Advertisement

Department of Education: ಶಾಲಾ ಕಾರ್ಯಗಳು ಗ್ರಾಮ ಪಂಚಾಯತ್‌ ವ್ಯಾಪ್ತಿಗೆ

10:36 AM Oct 14, 2023 | Team Udayavani |

ಬೆಂಗಳೂರು: ಅಧಿಕಾರ ವಿಕೇಂದ್ರೀಕರಣದ ಮೂಲಕ ಸ್ಥಳೀಯ ಸಮಸ್ಯೆಗಳಿಗೆ ಸ್ಥಳೀಯ ಮಟ್ಟದಲ್ಲೇ ಪರಿಹಾರ ಕಂಡುಕೊಳ್ಳುವ ಆಶಯದಡಿ ಶಿಕ್ಷಣ ಇಲಾಖೆಯ ಹಲವು ಸೇವೆ ಮತ್ತು ಕಾರ್ಯಕ್ರಮಗಳನ್ನು ಗ್ರಾಮ ಪಂಚಾಯತ್‌ಗಳಿಗೆ ವರ್ಗಾಯಿಸುವ ಪ್ರಕ್ರಿಯೆಗೆ ಚಾಲನೆ ಸಿಕ್ಕಿದೆ.

Advertisement

ಎಲ್ಲವೂ ನಿಗದಿಯಂತೆ ನಡೆದರೆ ಶಿಕ್ಷಕರ ಹಾಜರಾತಿ, ಅತಿಥಿ ಶಿಕ್ಷಕರ ನೇಮಕ, ಮಧ್ಯಾಹ್ನದ ಬಿಸಿಯೂಟ ನೌಕರರ ನೇಮಕ,      ಶಿಕ್ಷಕರ ವೇತನ,   ಸಮವಸ್ತ್ರ ವಿತರಣೆ ಶಾಲೆಗಳಿಗೆ ಮೂಲ ಸೌಕರ್ಯಗಳನ್ನು ಒದಗಿಸುವುದು ಮುಂತಾದ  ಹಲವು ಕಾರ್ಯಕ್ರಮಗಳು ಗ್ರಾಮ ಪಂಚಾಯತ್‌ ಮೂಲಕ ಅನುಷ್ಠಾನಗೊಳ್ಳಲಿವೆ.

ಸಂವಿಧಾನದ 73ನೇ ತಿದ್ದುಪಡಿ ಅನ್ವಯ ಜಾರಿಗೆ ಬಂದ ಕರ್ನಾಟಕ ಪಂಚಾಯತ್‌ರಾಜ್‌ ಕಾಯ್ದೆ- 1993ರ 30ನೇ ವರ್ಷಾಚರಣೆ ಅಂಗವಾಗಿ ವಿಕೇಂದ್ರೀ ಕರಣ ವ್ಯವಸ್ಥೆಯನ್ನು ಬಲಪಡಿಸಲು ಗ್ರಾಪಂಗಳಿಗೆ ಹಂಚಿಕೆಯಾಗಿರುವ ಕಾರ್ಯಗಳನ್ನು ಗ್ರಾಪಂ ವ್ಯಾಪ್ತಿಗೆ ವರ್ಗಾಯಿಸಿ ಆ ಮೂಲಕ ಸ್ಥಳೀಯ ಸಮಸ್ಯೆಗಳಿಗೆ ಸ್ಥಳೀಯವಾಗಿಯೇ ಪರಿಹಾರ ಕಂಡುಕೊಳ್ಳುವ ಅಧಿಕಾರವನ್ನು ಗ್ರಾಪಂಗಳಿಗೆ ನೀಡಲಾಗುವುದು ಎಂದು ಸರಕಾರ ಪ್ರಸಕ್ತ ಬಜೆಟ್‌ನಲ್ಲಿ ಘೋಷಿಸಿತ್ತು.

