Advertisement

ಜೀವನದಿಗೆ ಜೀವ ತುಂಬಬೇಕಿದೆ ವರುಣ: ಸತತ 2 ದಿನಗಳ ಮಳೆ ಅವಶ್ಯ

03:22 PM May 17, 2023 | Team Udayavani |

ಬೆಳ್ತಂಗಡಿ: ಪಶ್ಚಿಮಘಟ್ಟ ದಿಂದ ಹರಿಯುವ ನದಿಗಳು ಹರಿವು ನಿಲ್ಲಿಸಿದ್ದರಿಂದ ಇತ್ತ ಬೆಳ್ತಂಗಡಿಯಿಂದ ಮಂಗಳೂರಿನವರೆಗೆ ನೀರಿನ ಅಭಾವ ಉಂಟಾಗಿದೆ. ಜತೆಗೆ ಕಳೆದ ಎರಡು ದಿನಗಳ ಹಿಂದೆ ಸುರಿದ ಮಳೆಗೂ ಬೆಳ್ತಂಗಡಿ ತಾಲೂಕಿನ ಮೃತ್ಯುಂಜಯ ಹಾಗೂ ಜೀವನದಿ ನೇತ್ರಾವತಿ ನದಿಗೆ ಜೀವ ತುಂಬಲು ಸಾಧ್ಯವಾಗಿಲ್ಲ.
ನೇತ್ರಾವತಿ ನದಿ ಹಾಗೂ ಮೃತ್ಯುಂಜಯ ನದಿ ಬರಿದಾಗಿ ಕಿಂಡಿ ಅಣೆಕಟ್ಟುಗಳಲ್ಲೂ ನೀರಿಲ್ಲದಂತಾಗಿದೆ. 2019ರ ಬರಗಾಲದ ಬಳಿಕ ಇಷ್ಟೊಂದು ನದಿಗಳು ಬತ್ತಿರುವುದು ಈ ಬಾರಿ ಮಾತ್ರ. ಕಳೆದ ಎರಡು ದಿನಗಳ ಹಿಂದೆ ಚಂಡಮಾರುತದಿಂದ ಉತ್ತಮ ಮಳೆಯಾದರೂ ಹಾನಿಗಳು ಬಿಟ್ಟರೆ ನದಿ ನೀರಿನ ಒಳಹರಿವು ಹೆಚ್ಚಿಸಬಹುದೆಂಬ ನಿರೀಕ್ಷೆ ಹುಸಿಯಾಗಿದೆ. ಶನಿವಾರ ದಿನವಿಡಿ ಮಳೆಯಾದ್ದರಿಂದ ಕೊಂಚ ಹರಿವು ಹೆಚ್ಚಿ ಸಿದ್ದು, ಕಿಂಡಿ ಅಣೆಕಟ್ಟುಗಳಲ್ಲಿ ಒಂದೆರಡು ದಿನ ಹೆಚ್ಚುವರಿ ಬಳಕೆ ಮಾಡುವಷ್ಟು ನೀರು ಸಂಗ್ರಹವಾಗಿರುವುದು ಬಿಟ್ಟರೆ ದೊಡ್ಡ ಪ್ರಯೋಜನವಾಗಿಲ್ಲ.

Advertisement

800, 1,000 ಅಡಿ
ತಲುಪುತ್ತಿದೆ ಕೊಳವೆ ಬಾವಿ
ತಾಲೂಕಿನಲ್ಲಿ 10ರಿಂದ 15 ಸಾವಿರಕ್ಕೂ ಮಿಕ್ಕಿ ಕೊಳವೆಬಾವಿಗಳಿವೆ. ಇರುವ ಕೊಳವೆ ಬಾವಿ ಅಂತರ್ಜಲ ಮಟ್ಟ ಪಾತಾಳಕ್ಕೆ ಇಳಿದಿದೆ. ಹೊಸ ಕೊಳವೆಬಾವಿ ತೆಗೆಯಲು ಮುಂದಾದ ಮಂದಿಗೆ ಮತ್ತೂಂದು ಶಾಕ್‌ ನೀಡುತ್ತಿದೆ. ಈ ಬೇಸಗೆಯಲ್ಲಿ ನೀರು ಸಿಕ್ಕರೆ ಶಾಶ್ವತವಾಗಿ ನೀರು ಸಿಗಬಹುದೆಂಬ ನಿರೀಕ್ಷೆಯಲ್ಲಿ ಕೊಳವೆ ಬಾವಿ ಕೊರೆದರೆ 800 ಅಡಿಗಳವರೆಗೆ ತಲುಪಿದರೂ ಹನಿ ನೀರು ಸಿಗುತ್ತಿಲ್ಲ. ಇದು ಭೂ ವಿಜ್ಞಾನಿಗಳಿಗೂ ಆತಂಕ ಮೂಡಿಸಿದೆ. ಅತ್ತ ನದಿಯೂ ಬತ್ತಿರುವುದರಿಂದ ಕೃಷಿಕರಿಗೆ ಹೊಡೆತ ಬಿದ್ದಿದೆ.

