Advertisement

ಅಕ್ರಮ ವಲಸಿಗರ ಗಡೀಪಾರು ಖಚಿತ: ಆರಗ ಜ್ಞಾನೇಂದ್ರ

11:49 PM Oct 06, 2021 | Shreeram Nayak |

ಬೆಂಗಳೂರು: ರೊಹಿಂಗ್ಯಾ ಸಮುದಾಯ, ಬಾಂಗ್ಲಾದೇಶದ ಪ್ರಜೆಗಳು ಸಹಿತ ರಾಜ್ಯದಲ್ಲಿರುವ ಅಕ್ರಮ ವಲಸಿಗರನ್ನು ಗಡೀಪಾರು ಮಾಡುವ ವಿಚಾರವಾಗಿ ಕೇಂದ್ರ ಸರಕಾರದ ಜತೆಗೆ ಮಾತುಕತೆ ನಡೆಸಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.

Advertisement

ಬೆಂಗಳೂರಿನ ಉದಯವಾಣಿ ಕಚೇರಿಯಲ್ಲಿ ಬುಧವಾರ ನಡೆದ “ವಿಶೇಷ ಸಂವಾದ’ದಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ಒಂದು ತಂಡವನ್ನು ಗಡೀಪಾರು ಮಾಡಲಾಗಿದೆ. ಈ ವಿಚಾರದಲ್ಲಿ ಪಶ್ಚಿಮ ಬಂಗಾಲದ ಸಹಕಾರ ಬೇಕಾಗುತ್ತದೆ. ರಾಜ್ಯದಲ್ಲಿರುವ ಅಕ್ರಮ ವಲಸಿಗರ ಗಡೀಪಾರು ವಿಷಯಕ್ಕೆ ಸಂಬಂಧಿಸಿದಂತೆ ಕೇಂದ್ರ ಸರಕಾರದ ಜತೆಗೆ ಮಾತುಕತೆ ನಡೆಸಲಾಗುವುದು ಎಂದರು.

ಅಕ್ರಮ ವಲಸಿಗರಿಗೆ ಆಧಾರ್‌ ಕಾರ್ಡ್‌, ಮತದಾರರ ಗುರುತಿನ ಚೀಟಿ ಮಾಡಿಸಿ ಕೊಡುವ ದೊಡ್ಡ ಜಾಲವೇ ಇದೆ. ಇದರ ಹಿಂದೆ ಮತ ಬ್ಯಾಂಕ್‌ ರಾಜಕಾರಣ ಕೆಲಸ ಮಾಡುತ್ತದೆ. ಅದನ್ನು ಪ್ರಬಲವಾಗಿ ವಿರೋಧಿಸಬೇಕು. ದೇಶದ ಭದ್ರತೆಯ ವಿಷಯದಲ್ಲಿ ಬಹಳ ಗಂಭೀರವಾಗಿ ಆಲೋಚಿಸಬೇಕಿದೆ ಎಂದು ಸಚಿವರು ಹೇಳಿದರು.

ರಾಜ್ಯದಲ್ಲಿರುವ ವಿದೇಶಿಗರು ಅವಧಿ ಮುಗಿದ ಪಾಸ್‌ಪೋರ್ಟ್‌ ನವೀಕರಣ ಮಾಡಿಸಿಕೊಂಡಿರಬೇಕು. ಇಲ್ಲದಿದ್ದರೆ ಅವರು ಪೊಲೀಸರ ಸುಪರ್ದಿಯಲ್ಲಿರಬೇಕು. ಸ್ವತ್ಛಂದವಾಗಿ ಹೊರಗಡೆ ಓಡಾಡಲು ಬಿಡುವುದಿಲ್ಲ. ಅಕ್ರಮ ವಲಸಿಗರು ಮತ್ತು ವಾಸಿಗಳನ್ನು ಪತ್ತೆ ಹಚ್ಚಿ ಹಿಡಿದಿಟ್ಟುಕೊಳ್ಳಬೇಕು, ಅವರ ಮೇಲೆ ಕಣ್ಗಾವಲು ಇಡಬೇಕು. ಪ್ರತೀ ಠಾಣೆಯಲ್ಲಿ ಅದರ ದಾಖಲೆ ಇರಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ನಿಯಮಿತವಾಗಿ ಅದರ ಪರಿಶೀಲನೆಯನ್ನು ನಡೆಸುತ್ತೇನೆ ಎಂದು ಗೃಹ ಸಚಿವರು ವಿವರಿಸಿದರು.

