ಬೆಂಗಳೂರು: ಬಡಜನರ ಸೇವಾ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಅವರು ಜನೌಷಧಿ ಕೇಂದ್ರ ಪ್ರಾರಂಭಿಸಿದ್ದು, ಈ ಕೇಂದ್ರದ ಸವಲತ್ತುಗಳನ್ನು ಪ್ರತೀ ಮನೆಗೂ ತಲುಪಿಸಬೇಕು ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯ ಅವರು ಕಾರ್ಯಕರ್ತರಲ್ಲಿ ಮನವಿ ಮಾಡಿದರು.
ಜಯನಗರದ ಕೆಎಸ್ಆರ್ಟಿಸಿ ಆಸ್ಪತ್ರೆಯಲ್ಲಿ ಕೇಂದ್ರ ಆರೋಗ್ಯ ಸಚಿವಾಲಯ ಮಂಗಳವಾರ ಹಮ್ಮಿಕೊಂಡಿದ್ದ ನರೇಂದ್ರ ಮೋದಿ ಉಚಿತ ಡಯಾಲಿಸಿಸ್ ಕೇಂದ್ರ ಮತ್ತು ಜನೌಷಧಿ ಕೇಂದ್ರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬಡವರ ಬಗ್ಗೆ ಕಾಳಜಿ ಹೊಂದಿ ಕಡಿಮೆ ಬೆಲೆಯಲ್ಲಿ ಔಷಧಿ ನೀಡುವ ದೃಷ್ಟಿಯಿಂದ ಮೋದಿ ಅವರು ದೇಶವ್ಯಾಪಿ ಜನೌಷಧಿ ಕೇಂದ್ರ ಪ್ರಾರಂಭಿಸಿದ್ದಾರೆ. ಈಗಾಗಲೇ ದೇಶ ವ್ಯಾಪಿ 9 ಸಾವಿರ ಜನೌಷಧಿ ಕೇಂದ್ರ ತೆರೆಯಲಾಗಿದ್ದು, ಯುವಕರು ಜನೌಷಧ ಮಿತ್ರರಾಗಿ ಈ ಕೇಂದ್ರದಲ್ಲಿ ದೊರೆಯುವ ಸವಲತ್ತುಗಳ ಬಗ್ಗೆ ಬಡಜನರಿಗೆ ತಲುಪಿಸುವ ಕೆಲಸ ಮಾಡಿ ಎಂದರು.
ಜನೌಷಧದಿಂದ ಬಡವರಿಗೆ ಅನುಕೂಲವಾ ಗಿದೆ. ಮಧುಮೇಹ, ರಕ್ತದೊತ್ತಡ, ಕ್ಯಾನ್ಸರ್ ಇನ್ನಿತರ ರೋಗಕ್ಕೆ ತುತ್ತಾದ ಬಡಜನರು ಔಷಧಕ್ಕಾಗಿಯೇ ಸಾವಿರಾರು ರೂ. ವೆಚ್ಚಮಾಡಬೇಕಾ ಗಿತ್ತು. ಇದನ್ನು ತಪ್ಪಿಸಲೆಂದೇ ಜನೌಷಧ ಯೋಜನೆ ಜಾರಿಗೊಳಿಸಲಾಗಿದೆ ಎಂದರು.
ಬಡವರಿಗೆ ಉಚಿತ ಡಯಾಲಿಸಿಸ್ ನೀಡಲು ಸಂಸದರ ಕ್ಷೇತ್ರಾಭಿವೃದ್ಧಿನಿಧಿ ಅಡಿಯಲ್ಲಿ 1.5 ಕೋಟಿ ರೂ. ವೆಚ್ಚದಲ್ಲಿ ಕೆಎಸ್ಆರ್ಟಿಸಿ ಆಸ್ಪತ್ರೆ ಆವರಣದಲ್ಲಿ 48 ಹಾಸಿಗೆ ಸಾಮರ್ಥ್ಯದ ಡಯಾ ಲಿಸಿಸ್ ಕೇಂದ್ರ ತೆರೆಯಲಾಗಿದೆ ಎಂದರು.
ಚುನಾವಣೆಗಾಗಿ ಕುಕ್ಕರ್ ಹಂಚಿಕೆ: ಆರ್.ಅಶೋಕ್
ಇದೇ ಸಂದರ್ಭದಲ್ಲಿ ಮಾತನಾಡಿದ ಕಂದಾಯ ಸಚಿವ ಆರ್.ಅಶೋಕ್ ಅವರು, ಚುನಾವಣೆ ಹಿನ್ನೆಲೆಯಲ್ಲಿ ಕೆಲವರು ಕುಕ್ಕರ್ ಹಂಚುವಿಕೆಯಲ್ಲಿ ನಿರತರಾಗಿದ್ದಾರೆ. ಆದರೆ ಆ ಕುಕ್ಕರ್ಗಳು ಯಾವಾಗ ಬ್ಲಾಸ್ಟ್ ಆಗುತ್ತವೆಯೋ ಗೊತ್ತಿಲ್ಲ ಎಂದು ಕಾಂಗ್ರೆಸ್ ನಾಯಕರ ಹೆಸರು ಹೇಳದೆ ವಾಗ್ಧಾಳಿ ನಡೆಸಿದರು.
ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಕೆಲವರು ಕ್ಷೇತ್ರದ ತುಂಬೆಲ್ಲ ಕೆಲಸ ಮಾಡುತ್ತಿದ್ದಾರೆ. ಆದರೆ ಇಂತಹ ಸಮಯದಲ್ಲಿ ಬಡವರಿಗೆ ಆರೋಗ್ಯ ಸೇವೆ ನೀಡುವ ಮೂಲಕ ತೇಜಸ್ವಿ ಸೂರ್ಯ ಇತರರಿಗೆ ಮಾದರಿ ಆಗಿದ್ದಾರೆ ಎಂದು ಶ್ಲಾ ಸಿದರು.