Advertisement

ಯಕ್ಷಗಾನದ ಮೂಲಸತ್ವವನ್ನು ತೆರೆದಿಟ್ಟ ಪ್ರಾತ್ಯಕ್ಷಿಕೆ

06:37 PM Feb 28, 2020 | mahesh |

ಹೊಸ ತಲೆಮಾರಿನವರಿಗೆ ಯಕ್ಷಗಾನದ ಮೂಲಸತ್ವವನ್ನು ತಿಳಿಯಪಡಿಸುವ ಉದ್ದೇಶದಿಂದ ಬೆಂಗಳೂರಿನ ಯಕ್ಷದೇಗುಲ ಸಂಸ್ಥೆ ಕುಂದಾಪುರದ ತಲ್ಲೂರು ಕೋಟೆಬಾಗಿಲು ಹಾಗೂ ಅಚ್ಲಾಡಿಯ ಮಧುವನ ವಿವೇಕಾನಂದ ಹಿ.ಪ್ರಾ.ಶಾಲೆಯಲ್ಲಿ ಹಿಮ್ಮೇಳ, ಮುಮ್ಮೇಳ ಮತ್ತು ಪ್ರಸಾದನದ ಪರಿಚಯಿಸುವ ಪ್ರಾತ್ಯಕ್ಷಿಕೆ ನಡೆಸಿತು.

Advertisement

ಸುಜಯೀಂದ್ರ ಹಂದೆಯವರ ನಿರೂಪಣೆ ಹಾಗೂ ಕೆ.ಮೋಹನ್‌ ಅವರ ನಿರ್ದೇಶನ, ಸುದರ್ಶನ ಉರಾಳರ ಸಂಯೋಜನೆಯಲ್ಲಿ ಮೂಡಿಬಂದ ಈ ಕಾರ್ಯಕ್ರಮದಲ್ಲಿ ಚೌಕಿ ಪೂಜೆಯಿಂದ ಆರಂಭವಾಗಿ, ಕಲಾವಿದ ಚೌಕಿಯಲ್ಲಿ ಗೆಜ್ಜೆಕಟ್ಟುವಲ್ಲಿಂದ ಹಿಡಿದು ಹೀಗೆ ಪಾತ್ರವಾಗುತ್ತಾ ಹೋಗುತ್ತಾನೆ ಎನ್ನುವುದನ್ನು ತಿಳಿಸಿಕೊಡುವ ಹೆಜ್ಜೆಗಾರಿಕೆ, ಪದಾಭಿನಯ, ಮುದ್ರೆಗಳು, ಬಣ್ಣದ ವೇಷದ ಮುಖವರ್ಣಿಕೆ, ಅಟ್ಟೆ ಕ್ಯಾದಿಗೆ ಮುಂದಲೆ ಕಟ್ಟುವ ಕ್ರಮ, ಬಾಲಗೋಪಾಲ, ಸ್ತ್ರೀವೇಷ, ವಸ್ತ್ರಾಲಂಕಾರದ ವಿನ್ಯಾಸಗಳ ಕುರಿತು ಮಾಹಿತಿ ಮತ್ತು ಪೌರಾಣಿಕ ಪ್ರಸಂಗಗಳ ಸ್ವಾರಸ್ಯ ಸನ್ನಿವೇಷಗಳ ಅಭಿನಯ, ಹಿಮ್ಮೇಳದ ಪರಿಚಯ. ಭಾಗವತನ ಶ್ರೇಷ್ಠತೆ, ಚಂಡೆ, ಮದ್ದಲೆ, ಹಾರ್ಮೋನಿಯಂ ಮುಂತಾದ ವಾದನಗಳ ಮಹತ್ವವನ್ನು ತೆರೆದಿಡಲಾಯಿತು.

