Advertisement

ಡೆಂಘೀ ಪೀಡನೆ ನಗರದಲ್ಲೇ ಹೆಚ್ಚು

11:28 AM Feb 10, 2017 | |

ಬೆಂಗಳೂರು: ರಾಜಧಾನಿಯಲ್ಲಿ ಕೇವಲ ಐದು ವರ್ಷಗಳಲ್ಲಿ ಡೆಂಘೀ ಪ್ರಕರಣಗಳ ಸಂಖ್ಯೆ ಇಪ್ಪತ್ತುಪಟ್ಟು ಮತ್ತು ಚಿಕುನ್‌ಗುನ್ಯ ಪೀಡಿತರ ಸಂಖ್ಯೆ ಆರುಪಟ್ಟು ಹೆಚ್ಚಳವಾಗಿದ್ದು, ಇಡೀ ರಾಜ್ಯದಲ್ಲಿ ಡೆಂಘೀ ಕಾಯಿಲೆಯಲ್ಲಿ ಬೆಂಗಳೂರಿನ ಪಾಲು ಶೇ. 54ರಷ್ಟಿದೆ ಎಂಬ ಆಘಾತಕಾರಿ ಅಂಶ ಬೆಳಕಿಗೆಬಂದಿದೆ. 

Advertisement

ನಗರದಲ್ಲಿ ನಡೆಯುತ್ತಿರುವ ಅತ್ಯಧಿಕ ನಿರ್ಮಾಣ, ಅಸಮರ್ಪಕ ಕಸ ನಿರ್ವಹಣೆ, ಹವಾಮಾನ ಬದಲಾವಣೆ, ವಲಸೆಯಂತಹ ಹಲವು ಕಾರಣಗಳು ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದ್ದು, ಅತ್ಯಲ್ಪಾವಧಿಯಲ್ಲಿ ಸಾಂಕ್ರಾಮಿಕ ರೋಗ ಅತಿ ವೇಗವಾಗಿ ಹರಡುತ್ತಿರುವುದರ ಮುನ್ಸೂಚನೆ ನೀಡಿದೆ. 

ರಾಷ್ಟ್ರೀಯ ಸಾಂಕ್ರಾಮಿಕ ರೋಗಗಳ ನಿಯಂತ್ರಣ ಯೋಜನೆ (ಎನ್‌ವಿಬಿಡಿಸಿಪಿ)ಧಿಯು ನೀಡಿದ ಡೆಂಘೀ ಮತ್ತು ಚಿಕುನ್‌ಗುನ್ಯ ಪ್ರಕರಣಗಳ ಸಂಖ್ಯೆಯನ್ನು ಆಧರಿಸಿ ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆ (ಎಂಪ್ರಿ) ಎಂಬ ಸ್ವಾಯತ್ತ ಸಂಸ್ಥೆ ನಡೆಸಿದ ಅಧ್ಯಯನದಲ್ಲಿ ಈ ಅಂಶ ತಿಳಿದುಬಂದಿದೆ. 

ರಾಜ್ಯ ಸರ್ಕಾರದ ಹವಾಮಾನ ಬದಲಾವಣೆ ಸಂಬಂಧಿತ ಯೋಜನೆಗಳಡಿ ಎಂಪ್ರಿ ಸಂಸ್ಥೆಯ ಮಹಾನಿರ್ದೇಶಕಿ ರಿತು ಕಕ್ಕರ್‌ ಮಾರ್ಗದರ್ಶನದಲ್ಲಿ ಹವಾಮಾನ ಬದಲಾವಣೆ ಕೇಂದ್ರದ ಸಹ ಸಂಶೋಧಕಿ ಪಿ. ಚಿತ್ರಾ ಮತ್ತು ಅವರ ತಂಡವು ಕಳೆದ ವರ್ಷ ಈ ಅಧ್ಯಯನ ಕೈಗೆತ್ತಿಕೊಂಡಿದ್ದು, ಈಗ ವರದಿ ಸಿದ್ಧಗೊಂಡಿದೆ. 

409ರಿಂದ 8,072 ಪ್ರಕರಣ: 2011ರಿಂದ 2015ರ ಅವಧಿಯಲ್ಲಿ ನಗರದಲ್ಲಿ ಸಾಂಕ್ರಾಮಿಕ ರೋಗಗಳ ಪ್ರಮಾಣ ಗಣನೀಯವಾಗಿ ಏರಿಕೆಯಾಗಿದ್ದು, ಅದರಂತೆ 2011ರಲ್ಲಿ 409 ಡೆಂಘೀ ಪ್ರಕರಣಗಳು ಸರ್ಕಾರಿ ಆಸ್ಪತ್ರೆಗಳಲ್ಲಿ ದಾಖಲಾಗಿದ್ದವು. ಆದರೆ, 2015ರ ವೇಳೆಗೆ ಈ ಪ್ರಕರಣಗಳ ಸಂಖ್ಯೆ 8,072 ಆಗಿವೆ. ಅಂದರೆ 2015ರಲ್ಲಿ ಇಡೀ ರಾಜ್ಯದಲ್ಲಿ ದಾಖಲಾದ ಪ್ರಕರಣಗಳ ಪೈಕಿ ಶೇ. 54ರಷ್ಟು ಬೆಂಗಳೂರಿನಲ್ಲೇ ಇವೆ! 

