Advertisement

ಬೇಡಿಕೆ ಈಡೇರಿಕೆ-ಭದ್ರತೆಗೆ ಮನವಿ

05:46 PM Jan 21, 2022 | Shwetha M |

ಮುದ್ದೇಬಿಹಾಳ: ಪಟ್ಟಣದ ಅಂಬೇಡ್ಕರ್‌ ವೃತ್ತದಿಂದ ಬಿದರಕುಂದಿ ಕ್ರಾಸ್‌ ವರೆಗಿನ ವಿಜಯಪುರ ಮುಖ್ಯ ರಸ್ತೆ ಡಾಂಬರೀಕರಣ ಕಾಮಗಾರಿ ವಿಷಯಕ್ಕೆ ಸಂಬಂಧಿಸಿದಂತೆ ಪುರಸಭೆಯ ಆಡಳಿತ ಮಂಡಳಿಯ ಅಧ್ಯಕ್ಷೆ ಮತ್ತು ಸದಸ್ಯರು ಗುರುವಾರ ಪೊಲೀಸ್‌ ಭದ್ರತೆಯಲ್ಲಿ ಪಿಡಬ್ಲೂಡಿ ಕಚೇರಿಗೆ ಮತ್ತು ಪೊಲೀಸ್‌ ಠಾಣೆಗೆ ತೆರಳಿ ಬೇಡಿಕೆ ಈಡೇರಿಕೆ ಮತ್ತು ಭದ್ರತೆ ಒದಗಿಸುವ ಕುರಿತ ಪ್ರತ್ಯೇಕ ಮನವಿ ಸಲ್ಲಿಸಿದರು.

Advertisement

ಪಿಡಬ್ಲೂಡಿ ಕಚೇರಿಗೆ ಆಗಮಿಸಿ ಎಇಇ ಆರ್‌.ಎಂ. ಹುಂಡೇಕಾರ ಮತ್ತು ಎಇ ಅಶೋಕ ಬಿರಾದಾರ ಅವರಿಗೆ ಅಧ್ಯಕ್ಷೆ ಪ್ರತಿಭಾ ಅಂಗಡಗೇರಿಯವರು ಸಹಿ ಮಾಡಿ ಮನವಿ ಸಲ್ಲಿಸಿದ್ದು, ಅಂಬೇಡ್ಕರ್‌ ವೃತ್ತದಿಂದ ಬಿದರಕುಂದಿವರೆಗಿನ ರಸ್ತೆ ಕಾಮಗಾರಿ ನಿಲ್ಲಿಸುವಂತೆ ಆಗ್ರಹಿಸಿದರು. ಪಿಡಬ್ಲೂಡಿ ಇಲಾಖೆಯಿಂದ ನಡೆಯುತ್ತಿರುವ ಈ ಕಾಮಗಾರಿ ಅವೈಜ್ಞಾನಿಕವಾಗಿ ನಡೆಯುತ್ತಿದೆ. ಪುರಸಭೆ ಆಡಳಿತ ಮಂಡಳಿ ಈ ಕುರಿತು ಪರಿಶೀಲನೆ ನಡೆಸಿ ಅವೈಜ್ಞಾನಿಕ ಎಂದು ಕಂಡುಕೊಂಡು ಕಾಮಗಾರಿ ತುರ್ತಾಗಿ ಬಂದ್‌ ಮಾಡಿ ಅಂದಾಜು ಪತ್ರಿಕೆಯಲ್ಲಿನ ನಿಯಮಗಳಂತೆ ನಿರ್ವಹಿಸಬೇಕು ಎಂದರು.

ಪೊಲೀಸ್‌ ಠಾಣೆಗೆ ತೆರಳಿದ ಎಲ್ಲರೂ ಸಿಪಿಐ ಆನಂದ ವಾಘ್ಮೋಡೆ ಅವರಿಗೆ ಮನವಿ ಸಲ್ಲಿಸಿ, ಕಾಮಗಾರಿ ಬಂದ್‌ ಮಾಡಿಸಲು ಆಡಳಿತ ಮಂಡಳಿಯವರಾದ ನಾವು ಸ್ಥಳಕ್ಕೆ ತೆರಳಿದಾಗ ನಮ್ಮ ಮೇಲೆ ಹಲ್ಲೆ ನಡೆಸುವ ಸಾಧ್ಯತೆ ಇದ್ದು, ನಮ್ಮ ಮೇಲೆ ಹಲ್ಲೆ ನಡೆಯದಂತೆ ಸೂಕ್ತ ಭದ್ರತೆ ನೀಡಬೇಕು ಎಂದು ಕೋರಿದರು.

ಅಧ್ಯಕ್ಷೆ ಪ್ರತಿಭಾ ಅಂಗಡಗೇರಿ, ಸ್ಥಾಯಿ ಸಮಿತಿ ಅಧ್ಯಕ್ಷ ಶಿವು ಶಿವಪೂರ, ಸದಸ್ಯರಾದ ಅಲ್ಲಾಭಕ್ಷ ಢವಳಗಿ, ಮಹಿಬೂಬ ಗೊಳಸಂಗಿ, ರಫೀಕಅಹ್ಮದ್‌ ದ್ರಾಕ್ಷಿ, ಪ್ರೀತಿ ದೇಗಿನಾಳ, ಭಾರತಿ ಪಾಟೀಲ, ವೀರೇಶ ಹಡಲಗೇರಿ, ರಿಯಾಜ ಢವಳಗಿ, ಮುಖಂಡರಾದ ರುದ್ರಗೌಡ ಅಂಗಡಗೇರಿ, ಮಹ್ಮದ ಹುಸೇನ ಹುಣಚಗಿ, ಅನೀಲ ನಾಯಕ, ಅಜರುದ್ದೀನ್‌ ಮೂಲಿಮನಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next