Advertisement

ಲಲಿತ ಪ್ರಬಂಧ ಸಂಕಲನ ಬಿಡುಗಡೆ

11:40 AM Jun 02, 2018 | |

ಬೀದರ: ನಮ್ಮ ಸಾಂಸ್ಕೃತಿಕ ಚಹರೆಗಳನ್ನು ಕಟ್ಟಿಕೊಡುವ ಮುಖ್ಯ ವಾಹಕಗಳೆಂದರೆ ಪುಸ್ತಕಗಳು, ಆದ್ದರಿಂದ ಅವುಗಳನ್ನು ಗೌರವಿಸಬೇಕು. ಒಂದು ವೇಳೆ ಪುಸ್ತಕ ಭಾರವೆಂದವರೇ ಈ ಭೂಮಿಗೆ ಭಾರವೆಂದು ಕಲಬುರಗಿಯ ಪ್ರಾಧ್ಯಾಪಕ ಡಾ| ವಿಕ್ರಮ್‌ ವಿಸಾಜಿ ಹೇಳಿದರು.

Advertisement

ಜಿಲ್ಲಾ ಕಸಾಪ ನಗರದಲ್ಲಿ ಆಯೋಜಿಸಿದ್ದ ಪ್ರೊ| ವೀರೇಂದ್ರ ಸಿಂಪಿ ಅವರ ಮೊದಲನೇ ಸ್ಮರಣೋತ್ಸವ, ಪುಸ್ತಕ ಲೋಕಾರ್ಪಣೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಡಾ| ಬಸವರಾಜ ಬಲ್ಲೂರ ಸಂಪಾದಿತ ಪ್ರೊ| ವೀರೇಂದ್ರ ಸಿಂಪಿಯವರ ಸಮಗ್ರ ಲಲಿತ ಪ್ರಬಂಧಗಳ ಸಂಕಲನ ಪುಸ್ತಕ ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಸಿಂಪಿಯವರಿಗೆ ಅದಮ್ಯ ಜೀವನೋತ್ಸವ, ಜೀವನ ಪ್ರೀತಿಯಿತ್ತು. ಅದನ್ನೆ ತಮ್ಮ ಪ್ರಬಂಧಗಳಲ್ಲಿ ತಂದರು. ಅವರ ಸಾಹಿತ್ಯದಲ್ಲಿ ವಿಡಂಬನೆ, ವ್ಯಂಗ್ಯ, ಜೊತೆಗೆ ಸಮಾಜ ತಿದ್ದುವ ಹೊಸ ಆಲೋಚನೆ ಹಾಸು ಹೊಕ್ಕಾಗಿರುವುದು ಕಾಣಬಹುದಾಗಿದೆ. ಇಂಗ್ಲಿಷ್‌ನ ಆಳವಾದ ಜ್ಞಾನದೊಂದಿಗೆ ಕನ್ನಡಕ್ಕೆ ಅಗಾಧವಾದ ಕೊಡುಗೆ ಅವರ ಸಾಹಿತ್ಯದಿಂದ
ಲಭಿಸಿದೆ. ಅನೇಕ ಶಾಲಾ ಕಾಲೇಜು, ವಿಶ್ವವಿದ್ಯಾಲಯಗಳಿಗೆ ಸಿಂಪಿರವರ ಬರಹಗಳು ಪಠ್ಯಗಳಾಗಿವೆ ಎಂದರು.
 
ಸಿಂಪಿರವರು ಅನೇಕ ವಿಷಯಗಳ ಮೇಲೆ ಬೆಳಕು ಚೆಲ್ಲಿದ್ದಾರೆ. ತನ್ನ ಮನೆಯಲ್ಲಿ ಕೆಲಸ ಮಾಡುವವಳ ಪರಿಸ್ಥಿತಿ, ಹೆಂಡತಿಯ ಮನೋಭಾವನೆ, ಹಳ್ಳಿ ಚಹಾ ಹೋಟೆಲಿನ ಚಿತ್ರಣ ನಮ್ಮ ಸಾಹಿತ್ಯದಲ್ಲಿ ಸೆರೆಹಿಡಿದಿದ್ದಾರೆ. ಹಳ್ಳಿ ಚಹಾ ಹೋಟೆಲ್‌ಗ‌ಳು ಆಧುನಿಕ ವಾರ್ತಾ ಇಲಾಖೆ ಎಂಬಂತೆ ಚಿತ್ರಿಸಿದ್ದಾರೆ. ಪ್ರೀತಿ ಬಗ್ಗೆ ತುಂಬಾ ಚೆನ್ನಾಗಿ ವಿಷಯ ಪ್ರಸ್ತಾಪಿಸಿದ್ದಾರೆ. ನಮಗೆ ಪ್ರಕೃತಿ ವಿಕೋಪ ಆದಾಗ, ಆರೋಗ್ಯ ಕೆಟ್ಟಾಗ, ಸಂಬಂಧದಲ್ಲಿ ಬಿರುಕುಂಟಾದಾಗ ಆಗುವ ದುಃಖವನ್ನು ಎಳೆಯಾಗಿ ಬಿಡಿಸಿಟ್ಟಿದ್ದಾರೆ ಎಂದು ಹೇಳಿದರು.