ಸದ್ಯದಲ್ಲೇ ಪ್ರಾಸಿಕ್ಯೂಟರ್‌ಗಳ ಸಭೆ
ಪ್ರಾಸಿಕ್ಯೂಷನ್‌ ವೈಫ‌ಲ್ಯದಿಂದ ಅಪರಾಧ ಪ್ರಕರಣಗಳಲ್ಲಿ ಆರೋಪಿಗಳಿಗೆ ಶಿಕ್ಷೆ ಪ್ರಮಾಣ ದರ ಕಡಿಮೆ ಇದೆ ಎಂಬ ಅಪವಾದವಿದೆ. ಈ ಹಿನ್ನೆಲೆಯಲ್ಲಿ ಚರ್ಚಿಸಲು ದಸರಾ ಬಳಿಕ ಪ್ರಾಸಿಕ್ಯೂಟರ್‌ಗಳ ರಾಜ್ಯದ ಮಟ್ಟದ ಸಭೆ ಕರೆಯಲಾಗುವುದು. ಪ್ರಾಸಿಕ್ಯೂಷನ್‌ ಅನ್ನು ಯಾವ ರೀತಿ ಸಮರ್ಥಗೊಳಿಸಬಹುದು ಮತ್ತು ಸಮಸ್ಯೆಗಳೇನಿವೆ ಎಂಬ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಗುವುದು. ಖಾಲಿ ಇರುವ ಪ್ರಾಸಿಕ್ಯೂಟರ್‌ಗಳ ಹುದ್ದೆಗಳ ಭರ್ತಿಗೂ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಆರಗ ಜ್ಞಾನೇಂದ್ರ ಹೇಳಿದರು.

Advertisement

ಇದನ್ನೂ ಓದಿ:ಫೇಸ್‌ಬುಕ್‌, ವಾಟ್ಸ್‌ಆ್ಯಪ್‌ ,ಇನ್‌ಸ್ಟಾಗ್ರಾಂ ಸ್ಥಗಿತದಿಂದ  ಟೆಲಿಗ್ರಾಂಗೆ ಲಾಭ

ಕರಾವಳಿ ಕಾವಲು ಪೊಲೀಸ್‌ಗೆ ಬಲ
ರಾಜ್ಯದ ಕರಾವಳಿಯೂ ದೇಶದ ಗಡಿಯಾಗಿರುವುದರಿಂದ ಇಲ್ಲಿನ ಭದ್ರತೆಗೆ ವಿಶೇಷ ಆದ್ಯತೆ ನೀಡುತ್ತಿದ್ದೇವೆ. ಕರಾವಳಿ ಕಾವಲು ಪೊಲೀಸ್‌ ಪಡೆಯ ಶಕ್ತಿಯನ್ನು ಹೆಚ್ಚಿಸಲು ಹೊಸ ಬೋಟ್‌ಗಳನ್ನು ಖರೀದಿಸಲಿದ್ದೇವೆ. ಸಮುದ್ರದಲ್ಲಿ ಗಸ್ತು ನಡೆಸಲು ಬೋಟ್‌ಗಳ ಅಗತ್ಯವಿದ್ದು, ಹೊಸದಾಗಿ 30 ಬೋಟ್‌ ಖರೀದಿಗೆ ಸಿದ್ಧತೆ ನಡೆಸಿದ್ದೇವೆ. ಕರಾವಳಿ ಪೊಲೀಸ್‌ ಪಡೆಗೆ ಸ್ಥಳೀಯ ಮೀನುಗಾರ ಯುವಕರ ಸಹಿತ ಸ್ಥಳೀಯರನ್ನು ಆದ್ಯತೆ ಮೇರೆಗೆ ಗುತ್ತಿಗೆ ಆಧಾರದಲ್ಲಿ ನೇಮಿಸಿಕೊಂಡು ಕಾರ್ಯಾಚರಣೆಯನ್ನು ಇನ್ನಷ್ಟು ಚುರುಕುಗೊಳಿಸಲಿದ್ದೇವೆ. ಕರಾವಳಿ ಭದ್ರತೆ ಸೇರಿ ವಿವಿಧ ವಿಷಯಗಳನ್ನು ಚರ್ಚಿಸಲು ಶೀಘ್ರವೇ ಮಂಗಳೂರು, ಉಡುಪಿ ಮತ್ತು ಭಟ್ಕಳಕ್ಕೆ ಭೇಟಿ ನೀಡಲಿದ್ದೇನೆ. ಕರಾವಳಿ ಪ್ರದೇಶದಲ್ಲಿ ಪೊಲೀಸ್‌ ಟವರ್‌ಗಳ ನಿರ್ಮಾಣ ಕಾರ್ಯವೂ ಆಗುತ್ತಿದೆ ಎಂದು ಜ್ಞಾನೇಂದ್ರ ಹೇಳಿದರು.