ಹೆಜ್ಜೆಗಾರಿಕೆಯ ಬಗ್ಗೆ ತಿಳಿಸುತ್ತ ಹೆಜ್ಜೆಯ ಜತೆಗೆ ಕೈಗಳನ್ನು ಕಡ್ಡಾಯವಾಗಿ ಅಭಿನಯಕ್ಕೆ ಬಳಸಬೇಕು ಹಾಗೂ ಕೈ ತಿರುಗಿಸುವಾಗ ಒಂದು ಕೈ ಒಳಮುಖ ಒಂದು ಕೈ ಹೊರಮುಖ ಇರಬೇಕು. ಆದಿತಾಳದಂತಹ ಕೆಲವೇ ಸಂದರ್ಭದಲ್ಲಿ ಹೊರತುಪಡಿಸಿ ಇತರ ಸಂದರ್ಭಗಳಲ್ಲಿ ಕೈ ಬೇರೆ ಕಡೆ ಹೋಗಬಾರದು. ಆದರೆ ಇಂದು ಕೆಲವು ಕಲಾವಿದರಿಗೆ ಇದರ ಮಹತ್ವವೇ ತಿಳಿದಿಲ್ಲ. ಹೀಗಾಗಿ ಒಟ್ಟಾರೆಯಾಗಿ ಕೈಗಳನ್ನು ಬಳಸಿಕೊಳ್ಳುತ್ತಾರೆ ಎಂಬ ವಿಷಾದ ವ್ಯಕ್ತವಾಯಿತು. ಯಾವುದೇ ಸಂಭಾಷಣೆ ಇಲ್ಲದೆ ಕೇವಲ ಆಂಗಿಕ, ಆಹಾರ್ಯ, ವಾಚಿಕ, ಸಾತ್ವಿಕ ಅಭಿನಯದ ಮೂಲಕ ಪಾತ್ರಗಳನ್ನು ಪರಿಚಯಿಸುವ ತಾಕತ್ತು ಯಕ್ಷಗಾನಕ್ಕಿದೆ ಎನ್ನುವುದನ್ನು ಅಭಿಮನ್ಯು, ಧುರ್ಯೋಧನ ಹಾಗೂ ಹಾಸ್ಯ ಪಾತ್ರ ಮುಂತಾದ ಪಾತ್ರಗಳನ್ನು ಅಭಿನಯಿಸುವ ಮೂಲಕ ಪರಿಚಯಿಸಲಾಯಿತು.ಯಕ್ಷಗಾನದಲ್ಲಿ ಕಸೆ ಸೀರೆ ಅತ್ಯಂತ ಮಹತ್ವವಾದದು.ª ಇದು ವೇಷಕ್ಕೆ ಹೊಸ ಮೆರಗು ನೀಡುತ್ತದೆ, ನಾರದ, ಹಾಸ್ಯ ಪಾತ್ರ ಹೊರತುಪಡಿಸಿ ಪುರುಷ ವೇಷಗಳು ಹೆಚ್ಚಾಗಿ ಕಸೆ ಸೀರೆಯಲ್ಲಿರಬೇಕು ಎನ್ನುವುದನ್ನು ತಿಳಿಸಲಾಯಿತು. ಯಕ್ಷಗಾನದಲ್ಲಿ ಮುಖವರ್ಣಿಕೆ ಯಾವ ರೀತಿ ಸಿದ್ಧವಾಗುತ್ತದೆ ಎನ್ನುವುದನ್ನು ಪುರುಷ ಪಾತ್ರವೊಂದನ್ನು ವೇದಿಕೆಯ ಒಂದು ಮಗ್ಗುಲಲ್ಲಿ ಸಿದ್ಧಪಡಿಸುವ ಮೂಲಕ ನೇರ ಪ್ರಾತ್ಯಕ್ಷಿಕೆ ನೀಡಲಾಯಿತು.

ನಮ್ಮ ಪೂರ್ವಜರು ಯಕ್ಷಗಾನದಲ್ಲಿ ಪ್ರತಿಯೊಂದನ್ನು ವಿಮರ್ಶಿಸಿ ಅನುಕೂಲಕರ ವಾಗುವಂತೆ ವ್ಯವಸ್ಥೆಗೊಳಿಸಿದ್ದಾರೆ. ಕಲಾವಿದ ಚೌಕಿಯಲ್ಲಿ ವೇಷಕ್ಕೆ ಕುಳಿತುಕೊಳ್ಳುವುದರಿಂದ ಹಿಡಿದು ರಂಗಸ್ಥಳದಿಂದ ಹಿಂದಿರುಗುವಾಗ ತನಕ ಇದೇ ರೀತಿ ಇರಬೇಕು ಎಂಬ ನಿಯಮ ಮಾಡಿದ್ದಾರೆ. ಉದಾಹರಣೆಗೆ ಬಣ್ಣದ ವೇಷಧಾರಿ ವೇಷ ಸಿದ್ಧವಾಗಲು ಸಾಕಷ್ಟು ಶ್ರದ್ಧೆ ಬೇಕು ಹಾಗೂ ಬಣ್ಣಹಚ್ಚಿಕೊಳ್ಳುವಾಗ ಆತನಿಗೆ ಯಾರೂ ತೊಂದರೆ ನೀಡಬಾರದು. ಇದೇ ಕಾರಣಕ್ಕೆ ಆತನಿಗೆ ಗಣಪತಿ ಪೆಟ್ಟಿಗೆ ಪಕ್ಕದಲ್ಲಿ ಸ್ಥಾನ ನೀಡಲಾಗುತಿತ್ತು ಹಾಗೂ ಹಾಸ್ಯಗಾರ ಆಗಾಗ ರಂಗಕ್ಕೆ ಪ್ರವೇಶಿಸಬೇಕಿರುತ್ತೆ. ಇದೇ ಕಾರಣಕ್ಕೆ ಆತ ರಂಗಸ್ಥಳದ ಬುಡದಲ್ಲಿರುತ್ತಾನೆ.