ಪಶು ವಿವಿ ಕುಲಪತಿ ಪ್ರೊ| ಎಚ್‌.ಡಿ. ನಾರಾಯಣಸ್ವಾಮಿ ಸಮಾರಂಭ ಉದ್ಘಾಟಿಸಿ ಮಾತನಾಡಿ, ಕನ್ನಡ ಭಾಷೆ ಬೆಳೆಯಬೇಕು ಇದಕ್ಕೆ ಒಂದು ಸಾಂಸ್ಕೃತಿಕ ಹಿನ್ನೆಲೆ ಇದೆ. ದೇಶದಲ್ಲೇ ಕನ್ನಡ ಭಾಷೆಗೆ ಬಂದಷ್ಟು ಜ್ಞಾನಪೀಠ ಪ್ರಶಸ್ತಿ ಬೇರೆ ಭಾಷೆಗಿಲ್ಲ. ಇದು ನಾವೆಲ್ಲರೂ ಮೆಚ್ಚಲೇಬೇಕು. ಕನ್ನಡಕ್ಕೆ ಅನೇಕ ಮಹಾಪುರುಷರ ಕೊಡುಗೆ ಇದೆ. ಅವರ ಸ್ಮರಣೆ ಇಂದಿನ ಯುವ ಪೀಳಿಗೆಗೆ ಅವಶ್ಯಕ.

ಪ್ರೊ| ವೀರೇಂದ್ರ ಸಿಂಪಿಯವರ ಸಾಹಿತ್ಯದ ಬೆಳಕು ಎಲ್ಲರ ಮನೆ ಮನದಲ್ಲಿ ಬಿದ್ದಾಗ ಜಾಗೃತರಾಗಲು ಸಾಧ್ಯ. ಇಂದಿನ ಯುವಜನಾಂಗ ಹೆಚ್ಚು ಹೆಚ್ಚು ಸಾಹಿತ್ಯ ಓದಿದಾಗ ನಮಗೆ ಇತಿಹಾಸದ ಅರಿವಾಗುತ್ತದೆ ಎಂದು ಸಲಹೆ ನೀಡಿದರು.
ಹಿರಿಯ ಸಾಹಿತಿ ಪಂಚಾಕ್ಷರಿ ಪುಣ್ಯಶೆಟ್ಟಿ ಮಾತನಾಡಿ, ಪ್ರೊ| ಸಿಂಪಿಯರು ಬೀದರಿಗೆ ಬಂದ ಮೇಲೆಯೇ ಸಾಹಿತ್ಯದಲ್ಲಿ ಒಂದು ಸಂಚಲನ ಆರಂಭವಾಗಿದೆ. ಶೈಕಣಿಕವಾಗಿ ಸಾಸನೂರು, ಸಾಮಾಜಿಕವಾಗಿ ಡಾ| ಕೌಜಲಗಿ, ಸಾಹಿತ್ಯಕವಾಗಿ ಸಿಂಪಿಯವರ ಕೊಡುಗೆ ಅವೀಸ್ಮರಣೀಯವೆಂದು ಸ್ಮರಿಸಿದರು.

ಜ್ಞಾನಸುಧಾ ಶಿಕ್ಷಣ ಸಂಸ್ಥೆ ಅಧ್ಯಕ್ಷೆ ಜಿ. ಪೂರ್ಣಿಮಾ ಮಾತನಾಡಿ, ಸಿಂಪಿಯವರ ಸಾಹಿತ್ಯ ಇಂದಿನ ಅನೇಕ ಮೂಢನಂಬಿಕೆ ಅಂಧಶ್ರದ್ಧೆ, ಕಂದಾಚಾರಗಳಿಗೆ ದಿವ್ಯ ಔಷಧ. ಸಿಂಪಿಯವರು ಯಾವತ್ತು ಋಣಾತ್ಮಕ ವಿಚಾರಗಳಿಗೆ ಕಿವಿಗೊಟ್ಟವರಲ್ಲ. ಅವರ ಸಾಹಿತ್ಯ ಇಂದು ಲೋಕಾರ್ಪಣೆಯಾಗಿರುವುದು ಹೆಮ್ಮೆಯ ವಿಷಯ. ಲಲಿತ ಪ್ರಬಂಧಗಳ ಮೇಲೆ ಪಿ.ಎಚ್‌.ಡಿ ಮಾಡುವವರಿಗೆ ಈ ಕೃತಿ ಮೂಲ ಆಕರವಾಗುತ್ತದೆಂದರು.

Advertisement

ಜಿಲ್ಲಾ ಕಸಾಪ ಅಧ್ಯಕ್ಷ ಸುರೇಶ ಚನ್ನಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಡಾ| ಬಸವರಾಜ ಬಲ್ಲೂರ ಪ್ರಾಸ್ತಾವಿಕವಾಗಿ ಮಾತನಾಡಿದರೆ, ಶಿವಶಂಕರ್‌ ಟೋಕರೆ ನಿರೂಪಿಸಿ, ಯೋಗೇಶ್‌ ಮಠದ ವಂದಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next