Advertisement

ಚಿಕಿತ್ಸೆಯ ವೆಚ್ಚದ ಕ್ಲೇಮು ನಿರಾಕರಣೆ: ಬಡ್ಡಿ ಸಹಿತ ಪಾವತಿಸಲು ವಿಮಾಸಂಸ್ಥೆಗೆ ಆದೇಶ

11:18 PM Feb 21, 2024 | Team Udayavani |

ಮಂಗಳೂರು: ಚಿಕಿತ್ಸಾ ವೆಚ್ಚದ ಕ್ಲೇಮು ನಿರಾಕರಿಸಿದ ವಿಮಾ ಸಂಸ್ಥೆಯೊಂದರ ವಿರುದ್ಧ ಮಂಗಳೂರಿನ ದ.ಕ. ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ತೀರ್ಪು ನೀಡಿದ್ದು, ಬಡ್ಡಿ ಸಹಿತ ಮೊತ್ತವನ್ನು ಪಾವತಿಸುವಂತೆ ಆದೇಶಿಸಿದೆ.

Advertisement

ಮಂಗಳೂರಿನ ವಿವೇಕಾನಂದ ಪಡಿಯಾರ್‌ ವಿ. ಮತ್ತು ಅವರ ಪತ್ನಿ ಶಾಮಿನಿ ವಂದನಾ ಪಡಿಯಾರ್‌ ಅವರು ವಿಮಾ ಸಂಸ್ಥೆಯಲ್ಲಿ 5 ಲ.ರೂ. ಮೊತ್ತದ ವಿಮೆ ಮಾಡಿಸಿದ್ದರು. ಅನಂತರ ಶಾಮಿನಿ ವಂದನಾ ಪಡಿಯಾರ್‌ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಅವರ ಚಿಕಿತ್ಸೆಗೆ 5,09,676 ರೂ. ವೆಚ್ಚವಾಗಿದ್ದು, ವಿಮಾ ಮೊತ್ತವನ್ನು ಪಾವತಿಸುವಂತೆ ವಿಮಾ ಸಂಸ್ಥೆಯನ್ನು ಕೋರಿದ್ದರು.

ಆದರೆ ಅವರಿಗೆ ಈ ಹಿಂದೆ ಕಾಯಿಲೆಗಳು ಇರುವುದನ್ನು ವಿಮೆ ಮಾಡುವಾಗ ಬಚ್ಚಿಡಲಾಗಿತ್ತು, ಹಾಗಾಗಿ ವಿಮೆ ನೀಡಲು ಸಾಧ್ಯವಿಲ್ಲ ಎಂದು ಸಂಸ್ಥೆ ವಾದಿಸಿತ್ತು. ಆದರೆ ತಾವು ಎಲ್ಲ ಮಾಹಿತಿ ನೀಡಿರುವುದಾಗಿ ವಿಮೆ ಮಾಡಿಸಿದವರು ವಾದಿಸಿದ್ದರು. ಈ ಬಗ್ಗೆ ಗ್ರಾಹಕರ ನ್ಯಾಯಾಲಯದಲ್ಲಿ ವ್ಯಾಜ್ಯ ಹೂಡಲಾಗಿತ್ತು. ಈ ಹಿಂದೆ ಕಾಯಿಲೆ ಇದ್ದುದನ್ನು ತಿಳಿಸದೆ ಇದ್ದ ಬಗ್ಗೆ ದಾಖಲೆ ನೀಡಲು ವಿಮಾ ಸಂಸ್ಥೆ ವಿಫ‌ಲವಾಗಿತ್ತು.

ಈ ಹಿನ್ನೆಲೆಯಲ್ಲಿ ಆಯೋಗವು ವಿಮಾ ಸಂಸ್ಥೆಯ ವಿರುದ್ಧ ತೀರ್ಪು ನೀಡಿದೆ. ವಿಮಾ ಸಂಸ್ಥೆಯು 5 ಲ.ರೂ.ಗಳಿಗೆ ಶೇ. 8 ಬಡ್ಡಿ, ವ್ಯಾಜ್ಯದ ಖರ್ಚು ಮತ್ತು ಪರಿಹಾರವಾಗಿ 35,000 ರೂ. ಸೇರಿದಂತೆ ಒಟ್ಟು 6,15,000 ರೂ. ಪಾವತಿಸುವಂತೆ ಆಯೋಗವು ಆದೇಶದಲ್ಲಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next