Advertisement

ಬೇಸಿಗೆ: ತಣ್ಣನೆ ನೀರಿಗಾಗಿ ಮಡಕೆ ಮೊರೆ

02:25 PM Mar 14, 2022 | Team Udayavani |

ದೇವನಹಳ್ಳಿ: ಬಿಸಿಲಿನ ತಾಪಕ್ಕೆ ತತ್ತರಿಸಿರುವ ಜಿಲ್ಲೆಯ ಸಾರ್ವಜನಿಕರು ನೀರಿನ ದಾಹ ನೀಗಿಸಿಕೊಳ್ಳಲು ತಣ್ಣನೆ ನೀರಿಗಾಗಿ ಬಡವರ ಫ್ರಿಡ್ಜ್ ಎಂದು ಕರೆಯಲ್ಪಡುವ ಮಣ್ಣಿನ ಮಡಕೆಗಳಿಗೆ ಮೊರೆ ಹೋಗುತ್ತಿದ್ದಾರೆ.

Advertisement

ಶ್ರೀಮಂತರು ಬೇಸಿಗೆ ಬೇಗೆಗೆ ತಣ್ಣನೆ ನೀರಿಗೆ ಫ್ರಿಡ್ಜ್ ಬಳಸುತ್ತಿದ್ದಾರೆ. ಆದರೆ, ಬಡವರು ದುಬಾರಿ ಫ್ರಿಡ್ಜ್ ಕೊಂಡುಕೊಳ್ಳಲು ಸಾಧ್ಯವಾಗದ ಕಾರಣ ಮಡಕೆ ಬಳಸುತ್ತಾರೆ. ವಿದ್ಯುತ್‌ ಕಡಿತವಾದರೆ ನೀರು ತಣ್ಣಗೆ ಇರುವುದಿಲ್ಲ. ಆದರೆ, ಮಡಕೆ ಸದಾ ತಣ್ಣೀರನ್ನು ನೀಡುತ್ತದೆ ಎಂಬುವುದು ಜನರ ವಾದ.

ಕಳೆದ ಎರಡು ವರ್ಷದಿಂದ ಕೊರೊನಾ ಮಹಾಮಾರಿ ಯಿಂದ ವ್ಯಾಪಾರವಿಲ್ಲದೆ ತತ್ತರಿಸಿ ಹೋಗಿದ್ದ ಕುಂಬಾರರಿಗೆ ಈ ವರ್ಷ ತುಸು ನೆಮ್ಮದಿ ಮೂಡಿಸಿದೆ.  ಈ ಬಾರಿ ಮಡಕೆ ಮಾರಾಟ ಏರಿಕೆಯಾಗುವ ಲಕ್ಷಣ ಕಂಡು ಬರುತ್ತಿರುವುದರಿಂದ ಕುಂಬಾರರು ಲಾಭ ಕಾಣುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರತಿಯೊಬ್ಬರ ಮನೆಯಲ್ಲೂ ಪ್ರಿಡ್ಜ್ ಗಳಿರುವ ಈ ಕಾಲದಲ್ಲಿ ಮಡಕೆ ಖರೀದಿಸುತ್ತಿದ್ದಾರೆ. ರಸ್ತೆಯ ಬದಿಗಳಲ್ಲಿ ಸಾಲು ಸಾಲು ಮಡಕೆ ಕಾಣ ಸಿಗುತ್ತದೆ. ಪಟ್ಟಣ ಮತ್ತು ನಗರ ಪ್ರದೇಶ ರಸ್ತೆಗಳಲ್ಲಿ ಮಡಕೆ ಮಾರಾಟ ಹೆಚ್ಚಾಗಿ ಕಂಡು ಬರುತ್ತಿದೆ.

ಹಳೆಯ ಭಂಗಿಯ ಮಡಕೆಗೆ ಆಧುನಿಕ ರೂಪ ಕೊಡುವುದರ ಜೊತೆಗೆ ಭಿನ್ನ ಮತ್ತು ವಿಭಿನ್ನ ರೀತಿಯ ಚಿತ್ರ ಬಿಡಿಸಿ ಮಾರಾಟಕ್ಕಿಟ್ಟಿದ್ದಾರೆ. ಮಡಕೆಗೆ ನಲ್ಲಿ ಅಳವಡಿಸಿದ್ದಾರೆ. ಮಡಕೆಗಳು ಗ್ರಾಹಕರನ್ನು ಆಕರ್ಷಿಸಿದೆ. ನಲ್ಲಿ ಇರುವ ಮಡಕೆ 250 ರಿಂದ 500 ರೂ.ವರೆಗೆ ಮಾರಾಟವಾಗುತ್ತಿದೆ. ನಲ್ಲಿ ಇಲ್ಲದ ಮಡಕೆ 100ರಿಂದ 300 ರೂ. ವರೆಗೆ ಮಾರಾಟ ಮಾಡಲಾಗುತ್ತಿದೆ. ಗ್ರಾಮೀಣ ಸೊಗಡಿನ ದೇಸಿ ಪ್ರಿಡ್ಜ್ ಬಳಕೆ ಆರೋಗ್ಯಕ್ಕೆ ಪೂರಕವಾಗಿದ್ದು, ಮಡಕೆ ಕೊಳ್ಳುತ್ತಿರುವುದಾಗಿ ಜನರು ಹೇಳುತ್ತಿದ್ದರು.

