Advertisement

ಶಾಲೆಗೆ ಹೊಸ ಕಟ್ಟಡ ನಿರ್ಮಿಸಿಕೊಡಲು ಆಗ್ರಹ

12:52 PM Jul 04, 2022 | Team Udayavani |

ಚಿಂಚೋಳಿ: ಸೇಡಂ ಮತಕ್ಷೇತ್ರಕ್ಕೆ ಒಳಪಟ್ಟಿರುವ ಕರ್ಚಖೇಡ ಗ್ರಾಮದಲ್ಲಿ ಅನೇಕ ವರ್ಷಗಳ ಹಿಂದೆ ನಿರ್ಮಿಸಿದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ತುಂಬಾ ಶಿಥಿಲಾವಸ್ಥೆ ಇದೆ. ಶಾಲೆಗೆ ಹೊಸ ಕಟ್ಟಡ ನಿರ್ಮಿಸಿಕೊಡಿರಿ ಎಂದು ಗ್ರಾಮದ ಶಾಲಾ ಮಕ್ಕಳು ಪೋಷಕರು ಚಿಂಚೋಳಿ-ಸೇಡಂ ರಾಜ್ಯ ಹೆದ್ದಾರಿ (ನಿಡಗುಂದಾ) ಕ್ರಾಸ್‌ ಹತ್ತಿರ ಸೇಡಂ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ ಅವರಿಗೆ ಘೇರಾವ್‌ ಹಾಕಿ ಪ್ರತಿಭಟನೆ ನಡೆಸಿದರು.

Advertisement

ತಾಲೂಕಿನ ಕರ್ಚಖೇಡ ಗ್ರಾಮದಲ್ಲಿ ಆಗಿನ ಮುಖ್ಯಮಂತ್ರಿ ವೀರೇಂದ್ರ ಪಾಟೀಲರು 1966ರಲ್ಲಿ ಮಕ್ಕಳ ವಿದ್ಯಾಭ್ಯಾಸಕ್ಕಾಗಿ 5 ಶಾಲೆ ಕೋಣೆಗಳನ್ನು ನಿರ್ಮಿಸಿಕೊಟ್ಟಿದ್ದರು. ಅನೇಕ ವರ್ಷಗಳಿಂದ ಶಿಥಿಲಾವ್ಯವಸ್ಥೆಯಲ್ಲಿಯೇ 1ರಿಂದ 8ನೇ ತರಗತಿ ನಡೆಸಲಾಗುತ್ತಿದೆ. ಒಟ್ಟು 250 ಮಕ್ಕಳನ್ನು ಹೊಂದಿದೆ. ಮಳೆಗಾಲದಲ್ಲಿ ತುಂಬಾ ಸೋರಿಕೆ ಯಾಗುತ್ತಿರುವುದರಿಂದ ಮಕ್ಕಳಿಗೆ ನೆಲದ ಮೇಲೆ ಕುಳಿತುಕೊಳ್ಳಲು ಆಗುತ್ತಿರಲಿಲ್ಲ. ಇದರಿಂದಾಗಿ ಅನೇಕ ವರ್ಷಗಳಿಂದ ಶಾಲೆ ನಿರ್ಮಿಸಿಕೊಡಬೇಕೆಂದು ಸೇಡಂ ಶಾಸಕರಿಗೆ ಮನವಿ ಪತ್ರ ಸಲ್ಲಿಸಲಾಗಿದೆ. ಶಾಸಕರು ನಿರ್ಲಕ್ಷತನ ಮಾಡಿದ್ದರಿಂದ ನಿಡಗುಂದಾ ಗ್ರಾಮದ ಕ್ರಾಸ್‌ ಹತ್ತಿರ ಪೋಷಕರು, ಶಾಲೆ ವಿದ್ಯಾರ್ಥಿಗಳು ರಸ್ತೆ ತಡೆ ನಡೆಸಿದರು.

ಸುಲೇಪೇಟ ಗ್ರಾಮಕ್ಕೆ ಖಾಸಗಿ ಕಾರ್ಯಕ್ರಮಕ್ಕೆ ಆಗಮಿಸಿದ ಶಾಸಕರು ಸುದ್ದಿ ತಿಳಿದ ನಂತರ ಪ್ರತಿಭಟನೆ ಸ್ಥಳಕ್ಕೆ ಹೋಗಿ ಶಾಲೆ ವಿದ್ಯಾರ್ಥಿಗಳ ಸಮಸ್ಯೆ ತಿಳಿದುಕೊಂಡರು. ನಾನು ಇನ್ನೆರಡು ದಿನಗಳಲ್ಲಿ ಖುದ್ದಾಗಿ ಭೇಟಿ ನೀಡಿ ಸಮಸ್ಯೆಗೆ ಪರಿಹಾರ ನೀಡುವೆ. ಹೊಸ ಶಾಲೆ ನಿರ್ಮಿಸಿ ಕೊಡುತ್ತೇನೆ ಎಂದು ಗ್ರಾಮಸ್ಥರಿಗೆ ಭರವಸೆ ನೀಡಿದರು.

ತಹಶೀಲ್ದಾರ್‌ ಅಂಜುಮ್‌ ತಬಸುಮ್‌, ಬಿಇಒ ರಾಚಪ್ಪ ಭದ್ರಶೆಟ್ಟಿ, ಸಿಪಿಐ ಮಹಾಂತೇಶ ಕೆ.ಜಿ. ಮನವಿ ಸ್ವೀಕರಿಸಿದರು. ಕರ್ಚಖೇಡ ಗ್ರಾಮಸ್ಥರಾದ ಸಂಗಾರೆಡ್ಡಿ ಪಾಟೀಲ, ಸಲೀಮಪಾಶಾ, ಚಾಂದಪಾಶಾ, ಆನಂದ, ಪ್ರಕಾಶ,ಬಾಲಪ್ಪ, ಕರವೇ ಮುಖಂಡ ಪಂಡಿತ ಪವಾರ, ಅರವಿಂದ, ಅಂಬರೀಶ, ಅವಿನಾಶ ಇನ್ನಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next