೆ ನಡೆಯುವ ಸೇತುವೆ ) ನಿರ್ಮಿಸಿದರು. ದಾಂಡೇಲಿಯಲ್ಲಿ ಆರಂಭವಾದ ರಿವರ್‌ ರಾಫ್ಟಿಂಗ್‌ ಚಟುವಟಿಕೆಗಳಿಗೆ ಸಂಪೂರ್ಣ ಬೆಂಬಲ ನೀಡಿದರು. ನಂತರ ಇವರ ಮಾರ್ಗದರ್ಶನದಲ್ಲಿ ಹಾರ್ನ್ ಬಿಲ್‌ ಉತ್ಸವ ಆರಂಭವಾಯಿತು. ದೇಶಪಾಂಡೆಯವರ ದೂರದೃಷ್ಟಿಯಿಂದಾಗಿ ಲಕ್ಷಾಂತರ ಪ್ರವಾಸಿಗರು ಕ್ಷೇತ್ರಕ್ಕೆ ಪ್ರತಿ ವರ್ಷ ಭೇಟಿ ನೀಡುತ್ತಿದ್ದಾರೆ ಅಲ್ಲದೆ ಸಾಕಷ್ಟು ಉದ್ಯೋಗಾವಕಾಶಗಳು ಸೃಷ್ಟಿಯಾಗಿ ಅರ್ಥಿಕ ಸ್ಥಿತಿ ಗತಿಗಳು ಏರಿಕೆ ಕಂಡಿದೆ.

ಪ್ರವಾಸೋದ್ಯಮ ಕ್ಷೇತ್ರಕ್ಕೆ ದೇಶಪಾಂಡೆಯವರು ನೀಡಿದ ಕೊಡುಗೆ ಅನನ್ಯವಾಗಿದೆ. ಇದಕ್ಕೆಲ್ಲ ಅವರ ದೂರದೃಷ್ಟಿ ಮತ್ತು ಕಠಿಣ ಪರಿಶ್ರಮ ಕಾರಣವಾಗಿದೆ.

ಸರ್ವರನ್ನೂ ಸಮಾನತೆಯಿಂದ ಕಾಣುವ ಆರ್‌ವಿಡಿ

ಕರ್ನಾಟಕದ ಶ್ರೇಷ್ಠ ಮುತ್ಸದ್ದಿ ರಾಜಕಾರಣಿಯಾದ ಆರ್‌.ವಿ.ದೇಶಪಾಂಡೆ ಅವರು ಸರ್ವರನ್ನೂ ಸಮಾನತೆಯಿಂದ ಕಾಣುವ ಜನನಾಯಕರಾಗಿದ್ದಾರೆ. ಎಲ್ಲ ಜಾತಿ, ಧರ್ಮ, ಸಮುದಾಯಗಳನ್ನು ಗೌರವಿಸುವ, ಪ್ರೀತಿಸುವ ಇವರು ಯುವಜನತೆಗೆ ಪ್ರೇರಣೆಯಾಗಿದ್ದಾರೆ. ಸ್ವಜಾತಿಯ ಬಲವಿಲ್ಲದೆ ಕಳೆದ 50 ವರ್ಷಗಳಿಂದ ಸಕ್ರಿಯ ರಾಜಕಾರಣದಲ್ಲಿರುವ ದೇಶಪಾಂಡೆಯವರು ಈ ನಾಡು ಕಂಡ ವಿರಳಾತಿವಿರಳ ಜಾತ್ಯತೀತ ನಾಯಕರಾಗಿದ್ದಾರೆ.

ಎಲ್ಲರೊಟ್ಟಿಗೆ ಪ್ರೀತಿ-ಸ್ನೇಹದ ಬದುಕನ್ನು ರೂಢಿಸಿಕೊಳ್ಳಬೇಕೆಂದರೆ ಉತ್ತಮ ಚಾರಿತ್ರÂ ಹೊಂದುವುದು ಅತ್ಯವಶ್ಯ. ಅಷ್ಟೇ ಅಲ್ಲ ಎಲ್ಲ ಸಮುದಾಯಗಳ ಬಾಂಧವರೊಂದಿಗೆ ಸಹೋದರತ್ವ ಭಾವನೆ ಹೊಂದಿದ್ದರೆ ಮಾತ್ರ ಉತ್ತಮ ನಾಯಕನಾಗಬಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸುವ ದೇಶಪಾಂಡೆ ಅವರು, ಯಾವುದೇ ಜಾತಿ, ಧರ್ಮದ ಜನರಿದ್ದರೂ ಅವರ ಕಷ್ಟಗಳಿಗೆ ಧ್ವನಿಯಾಗಿದ್ದಾರೆ.