ಬೇಸಿಗೆಯಲ್ಲಿ ಮಾತ್ರ ವ್ಯಾಪಾರ: ಪ್ಲಾಸ್ಟಿಕ್‌ ಬಂದ ನಂತರ ಮಡಕೆ ತಯಾರಿಸುವವರು, ಮಾರುವವರು ಇಲ್ಲದಾಗಿದ್ದಾರೆ. ನಾವು ಕಲಿತ ಕಸಬನ್ನು ಬಿಡಬಾರದು ಎಂದು ಈಗಲೂ ಮಡಕೆ ಮಾಡುತ್ತೇವೆ. ಬೇಸಿಗೆಯಲ್ಲಿ ಮಾತ್ರ ವ್ಯಾಪಾರ ಇರುವುದು ಉಳಿದ ಕಾಲದಲ್ಲಿ ನಮ್ಮತ್ತ ತಿರುಗಿಯೂ ಜನ ನೋಡುವುದಿಲ್ಲ ಎಂದು ವ್ಯಾಪಾರಸ್ಥರು ಹೇಳುತ್ತಾರೆ. ಆಧುನಿಕತೆಗೆ ತಕ್ಕಂತೆ ಮಡಕೆಗೂ ಹೊಸ ಲುಕ್‌ ನೀಡಿ ಫಿಲ್ಟರ್‌ ನಲ್ಲಿ ಗಳನ್ನು ಅದಕ್ಕೆ ಅಳವಡಿಸಲಾಗಿದೆ. ಇದರಿಂದ ನೀರನ್ನು ಸಂಗ್ರಹಿಸಿ, ಮಣ್ಣಿನ ಮುಚ್ಚಳ ಅಥವಾ ತೇವಾಂಶದ ಬಟ್ಟೆಯಿಂದ ಮುಚ್ಚಿ ನಲ್ಲಿಯಿಂದ ತಂಪಾದ ನೀರನ್ನು ಹಿಡಿದು ಬಾಯಾರಿಕೆ ನೀಗಿಸಿಕೊಳ್ಳಬಹುದು.

Advertisement

ಮಡಕೆ ತಯಾರಿಸಲು ಕೆಂಪು, ಕಪ್ಪು ಮಣ್ಣನ್ನು ಬಳಸಿ ಮಣ್ಣಿನಲ್ಲಿರುವ ಖನಿಜಾಂಶ ನೀರಿನ ಮೂಲಕ ದೇಹ ಸೇರುವುದರಿಂದ ಆರೋಗ್ಯಕ್ಕೆ ಸಹಕಾರಿಯಾಗಿದೆ. ಅನೇಕ ಜನರು ದೇಹ ತಂಪಾಗಿಸಲು ಫ್ರಿಡ್ಜ್ ನಲ್ಲಿರುವ ತಂಪು ನೀರು ಹಾಗೂ ಪಾನೀಯ ಮೊರೆ ಹೋದರೆ ಬಡವರ ಮನೆಗಳಲ್ಲಿ ಮಣ್ಣಿನ ಮಡಕೆಗಳಲ್ಲಿ ನೀರು, ಅಂಬಳಿ, ಮಜ್ಜಿಗೆ ಯಂತಹ ಪಾನೀಯಗಳನ್ನು ಸೇವಿಸುತ್ತಾರೆ. ವರ್ಷವಿಡೀ ಉದ್ಯೋಗವಿಲ್ಲದೆ ಖಾಲಿ ಇರುವ ಕುಂಬಾರನಿಗೆ ಈಗ ಬಾರಿ ಬೇಡಿಕೆ ಇದೆ.

ಉತ್ಪಾದನೆಗೆ ಹೆಚ್ಚಿನ ಒತ್ತನ್ನು ನೀಡುತ್ತಿರು ವುದರಿಂದ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಸಾಧ್ಯವಾಗುತ್ತಿಲ್ಲ. ವ್ಯಾಪಾರಸ್ಥರು ಇದನ್ನು ಕಡಿಮೆ ಬೆಲೆಯಲ್ಲಿ ಖರೀದಿಸಿ ನಗರ ಪ್ರದೇಶಗಳಲ್ಲಿ ಉತ್ತಮ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಜನರು ಬೆಲೆ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳದೆ ಖರೀದಿಯಲ್ಲಿ ಉತ್ಸಾಹ ತೋರುತ್ತಿರುವುದು ಮಡಕೆಯ ಅಗತ್ಯತೆ ಹಾಗೂ ಪ್ರಾಮುಖ್ಯತೆಗೆ ಸಾಕ್ಷಿಯಾಗಿದೆ.

