Advertisement

ವಿಳಂಬ ಧೋರಣೆ: ಪೌರಕಾರ್ಮಿಕರಿಗೆ ಸಿಗದ ಸವಲತ್ತು

05:48 PM Apr 02, 2022 | Team Udayavani |

ದೊಡ್ಡಬಳ್ಳಾಪುರ: ಪೌರಕಾರ್ಮಿಕರ ಪರವಾಗಿ ಜಾರಿಗೆ ತರಲಾಗಿರುವ ನಿಯಮ ಅನುಷ್ಠಾನಗೊಳಿಸುವಲ್ಲಿ ನಗರಸಭೆ ಅಧಿಕಾರಿಗಳು ವಿಳಂಬ ಧೋರಣೆ ಮಾಡುತ್ತಿದ್ದು, ಸಾಕಷ್ಟು ಜನ ಪೌರಕಾರ್ಮಿಕರು ಸರ್ಕಾರದ ಸೌಲಭ್ಯ ಪಡೆಯಲು ವಂಚಿತರಾಗುತ್ತಿದ್ದಾರೆ ಎಂದು ಸಫಾಯಿ ಕರ್ಮಚಾರಿ ಕಾವಲು ಸಮಿತಿ ರಾಜ್ಯ ಸಂಚಾಲಕ ಡಾ.ಕೆ.ಬಿ.ಓಬಳೇಶ್‌ ಹೇಳಿದರು.

Advertisement

ನಗರದ ಡಾ.ರಾಜ್‌ಕುಮಾರ್‌ ಕಲಾಭವನದಲ್ಲಿ ನಡೆದ ಸಫಾಯಿ ಕರ್ಮಚಾರಿಗಳ ಕಾವಲು ಸಮಿತಿ ತಾಲೂಕು ಘಟಕ ಉದ್ಘಾಟನಾ ಸಮಾರಂಭದಲ್ಲಿ ಮಾತ ನಾಡಿ, ನಗರಸಭೆಗಳಲ್ಲಿ ಕೆಲಸ ಮಾಡುವ ಪೌರಕಾರ್ಮಿಕರನ್ನು ಗುತ್ತಿಗೆ ನೌಕರರು ಎಂದು ಪರಿಗಣಿಸಿ ಗುರುತಿನ ಚೀಟಿ, ಪೌರಕಾರ್ಮಿಕರ ಖಾತೆಗಳಿಗೆ ನೇರವಾಗಿ ವೇತನ ಪಾವತಿ, ಇ.ಪಿ, ಪಿಎಫ್‌ ಹಣ ಜಮಾ ಆಗಿರುವ ಬಗ್ಗೆ ಮಾಹಿತಿ ನೀಡುವುದು ಸೇರಿ ಬಹುತೇಕ ನಿಯಮ 2018ರಲ್ಲಿ ಜಾರಿಗೆ ತರಲಾಯಿತು. ಆದರೆ, ವಾಸ್ತವದಲ್ಲಿ ಇವುಗಳು ಸೂಕ್ತ ರೀತಿಯಲ್ಲಿ ಅನುಷ್ಠಾನವಾಗಿಲ್ಲ ಎಂದರು.

9 ತಿಂಗಳಿಂದಲೂ ದೊಡ್ಡಬಳ್ಳಾಪುರ ನಗರಸಭೆಯಲ್ಲಿ ಪೌರಕಾರ್ಮಿಕರಿಗೆ ಪಿಎಫ್‌ ಹಣ ನೌಕರರ ಖಾತೆಗಳಿಗೆ ಜಮಾ ಮಾಡಲಾಗಿಲ್ಲ. ಈ ಹಣ ಎಲ್ಲಿಗೆ ಹೋಗಿದೆ ಎನ್ನುವ ಬಗ್ಗೆ ಮಾಹಿತಿ ಇಲ್ಲದಾಗಿದೆ. 2018ರಲ್ಲಿ ಜಾರಿಗೆ ತರಲಾದ ನಿಯಮ ಅನುಷ್ಠಾನವಾಗದೆ ಹಲವಾರು ಜನ ಗುತ್ತಿಗೆ ಪೌರಕಾರ್ಮಿಕರು ನಿವೃತ್ತಿಯಾದರೂ ಸೌಲಭ್ಯ ಪಡೆಯಲು ಸಾಧ್ಯವಾಗಿಲ್ಲ. ಗುತ್ತಿಗೆ ಪೌರಕಾರ್ಮಿಕರ ಬಗೆಗಿನ ಈ ತಾರತಮ್ಯ ನೀತಿ ಸರಿಪಡಿಸುವತ್ತ ನಗರಸಭೆ ಅಧಿಕಾರಿಗಳು ಹಾಗೂ ಚುನಾಯಿತ ಜನಪ್ರತಿನಿಧಿಗಳು ಗಮನವಹಿಸಬೇಕು ಎಂದು ಮನವಿ ಮಾಡಿದರು.

