Advertisement

ರಂಗದ ಮೇಲೆಯೇ ಜೀವನರಂಗದಿಂದ ನಿರ್ಗಮನ

11:50 AM Feb 04, 2018 | Harsha Rao |

ಒಂದು ಕಾರ್ಯಕ್ಷೇತ್ರದಲ್ಲಿ ತನ್ನನ್ನು ತಾನು ಸಮರ್ಪಿಸಿ ಕೊಂಡು ಬದುಕುವುದು ಮಹತ್ತರವಾದದ್ದೇ. ಆದರೆ, ಕೆಲವರದ್ದು ಎಂಥ ಸಮರ್ಪಣೆ ಎಂದರೆ ಅದೇ ಕಾರ್ಯಕ್ಷೇತ್ರದಲ್ಲಿ ಸಾಯಬೇಕೆಂದು ಬಯಸುತ್ತಾರೆ! ಆಫ್ರಿಕಾದಲ್ಲಿ ಪಾಪಾ ವೆಂಬಾ ಎಂಬ ಸುಪ್ರಸಿದ್ಧ ಸಂಗೀತಗಾರನೊಬ್ಬನಿದ್ದ. ವೇದಿಕೆಯ ಮೇಲೆ ಹಾಡುತ್ತಲೇ ತನ್ನ ಬದುಕಿಗೂ ಮಂಗಲಪದ ಹಾಡಿದ! ಜೀನ್‌ ರೋಶೆ ಫ್ರಾನ್ಸ್‌ನ ಗನ್ನತ್‌ ಅಂತರಾಷ್ಟ್ರೀಯ ಜನಪದ ಉತ್ಸವದ ರೂವಾರಿ. ಕಳೆದ ವರ್ಷ ಉತ್ಸವದ 44ನೆಯ ಆವೃತ್ತಿ ನಡೆಯುತ್ತಿದ್ದಾಗ ವೇದಿಕೆಯ ಮೇಲೆ ಕುಸಿದು ಬಿದ್ದು ಮರಣವನ್ನಪ್ಪಿದ ಶ್ರೇಷ್ಠ ಕಲಾನಿರ್ದೇಶಕ ಆತ. ಕೂಡಿಯಾಟ್ಟಂನ ಹಿಮ್ಮೇಳವಾದಕ ಸುಬ್ರಮಣಿಯನ್‌ ಪೊಟ್ಟಿ ತಮ್ಮ ಪತ್ನಿ ಮಾರ್ಗಿ ಸತಿ ವೇದಿಕೆಯ ಮೇಲೆ ಅಭಿನಯಿಸುತ್ತಿರುವಾಗ ಇಡಕ್ಕ ವಾದಕರಾಗಿದ್ದರು. ಅಂಥ ಸಂದರ್ಭದಲ್ಲೊಮ್ಮೆ ವೇದಿಕೆಯ ಮೇಲೆ ಕುಸಿದು ಬಿದ್ದು ಇಹಲೋಕವನ್ನು ತ್ಯಜಿಸಿದ್ದರು. ಇತ್ತೀಚೆಗೆ ಯಕ್ಷಗಾನ ಕಲಾವಿದರೊಬ್ಬರು ರಂಗಸ್ಥಳದಲ್ಲಿಯೇ ಬಿದ್ದು ಕೊನೆಯುಸಿರೆಳೆದದ್ದು ಎಲ್ಲೆಡೆ ದೊಡ್ಡ ಸುದ್ದಿಯಾಗಿತ್ತು.

Advertisement

ಜಗತ್ತಿನಾದ್ಯಂತ ಅನೇಕ ಕಲಾವಿದರು ವೇದಿಕೆಯ ಮೇಲೆ ಮರಣ ಹೊಂದಿದ್ದಾರೆ. ಇದಕ್ಕೆ ಮುಖ್ಯ ಕಾರಣ, ಅವರು ವೇದಿಕೆಯ ಮೇಲೆ ಸಾವಿರಾರು ಮಂದಿಯ ವೀಕ್ಷಣೆಯಲ್ಲಿ ಮೈಮರೆಯುವುದು ಮತ್ತು ತಾವು ಅಭಿನಯಿಸುವಷ್ಟು ಹೊತ್ತು ವಿಶ್ರಾಂತಿ ಪಡೆಯಲು ಅವಕಾಶವಿಲ್ಲದಿರುವುದು. ರಂಗದ ಮೇಲೆ ಹೋದ ಮೇಲೆ ಅದೊಂದು ರೀತಿಯಲ್ಲಿ ಬದ್ಧತೆಯ ದೀಕ್ಷೆ. ಪೂರ್ಣಗೊಳಿಸದೆ ಮರಳುವ ಹಾಗಿಲ್ಲ. ಜೊತೆಗೆ ವೇಷಭೂಷಣಗಳನ್ನು ಧರಿಸಿಕೊಂಡೇ ಕುಸಿದರೆ ತತ್‌ಕ್ಷಣ ಚಿಕಿತ್ಸೆಯೂ ಕಷ್ಟವೇ.