ಸ್ವಧರ್ಮ ನಿಷ್ಠೆ, ಪರಧರ್ಮ ಸಹಿಷ್ಣುಯಾಗಿರುವ ಆರ್‌.ವಿ.ಡಿ ಅವರು ತಮ್ಮ ಕುಲದೇವತೆಯಾದ ಶ್ರೀ ತುಳಜಾ ಭವಾನಿಯ ನಾಮವನ್ನು ಸದಾ ಸ್ಮರಿಸುತ್ತಲೇ ಇರುತ್ತಾರೆ. ಅಲ್ಲದೆ ನನ್ನ ಹೆಸರಿನಲ್ಲಿ ಶ್ರೀರಾಮ ಅಡಗಿದ್ದಾನೆ ಎನ್ನುವ ರಘುನಾಥರಾವ್‌ ಅವರು ರಹೀಂನಿಗೂ ಅಷ್ಟೇ ಗೌರವ ನೀಡುತ್ತಾರೆ.

ʼಲೋಕಾಃ ಸಮಸ್ತಾಃ ಸುಖೀನೋ ಭವಂತುʼಎಂಬ ವೇದ ವಾಕ್ಯವನ್ನು ತಮ್ಮ ಜೀವನ ಪರ್ಯಂತ ಅಳವಡಿಸಿಕೊಂಡು ಬಂದಿರುವ ದೇಶಪಾಂಡೆಯವರು ಪ್ರಪಂಚದಲ್ಲಿರುವ ಪ್ರತಿಯೊಬ್ಬರು ಎಲ್ಲೆಡೆ ಸುಖ, ಸಂತೋಷ, ಮುಕ್ತವಾಗಿ ಬದುಕಲಿ ಎಂಬ ಉದಾತ್ತ ಆಶಯ ಹೊಂದಿದ್ದಾರೆ. ಕಾಲಕಾಲಕ್ಕೆ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಿ ದಾನ-ಧರ್ಮಗಳನ್ನು ನೆರವೇರಿಸುತ್ತ ಬಂದಿರುವ ಧಾರ್ಮಿಕ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ.

ಪ್ರತಿಯೊಂದು ಕೆಲಸ ಕಾರ್ಯಗಳಲ್ಲಿ ದೈವೀ ಅನುಗ್ರಹ ಅತ್ಯಗತ್ಯ ಎಂದು ನಂಬಿದ ದೇಶಪಾಂಡೆಯವರು ಮಠ, ಮಂದಿರ, ಮಸೀದಿ, ಚರ್ಚ್‌ ಹಾಗೂ ಪ್ರತಿಯೊಂದು ಶ್ರದ್ಧಾ ಕೇಂದ್ರಗಳಿಗೂ ಸಾಕಷ್ಟು ಸಹಾಯ ನೀಡುತ್ತ ಬಂದಿದ್ದಾರೆ. ಸರಕಾರ ಅಷ್ಟೇ ಅಲ್ಲ ತಮ್ಮ ಸ್ವಂತ ಹಣದಿಂದಲೂ ಸಾಕಷ್ಟು ಸಹಾಯ ಕಲ್ಪಿಸಿ ಸರ್ವಧರ್ಮಗಳ ಪ್ರೀತಿಗೆ ಪಾತ್ರರಾಗಿದ್ದಾರೆ. ಕ್ಷೇತ್ರದಲ್ಲಿರುವ ಎಲ್ಲಾ ಪ್ರಮುಖ ದೇವಸ್ಥಾನಗಳು, ಮಠ, ಚರ್ಚ್‌ ಹಾಗೂ ಮಸೀದಿಗಳ ನಿರ್ಮಾಣ, ಜೀಣೊìàದ್ಧಾರಕ್ಕೆ ಇವರ ಕೊಡುಗೆ ಅಪಾರ ಹಾಗೂ ಅನನ್ಯ.