ಕಳೆದ ನಾಲ್ಕಾರು ದಿನಗಳಿಂದ ಬೆಳ್ತಂಗಡಿ ತಾಲೂಕು ಹಾಗೂ ಪಶ್ಚಿಮಘಟ್ಟದಲ್ಲಿ ಹರಿವ ನದಿ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಸುರಿದ ಮಳೆಯ ಪರಿಣಾಮ ನೀರಿನ ಹರಿವು ಆರಂಭವಾಗಿದೆ. ನೇತ್ರಾವತಿ ಮೃತ್ಯುಂಜಯ ಸೇರುವ ಪಜಿರಡ್ಕದಲ್ಲಿ ಕೊಂಚ ನೀರು ಶೇಖರಣೆಯಾಗಿದೆ. ಇದರಿಂದ ಆನಂಗಳ್ಳಿ, ಕಡಂಬಳ್ಳಿ, ಮುಂಡಾಜೆ, ಕಾಪು ಮೊದಲಾದ ಪರಿಸರಗಳಲ್ಲಿರುವ ಕಿಂಡಿ ಅಣೆಕಟ್ಟುಗಳಲ್ಲಿ ನೀರಿನ ಮಟ್ಟ ಸುಧಾರಣೆ ಕಂಡಿದೆ. ಸುಮಾರು ಒಂದು ತಿಂಗಳಿನಿಂದ ಕೃಷಿ ತೋಟಗಳಿಗೆ ಕಿಂಡಿ ಅಣೆಕಟ್ಟಿನ ನೀರಿನ ವ್ಯವಸ್ಥೆ ಇರಲಿಲ್ಲ. ಆದರೆ ಈಗ ಇವು ತುಂಬಿದ ಪರಿಣಾಮ ನದಿ ಸಮೀಪದ ಕೃಷಿ ತೋಟಗಳನ್ನು ತಲುಪಿದೆ.

ಎರಡು ದಿನಗಳ ಮಳೆ ಅವಶ್ಯ
ನೇತ್ರಾವತಿ ನದಿಗೆ ಹೆಚ್ಚಿನ ಬಲವನ್ನು ನೀಡುವ ಮೃತ್ಯುಂಜಯ ನದಿಯಲ್ಲಿ ನೀರಿನ ಹರಿವು ಹೆಚ್ಚಳವಾದಲ್ಲಿ ಪಜಿರಡ್ಕದಿಂದ ತಗ್ಗು ಪ್ರದೇಶಗಳಲ್ಲಿ ನೇತ್ರಾವತಿ ನದಿಯ ಹರಿವಿನಲ್ಲೂ ಹೆಚ್ಚಳವಾಗುತ್ತದೆ. ಇದು ಜಿಲ್ಲೆಯ ನಾನಾ ಭಾಗಗಳ ಮೂಲಕ ಹರಿಯುವ ನೇತ್ರಾವತಿ ನದಿ ನೀರಿನ ಹೆಚ್ಚಳಕ್ಕೆ ಕಾರಣವಾಗುವುದಲ್ಲದೆ ಮಂಗಳೂರು ನಗರಕ್ಕೆ ರೇಶನಿಂಗ್‌ ಮೂಲಕ ನೀರಿನ ವ್ಯವಸ್ಥೆ ಕಲ್ಪಿಸುವುದನ್ನು ತಪ್ಪಿಸಲಿದೆ. ಇದಕ್ಕೆ ಸತತ ಎರಡು ದಿನಗಳ ಮಳೆ ಅತ್ಯವಶ್ಯವಾಗಿದೆ.