ಅಂಚೆ ಮೂಲಕ ಸಮನ್ಸ್‌ ಜಾರಿಗೆ ಚಿಂತನೆ
ಪ್ರಕರಣದ ಆರೋಪಿಗಳಿಗೆ ಸಮನ್ಸ್‌ ಜಾರಿ ಮಾಡುವುದು ಪೊಲೀಸ್‌ ಇಲಾಖೆಗೆ ಇತ್ತೀಚಿನ ದಿನಗಳಲ್ಲಿ ಒಂದು ಸವಾಲಿನ ಕೆಲಸವಾಗಿದೆ. ಒಂದು ಸಮನ್ಸ್‌ ನೀಡಲು ಒಬ್ಬ ಪೊಲೀಸ್‌ ಸಿಬಂದಿ ಕೆಲವೊಮ್ಮೆ ನೂರಾರು ಕಿ.ಮೀ. ಪ್ರಯಾಣಿಸಬೇಕಾಗುತ್ತದೆ. ಹೊರ ರಾಜ್ಯಗಳಿಗೂ ಹೋಗಬೇಕಾಗುತ್ತದೆ. ವಿವಿಧ ರೀತಿಯ ತರಬೇತಿ ಪಡೆದ ಒಬ್ಬ ಪೊಲೀಸ್‌ ಸಿಬಂದಿಯನ್ನು ಸಮನ್ಸ್‌ ತಲುಪಿಸಲು ಪೋಸ್ಟ್‌ ಮ್ಯಾನ್‌ ತರಹ ಬಳಸಿಕೊಳ್ಳುವುದು ಸರಿ ಅನಿಸುವುದಿಲ್ಲ. ಮೊಬೈಲ್‌ ಮೂಲಕ ಸಹ ಸಮನ್ಸ್‌ ಜಾರಿಗೊಳಿಸಬಹುದು ಎಂದು ಹೈಕೋರ್ಟ್‌ ಸಹ ಹೇಳಿದೆ. ಈ ಎಲ್ಲ ಹಿನ್ನೆಲೆಯಲ್ಲಿ ಸಮನ್ಸ್‌ ಜಾರಿ ವ್ಯವಸ್ಥೆಯನ್ನು ಅಂಚೆ ಮೂಲಕ ಅಥವಾ ಖಾಸಗಿಯವರಿಂದ ಜಾರಿಗೊಳಿಸುವ ಬಗ್ಗೆ ಚಿಂತನೆಯಿದೆ. ಸಮನ್ಸ್‌ ಜಾರಿ ವಿಭಾಗವನ್ನು ಆ ಕೆಲಸದಿಂದ ಮುಕ್ತಗೊಳಿಸಿದರೆ ಅದರ ಸಿಬಂದಿ ಕಾನೂನು-ಸುವ್ಯವಸ್ಥೆ ನಿರ್ವಹಣೆಗೆ ಲಭ್ಯವಾಗುತ್ತಾರೆ ಎಂದು ಜ್ಞಾನೇಂದ್ರ ತಿಳಿಸಿದರು.