ಕಾಶಿ ಮಠ, ಸ್ವರ್ಣವಲ್ಲೀ ಮಠ, ರಾಮಚಂದ್ರಾಪುರ ಮಠ, ಪರ್ತಗಾಳಿ ಮಠ, ಬೆಂಗಳೂರಿನ ಗೋಸಾಯಿ ಮಠಗಳ ಅನುಯಾಯಿಗಳಾಗಿರುವ ದೇಶಪಾಂಡೆಯವರು ರಂಜಾನ್‌ ಹಬ್ಬದ ಸಂದರ್ಭದಲ್ಲಿ ಸಾಮೂಹಿಕ ಇಫ್ತಾರ್‌ ಕೂಟ ಹಾಗೂ ಪ್ರಾರ್ಥನೆಯಲ್ಲಿ ಪಾಲ್ಗೊಂಡು ದೈವಾನುಗ್ರಹಕ್ಕೆ ಪಾತ್ರರಾಗುತ್ತಾರೆ. ಅಲ್ಲದೆ ಕ್ರೈಸ್ತ ಸಮುದಾಯದವರ ಜತೆ ಅನ್ಯೋನ್ಯವಾಗಿರುವ ಅವರು ಸದಾ ಬೆಂಬಲ ನೀಡುತ್ತಲೇ ಬಂದಿದ್ದಾರೆ.

ಅವರು ಪರಧರ್ಮ ಸಹಿಷ್ಣುಗಳಾಗಿರುವುದರಿಂದ ಕ್ಷೇತ್ರದ ಜನರು ಸದಾ ಆಶೀರ್ವದಿಸುತ್ತಲೇ ಬಂದಿದ್ದಾರೆ. ಇವರ ಆಡಳಿತಾವಧಿಯಲ್ಲಿ ಬೇರೆ ತಾಲೂಕು, ಜಿಲ್ಲೆಗಳಿಗೆ ಹೋಲಿಸಿದರೆ ಕ್ಷೇತ್ರದಲ್ಲಿ ಕೋಮುಗಲಭೆ, ಧರ್ಮ ಸಂಘರ್ಷಗಳು ತೀರಾ ವಿರಳ. ನಾಯಕನಂತೆ ಪ್ರಜೆಗಳು ಎಂಬ ಮಾತನ್ನು ಕ್ಷೇತ್ರದ ಜನತೆ ಪಾಲಿಸಿಕೊಂಡು ಬಂದಿದ್ದು ಸರ್ವರನ್ನು ಪರಸ್ಪರ ಗೌರವಿಸುತ್ತ, ಸಹಬಾಳ್ವೆಯಿಂದ ಜೀವನ ನಡೆಸಿ ಇತರರಿಗೆ ಮಾದರಿಯಾಗಿದ್ದಾರೆ.

ಸ್ವಧರ್ಮ ನಿಷ್ಠೆ, ಪರಧರ್ಮ ಸಹಿಷ್ಣುಯಾಗಿರುವ ದೇಶಪಾಂಡೆಯವರು ಜಾತಿ-ಧರ್ಮ, ಬಡವ-ಶ್ರೀಮಂತ, ಉಚ್ಚ-ನೀಚ ಎಂಬ ಹಂಗಿಲ್ಲದೇ ರತನ್‌ ಟಾಟಾ ಅವರಿಗೆ ನೀಡುವಷ್ಟು ಗೌರವವನ್ನೇ ಒಬ್ಬ ಬಡ, ವೃದ್ಧ ಮಹಿಳೆಗೂ ನೀಡುತ್ತಾರೆ. ಅವರ ಅತ್ಯಂತ ಸರಳ ಗುಣಗಳೇ ಅವರ ವ್ಯಕ್ತಿತ್ವಕ್ಕೆ ಹಿಡಿದ ಕೈಗನ್ನಡಿಯಾಗಿವೆ.