ಬೆಳ್ತಂಗಡಿ ನಗರದಲ್ಲಿ ಬೋರ್‌ವೆಲ್‌ ಆಶ್ರಯ
ಬೆಳ್ತಂಗಡಿ ಪಟ್ಟಣಕ್ಕೆ 13 ಬೋರ್‌ವೆಲ್‌ ಸಹಿತ ಸೋಮಾವತಿ ನದಿ ನೀರನ್ನು ಬಳಸಲಾಗುತ್ತಿತ್ತು. ಕಳೆದ ಎರಡು ವಾರಗಳಿಂದ ನದಿ ನೀರು ಬಳಕೆ ಮಾಡುತ್ತಿಲ್ಲ. ನಗರದಲ್ಲಿ ಗೃಹ, ವಾಣಿಜ್ಯ, ಕಚೇರಿ ಸೇರಿ 11 ವಾರ್ಡ್‌ಗಳಲ್ಲಿ 1,820 ನಳ್ಳಿ ನೀರಿನ ಸಂಪರ್ಕವಿದೆ. ಪ್ರತಿ ದಿನ 1.05 ಎಂ.ಎಲ್‌.ಡಿ. (10.50 ಲಕ್ಷ ಲೀಟರ್‌) ನೀರಿನ ಆವಶ್ಯಕತೆ ಯಿದೆ. ನಗರಕ್ಕೆ 13 ಕೊಳವೆ ಬಾವಿ ಹಾಗೂ ನದಿ ನೀರಿನ ಬದಲಿಗೆ ಹೆಚ್ಚುವರಿ 4 ಕೊಳವೆಬಾವಿಯನ್ನು ನೆಚ್ಚಿಕೊಂಡಿದೆ. ಬೆಳಗ್ಗೆ 6ಗಂಟೆ ಯಿಂದ ರಾತ್ರಿ 10.30ರವರೆಗೆ ನೀರು ಸರಬರಾಜು ಮಾಡಲಾಗು ತ್ತಿದೆ ಎಂದು ನ.ಪಂ. ಎಂಜಿನಿಯರ್‌ ಮಹಾವೀರ ಆರಿಗ ತಿಳಿಸಿದ್ದಾರೆ.

Advertisement

ಜಾಗೃತಿ ಕಾರ್ಯಕ್ರಮ
ನೀರಿನ ಮರುಪೂರಣಕ್ಕೆ ಪರಿಣಾಮಕಾರಿ ಆದ್ಯತೆ ನೀಡಿದ್ದು ಒಂದೆಡೆಯಾದರೆ ಮಳೆ ದಿನಗಳು ಕಡಿಮೆಯಾಗಿದೆ. ಕಡಿಮೆ ದಿನದಲ್ಲಿ ಹೆಚ್ಚು ಮಳೆ ಸುರಿದರೂ ಮರುಪೂರಣವಾಗದೆ ಸಮುದ್ರ ಸೇರುತ್ತಿದೆ. ಹಿಂದೆ ಗದ್ದೆ ಬೇಸಾಯ ನೀರಿನ ಶೇಖರಣೆಯ ಮೂಲವಾಗಿತ್ತು. ಈ ಕುರಿತು ಸರಕಾರ ಸಾಕಷ್ಟು ಜಾಗೃತಿ ಕಾರ್ಯಕ್ರಮ ಅನುಷ್ಠಾನಕ್ಕೆ ಮುಂದಾಗಿದೆ.
-ಶೇಖ್‌ ದಾವೂದ್‌,
ಹಿರಿಯ ಭೂ ವಿಜ್ಞಾನಿ, ಅಂತರ್ಜಲ ನಿರ್ದೇಶನಾಲಯ, ಜಿಲ್ಲಾ ಕಚೇರಿ, ಮಂಗಳೂರು

- ಚೈತ್ರೇಶ್‌ ಇಳಂತಿಲ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next