ಸಹಾಯಧನ ಘೋಷಣೆ ಆರಗ ಜ್ಞಾನೇಂದ್ರ ಸ್ವಾಗತ
ಬೆಂಗಳೂರು: ಅಡಿಕೆ ತೋಟಗಳನ್ನು ಬಾಧಿಸುತ್ತಿರುವ ಎಲೆ ಚುಕ್ಕೆ ರೋಗ ನಿಯಂತ್ರಿಸಲು ಸರ್ಕಾರವು ಔಷಧ ಖರೀದಿಗೆ ಅನುಕೂಲವಾಗುವಂತೆ ಸಹಾಯಧನ ಘೋಷಿಸಿರುವುದು ಸ್ವಾಗತಾರ್ಹ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ. ಈ ಕುರಿತು ಹೇಳಿಕೆ ನೀಡಿರುವ ಅವರು, ಸರಕಾರದ ಈ ನಿರ್ಧಾರದಿಂದ, ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಗಳ ಅಡಿಕೆ ಬೆಳೆಗಾರರಿಗೆ ಸಹಾಯವಾಗಲಿದೆ. ರೈತ ಸಮುದಾಯವನ್ನು ಕಂಗೆಡಿಸಿರುವ ಎಲೆ ಚುಕ್ಕಿ ರೋಗವನ್ನು ಹತೋಟಿಗೆ ತರುವ ಬಗ್ಗೆ ರಾಜ್ಯ ಅಡಿಕೆ ಕಾರ್ಯಪಡೆ ಸಭೆಯಲ್ಲಿ ವ್ಯಾಪಕ ಚರ್ಚೆ ನಡೆದಿದ್ದು, ಸರಕಾರದ ನೆರವು ಪಡೆಯುವ ಬಗ್ಗೆ ನಿರ್ಧಾರ ಮಾಡಲಾಗಿತ್ತು. ಅದರಂತೆ ನೆರವು ದೊರೆತಿದೆ. ಎಲೆ ಚುಕ್ಕೆ ರೋಗ ನಿಯಂತ್ರಣಕ್ಕೆ ರೈತರು ಸಿಂಪಡಣೆ ಮಾಡುವ ಶಿಲೀಂಧ್ರನಾಶಕ ಖರೀದಿಸಲು ಪರಿಶಿಷ್ಟ ಜಾತಿ ಮತ್ತು ಪಂಗಡದ ಶೇ.90ರಷ್ಟು ಮತ್ತು ಸಾಮಾನ್ಯ ವರ್ಗದ ರೈತರಿಗೆ ಶೇ.75ರಷ್ಟು ಸಹಾಯಧನ ಸಿಗಲಿದೆ ಎಂದು ಅವರು ತಿಳಿಸಿದರು.

ಉನ್ನತ ಶಿಕ್ಷಣಾರ್ಥಿಗಳಿಗೆ ಅಭಯ
ಉನ್ನತ ಶಿಕ್ಷಣ ಮುಗಿಸಿ ಪೊಲೀಸ್‌ ಇಲಾಖೆ ಸೇರುವವರ ಸಂಖ್ಯೆ ಹೆಚ್ಚಿದೆ. ತಾಂತ್ರಿಕ, ವಿಜ್ಞಾನ ಪದವಿ ಮತ್ತು ಸ್ನಾತಕೋತ್ತರ ಪದವಿ ಮುಗಿಸಿದವರೂ ಪೊಲೀಸ್‌ ಕಾನ್‌ಸ್ಟೆಬಲ್‌ ಹುದ್ದೆಗೆ ಆಯ್ಕೆಯಾಗುತ್ತಿದ್ದಾರೆ. ಅಂತಹವರನ್ನು ಕೇವಲ ಸಿವಿಲ್‌ ಕಾರ್ಯಗಳಿಗೆ ಮಾತ್ರವೇ ಸೀಮಿತಗೊಳಿಸುವುದಿಲ್ಲ. ಇಲಾಖೆಯಲ್ಲಿಯೇ ಸಾಕಷ್ಟು ತಾಂತ್ರಿಕ ಕೆಲಸಗಳಿದ್ದು, ಅವುಗಳನ್ನು ನೀಡಲು ಕ್ರಮಕೈಗೊಳ್ಳಲಾಗುತ್ತದೆ. ಇಲಾಖೆ ಪರೀಕ್ಷೆಗಳನ್ನು ಎದುರಿಸಿ ಅಥವಾ ಅವರ ಕೌಶಲಗಳನ್ನು ತಿಳಿಸಿ ಹುದ್ದೆಯ ಶ್ರೇಣಿಯನ್ನು ಹೆಚ್ಚಿಸಿಕೊಳ್ಳಬಹುದು. ಇತ್ತೀಚೆಗೆ ಸಾಮಾನ್ಯ ಅಪರಾಧಗಳಿಗಿಂತ ಸೈಬರ್‌ ಅಪರಾಧಗಳು ಹೆಚ್ಚಾಗಿವೆ. ಇಂತಹ ತಾಂತ್ರಿಕ ಶಿಕ್ಷಣ ಪಡೆದ ಅಭ್ಯರ್ಥಿಗಳಿಗೆ ಇಲಾಖೆಯು ತಾಂತ್ರಿಕವಾಗಿ ಇನ್ನಷ್ಟು ಬಲಗೊಳ್ಳಲಿದೆ. ತಾಂತ್ರಿಕ ಪಡೆಗಳನ್ನು ಆರಂಭಿಸುತ್ತಿದ್ದು, ಅವುಗಳಲ್ಲಿ ಆದ್ಯತೆ ನೀಡಲಾಗುವುದು. ಹೀಗಾಗಿ, ಅಳುಕಿಲ್ಲದೆ ಪೊಲೀಸ್‌ ಹುದ್ದೆಯನ್ನು ಆಯ್ಕೆ ಮಾಡಿಕೊಳ್ಳಿ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next