Advertisement

ಮೂಲ ಸೌಲಭ್ಯಕ್ಕೆ ಆಗ್ರಹಿಸಿ ಪಪಂಗೆ ಮುತ್ತಿಗೆ

04:34 PM Jul 28, 2022 | Shwetha M |

ದೇವರಹಿಪ್ಪರಗಿ: ಮೂಲ ಸೌಕರ್ಯ ಒದಗಿಸುವಂತೆ ಪಟ್ಟಣದ 12ನೇ ವಾರ್ಡ್‌ನ ನಿವಾಸಿಗಳು ಬುಧವಾರ ಪಟ್ಟಣ ಪಂಚಾಯತ್‌ ಕಚೇರಿ ಆವರಣದಲ್ಲಿ ಧರಣಿ ನಡೆಸಿ ಮುತ್ತಿಗೆ ಹಾಕಿದರು. ಮುಖ್ಯಾಧಿಕಾರಿ ಎಲ್‌.ಡಿ. ಮುಲ್ಲಾ ವಿರುದ್ಧ ಘೋಷಣೆ ಕೂಗಿ ಪ್ರತಿಭಟಿಸಿದರು.

Advertisement

ಪ್ರತಿಭಟನೆ ನೇತೃತ್ವ ವಹಿಸಿದ್ದ ಮುನ್ನಾ ಮಳಖೇಡ ಹಾಗೂ ಮೈಬೂಬ್‌ ಮರೊಳ ಮಾತನಾಡಿ, ವಾರ್ಡ್‌ ನಂ. 12ರ ನಿವಾಸಿಗಳಿಗೆ ಮೂಲ ಸೌಕರ್ಯಗಳಾದ ಕುಡಿಯುವ ನೀರು, ಸಿಸಿ ರಸ್ತೆ, ಒಳಚರಂಡಿ, ವಿದ್ಯತ್‌ ದೀಪದಿಂದ ವಂಚಿತರಾಗಿದ್ದಾರೆ. ಈ ಕುರಿತು ಮುಖ್ಯಾಧಿಕಾರಿಗೆ ಸಾಕಷ್ಟು ಬಾರಿ ಮೌಖೀಕ ಹಾಗೂ ಲಿಖೀತವಾಗಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಸ್ವಲ್ಪ ಮಳೆಯಾದರೂ ಚರಂಡಿ ನೀರು ರಸ್ತೆಗೆ ನುಗ್ಗಿ ತಿರಗಾಡಲು ಬಾರದಂತೆ ಆಗುತ್ತದೆ. ಮಕ್ಕಳಿಗೆ ತುಂಬಾ ತೊಂದರೆಯಾಗುತ್ತಿದೆ. ಈ ಬಗ್ಗೆ ಮುಖ್ಯಾಧಿಕಾರಿ ಬೇಜವಾಬ್ದಾರಿಗೆ ಬೇಸತ್ತು ನಿವಾಸಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ನಮಗೆ ನ್ಯಾಯ ಸಿಗುವವರೆಗೂ ಇಲ್ಲಿಂದ ಹೋಗುವುದಿಲ್ಲ ಎಂದು ಪಪಂ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಕಚೇರಿಗೆ ಬಾರದ ಮುಖ್ಯಾಧಿಕಾರಿ: ಮುಖ್ಯಾಧಿ ಕಾರಿ ಪ್ರತಿಭಟನಾ ಸ್ಥಳಕ್ಕೆ ಬಾರದ ಕಾರಣ ಪ್ರತಿಭಟನೆ ಕೂಗು ವಿಕೋಪಕ್ಕೆ ಹೋಗುವುದನ್ನು ತಿಳಿದ ಪ.ಪಂ ಸದಸ್ಯರು ಉಪತಹಶೀಲ್ದಾರ್‌ ಎಂ.ಕೆ. ದೇಸಾಯಿ ಮನವಿ ಸ್ವೀಕರಿಸುವಂತೆ ಸೂಚಿಸಿದರು.

ನಂತರ ಮಾತನಾಡಿದ ಅವರು, ಬೇಡಿಕೆಗಳನ್ನು ಆದಷ್ಟು ಬೇಗ ಈಡೇರಿಸುತ್ತೇವೆ ಎಂದು ಭರವಸೆ ನಿಡೀದ ನಂತರ ಪ್ರತಿಭಟನೆ ವಾಪಸ್‌ ಪಡೆಯಲಾಯಿತು. ಪ.ಪಂ ಸದಸ್ಯ ಸಿಂಧೂರ ಡಾಲೇರ, ದಸ್ತಗೀರ ಕರುನಾಳ, ರಜಾಕ ಜಾತಗಾರ, ಇಮಾಮಸಾಬ ಮುಲ್ಲಾ, ರಫೀಕ್‌ ಜಾತಗಾರ, ಅಕ್ಬರ್‌ ಮನಗೂಳಿ, ಅಬ್ದುಲ್‌ ಜಾತಗಾರ ಮೈಬೂಬ ಮರೋಳ ಸೇರಿದಂತೆ ಮಹಿಳೆಯರು, ಮಕ್ಕಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next