Advertisement

ಡಿನೋಟಿಫೈ: ಬಿಎಸ್‌ವೈ ಅರ್ಜಿ ವಿಚಾರಣೆ ಇಂದು

07:05 AM Sep 12, 2017 | Team Udayavani |

ಬೆಂಗಳೂರು:ಡಾ.ಶಿವರಾಮ ಕಾರಂತ ಬಡಾವಣೆ ಅಕ್ರಮ ಡಿನೋಟಿಫಿಕೇಶನ್‌ ಸಂಬಂಧ ಎಸಿಬಿ ದಾಖಲಿಸಿರುವ ಎಫ್ಐಆರ್‌ ರದ್ದುಕೋರಿ ಮಾಜಿ ಮುಖ್ಯಮಂತ್ರಿ ಬಿ.ಎಸ್‌ ಯಡಿಯೂರಪ್ಪ ಸಲ್ಲಿಸಿರುವ ಅರ್ಜಿವಿಚಾರಣೆಯನ್ನು ಹೈಕೋರ್ಟ್‌  ಮಂಗಳವಾರಕ್ಕೆ ( ಸೆ.12) ಮುಂದೂಡಿದೆ.

Advertisement

ಸೋಮವಾರ ನಡೆದ ಅರ್ಜಿವಿಚಾರಣೆ ವೇಳೆ ಸುದೀರ್ಘ‌ ವಾದ ಮಂಡಿಸಿದ ಎಸಿಬಿ ಪರ ವಕೀಲ ಮಾಜಿ ಅಡ್ವೋಕೆಟ್‌ ಜನರಲ್‌  ಪ್ರೊ.ರವಿವರ್ಮಕುಮಾರ್‌, ಶಿವರಾಮ ಕಾರಂತ ಬಡವಾಣೆ ಅಕ್ರಮ ಡಿನೋಟಿಫಿಕೇಶನ್‌ ಅತ್ಯಂತ ಗಂಭೀರ ಪ್ರಕರಣವಾಗಿದೆ. ಅಂದಿನ ಸಿಎಂ ಯಡಿಯೂರಪ್ಪ ಸಾರ್ವಜನಿಕ ಅಧಿಕಾರ ದುರ್ಬಳಕೆ ಮಾಡಿಕೊಂಡು ಅಕ್ರಮ ಎಸಗಿದ್ದಾರೆ. ಹೀಗಾಗಿ ಈ ಪ್ರಕರಣದ ಸಮಗ್ರ ತನಿಖೆ ನಡೆಯುವ ಅಗತ್ಯವಿದ್ದು ಎಸಿಬಿ ತನಿಖೆಗೆ ತಡೆಯಾಜ್ಞೆ ನೀಡಬಾರದು ಎಂದು ನ್ಯಾಯಪೀಠಕ್ಕೆ ಕೋರಿದರು.

ಬಳಿಕ ಯಡಿಯೂರಪ್ಪ ಪರ ಎಸಿಬಿಗೆ ದೂರು ನೀಡಿರುವ ಅಯ್ಯಪ್ಪ ಶರ್ಮಾ ಅವರ ಪರ ವಕೀಲರು ವಾದಿಸಿ, ಸೂಕ್ತ ಮಾಹಿತಿಯನ್ನು ಆಧರಿಸಿ ಅಧಿಕಾರ ದುರ್ಬಳಕೆ ಮಾಡಿಕೊಂಡು, ಡಿನೋಟಿಫಿಕೇಶನ್‌ ಮಾಡಿರುವ ಸಂಬಂಧ ನನ್ನ ಕಕ್ಷಿದಾರರು ಎಸಿಬಿಗೆ ದೂರು ನೀಡಿದ್ದಾರೆ.ಅದರಂತೆ ಪ್ರಾಥಮಿಕ ತನಿಖೆ ನಡೆಸಿದ ಬಳಿಕವೇ, ಯಡಿಯೂರಪ್ಪ ವಿರುದ್ಧ ಎಫ್ಐಆರ್‌ ದಾಖಲಿಸಿಕೊಂಡು ಕಾನೂನು ಪ್ರಕಾರ ಎಸಿಬಿ ತನಿಖೆ ನಡೆಸುತ್ತಿದೆ ಎಂದು ತಿಳಿಸಿದರು.

ಈ ವಾದ ಆಲಿಸಿದ ನ್ಯಾಯಮೂರ್ತಿ ಅರವಿಂದಕುಮಾರ್‌ ಅವರಿದ್ದ ಏಕಸದಸ್ಯ ಪೀಠ, ಅರ್ಜಿ ವಿಚಾರಣೆಯನ್ನು  ಮಂಗಳವಾರಕ್ಕೆ ( ಸೆ.12) ಮುಂದೂಡಿತು. ಹೀಗಾಗಿ ಅರ್ಜಿದಾರ ಯಡಿಯೂರಪ್ಪ ಅವರನ್ನು ಮುಂದಿನ ವಿಚಾರಣೆಯವರೆಗೂ ಬಂಧಿಸಬಾರದು, ಇನ್ನಿತರೆ ಕಾನೂನು ಕ್ರಮಗಳನ್ನು ಕೈಗೊಳ್ಳಬಾರದು ಎಂಬ ಮಧ್ಯಂತರ ಆದೇಶವೂ ವಿಸ್ತರಣೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next