Advertisement

ಸಿಬಂದಿ ಕರ್ತವ್ಯ ನಿಷ್ಠೆಗೆ ಜಿಲ್ಲಾಧಿಕಾರಿ ಸಲಾಂ

03:43 PM May 19, 2023 | Team Udayavani |

ಉಡುಪಿ: ಜಿಲ್ಲಾಡಳಿತದ ಸಿಬಂದಿ ತಮ್ಮ ವೈಯಕ್ತಿಕ ಕೆಲಸ ಕಾರ್ಯಗಳನ್ನು ಬದಿಗಿರಿಸಿ ದಿನದ 24 ಗಂಟೆಗಳ ಕಾಲ ಚುನಾವಣೆ ಕರ್ತವ್ಯ ನಡೆಸಿರುವುದು ಒಂದು ಉತ್ತಮ ಸಾಧನೆಯಾಗಿದೆ ಎನ್ನುವುದು ಜಿಲ್ಲಾ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ ಜಿಲ್ಲಾಧಿಕಾರಿ ಕೂರ್ಮಾ ರಾವ್‌ ಅವರ ಅನಿಸಿಕೆ.
ಮುಖ್ಯವಾಗಿ ಸ್ವೀಪ್‌ ತಂಡದ ಕಾರ್ಯವೈಖರಿಯನ್ನು ಚುನಾವಣ ಆಯೋಗ ಶ್ಲಾಘಿಸಿ ಮೆಚ್ಚುಗೆ ವ್ಯಕ್ತಪಡಿಸಿದೆ. ಚುನಾವಣೆ ಜತೆಗೆ ಪ್ರವಾಸೋದ್ಯಮಕ್ಕೂ ಉತ್ತೇಜನ ನೀಡಲಾಗಿತ್ತು. ಕಯಾಕಿಂಗ್‌ ಮೂಲಕ ಮತದಾನ ಜಾಗೃತಿ ಮಾಡಲಾಗಿತ್ತು.

Advertisement

ಮನೆಮನೆಗೆ ಭೇಟಿ ನೀಡಿ 80 ವರ್ಷ ಮೇಲ್ಪಟ್ಟವರು, ಅಂಗವಿಕಲರು ಮತದಾನ ಮಾಡುವಂತೆ ಪ್ರೇರೇಪಿ ಸುವುದು, ಯುವ ಮತದಾರರು ಅತೀ ಹೆಚ್ಚಿನ ಸಂಖ್ಯೆ ಯಲ್ಲಿ ನೋಂದಣಿ ಮಾಡುವಂತಾಗಲು ಕಾಲೇಜುಗಳಿಗೆ ಭೇಟಿ ನೀಡಿ ಜಾಗೃತಿ ಮೂಡಿಸಿರುವುದು ಸಹಿತ ಹಲವಾರು ಕಾರ್ಯಕ್ರಮಗಳನ್ನು ಮಾಡಲಾಗಿತ್ತು. 7,000ಕ್ಕೂ ಅಧಿಕ ಸಿಬಂದಿ ಕರ್ತವ್ಯ ನಿರ್ವಹಿಸಿದ್ದರು ಎಂದರು.

ಜಿಲ್ಲಾ ಚುನಾವಣಾಧಿಕಾರಿಯಾಗಿ ಈ ಹಿಂದೆ ಯಾದಗಿರಿಯಲ್ಲಿಯೂ ಕರ್ತವ್ಯ ನಿರ್ವಹಿಸಿದ್ದೇನೆ. ಲೋಕಸಭಾ ಚುನಾವಣೆಯಲ್ಲಿಯೂ ಕೆಲಸ ನಿರ್ವಹಿಸಿದ ಅನುಭವವಿದೆ ಎಂದರು. ಈ ಬಾರಿ ತರಬೇತಿಗೆ ವಿಶೇಷ ಆದ್ಯತೆ ನೀಡಿದ್ದೇವೆ. ಕರ್ತವ್ಯ ನಿರತ ಎಲ್ಲ ಸಿಬಂದಿಯೂ ಹಲವು ಸುತ್ತಿನ ತರಬೇತಿ ನೀಡಲಾಗಿತ್ತು. ನಿಯಮಾವಳಿ ಉಲ್ಲಂಘನೆ ಆಗದಂತೆ ರಾಜಕೀಯ ಪಕ್ಷಗಳ ಪ್ರಮುಖರಿಗೂ ಚುನಾವಣ ಆಯೋಗದ ನಿರ್ದೇಶನಗಳನ್ನು ತಿಳಿಸಿ ಕಟ್ಟುನಿಟ್ಟಾಗಿ ಪಾಲಿಸಲು ಸೂಚನೆ ನೀಡಲಾಗಿತ್ತು. ಇದಕ್ಕೆ ಎಲ್ಲರೂ ಸಹಕರಿಸುವ ಜತೆಗೆ ನಮ್ಮ ಚುನಾವಣೆ ಎಂಬ ಹಬ್ಬದಲ್ಲಿ ಎಲ್ಲರೂ ಪಾಲ್ಗೊಂಡಿದ್ದಾರೆ ಎಂದರು.

ಆಘಾತ, ಅಪಘಾತವಿದ್ದರೂ…
ಮತದಾನದ ದಿನ ಸೆಕ್ಟರ್‌ ಅಧಿಕಾರಿಯೊಬ್ಬರ ಸಂಬಂಧಿಕರು ನಿಧನ ಹೊಂದಿದ್ದರು. ಆ ಜಾಗಕ್ಕೆ ಮತ್ತೂಬ್ಬ ಅಧಿಕಾರಿ ಬಂದ ಬಳಿಕವಷ್ಟೇ ಇವರು ಮನೆಗೆ ತೆರಳಿದ್ದಾರೆ. ಅದೇ ರೀತಿ ಕರ್ತವ್ಯ ನಿರ್ವಹಿಸಿ ಬೆಳಗ್ಗಿನ ಜಾವ ಮನೆಗೆ ಹೋಗುತ್ತಿದ್ದಾಗ ಒಬ್ಬರಿಗೆ ಅಪಘಾತ ಉಂಟಾಗಿತ್ತು. ಆದರೂ ಅವರು ತನ್ನ ಕೆಲಸ ಎಂದು ನಂಬಿ ಮತ್ತೆ ಕರ್ತವ್ಯಕ್ಕೆ ಬಂದಿದ್ದರು. ಹೀಗೆ ಚುನಾವಣೆ ಅವಧಿಯಲ್ಲಿ ಇಂತಹ ಸಾಕಷ್ಟು ಘಟನೆಗಳು ನಡೆದಿವೆ. ಆದರೆ ಎಲ್ಲವನ್ನೂ ಬದಿಗಿರಿಸಿ ಸಿಬಂದಿ ಪರಿಶ್ರಮಿಸಿದ್ದಾರೆ. ಜತೆಗೆ ಎಲ್ಲ ಅಧಿಕಾರಿಗಳೂ ಸೂಕ್ತವಾಗಿ ಸ್ಪಂದಿಸಿದ್ದಾರೆ.
-ಕೂರ್ಮಾ ರಾವ್‌, ಜಿಲ್ಲಾ ಚುನಾವಣಾಧಿಕಾರಿ, ಜಿಲ್ಲಾಧಿಕಾರಿ, ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next