ಯಕ್ಷಗಾನದಲ್ಲಿ ಹಸ್ತಾಭಿನಯಗಳು ಅತ್ಯಂತ ಮಹತ್ವ ಪಡೆದಿದ್ದು ಭರತನ ನಾಟ್ಯಶಾಸ್ತ್ರ ಹೇಳುವ ಹೆಚ್ಚಿನ ಹಸ್ತಾಭಿನಯದ ಪತಾಕ, ಅರ್ಧಪತಾಕ, ಸೂಚಿ, ಶಿಖರ, ಮೃಗಶಿರ, ಸರ್ಪ, ಮುಷ್ಟಿ, ಆಲಪದ್ಮ, ಚಕ್ರ, ಊರ್ಣನಾಭ, ಹಂಸಾವ್ಯ, ಸಿಂಹಮುಖ ಮೊದಲಾದ ಹಸ್ತಗಳು ಎಲ್ಲೆಲ್ಲಿ ಯಾವರೀತಿಯಾಗಿ ಬಳಕೆಯಾಗುತ್ತವೆ ಎನ್ನುವುದನ್ನು ಪ್ರಸಂಗ ಪದ್ಯಗಳ ಮೂಲಕ ನಿರೂಪಿಸಲಾಯಿತು.
ಭಾಗವತನಿಗೆ ಯಕ್ಷಗಾನದಲ್ಲಿ ಗುರು, ನಿರ್ದೇಶಕನ ಸ್ಥಾನವಿದೆ. ಆತನ ವಯಸ್ಸು ಚಿಕ್ಕದಿರಲಿ- ದೊಡ್ಡದಿರಲಿ ಆ ಸ್ಥಾನದಲ್ಲಿ ಕುಳಿತ ಮೇಲೆ ಪ್ರದರ್ಶನದಲ್ಲಿ ಆತನೇ ಸರ್ವ ಶ್ರೇಷ್ಠ ಹಾಗೂ ಎಲ್ಲಾ ಕಲಾವಿದರು ಆತನಿಗೆ ಗೌರವ ನೀಡಬೇಕು. ಇದೇ ಕಾರಣಕ್ಕೆ ಕಲಾವಿದ ರಂಗಸ್ಥಳವನ್ನು ಪ್ರವೇಶಿಸುವಾಗ ಭಾಗವತನ ಕಾಲು ಮುಟ್ಟಿ ನಮಸ್ಕರಿಸಿ ಒಳಪ್ರವೇಶಿಸುತ್ತಾನೆ. ಅನಂತರ ಇಡೀ ರಂಗವನ್ನು ನಿಯಂತ್ರಿಸುವ ಹೊಣೆಗಾರಿಕೆ ಭಾಗವತನಲ್ಲಿರುತ್ತದೆ. ಮದ್ದಲೆ, ಹಾರ್ಮೋನಿಯಂ, ಚಂಡೆ ಮುಂತಾದ ಸಾಧನಗಳು ಭಾಗವತಿಕೆಗೆ ಇಂಪು ನೀಡುತ್ತವೆ. ಬಹಳ ಹಿಂದೆ ಚಂಡೆಯ ಪ್ರಯೋಗ ಇರಲಿಲ್ಲ ಹಾಗೂ ಕೇವಲ ಮದ್ದಲೆ ಮಾತ್ರ ಇತ್ತು. ಅನಂತರದಲ್ಲಿ ಚಂಡೆ ಕೂಡ ಮಹತ್ವ ಪಡೆದಿದೆ. ಒಟ್ಟಾರೆ ಹಿಮ್ಮೇಳ, ಮುಮ್ಮೇಳ ಜತೆ ಸೇರಿದಾಗ ಪ್ರದರ್ಶನ ಪರಿಪೂರ್ಣಗೊಳ್ಳುತ್ತದೆ ಎನ್ನುವುದನ್ನು ಪ್ರಯೋಗದ ಮೂಲಕ ಪರಿಚಸಲಾಯಿತು. ಮರೆಯಾದ ಯುದ್ಧ ಕುಣಿತಗಳಾದ ಕತ್ತಿಯುದ್ಧ, ರಥದ ಯುದ್ಧ, ಸೊಪ್ಪಿನ ಯುದ್ಧ, ಮುಷಿ uಯುದ್ಧಗಳನ್ನು ರಂಗದಲ್ಲಿ ತೋರ್ಪಡಿಸಿದರು.

Advertisement

ಲಂಬೋದರ ಹೆಗಡೆ, ದೇವರಾಜ್‌ದಾಸ್‌, ಗಣಪತಿ ಭಟ್‌, ಮಾಧವ ಮಣೂರು, ತಮ್ಮಣ್ಣ ಗಾಂವ್ಕರ್‌, ಕೃಷ್ಣಮೂರ್ತಿ ಉರಾಳ, ಪ್ರಣವ್‌ ಭಟ್‌, ನರಸಿಂಹ ತುಂಗ, ಸೌರವ್‌, ನವೀನ್‌ ಕೋಟ, ಉದಯ, ರಾಜು ಪೂಜಾರಿ ಕಲಾವಿದರಾಗಿ ಪ್ರಾತ್ಯಕ್ಷಿಕೆಯಲ್ಲಿ ಪ್ರದರ್ಶನ ನೀಡಿದರು.

ರಾಜೇಶ್‌ ಗಾಣಿಗ ಅಚ್ಲಾಡಿ

Advertisement

Udayavani is now on Telegram. Click here to join our channel and stay updated with the latest news.

Next