Advertisement

ಅದೇ ರೀತಿ, 2011ರಲ್ಲಿ ನಗರ ಜಿಲ್ಲೆಯಲ್ಲಿ 477 ಪ್ರಕರಣಗಳು ಚಿಕುನ್‌ಗುನ್ಯ ಪ್ರಕರಣಗಳು ದಾಖಲಾಗಿದ್ದವು. ಆದರೆ, 2015ರ ಹೊತ್ತಿಗೆ ಇವುಗಳ ಸಂಖ್ಯೆ 2,982ಕ್ಕೆ ಏರಿಕೆಯಾಗಿದೆ. ಈ ಮೂಲಕ ಚಿಕುನ್‌ಗುನ್ಯದಲ್ಲೂ ಬೆಂಗಳೂರಿನ ಪಾಲು ಶೇ. 24ರಷ್ಟಿದೆ. ಈ ಅಂಕಿ-ಅಂಶಗಳ ಪ್ರಕಾರ ಬೆಂಗಳೂರು ಸಾಂಕ್ರಾಮಿಕ ರೋಗಗಳ ರಾಜಧಾನಿಯಾಗಿಯೂ ಬೆಳೆಯುತ್ತಿದೆ ಎಂದು ವಿಜ್ಞಾನಿಗಳು ಆತಂಕ ವ್ಯಕ್ತಪಡಿಸಿದ್ದಾರೆ. 

ಪೂರಕ ವಾತಾವರಣ ಇರುವುದೇ ಕಾರಣ ಸಾಂಕ್ರಾಮಿಕ ರೋಗಗಳು ಇಷ್ಟೊಂದು ವೇಗವಾಗಿ ಹೆಚ್ಚಲು ನಗರದಲ್ಲಿ ರೋಗ ಹರಡುವಂತಹ ಸೊಳ್ಳೆಗಳಿಗೆ ಪೂರಕ ವಾತಾವರಣ ಇರುವುದೇ ಮುಖ್ಯ ಕಾರಣ ಎಂಬ ತೀರ್ಮಾನಕ್ಕೆ ಎಂಪ್ರಿ ವಿಜ್ಞಾನಿಗಳು ಬಂದಿದ್ದಾರೆ.   

ತಮಗೆ ಎನ್‌ವಿಬಿಡಿಸಿಪಿ ನೀಡಿದ ದತ್ತಾಂಶಗಳು ಹಾಗೂ ನಗರದಲ್ಲಿ ಭೌಗೋಳಿಕ ಮಾಹಿತಿ ವ್ಯವಸ್ಥೆ ಆಧರಿಸಿ ಹವಾಮಾನದಲ್ಲಿ ಆಗುತ್ತಿರುವ ಬದಲಾವಣೆಯನ್ನು ತಾಳೆ ಹಾಕಿ ನೋಡಿದೆ. ಡೆಂಘೀ ಮತ್ತು ಚಿಕುನ್‌ಗುನ್ಯದಂತ ಸಾಂಕ್ರಾಮಿಕ ರೋಗಗಳನ್ನು ಹರಡುವ ಸೊಳ್ಳೆಗಳಿಗೆ 14ರಿಂದ 19 ಡಿಗ್ರಿ ಸೆಲ್ಸಿಯಸ್‌ ತಾಪಮಾನ ಅತ್ಯಂತ ಸೂಕ್ತವಾದುದು. ಇದಕ್ಕೆ ಪೂರಕವಾಗಿ ಕಳೆದ ಐದು ವರ್ಷಗಳಲ್ಲಿ ನಗರದ ತಾಪಮಾನ 0.6 ಡಿಗ್ರಿ ಸೆಲ್ಸಿಯಸ್‌ ಏರಿಕೆಯಾಗಿದ್ದು ಕಂಡುಬಂದಿದೆ. 

ಅಧ್ಯಯನ ಹೀಗೆ: ಐದು ವರ್ಷಗಳಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ದಾಖಲಾದ ಡೆಂಘೀ ಮತ್ತು ಚಿಕುನ್‌ಗುನ್ಯ ಪ್ರಕರಣಗಳ ಸಂಖ್ಯೆ ಕಲೆಹಾಕಲಾಗಿದೆ. ನಂತರ ಆಯಾ ಜಿಲ್ಲೆಗಳಲ್ಲಿನ ಪ್ರತಿ ತಿಂಗಳಲ್ಲಿ ದಾಖಲಾದ ತಾಪಮಾನ ಹಾಗೂ ಆದ್ರತೆ ಎಷ್ಟೆಷ್ಟಿದೆ ಎಂಬುದರ ಮಾಹಿತಿ ಸಂಗ್ರಹಿಸಲಾಗುವುದು. ಇದರ ಜತೆಗೆ ತಿಂಗಳವಾರು ಪ್ರಕರಣಗಳನ್ನು ವಿಂಗಡಿಸಲಾಗುವುದು. ಅದನ್ನು ವಿಶ್ಲೇಷಿಸಿಧಿದಾಗ ನಗರದಲ್ಲಿ ಹೆಚ್ಚು ಪ್ರಕರಣಗಳು ಪತ್ತೆಯಾಗಿರುವುದು ಕಂಡುಬಂದಿದೆ ಎಂದು ಎಂಪ್ರಿ ವಿಜ್ಞಾನಿ ಕಿರಣ್‌ರೆಡ್ಡಿ ವಿವರಿಸುತ್ತಾರೆ. 

* ವಿಜಯಕುಮಾರ್‌ ಚಂದರಗಿ 

Advertisement

Udayavani is now on Telegram. Click here to join our channel and stay updated with the latest news.

Next