ದಿನೇ ದಿನೆ ಬಿಸಿಲಿನ ತಾಪ 36 ಡಿಗ್ರಿಯಿಂದ 37 ಡಿಗ್ರಿ ತಾಪಮಾನ ದಾಖಲೆ ಆಗುತ್ತಿದೆ. ಬೆಳಗ್ಗೆ 8 ಗಂಟೆಗೆ ಬಿಸಿಲು ಪ್ರಾರಂಭ ಆಗುತ್ತಿದ್ದು. ಮಧ್ಯಾಹ್ನ 12 ಗಂಟೆಗೆ ನೆತ್ತಿ ಸುಡುವಷ್ಟು ಬಿಸಿಲು ಹೆಚ್ಚಾಗುತ್ತಿದೆ ಎಂದು ನಾಗರಿಕರು ಅಭಿಪ್ರಾಯ ವ್ಯಕ್ತಪಡಿಸಿದರು.

ಪ್ರತಿವರ್ಷ ಬೇಸಿಗೆಯಲ್ಲಿ ಅತಿ ಹೆಚ್ಚು ಮಡಕೆ ಖರೀದಿಸುತ್ತಾರೆ. ನಲ್ಲಿ ಇರುವ ಮಡಕೆ 200 ರಿಂದ 250 ರೂ.ಗೆ ಮಾರಲಾಗುತ್ತದೆ. ನಮ್ಮ ಹಿರಿಯ ಕಾಲದಿಂದಲೂ ಮಡಕೆ ವ್ಯಾಪಾರ ಮಾಡಿಕೊಂಡು ಬಂದಿದ್ದೇವೆ. ನಾವೂ ಸಹ ಮುಂದುವರಿಸಿಕೊಂಡು ಹೋಗುತ್ತಿದ್ದೇವೆ. ರತ್ನಮ್ಮ, ಮಡಕೆ ವ್ಯಾಪಾರಸ್ಥೆ

ಆಂಧ್ರ ಪ್ರದೇಶದ ಚಿತ್ತೂರು ಕಡೆಯಿಂದ ಕಳೆದ 7 ವರ್ಷದಿಂದ ಮಡಕೆ ತಂದು ರಸ್ತೆಯ ಬದಿಗಳಲ್ಲಿ ವ್ಯಾಪಾರ ಮಾಡಲಾಗುತ್ತಿದೆ. ಈ ಬಾರಿ ಮಡಕೆಗೆ ನಲ್ಲಿ ಅಳವಡಿಸಲಾಗಿದೆ. ಬೇಸಿಗೆ ಆರಂಭ ಆಗಿರುವುದರಿಂದ ಜನಸಾಮಾನ್ಯರು ಹೆಚ್ಚು ಮಡಕೆ ಖರೀದಿಸುತ್ತಿದ್ದಾರೆ. ಏಪ್ರಿಲ್‌ ತಿಂಗಳವರೆಗೆ ಮಡಕೆ ಮಾರಾಟ ಇರುತ್ತದೆ.ವೇಣು, ಮಡಕೆ ಮಾರಾಟಗಾರ

ಯಾವುದೇ ಖರ್ಚಿಲ್ಲದೆ ತಂಪು ನೀರನ್ನು ನೀಡುವ ಮಡಕೆ ತಲತಲಾಂತರದಿಂದ ನಮ್ಮೆಲ್ಲರ ಮಧ್ಯೆ ಇದ್ದು, ಬಡವರ ಫ್ರಿಡ್ಜ್ ಎಂದೇ ಖ್ಯಾತಿ ಪಡೆದಿದೆ. ಮಣ್ಣಿನಿಂದ ತಯಾರಿಸಿದ ಮಡಕೆ ನೀರನ್ನು ಸೇವಿಸುವುದರಿಂದ ಆರೋಗ್ಯ ಕಾಪಾಡಿಕೊಳ್ಳಬಹುದು ಎಂಬ ನಂಬಿಕೆ ಹಿರಿಯರಲ್ಲಿ ಇದೆ. ಆರೋಗ್ಯ ತಜ್ಞರು ಇದನ್ನು ಅನುಮೋದಿಸಿದ್ದಾರೆ. ಪ್ರತಿವರ್ಷ ಮಡಕೆ ಖರೀದಿಸುತ್ತೇವೆ. ಮಂಜುಳಾ, ಗ್ರಾಹಕರು

 

ಎಸ್‌. ಮಹೇಶ್‌

Advertisement

Udayavani is now on Telegram. Click here to join our channel and stay updated with the latest news.

Next