Advertisement

ಅರ್ಹರಿಗೆ ಆರ್ಥಿಕ ಸೌಕರ್ಯಗಳನ್ನು ತ್ವರಿತವಾಗಿ ತಲುಪಿಸಿ: ಆರ್‌.ಅಶೋಕ್‌

09:39 PM Jan 22, 2023 | Team Udayavani |

ಹೊಸಕೋಟೆ: ಪೌತಿಖಾತೆ ಆಂದೋಲನದ ಮೂಲಕ ಆಸ್ತಿ ಖಾತೆ ಹಕ್ಕುಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುವುದರಿಂದ ಜನಸಾಮಾನ್ಯರಿಗೆ ಅನುಕೂಲವಾಗಿದೆ. ಪೌತಿ ಖಾತೆ ಹೊಂದಿದ ಖಾತೆದಾರಿಗೆ ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌ ಯೋಜನೆಯಡಿ ದೊರೆಯುವ ಆರ್ಥಿಕ ಸೌಕರ್ಯಗಳನ್ನು ಕೂಡ ತ್ವರಿತವಾಗಿ ತಲುಪಿಸಬೇಕು ಎಂದು ಕಂದಾಯ ಸಚಿವ ಆರ್‌. ಅಶೋಕ್‌ ಹೇಳಿದರು.

Advertisement

ಹೊಸಕೋಟೆ ತಾಲೂಕಿನ ಜಡಿಗೇನಹಳ್ಳಿಯಲ್ಲಿ ರವಿವಾರ ಬೆಳಗ್ಗೆ “ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ’ ಕಾರ್ಯಕ್ರಮದ ಅಂಗವಾಗಿ ಆಯೋಜಿಸಿದ್ದ ಪೌತಿಖಾತೆ ಆಂದೋಲನದಲ್ಲಿ ಖಾತೆ ಪತ್ರಗಳನ್ನು ವಿತರಿಸಿ ಅವರು ಮಾತನಾಡಿದರು.

ರೈತ ಕುಟುಂಬಗಳು ತಮ್ಮ ಆಸ್ತಿಗಳನ್ನು ಭಾಗ ಮಾಡಿಕೊಳ್ಳುವುದು ಈ ಹಿಂದೆ ಸವಾಲಿನ ಕಾರ್ಯವೆನಿಸಿತ್ತು. ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮ, ಪೌತಿ ಖಾತೆ ಆಂದೋಲನದ ಪರಿಣಾಮ ಜನರ ಮನೆ ಬಾಗಿಲಿಗೆ ದಾಖಲೆಗಳು ಬರುವಂತಾಗಿದೆ ಎಂದರು.

ಪೌತಿಖಾತೆಗೆ ಅರ್ಜಿ ಸಲ್ಲಿಸಿದ್ದ 17 ಕುಟುಂಬಗಳಿಗೆ ಸಚಿವರು ಇದೇ ಸಂದರ್ಭದಲ್ಲಿ ದಾಖಲೆಗಳನ್ನು ವಿತರಿಸಿದರು. ಪೌತಿಖಾತೆಗೆ ಅರ್ಜಿ ಸಲ್ಲಿಸಿ ನೋಟಿಸ್‌ ಅವಧಿಯಲ್ಲಿರುವ 98 ಮಂದಿಗೂ ಖಾತೆ ಪತ್ರಗಳನ್ನು ವಿತರಿಸಿದರು.

ನಿವೇಶನ ಒದಗಿಸಲು ಸೂಚನೆ
ಜಡಿಗೇನಹಳ್ಳಿಯಲ್ಲಿ ಶನಿವಾರ ಗ್ರಾಮವಾಸ್ತವ್ಯ ಮಾಡಿದ್ದ ಸಚಿವ ಆರ್‌.ಅಶೋಕ ಅವರು ರವಿವಾರ ಬೆಳಗ್ಗೆ ಗ್ರಾಮದ ಪರಿಶಿಷ್ಟ ಜಾತಿಯ ಗಿರಿಜಮ್ಮ ಹಾಗೂ ಮುನಿಯಪ್ಪ ದಂಪತಿಯ ಮನೆಯಲ್ಲಿ ಉಪಾಹಾರ ಸೇವಿಸಿದರು. ಕುಟುಂಬದಲ್ಲಿರುವ ಸದಸ್ಯರ ಮಾಹಿತಿ ಪಡೆದ ಸಚಿವರು ಗ್ರಾಮದಲ್ಲಿ ಗುರುತಿಸಲಾಗಿರುವ ಸರಕಾರಿ ನಿವೇಶನಗಳಲ್ಲಿ ಎರಡು ನಿವೇಶನಗಳನ್ನು ಒದಗಿಸುವಂತೆ ಸೂಚಿಸಿದರು. ಉಪಾಹಾರದ ಬಳಿಕ ಮನೆಯ ಆವರಣದಲ್ಲಿ ಸ್ವಲ್ಪಹೊತ್ತು ಕುಳಿತು ಸಾರ್ವಜನಿಕರ ಅಹವಾಲುಗಳನ್ನು ಆಲಿಸಿದರು.

Advertisement

ಆರೋಗ್ಯಯುತ ಜೀವನಕ್ಕೆ ಯೋಗಾಸನ ರಹದಾರಿ
ರವಿವಾರ ಬೆಳಗ್ಗೆ ವಿದ್ಯಾರ್ಥಿಗಳ ಯೋಗ ಶಿಬಿರದಲ್ಲಿ ಪಾಲ್ಗೊಂಡು ಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಸಚಿವ ಅಶೋಕ್‌, ರಕ್ತದೊತ್ತಡ, ಸಕ್ಕರೆ ಕಾಯಿಲೆ ನಿಯಂತ್ರಣ ಸಹಿತ ಆರೋಗ್ಯಯುತ ಜೀವನ ನಡೆಸಲು ಯೋಗಾಭ್ಯಾಸವು ರಹದಾರಿಯಾಗಿದೆ. ಸದೃಢ ಮನಸ್ಸು ಮತ್ತು ಆರೋಗ್ಯಕ್ಕೆ ಯೋಗಾಸನಗಳು ಪೂರಕ. ಸತತ ಯೋಗಾಭ್ಯಾಸದಿಂದ ಒತ್ತಡ ರಹಿತವಾದ ಆರೋಗ್ಯಯುತ ಜೀವನ ನಿರ್ವಹಿಸಬಹುದು. ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೂ ಯೋಗಾಸನದಿಂದ ಏಕಾಗ್ರತೆ ಸಾಧ್ಯವಾಗುತ್ತದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next