ಅದರಂತೆ ಈಗ ಶಿಕ್ಷಣ ಇಲಾಖೆ ಪ್ರಸ್ತುತ ನಿರ್ವಹಿಸು ತ್ತಿರುವ ಸುಮಾರು 26 ವಿವಿಧ ಕಾರ್ಯಕ್ರಮಗಳು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆ ವರ್ಗಾವಣೆಗೊಂಡು ಪಂಚಾಯತ್‌ಗಳ ವ್ಯಾಪ್ತಿಗೆ ಬರಲಿವೆ. ಶಿಕ್ಷಣ ಇಲಾಖೆಗೆ ಸಂಬಂಧಿಸಿದ ಯಾವೆಲ್ಲ ಕಾರ್ಯಕ್ರಮಗಳು ಪಂಚಾಯತ್‌ಗಳ ವ್ಯಾಪ್ತಿಗೆ ಬರಲಿವೆ ಎಂಬ ಬಗ್ಗೆ ಗ್ರಾಮೀಣಾಭಿವೃದ್ಧಿ ಇಲಾಖೆ ಪಟ್ಟಿ ಸಿದ್ಧಪಡಿಸಿದ್ದು, ಶಿಕ್ಷಣ ಇಲಾಖೆ ಮಟ್ಟದಲ್ಲಿ ಈ ಬಗ್ಗೆ ಸಮಾಲೋಚನೆ ನಡೆದಿದೆ.

ಪಂಚಾಯತ್‌ಗಳ ಜವಾಬ್ದಾರಿಗಳು :

Advertisement

ಶಾಲಾ ಪೂರ್ವ ಮತ್ತು ಪೂರ್ವ ಪ್ರಾಥಮಿಕ ಶಿಕ್ಷಕರ ಹಾಗೂ ಸಿಬಂದಿ ಹಾಜರಾತಿಯನ್ನು ಗ್ರಾ.ಪಂ.ನ ಸಾಮಾನ್ಯ ಸ್ಥಾಯೀ ಸಮಿತಿ ಪರಿಶೀಲಿಸಲಿದೆ. ಪ್ರಾಥ ಮಿಕ ಶಿಕ್ಷಕರ-ಸಿಬಂದಿ ಹಾಜರಾತಿ ತಾಪಂ ಹಾಗೂ ಪ್ರೌಢ ಶಾಲಾ ಶಿಕ್ಷಕರ ಹಾಜರಾತಿಯನ್ನು ಜಿ.ಪಂ. ಪರಿಶೀಲಿಸಲಿದೆ. ಅನಧಿಕೃತ ಗೈರು ಹಾಜರಾದವರ ವಿರುದ್ಧ ಕ್ರಮ ಕೈಗೊಳ್ಳಲು ಮುಖ್ಯ ಶಿಕ್ಷಕರು ಹಾಗೂ ಎಸ್‌ಡಿಎಂಸಿ ಅಧ್ಯಕ್ಷರಿಗೆ ಪಂಚಾಯತ್‌ಗಳು ನಿರ್ದೇಶಿಸಬೇಕು. ಡಿಡಿಪಿಐ ಅನುಮೋದಿಸಿದ ಅತಿಥಿ ಶಿಕ್ಷಕರ ಹುದ್ದೆಗಳನ್ನು ಮುಖ್ಯ ಶಿಕ್ಷಕರೊಂದಿಗೆ ಚರ್ಚಿಸಿ ಗ್ರಾಪಂ ನೇಮಕ ಮಾಡಬೇಕು. ಬಿಸಿಯೂಟ ನೌಕರರ ನೇಮಕಕ್ಕೆ  ಅರ್ಜಿ ಆಹ್ವಾನಿಸಿ ಗ್ರಾಮ ಸಭಾದ ನಿಯಮ ಗಳಂತೆ ನೇಮಕ ಮಾಡಿಕೊಳ್ಳಬೇಕು. ಪ್ರಾಥ ಮಿಕ ಶಾಲಾ ಶಿಕ್ಷಕರ ವೇತನವನ್ನು ತಾ.ಪಂ.ಗಳು ಬಿಇಒಗಳಿಗೆ ಬಿಡು ಗಡೆ ಮಾಡಬೇಕು.  ಪ್ರೌಢ ಶಿಕ್ಷಣ ಶಿಕ್ಷಕರ ವೇತನವನ್ನು ಜಿ.ಪಂ.ಗಳು ಬಿಇಒಗಳಿಗೆ ಬಿಡುಗಡೆ ಮಾಡಬೇಕು.

 ಈ  ಹೊಣೆಯೂ ಗ್ರಾ.ಪಂ.ಗೆ:

ಎಸ್‌ಡಿಎಂಸಿಗಳ ಬಲವರ್ಧನೆ, ಮೇಲ್ವಿಚಾರಣೆ, ಶಾಲೆಯಿಂದ ಹೊರಗು ಳಿದ ಮಕ್ಕಳನ್ನು ಗುರುತಿಸುವುದರ ಜತೆಗೆ ಮಕ್ಕಳು ಪ್ರೋತ್ಸಾಹ ನೀಡುವುದು ಪೂರಕ ಪೌಷ್ಟಿಕಾಂಶಗಳನ್ನು ಒದಗಿಸುವುದು ಕೂಡ ಪಂಚಾಯತ್‌ಜವಾಬ್ದಾರಿಯಾಗಿದೆ.

