Advertisement

ಸಚಿವ ರೇವಣ್ಣ ವಿರುದ್ಧ ಪ್ರಕರಣ ದಾಖಲಿಸಲು ಆಗ್ರಹ

09:20 PM Apr 30, 2019 | Team Udayavani |

ಹಾಸನ: ಅಕ್ರಮ ಮತದಾನಕ್ಕೆ ಕುಮ್ಮಕ್ಕು ನೀಡಿರುವ ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ಡಿ.ರೇವಣ್ಣ ಅವರ ಮೇಲೂ ಪ್ರಕರಣ ದಾಖಲು ಮಾಡಬೇಕು ಎಂದು ಹಾಸನ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎ.ಮಂಜು ಅವರು ಜಿಲ್ಲಾ ಚುನಾವಣಾಧಿಕಾರಿಯವರನ್ನು ಒತ್ತಾಯಿಸಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆಗೆ ಮೊದಲೇ ಹೊಳೆನರಸೀಪುರ ಮತ್ತು ಶ್ರವಣಬೆಳಗೊಳ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಅಕ್ರಮಗಳು ನಡೆಯುವ ಶಂಕೆ ವ್ಯಕ್ತಪಡಿಸಿ ಸೂಕ್ತ ಬಿಗಿ ಕ್ರಮಗಳನ್ನು ಕೈಗೊಳ್ಳಬೇಕೆಂದು ಬಿಜೆಪಿಯು ಜಿಲ್ಲಾ ಚುನಾವಣಾಧಿಕಾರಿಯವರಿಗೆ ದೂರು ನೀಡಿತ್ತು.

ಆದರೆ ಕ್ರಮ ಕೈಗೊಳ್ಳದ ಪರಿಣಾಮ ಮತದಾನದ ದಿನ ಸಂಜೆ 5 ಗಂಟೆವರೆಗೆ ಶೇ. 56 ರಷ್ಟಿದ್ದ ಮತದಾನ ಸಂಜೆ 6 ಗಂಟೆಗೆ ಕೆಲವು ಮತಗಟ್ಟೆಗಳಲ್ಲಿ ಶೇ.90 ರಷ್ಟಾಗಿದೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ದೂರು ನೀಡಿದ್ದೇವೆ ಎಂದು ಹೇಳಿದರು.

ತನಿಖೆಯಾಗಲಿ: ಶೇ.90ಕಿಂತ ಹೆಚ್ಚು ಮತದಾನವಾಗಿರುವ ಮತಗಟ್ಟೆಗಳ ಬಗ್ಗೆ ತನಿಖೆ ನಡೆಸಬೇಕು. ಹೊಳೆನರಸೀಪುರ ವಿಧಾನಸಭಾ ವ್ಯಾಪ್ತಿಯ 19 ಬೂತ್‌ಗಳು, ಶ್ರವಣಬೆಳಗೊಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 5 ಬೂತ್‌ಗಳಲ್ಲಿ ಅಕ್ರಮ ಮತದಾನ ನಡೆದಿರುವ ಶಂಕೆ ಇದೆ.

ಈ ಬಗ್ಗೆ ಜಿಲ್ಲಾ ಚುನಾವಣಾಧಿಕಾರಿಯವರು ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಹೊಳೆನರಸೀಪುರ ವಿಧಾನಸಭಾ ಕ್ಷೇತ್ರದ ಕೆಲವು ಮತಗಟ್ಟೆಗಳಲ್ಲಿ ಶೇ.100 ರಷ್ಟು ಮತದಾನವಾಗಿದೆ ಈ ಬಗ್ಗೆ ತನಿಖೆ ನಡೆಯಬೇಕು ಎಂದು ಮನವಿ ಮಾಡಿದರು.

Advertisement

ಅಕ್ರಮ ಮತದಾನಕ್ಕೆ ಕುಮ್ಮಕ್ಕು: ಹೊಳೆನರಸೀಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪಡುವಲಹಿಪ್ಪೆಯ ಮತಗಟ್ಟೆಯಲ್ಲಿ ಸಚಿವ ಎಚ್‌.ಡಿ.ರೇವಣ್ಣ ಅವರು ಅಕ್ರಮ ಮತದಾನಕ್ಕೆ ಕುಮ್ಮಕ್ಕು ನೀಡಿರುವುದು ವಿಡಿಯೋ ದೃಶ್ಯಾವಳಿಗಳಲ್ಲಿ ಸಾಬೀತಾಗಿದೆ. ರೇವಣ್ಣ ಅವರು ಅರ್ಧಗಂಟೆಗೂ ಹೆಚ್ಚು ಕಾಲ ಮತಗಟ್ಟೆಯಲ್ಲಿದ್ದರು.

ಈ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕೆಂದು ಆ ಮತಗಟ್ಟೆಯ ಬಿಜೆಪಿ ಪೋಲಿಂಗ್‌ ಏಜೆಂಟ್‌ ಜಿಲ್ಲಾ ಚುನಾವಣಾಧಿಕಾರಿಯವರಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ಜಿಲ್ಲಾ ಚುನಾವಣಾಧಿಕಾರಿಯವರು ಮೂವರು ಮತಗಟ್ಟೆ ಅಧಿಕಾರಿಗಳನ್ನು ಸಸ್ಪಂಡ್‌ ಮಾಡಿ ಒಟ್ಟು 7 ಜನರ ವಿರುದ್ಧ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ. ಆದರೆ ಸಚಿವ ರೇವಣ್ಣ ಅವರ ಮೇಲೆ ಏಕೆ ದೂರು ದಾಖಲಾಗಿಲ್ಲವೆಂದು ಪ್ರಶ್ನಿಸಿದರು.

ಕಾನೂನು ಪ್ರಕಾರ ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ. ಆದರೆ ಸಚಿವ ರೇವಣ್ಣ ಅವರು ತಮ್ಮ ತಪ್ಪುಗಳನ್ನು ಮುಚ್ಚಿಕೊಳ್ಳಲು ಅಧಿಕಾರಿಗಳ ಮೇಲೆ ಆರೋಪ ಮಾಡುತ್ತಿದ್ದಾರೆ. ಎಲ್ಲಿ ಅಕ್ರಮ ನಡೆದಿದೆಯೋ ಅಲ್ಲಿ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.

ಪ್ರಜ್ವಲ್‌ ನಾಮಪತ್ರದಲ್ಲಿ ಲೋಪ: ಜೆಡಿಎಸ್‌ ಅಭ್ಯರ್ಥಿ ಪ್ರಜ್ವಲ್‌ ರೇವಣ್ಣ ಅವರು ನಾಮಪತ್ರದೊಂದಿಗೆ ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ ಸಾಕಷ್ಟು ಲೋಪಗಳಿವೆ. ಅವುಗಳು ಸಾಬೀತಾದರೆ ಅವರು ಚುನಾವಣಾ ಸ್ಪರ್ಧೆಗೆ 6 ವರ್ಷ ಅನರ್ಹರಾಗುವರು ಎಂದು ಎ. ಮಂಜು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next