Advertisement

ಡೆಂಘೀ ನಿಯಂತ್ರಣ ಪ್ರತಿಯೊಬ್ಬರ ಜವಾಬ್ದಾರಿ: ಡಾ|ಮಳಗಿ

02:41 PM May 19, 2022 | Team Udayavani |

ಕೊಪ್ಪಳ: ಜಿಲ್ಲೆಯಲ್ಲಿ ಡೆಂಘೀ ನಿಯಂತ್ರಣ ಪ್ರತಿಯೊಬ್ಬರ ಜವಾಬ್ದಾರಿಯಾಗಿದ್ದು, ಆರೋಗ್ಯ ಇಲಾಖೆಯಿಂದ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಡಿಎಚ್‌ಒ ಡಾ| ಅಲಕನಂದಾ ಡಿ. ಮಳಗಿ ಹೇಳಿದರು.

Advertisement

ನಗರದ ಹಳೇ ಜಿಲ್ಲಾಸ್ಪತ್ರೆ ಆವರಣದಲ್ಲಿ ರಾಷ್ಟ್ರೀಯ ಡೆಂಘೀ ದಿನಾಚರಣೆ ಅಂಗವಾಗಿ ಜಿಲ್ಲಾ ಆರೋಗ್ಯ ಇಲಾಖೆಯಿಂದ ಜಿಲ್ಲೆಯಲ್ಲಿ ಡೆಂಘಿ ಜ್ವರದ ಹರಡುವಿಕೆ, ನಿಯಂತ್ರಣ ಹಾಗೂ ರೋಗಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಜನಸಮುದಾಯವನ್ನು ಜಾಗೃತಿಗೊಳಿಸಲು ನಡೆದ ಡೆಂಘಿ ಜನ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಕೇಂದ್ರ ಸರ್ಕಾರದ ನಿರ್ದೇಶನದ ಮೇರೆಗೆ ಪ್ರತಿ ವರ್ಷದ ಮೇ 16ರಂದು ಜಿಲ್ಲಾದ್ಯಂತ ರಾಷ್ಟ್ರೀಯ ಡೆಂಘೀ ದಿನವನ್ನಾಗಿ ಆಚರಿಸಿ, ರೋಗ ಪ್ರಸರಣ ಅವಧಿಯ ಮುನ್ನವೇ ಜನಸಮುದಾಯವನ್ನು ಜಾಗೃತಿಗೊಳಿಸಲು ವ್ಯಾಪಕ ಅಭಿಯಾನ, ಜಾಥಾ, ರ್ಯಾಲಿ, ಅಂತರ್‌ ಇಲಾಖಾ ಸಭೆ, ಸಮಾರಂಭಗಳನ್ನು ನಡೆಸಲಾಗುತ್ತಿದೆ.

ಡೆಂಘೀ ಜ್ವರಕ್ಕೆ ಯಾವುದೇ ನಿರ್ದಿಷ್ಟ ಚಿಕಿತ್ಸೆ ಇಲ್ಲದಿದ್ದರೂ ಜನರು ಭಯಪಡುವ ಅವಶ್ಯಕತೆ ಇಲ್ಲ. ಲಕ್ಷಣಗಳನ್ನಾಧರಿಸಿ ಚಿಕಿತ್ಸೆ ನೀಡಲಾಗುವುದು. ಸರ್ಕಾರಿ ಆಸ್ಪತ್ರೆಗಳಲ್ಲಿ ಸೂಕ್ತ ಚಿಕಿತ್ಸೆ ಮತ್ತು ಉಚಿತ ಪ್ರಯೋಗಾಲಯ ಪರೀಕ್ಷೆಗಳನ್ನು ಮಾಡಲಾಗುತ್ತಿದ್ದು, ಜನರು ಅನಗತ್ಯ ಭಯಕ್ಕೆ ಒಳಗಾಗದೇ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಬೇಕು ಎಂದು ಹೇಳಿದರು.

ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ| ವೆಂಕಟೇಶ ಮಾತನಾಡಿ, ಡೆಂಘೀ ಜ್ವರವು ಈಡಿಸ್‌ ಜಾತಿಯ ಸೊಳ್ಳೆ ಕಚ್ಚುವಿಕೆಯಿಂದ ಹರಡುತ್ತದೆ. ಇದು ಹಗಲು ಹೊತ್ತಿನಲ್ಲೇ ಕಚ್ಚುತ್ತವೆ. ಈಡಿಸ್‌ ಸೊಳ್ಳೆಗಳು ನೀರು ಶೇಖರಣೆ ಸಲಕರಣೆಗಳಲ್ಲಿ, ಶುದ್ದ ನೀರಿನಲ್ಲಿಯೇ ಸಂತಾನಾಭಿವೃದ್ದಿ ಮಾಡುತ್ತವೆ. ಆದ್ದರಿಂದ ನೀರು ಶೇಖರಣೆ ಸಲಕರಣೆಗಳನ್ನು ಸದಾ ಮುಚ್ಚಿಡಬೇಕು ಹಾಗೂ ಮನೆಯ ಒಳಗೆ ಮತ್ತು ಹೊರಗೆ ನೀರು ನಿಲ್ಲದಂತೆ ಎಚ್ಚರವಹಿಸಿ. ಸೊಳ್ಳೆ ಉತ್ಪತ್ತಿಯನ್ನು ತಡೆಗಟ್ಟಲು, ಮನೆಗಳ ಸುತ್ತಮುತ್ತ ಸ್ವತ್ಛತೆ ಕಾಪಾಡಬೇಕು ಹಾಗೂ ಈಡೀಸ್‌ ಲಾರ್ವಾ ಸಮೀಕ್ಷೆಗಾಗಿ ನಿಮ್ಮ ಮನೆಗೆ ಭೇಟಿ ನೀಡುವ ಆರೋಗ್ಯ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತರಿಗೆ ಸಹಕಾರ ನೀಡಿ ಅವರ ಸಲಹೆಗಳನ್ನು ಜನರು ಪಾಲಿಸಬೇಕು ಎಂದರು.

Advertisement

ತಾಲೂಕ ಆರೋಗ್ಯಾಧಿಕಾರಿ ಡಾ| ರಾಮಾಂಜನೇಯ ಮಾತನಾಡಿ, ಪ್ರಸ್ತುತ ಮಳೆಗಾಲ ಪ್ರಾರಂಭವಾಗಿದ್ದು, ನೀರಿನ ಶೇಖರಣಾ ಸಲಕರಣೆಗಳಲ್ಲಿ ನೀರು ಶೇಖರಣೆಯಾಗಿ, ಸೊಳ್ಳೆ ಉತ್ಪತ್ತಿಯಾಗಿ ಸೊಳ್ಳೆಗಳ ಸಾಂದ್ರತೆ ಹೆಚ್ಚಾಗುತ್ತದೆ. ಯಾವುದೇ ಜ್ವರವಿರಲಿ ಶೀಘ್ರವೇ ಹತ್ತಿರದ ಸರ್ಕಾರಿ ಆರೋಗ್ಯ ಕೇಂದ್ರದಲ್ಲಿ ರಕ್ತ ಪರೀಕ್ಷೆ ಮಾಡಿಸಿ ಉಚಿತ ಚಿಕಿತ್ಸೆ ಪಡೆಯಬೇಕು. ಮಲಗುವಾಗ ಸೊಳ್ಳೆಪರದೆ ಬಳಸಬೇಕು ಹಾಗೂ ವಾರಕ್ಕೊಮ್ಮೆ ನೀರು ಶೇಖರಣ ಸಲಕರಣೆಗಳನ್ನು ಖಾಲಿಮಾಡಿ, ಸ್ವಚ್ಛಗೊಳಿಸಿ ನೀರು ತುಂಬಿ ಮುಚ್ಚಿಡಬೇಕು. ಸೊಳ್ಳೆ ಕಡಿತದಿಂದ ದೂರವಿರಲು ಸಾಧ್ಯವಾದ ಎಲ್ಲಾ ಸ್ವಯಂ ರಕ್ಷಣಾ ವಿಧಾನಗಳನ್ನು ಅನುಸರಿಸಬೇಕು ಎಂದು ಹೇಳಿದರು.

ನಗರಾದ್ಯಂತ ಆರೋಗ್ಯ ಶಿಕ್ಷಣ ವಾಹಿನಿ ವಾಹನದಲ್ಲಿ ಡೆಂಘೀ ಜಾಗೃತಿ ಸಂದೇಶ ಬಿತ್ತರಿಸಲಾಯಿತು. ಡೆಂಘೀ ಜಾಗೃತಿ ಗೀತೆ, ಕರಪತ್ರಗಳನ್ನು ವಿತರಣೆ, ಭಿತ್ತಿಪತ್ರಗಳನ್ನು ಪ್ರದರ್ಶಿಸಿ ಜನರಲ್ಲಿ ಜಾಗೃತಿ ಮೂಡಿಸಲಾಯಿತು.

ಜಿಲ್ಲಾ ಉಪ ಆರೋಗ್ಯ ಶಿಕ್ಷಣಾಧಿಕಾರಿ ಶಿವಾನಂದ ಪೂಜಾರ ಸ್ವಾಗತಿಸಿ, ನಿರೂಪಿಸಿದರು. ಕೊಪ್ಪಳ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಕಚೇರಿಯ ರಮೇಶ್‌ ಕೆ., ಜಿಲ್ಲಾ ವಿಬಿಡಿ ಸಲಹೆಗಾರ ಗಂಗಮ್ಮ ಹಾಗೂ ಸಿಬ್ಬಂದಿ ಮತ್ತು ಆರೋಗ್ಯ ಇಲಾಖೆಯ ಎಲ್ಲಾ ಸಿಬ್ಬಂದಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next