ಕಲಾಮಂಡಲಂ ಗೀತಾನಂದನ್‌ ವೇದಿಕೆಯ ಮೇಲೆ ಹಿಮ್ಮೇಳದವರಿಗೆ ಬಾಗಿ ನಮಿಸುತ್ತ “ಇಹಲೋಕದ ವೇಷ ಕಳಚಿದುದು’ ವಾಟ್ಸಾಪ್‌ನಲ್ಲಿ ವೈರಲ್‌ ಆಗಿತ್ತು. ವಿಶ್ವವಿಖ್ಯಾತ ಒಟ್ಟಂತುಳ್ಳಲ್‌ ಕಲಾವಿದ ಗೀತಾನಂದನ್‌ ಅವರ ಸಾವು ಘನತೆಯದ್ದಾಗಿದ್ದರೂ ವೀಡಿಯೋದಲ್ಲಿ ನೋಡಿದವರಿಗೆ ಆ ಘಟನೆ ಬಹುಕಾಲ ಕಾಡುವುದು ಖಚಿತ.

ಇತ್ತೀಚೆಗೆ, ಜನವರಿ 28ರಂದು ಗೀತಾನಂದನ್‌ ಅವರು ತ್ರಿಶೂರ್‌ ಜಿಲ್ಲೆಯ ಇರಿಂಞಾಲಕುಡದ ಸಮೀಪ ಅವಿತ್ತತೂರ್‌ನ ಮಹಾವಿಷ್ಣು ದೇವಸ್ಥಾನದಲ್ಲಿ ಜರಗಿದ ಕಾರ್ಯಕ್ರಮದಲ್ಲಿ ವೇದಿಕೆಯ ಮೇಲೆ ಕಥಕಳಿಯ ಏಕವ್ಯಕ್ತಿ ಪ್ರದರ್ಶನವಾದ ಓಟ್ಟನ್‌ತುಳ್ಳಲ್‌ನ್ನು ಪ್ರದರ್ಶಿಸುತ್ತಿದ್ದರು. ಹೃದಯಸಂಬಂಧಿ ಕಾಯಿಲೆಯಿಂದಾಗಿ ಅವರು ಪ್ರದರ್ಶನದಲ್ಲಿ ಭಾಗವಹಿಸದಂತೆ ವೈದ್ಯರು ಸೂಚಿಸಿದ್ದರಂತೆ. ಆದರೆ, ಕಲೆೆಯ ಸೆಳೆತ ಎಂಬುದು ಅಫೀಮಿನಂತೆ. ಬೇಡವೆಂದರೂ ಮತ್ತೆ ಮತ್ತೆ ಸೆಳೆಯುತ್ತದೆ. ಜೊತೆಗೆ “ಸಾಯುವುದಿದ್ದರೆ ವೇದಿಕೆಯ ಮೇಲೆ’ ಎಂಬ ಸಾತ್ತಿ$Ìಕ ಸಂಕಲ್ಪವೂ ಇರುತ್ತದೆ. ಅಂತಕನ ದೂತರಿಗೆ ಕಿಂಚಿತ್ತೂ ಕರುಣೆಯಿಲ್ಲ. ಪ್ರದರ್ಶನ ಮುಗಿಯುವವರೆಗೂ ಕಾಯದೆ ಗೀತಾನಂದನ್‌ರನ್ನು ಕಾಣದ ಲೋಕಕ್ಕೆ ಕರೆದೊಯ್ದಿದ್ದಾರೆ.

