Advertisement

ಅಕ್ರಮಗಳ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಒತ್ತಾಯ

03:44 PM Mar 25, 2023 | Team Udayavani |

ಬಾಗೇಪಲ್ಲಿ: ಗ್ರೇಡ್‌-1 ಪಟ್ಟಿಯಲ್ಲಿರುವ ಯಲ್ಲಂಪಲ್ಲಿ ಗ್ರಾಪಂ ವ್ಯಾಪ್ತಿಯ ಹಳ್ಳಿಗಳಲ್ಲಿ ತಾಂಡವಾಡುತ್ತಿರುವ ಮೂಲಸೌಕರ್ಯ ಈಡೇರಿಸುವಂತೆ ಹಾಗೂ ಅಕ್ರಮಗಳ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಒತ್ತಾಯಿಸಿ, ಯಲ್ಲಂಪಲ್ಲಿ ಯುವಕರ ತಂಡ ಗ್ರಾಪಂ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ತಾಲೂಕಿನ ಯಲ್ಲಂಪಲ್ಲಿ ಗ್ರಾಪಂ ಕಚೇರಿ ಮುಂಭಾಗದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಗ್ರಾಪಂ ಮಾಜಿ ಸದಸ್ಯ ಶ್ರೀರಾಮಪ್ಪ ಮಾತನಾಡಿ, 14 ಮತ್ತು 15 ನೇ ಹಣಕಾಸು ಯೋಜನೆಯ ಅನುದಾನವನ್ನು ದುರ್ಬಳಿಕೆ ಮಾಡಿಕೊಂಡು ಗ್ರಾಪಂ ಸದಸ್ಯರೆ ನುಂಗಿ ನೀರು ಕುಡಿದಿದ್ದಾರೆ. ಕ್ರೀಯಾ ಯೋಜನೆ ಪಟ್ಟಿಯಲ್ಲಿರುವ ಕಾಮಗಾರಿಗಳನ್ನು ಮಾಡದೆ ಈಗಾಗಲೇ ವಿವಿಧ ಯೋಜನೆಗಳಡಿ ಯಲ್ಲಿ ಮಾಡಿರುವ ಹಳೇ ಕಾಮಗಾರಿ ತೋರಿಸಿ ಗ್ರಾಪಂ ಅಧಿಕಾರಿಗಳು ಹಾಗೂ ಸದಸ್ಯರು ಶಾಮೀಲಾಗಿ ಸರ್ಕಾರಿ ಹಣ ಡ್ರಾ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು.