ಪೌರಕಾರ್ಮಿಕರಿಗೆ ಮಾಹಿತಿ ನೀಡಿ: ಶಾಸಕ ಟಿ.ವೆಂಕಟರಮಣಯ್ಯ ಮಾತನಾಡಿ, ಕೊರೊನಾದಂತಹ ಸಂಕಷ್ಟದ ಸಮಯದಲ್ಲೂ ಸಹ ನಗರವನ್ನು ಸ್ವತ್ಛ ಮಾಡಿದವರು ಪೌರಕಾರ್ಮಿಕರು. ನಗರದ ಸ್ವತ್ಛತೆಯಲ್ಲಿ ಮಹತ್ವದ ಪಾತ್ರವಹಿಸುವ ಪೌರ ಕಾರ್ಮಿಕರ ಪರವಾಗಿ ಸಿದ್ದರಾಮಯ್ಯ ಅವರು ಆಡಳಿತದ ಅವಧಿಯಲ್ಲಿ ಜಾರಿಗೆ ತಂದಿರುವ ನಿಯಮ ಇಲ್ಲಿಯವರೆಗೂ ಅನುಷ್ಠಾನ ಮಾಡದೇ ಇರುವುದು ಬೇಸರದ ಸಂಗತಿಯಾಗಿದೆ. ಪೌರ ಕಾರ್ಮಿ ಕರ ಸಂಘಟನೆ ಮುಖಂಡರು ಸರ್ಕಾರದಿಂದ ದೊರೆಯುವ ಸೌಲಭ್ಯ ಕುರಿತು ಕರಪತ್ರ ಮುದ್ರಿಸುವ ಮೂಲಕ ಪೌರಕಾರ್ಮಿಕರಿಗೆ ಮಾಹಿತಿ ನೀಡಬೇಕು ಎಂದರು.

ವಿದ್ಯಾರ್ಥಿಗಳಿಗೆ ಹೈಟೆಕ್‌ ಸೌಲಭ್ಯ: ತಾಲೂಕಿನ ಪ್ರತಿ ಹೋಬಳಿ ಹಾಗೂ ನಗರದಲ್ಲಿ ಸುಸಜ್ಜಿತವಾದ ವಸತಿ ಶಾಲೆ ಇವೆ. ಇಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ಹಾಗೂ ವಿದ್ಯಾರ್ಥಿಗಳಿಗೆ ಹೈಟೆಕ್‌ ಸೌಲಭ್ಯ ನೀಡಲಾಗುತ್ತಿದೆ. ಪೌರಕಾರ್ಮಿಕರು ತಮ್ಮ ಮಕ್ಕಳನ್ನು ವಸತಿ ಶಾಲೆಗಳಿಗೆ ದಾಖಲಿಸುವ ಮೂಲಕ ಶಿಕ್ಷಿತರನ್ನಾಗಿ ಮಾಡಬೇಕು ಎಂದರು. ನಗರಸಭೆ ಪೌರ ಸೇವಾ ನೌಕರರ ಸೇವಾ ಸಂಘದ ಅಧ್ಯಕ್ಷ ಎಸ್‌.ತಿಪ್ಪಣ್ಣ, ನಗರಸಭೆ ಅಧ್ಯಕ್ಷೆ ಎಸ್‌. ಸುಧಾರಾಣಿ, ಉಪಾಧ್ಯಕ್ಷೆ ಫರ್ಹಾನ ತಾಜ್, ಪೌರಾಯುಕ್ತ ಕೆ.ಜಿ.ಶಿವಶಂಕರ್‌, ಬಾಶೆಟ್ಟಿಹಳ್ಳಿ ಪಪಂ ಮುಖ್ಯಾಧಿಕಾರಿ ಮುನಿರಾಜು, ಪಾಂಡು ಸಿಂಧೆ, ಸಂಚಾಲಕ ಮ್ಯಾಥ್ಯೂ ಮುನಿಯಪ್ಪ, ನಗರಸಭೆ ಸದಸ್ಯೆ ಎಸ್‌.ವತ್ಸಲಾ, ಆರ್‌.ಹಂಸಪ್ರಿಯಾ, ಬಿ.ನಾಗರತ್ನಮ್ಮ,ರೂಪಿಣಿ, ರಜನಿ ಎಂ.ಸುಬ್ರಹ್ಮಣಿ, ಹಸೀನತಾಜ್, ವಿ.ಇಂದ್ರಾಣಿ, ಆರ್‌.ಪ್ರಭಾ, ಆನಂದ್‌ಕುಮಾರ್‌, ಕೆ.ಮಂಜುಳಾ, ಭಾಸ್ಕರ್‌, ಆದಿಲಕ್ಷ್ಮಿ, ಮುಖಂಡ ನಾರಾಯಣಪ್ಪ, ತಳವಾರ ನಾಗರಾಜ್‌ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next