“ಓಟ್ಟನ್‌ತುಳ್ಳಲ್‌’ ಎಂದರೆ ಏಕವ್ಯಕ್ತಿ ಪ್ರದರ್ಶಿಸುವ ಒಂದು ರೀತಿಯ ಕಾವ್ಯನಾಟಕ‌. ನಾಟ್ಯಶಾಸ್ತ್ರಕ್ಕೆ ಅನುಗುಣವಾದ ರಂಗಪ್ರಸ್ತುತಿ ಇದು. 18ನೆಯ ಶತಮಾನದಲ್ಲಿ ಕುಂಜನ್‌ ನಂಬಿಯಾರರಿಂದ ಈ ರಂಗಪ್ರಯೋಗ ರೂಪುಗೊಂಡಿತ್ತು. ಜವಹರಲಾಲ್‌ ನೆಹರೂರವರು ಇದನ್ನು ಮೆಚ್ಚಿ “ಬಡವನ ಕಥಕಳಿ’ ಎಂದು ಕೊಂಡಾಡಿದ್ದರಂತೆ. ಬಡತನದ ಹಿನ್ನೆಲೆಯ ಗೀತಾನಂದನ್‌ 1974ರಲ್ಲಿ ತ್ರಿಶೂರಿನ “ಕಲಾಮಂಡಲಂ’ಗೆ ವಿದ್ಯಾರ್ಥಿಯಾಗಿ ಸೇರಿದ್ದರು. 1983ರಿಂದ ಅಲ್ಲಿಯೇ ಗುರುಗಳಾಗಿ ಸೇರಿ 25 ವರ್ಷ ವಿಭಾಗ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದರು. 9ರ ಹರೆಯದಲ್ಲಿಯೇ ತುಳ್ಳಲ್‌ ಕಲಾವಿದರಾಗಿ ರಂಗಪ್ರವೇಶಿಸಿದ ಗೀತಾನಂದನ್‌ರಿಗೆ ಸುಮಾರು 5000 ಪ್ರದರ್ಶನಗಳನ್ನು ನೀಡಿದ ಹೆಗ್ಗಳಿಕೆ ಇದೆ. ಯುವಕರಲ್ಲಿ “ತುಳ್ಳಲ್‌’ ಕಲೆಯ ಬಗ್ಗೆ ಅಭಿಮಾನ, ಆಸಕ್ತಿ ಮೂಡಿಸುವುದರ ಜೊತೆಗೆ ಈ ಕಲೆಯನ್ನು ವಿಶ್ವಪರ್ಯಟನ ಮಾಡಿಸಿದ್ದರು. 1984ರಲ್ಲಿ ಫ್ರಾನ್ಸ್‌ನ ಹಲವೆಡೆಗಳಲ್ಲಿ ಈ ಕಲೆಯನ್ನು ಪ್ರದರ್ಶಿಸಿ ಅಲ್ಲಿನ ಸಹೃದಯರ ಮನಗೆದ್ದಿದ್ದರು. ಗೀತಾನಂದನ್‌ ಸಿನೆಮಾ ನಟರೂ ಹೌದು.

Advertisement

ಮೋಹನ್‌ಲಾಲ್‌ರಂಥ ನಟರೊಂದಿಗೆ ಅಭಿನಯಿಸಿದ್ದಲ್ಲದೆ, ಸುಮಾರು 30 ಸಿನೆಮಾಗಳಲ್ಲಿ ಅವರು ಪಾತ್ರವಹಿಸಿದ್ದರು. “ತುಳ್ಳಲ್‌’ ಕಲೆಯನ್ನು ಸಂಪ್ರದಾಯಕ್ಕಿಂತ ಭಿನ್ನವಾಗಿ ಸಂಗೀತಪ್ರಧಾನವಾಗಿ ಪ್ರಸ್ತುತಪಡಿಸಿದ ಅವರ ಪ್ರಯೋಗ ಯಶಸ್ವಿಯಾಗಿತ್ತು.
ಗೀತಾನಂದನ್‌ರ ಅಭಿನಯ ಪ್ರತಿಭೆಯನ್ನು ಕಂಡವರಿಗೆ ಅವರ ಸಾವನ್ನು ಅರಗಿಸಿಕೊಳ್ಳುವುದು ತುಂಬ ಕಷ್ಟ.

– ವಿ. ಜಯರಾಜನ್‌ ತ್ರಿಕ್ಕರಿಪುರ್‌

Advertisement

Udayavani is now on Telegram. Click here to join our channel and stay updated with the latest news.

Next