ಮೂಲಸೌಕರ್ಯ ಒದಗಿಸುವುದು:

ಶಾಲೆಗಳ ನಿವೇಶನ ಮತ್ತು ಆಸ್ತಿಗಳ ಒತ್ತುವರಿ ತಡೆಯುವುದು ಗ್ರಾಪಂ ಜವಾಬ್ದಾರಿ. ಶಾಲಾ ಕೊಠಡಿಗಳ ದುರಸ್ತಿ, ಹೊಸ ಶಾಲಾ ಕೊಠಡಿ ನಿರ್ಮಾಣ, ಕುಡಿಯುವ ನೀರು, ಶೌಚಾಲಯ ನಿರ್ಮಾಣ, ಅಡುಗೆ ಮನೆ, ವಿದ್ಯುದೀಕರಣ, ಆಟದ ಮೈದಾನ, ಶಾಲಾ ಉದ್ಯಾನ, ಗ್ರಂಥಾಲಯ, ಪೀಠೊಪಕರಣ, ಆಟೋಪಕರಣ, ಪ್ರಯೋಗಾಲಯ, ಸ್ಮಾರ್ಟ್‌ ಕ್ಲಾಸ್‌ ಕಿಟ್‌ ಇತ್ಯಾದಿಗಳನ್ನು ಗುರುತಿಸಿ ಕ್ರಿಯಾ ಯೋಜನೆ (ಮಕ್ಕಳ ಬಜೆಟ್‌) ಸಿದ್ಧಪಡಿಸಬೇಕು. ಅದನ್ನು ತಾ.ಪಂ.-ಜಿ.ಪಂ. ಸ್ವಂತ ಆದಾಯದಡಿ ಸಂಯೋಜಿಸಬೇಕು.

ಪಂಚಾಯತ್‌ರಾಜ್‌ ಕಾಯ್ದೆಯ 73ನೇ ತಿದ್ದುಪಡಿಯ ಆಶಯಗಳು ಈಡೇರಬೇಕಾದರೆ ಹೊಣೆಗಾರಿಕೆ ನಿಗದಿ ಯಾಗಬೇಕು. ಪಂಚಾಯತ್‌ಗಳಿಗೆ ವರ್ಗಾವಣೆಗೊಳ್ಳಬೇಕಾದ ಕಾರ್ಯ ಗಳ ಬಗ್ಗೆ ಎಲ್ಲ ಇಲಾಖೆಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುಂದಡಿ ಇಡಲಾಗುತ್ತಿದೆ. ಅದರಂತೆ, ಶಿಕ್ಷಣ ಇಲಾಖೆ ಕೆಲವು ಕಾರ್ಯ ಗಳನ್ನು ಪಂಚಾಯತ್‌ಗಳಿಗೆ ವರ್ಗಾಯಿಸುವ ಪ್ರಕ್ರಿಯೆ ಸಮಾಲೋಚನೆ ಹಂತದಲ್ಲಿದೆ.– ಪ್ರಿಯಾಂಕ್‌ ಖರ್ಗೆ,  ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವ

ಗ್ರಾಪಂಗಳಿಗೆ ಜವಾಬ್ದಾರಿ ಹಂಚಿಕೆ ಆಗಿರುವುದು ಪಂಚಾಯತ್‌ಗಳ ಬಲವರ್ಧನೆ ಮತ್ತು ಅಧಿಕಾರ ವಿಕೇಂದ್ರೀಕರಣದ ದೃಷ್ಟಿಯಿಂದ ಒಳ್ಳೆಯದು. ಇದರಿಂದ ಗ್ರಾಮ ಪಂಚಾಯತ್‌ಗಳು ಸ್ಥಳೀಯ ಸರಕಾರವಾಗಿ ಕಾರ್ಯನಿರ್ವಹಿಸಲು ಸಹಾಯ ಆಗಲಿದೆ.– ಕಾಡಹಳ್ಳಿ ಸತೀಶ್‌,  ಅಧ್ಯಕ್ಷರು, ರಾಜ್ಯ ಗ್ರಾ.ಪಂ. ಸದಸ್ಯರ ಮಹಾ ಒಕ್ಕೂಟ 

Advertisement

Udayavani is now on Telegram. Click here to join our channel and stay updated with the latest news.

Next