ದೇಶಪಾಂಡೆ ಅವರ ಬಳಿ ತಮ್ಮ ಸಮಸ್ಯೆಗಳನ್ನು ಹೇಳಿಕೊಂಡು ಬರುವ ಜನರ ಅಂತಸ್ತನ್ನು ಅಳೆಯದೇ ಶೀಘ್ರ, ಶಾಶ್ವತ ಪರಿಹಾರ ಕಲ್ಪಿಸಿಕೊಡುವಲ್ಲಿ ಕಾರ್ಯಪ್ರವೃತ್ತರಾಗುವ ಇವರ ಬದ್ಧತೆಗೆ ಇಂದಿನ ಯುವ ರಾಜಕಾರಣಿಗಳೂ ಮನ ಸೋಲುತ್ತಾರೆ. ಮೌಲ್ಯಗಳ ಪ್ರತಿಪಾದಕರಾಗಿರುವ ದೇಶಪಾಂಡೆಯವರು ದೂರದೃಷ್ಟಿ ಹೊಂದಿರುವ ಜನನಾಯಕರಾಗಿ, ಜನಾನುರಾಗಿದ್ದಾರೆ.

ಸಮಸ್ಯೆಗಳನ್ನು ಹೇಳಿಕೊಂಡು ದೇಶಪಾಂಡೆ ಅವರ ಮನೆಗೆ ಬೆಳ್ಳಂಬೆಳಗ್ಗೆ ಪ್ರತಿನಿತ್ಯ ಹತ್ತಾರು ಸಂಖ್ಯೆಯ ಸಾರ್ವಜನಿಕರು ಭೇಟಿ ನೀಡುತ್ತಾರೆ.

ಯಾವುದೇ ಒತ್ತಡದಲ್ಲಿದ್ದರೂ ಸಾರ್ವಜನಿಕರೊಟ್ಟಿಗೆ ಸಂಯಮದಿಂದ ವರ್ತಿಸಿ ಅವರಿಗೆ ಊಟ- ಉಪಾಹಾರ ವ್ಯವಸ್ಥೆ ಕಲ್ಪಿಸಿ ಸಾವಧಾನ ಚಿತ್ರದಿಂದ ಸಮಸ್ಯೆಗಳನ್ನು ಆಲಿಸುವ ದೇಶಪಾಂಡೆ ಅವರು ಸಾದಾ ಸೀದಾ ವ್ಯಕ್ತಿಯಾಗಿದ್ದಾರೆ.

ಇವರು ಮಂತ್ರಿಯಾಗಿದ್ದಾಗ ಸಂದರ್ಭದಲ್ಲಂತೂ ಶಾಸಕರು, ಸಂಸದರು ಹಾಗೂ ಅಧಿಕಾರಿ ವರ್ಗ ಇವರನ್ನು ಭೇಟಿಯಾಗಲು ಆಗಮಿಸಿದಾಗ ಅವರೊಟ್ಟಿಗೆ ನಡೆದುಕೊಳ್ಳುವ ರೀತಿ, ಪಕ್ಷದ ತಳಮಟ್ಟದ ಕಾರ್ಯಕರ್ತರು, ಸಮಸ್ಯೆ ಹೇಳಿಕೊಳ್ಳಲು ಬರುವ ಸಾರ್ವಜನಿಕರೊಂದಿಗೆ ನಡೆದುಕೊಳ್ಳುವ ರೀತಿಯಲ್ಲಿ ಭೇದಭಾವ ಮಾಡದೆ ಸಮಾನತೆಯ ಮೂಲ ಮಂತ್ರ ಜಪಿಸುವ ಇವರು ಸಮಾನತೆಯ ಹರಿಕಾರರಾಗಿದ್ದಾರೆ.

ಒಬ್ಬ ನಿಜವಾದ ಜನ ನಾಯಕನಲ್ಲಿರಬೇಕಾದ ಜಾತ್ಯತೀತ ಮನೋಭಾವನೆಯನ್ನು ಹೊಂದಿರುವ ದೇಶಪಾಂಡೆ ಅವರಂಥ ನಾಯಕರು ವಿರಳ.

Advertisement

Udayavani is now on Telegram. Click here to join our channel and stay updated with the latest news.

Next