ಕಸ ವಿಲೇವಾರಿ ಮಾಡುವ ವಾಹನ ಕೆಟ್ಟು ಹಲವು ತಿಂಗಳು ಆಗಿದ್ದು, ಚರಂಡಿಗಳಲ್ಲಿ ತುಂಬಿರುವ ಕಸವನ್ನು ತೆಗೆಯದ ಕಾರಣ ಗ್ರಾಮದ ಹಲವು ಕಡೆ ಚರಂಡಿಗಳಲ್ಲಿ ಕಸದ ರಾಶಿಗಳು ತಾಂಡವಾಡುತ್ತಿವೆ. ನಡುರಸ್ತೆಯಲ್ಲಿರುವ ವಿದ್ಯುತ್‌ ಕಂಬಗಳನ್ನು ಸ್ಥಳಾಂತರಿಸುವಂತೆ ಗ್ರಾಪಂ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ, ಯಾವುದೇ ರೀತಿಯ ಪ್ರಯೋಜನ ಇಲ್ಲದಂತಾಗಿದೆ ಎಂದು ಗ್ರಾಪಂ ಅಧಿಕಾರಿಗಳ ವಿರುದ್ಧ ಹರಿಹಾಯ್ದರು. ಸಾರ್ವಜನಿಕರಿಗೆ ಸಿಗಲ್ಲ: ಯುವ ಮುಖಂಡ ಜಗದೀಶ್‌ ಮಾತನಾಡಿ, ಬಾಗೇಪಲ್ಲಿ ತಾಲೂಕಿನ ಯಲ್ಲಂಪಲ್ಲಿ ಗ್ರಾಪಂ ವ್ಯಾಪ್ತಿಗೆ 22 ಹಳ್ಳಿಗಳು ಸೇರಿದ್ದು, ಗ್ರೇಡ್‌-1 ಪಟ್ಟಿಯಲ್ಲಿದೆ. ಗ್ರೇಡ್‌ 1 ಪಟ್ಟಿಯಲ್ಲಿರುವ ಗ್ರಾಪಂ ಕೇಂದ್ರ ಸ್ಥಾನದಲ್ಲಿ ಪಿಡಿಒ ಖಾಯಂ ವಾಸವಿದ್ದು, ನಿತ್ಯ ಕರ್ತವ್ಯಕ್ಕೆ ಹಾಜರಾಗಿ ಸಾರ್ವಜನಿಕರಿಗೆ ಸಿಗುವುದು ಸರ್ಕಾರದ ಶಿಷ್ಠಾಚಾರವಾಗಿರುತ್ತದೆ. ಆದರೆ, ಯಲ್ಲಂಪಲ್ಲಿ ಗ್ರಾಪಂನಲ್ಲಿ ಕೆಲಸ ಮಾಡುತ್ತಿರುವ ಪಿಡಿಒ ಭಾಗ್ಯಲಕ್ಷ್ಮೀ ಅವರು ವಾರದಲ್ಲಿ ಕನಿಷ್ಠ 2 ದಿನಗಳು ಕರ್ತವ್ಯಕ್ಕೆ ಬರುವುದಿಲ್ಲ, ಬಂದರೂ ಅರ್ಧ ಗಂಟೆಗೂ ಹೆಚ್ಚು ಸಮಯ ಕಚೇರಿಯಲ್ಲಿ ಇರುವುದಿಲ್ಲ ಎಂದು ಆರೋಪಿಸಿದರು.

ಕ್ರೀಡಾ ಅನುದಾನ ದುರ್ಬಳಕೆ: ಗ್ರಾಪಂಗೆ ಬರುವಂತಹ ಅನುದಾನದಲ್ಲಿ ಗ್ರಾಮೀಣ ಕ್ರೀಡಾಕೂಟಗಳಿಗೆ ಮೀಸಲಿಟ್ಟಿರುವ ಅನುದಾನವನ್ನು ಈಗಾಗಲೇ ಆಯೋಜಿಸಿರುವ ಕ್ರೀಡಾಕೂಟಗಳಿಗೆ ಬಿಡುಗಡೆ ಮಾಡುವುದಾಗಿ ಸಾಮನ್ಯಸಭೆಯಲ್ಲಿ ತೀರ್ಮಾನಿಸಲಾಗಿದೆ. ಆದರೆ, ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ಪಿಡಿಒಗಳ ಕುಮ್ಮಕ್ಕುನಿಂದ ಕ್ರೀಡಾಕೂಟಗಳಿಗೆ ಮೀಸಲಿಟ್ಟಿರುವ ಅನುದಾನವನ್ನು ಕ್ರೀಡಾಪಟುಗಳಿಗೆ ನೀಡದೆ ಗುಳುಂ ಮಾಡಿದ್ದಾರೆಂದು ಯುವಕ ಎ.ಮಂಜುನಾಥ ಆರೋಪಿಸಿ, ತಾಪಂ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ.

ಯಲ್ಲಂಪಲ್ಲಿ ಗ್ರಾಮದ ಯುವಕ ಎಂ.ಆದಿನಾಯಣಪ್ಪ, ಮುರಳಿ, ಪ್ರಸನ್ನ, ಶರತ್‌, ಅಂಜಿ, ಪಿ.ವಿ.ನಾರಾಯಣಸ್ವಾಮಿ, ವೈ.ಪಿ.ನಾಗರಾಜು, ಮಹೇಶ್‌, ವಿಶ್ವನಾಥ, ಗಣೇಶ್‌, ಎನ್‌.ರಾಜೇಂದ್ರಪ್ಪ, ನರಸಿಂಹಲು ಮತ್ತಿತರರು ಇದ್ದರು.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next