ಬ್ರಹ್ಮಾವರ: ಜಿಲ್ಲೆಯ ಅಲೆಮಾರಿ/ಅರೆ ಅಲೆಮಾರಿ ಜನಾಂಗದವರಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಸಿಗುವ ಸೌಲಭ್ಯಗಳ ಬಗ್ಗೆ ಅರಿವು ಮೂಡಿಸುವ ಮಾಹಿತಿ ಕಾರ್ಯಾಗಾರವು ಹಂದಾಡಿ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.
ಜಿ.ಪಂ. ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಗೊಲ್ಲ ಹಾಗೂ ಜೋಗಿ ಸಮಾಜದವರು ಸರಕಾರದಿಂದ ಸಿಗುವ ಸವಲತ್ತುಗಳ ಬಗ್ಗೆ ಮಾಹಿತಿ ಪಡೆದು ಸಮಾಜದ ಮುಖ್ಯ ವಾಹಿನಿಯಲ್ಲಿ ಸೇರಲು ಕರೆ ನೀಡಿದರು. ತಾ.ಪಂ. ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್ ಅಧ್ಯಕ್ಷತೆ ವಹಿಸಿದ್ದರು.
ಜಿಲ್ಲಾ ಗೊಲ್ಲ ಸಮಾಜ ಸಂಘದ ಅಧ್ಯಕ್ಷ ಬಿ. ರಾಮ ಗೊಲ್ಲ, ಜೋಗಿ ಸಮಾಜದ ಅಧ್ಯಕ್ಷ ಸುರೇಶ್ ಕುಮಾರ್ ಜೋಗಿ, ತಾ.ಪಂ. ಸದಸ್ಯ ಸುಧೀರ್ ಕುಮಾರ್ ಶೆಟ್ಟಿ, ಜೋಗಿ ಸಮಾಜ ವಿವಿಧೋದ್ಧೇಶ ಸಂಘದ ಕಾರ್ಯದರ್ಶಿ ಹರಿಶ್ಚಂದ್ರ, ಜಿಲ್ಲಾ ಗೊಲ್ಲ ಸಮಾಜದ ಕಾರ್ಯದರ್ಶಿ ಪುಟ್ಟಣ್ಣ ಉಪಸ್ಥಿತರಿದ್ದರು.
ಬ್ರಹ್ಮಾವರ ಡಿ.ದೇ.ಅ. ಹಿಂದುಳಿದ ವರ್ಗಗಳ ಮೆಟ್ರಿಕ್ ಪೂರ್ವ ಬಾಲಕಿಯರ ನಿಲಯದ ಮೇಲ್ವಿಚಾರಕಿ ಆಶಾ ದೇವಿ ನಾಯಕ್, ಅವರನ್ನು ಗೊಲ್ಲ ಸಮಾಜದ ವತಿಯಿಂದ ಸಮ್ಮಾನಿಸಲಾಯಿತು.
ರಜತಾದ್ರಿಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಕಚೇರಿ ವ್ಯವಸ್ಥಾಪಕ ದಯಾನಂದ ಪಿ. ಅವರು ಇಲಾಖಾ ಕಾರ್ಯಗಳ ಬಗ್ಗೆ ಮಾಹಿತಿ ನೀಡಿದರು.
ತಾಲೂಕು ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿ ಗಿರಿಧರ ಗಾಣಿಗ ಸ್ವಾಗತಿಸಿ, ಆಶಾ ದೇವಿ ನಾಯ್ಕ ವಂದಿಸಿದರು. ದರ್ಶಿನಿ ನಿರೂಪಿಸಿದರು.